Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 5:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನಾನು ಕಳುಹಿಸುವ ಕ್ಷಾಮದಿಂದಲೂ, ದುಷ್ಟಮೃಗಗಳಿಂದಲೂ ನಿನಗೆ ಪುತ್ರಶೋಕವು ಉಂಟಾಗುವುದು; ವ್ಯಾಧಿಯೂ, ರಕ್ತ ಪ್ರವಾಹವೂ ನಿನ್ನಲ್ಲಿ ವ್ಯಾಪಿಸುವವು; ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು” ಇದು ಯೆಹೋವನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನಾನು ಕಳುಹಿಸುವ ಕ್ಷಾಮದಿಂದ, ದುಷ್ಟಮೃಗಗಳಿಂದ ನಿನಗೆ ಪುತ್ರಶೋಕ ಪ್ರಾಪ್ತಿಯಾಗುವುದು; ವ್ಯಾಧಿಯೂ ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು; ನಿನ್ನನ್ನು ಖಡ್ಗಕ್ಕೆ ತುತ್ತುಮಾಡುವೆನು. ಇದು ಸರ್ವೇಶ್ವರನಾದ ನನ್ನ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನಿನ್ನ ಜೀವನಾಧಾರವನ್ನು ಮುರಿದುಹಾಕುವೆನು; ನಾನು ಕಳುಹಿಸುವ ಕ್ಷಾಮವೂ ದುಷ್ಟಮೃಗಗಳೂ ನಿನಗೆ ಪುತ್ರಶೋಕವನ್ನುಂಟುಮಾಡುವವು; ವ್ಯಾಧಿಯೂ ರಕ್ತಪ್ರವಾಹವೂ ನಿನ್ನಲ್ಲಿ ವ್ಯಾಪಿಸುವವು; ನಿನ್ನನ್ನು ಖಡ್ಗಕ್ಕೆ ತುತ್ತುಮಾಡುವೆನು. ಇದು ಯೆಹೋವನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನಾನು ನಿನಗೆ ವಿರುದ್ಧವಾಗಿ ಬರಗಾಲಗಳನ್ನು ಮತ್ತು ಕ್ರೂರಪ್ರಾಣಿಗಳನ್ನು ಕಳುಹಿಸುವೆನು. ಅವು ನಿನ್ನ ಮಕ್ಕಳನ್ನು ಕೊಲ್ಲುತ್ತವೆ. ನಿನ್ನನ್ನು ಕೊಲ್ಲುವುದಕ್ಕಾಗಿ ರೋಗಗಳನ್ನು, ಹಿಂಸೆಯನ್ನು ಮತ್ತು ಯುದ್ಧಗಳನ್ನು ಕಳುಹಿಸುವೆನು. ಯೆಹೋವನಾದ ನಾನೇ ಇದನ್ನು ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ನಾನು ಕಳುಹಿಸುವ ಕ್ಷಾಮದಿಂದ ದುಷ್ಟಮೃಗಗಳಿಂದ ನಿನಗೆ ಪುತ್ರ ಶೋಕ ಪ್ರಾಪ್ತಿಯಾಗುವುದು. ವ್ಯಾಧಿಯೂ, ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು, ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು. ಇದು ಯೆಹೋವ ದೇವರಾದ ನನ್ನ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 5:17
28 ತಿಳಿವುಗಳ ಹೋಲಿಕೆ  

ನಾನು ಗೋಗನ ಸಂಗಡ ವ್ಯಾಜ್ಯಮಾಡುತ್ತಾ ಅವನನ್ನು ವ್ಯಾಧಿಗೂ, ಸಾವಿಗೂ ಗುರಿಮಾಡಿ, ನಾನು ಅವನ ಮೇಲೆಯೂ, ಅವನ ದಂಡುಗಳ ಮೇಲೆಯೂ, ಅವನೊಂದಿಗಿರುವ ಅನೇಕ ಜನಾಂಗಗಳ ಮೇಲೆಯೂ ವಿಪರೀತ ಮಳೆ, ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು.


ಅವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಹಾಳು ಪ್ರದೇಶಗಳಲ್ಲಿರುವವರನ್ನು ಖಡ್ಗವು ಹತಿಸುವುದು; ಬಯಲಿನಲ್ಲಿರುವವರನ್ನು ನಾನು ಮೃಗಗಳಿಗೆ ತುತ್ತುಮಾಡುವೆನು; ಗುಹೆ ದುರ್ಗಗಳಲ್ಲಿರುವವರನ್ನು ವ್ಯಾಧಿಯು ಸಾಯಿಸುವುದು.


ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಖಡ್ಗ, ಕ್ಷಾಮ, ದುಷ್ಟಮೃಗ ಮತ್ತು ವ್ಯಾಧಿ ಎಂಬ ನಾಲ್ಕು ಬಾಧೆಗಳನ್ನು ಯೆರೂಸಲೇಮಿನ ಮೇಲೆ ಒಟ್ಟಿಗೆ ತಂದು, ಜನರನ್ನು, ಪಶುಗಳನ್ನು ನಿರ್ಮೂಲ ಮಾಡುವಾಗ ಹೇಳತಕ್ಕದ್ದೇನು!


“ನನ್ನ ಅಪ್ಪಣೆಯ ಮೇರೆಗೆ ದುಷ್ಟ ಮೃಗಗಳು ದೇಶದಲ್ಲಿ ತಿರುಗುತ್ತಾ ಅದನ್ನು ನಿರ್ಜನಗೊಳ್ಳಿಸಿ, ಹಾಳುಮಾಡಿ, ಯಾರೂ ಹಾದು ಹೋಗದಂತೆ ಹೆದರಿಸುವ ಪಕ್ಷದಲ್ಲಿ,


ಅವರಿಗೆ ಆರಂಭದಲ್ಲಿ ಯೆಹೋವನ ಭಯಭಕ್ತಿ ಇರಲಿಲ್ಲ. ಆದುದರಿಂದ ಆತನು ಸಿಂಹಗಳನ್ನು ಕಳುಹಿಸಿದನು. ಅವು ಅವರಲ್ಲಿ ಕೆಲವರನ್ನು ಕೊಂದವು.


ಅವರು ಬರದಿಂದ ಕ್ಷೀಣವಾಗುವರು, ತಾಪದಿಂದಲೂ ಅಂಟುರೋಗದಿಂದಲೂ ಸಾಯುವರು; ಅದಲ್ಲದೆ ನಾನು ದುಷ್ಟ ಮೃಗಗಳನ್ನೂ ಮತ್ತು ವಿಷಸರ್ಪಗಳನ್ನೂ ಅವರ ಮೇಲೆ ಬರಮಾಡುವೆನು.


ನಿಮ್ಮ ಮೇಲೆ ಕಾಡುಮೃಗಗಳನ್ನು ಬರಮಾಡುವೆನು; ಅವು ನಿಮ್ಮ ಮಕ್ಕಳನ್ನು ಕದ್ದುಕೊಂಡು ಹೋಗುವವು, ನಿಮ್ಮ ಪಶುಗಳನ್ನು ಕೊಲ್ಲುವವು, ನಿಮ್ಮನ್ನು ಸ್ವಲ್ಪ ಜನರನ್ನಾಗಿ ಮಾಡುವವು; ನಿಮ್ಮ ದಾರಿಗಳು ಪಾಳು ಬೀಳುತ್ತದೆ.


ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ವಾಕ್ಯಗಳೋ ಅಳಿದುಹೋಗುವುದೇ ಇಲ್ಲ.


ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಊದಿ, ನಿಮ್ಮನ್ನು ಬದುಕಿಸಿ, ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು; ಆಗ ಯೆಹೋವನಾದ ನಾನೇ ಇದನ್ನು ನುಡಿದು, ನಡೆಸಿದ್ದೇನೆ ಎಂದು ತಿಳಿದುಕೊಳ್ಳುವಿರಿ” ಇದು ಯೆಹೋವನ ಸಂಕಲ್ಪ.


ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ಹೌದು, ದೇಶವನ್ನೂ, ಅದರಲ್ಲಿನ ಸಮಸ್ತವನ್ನೂ ಅನ್ಯರ ಕೈಯಿಂದ ಹಾಳುಮಾಡಿಸುವೆನು. ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”


ನಾನು ನಿನ್ನನ್ನು ಬೋಳು ಬಂಡೆಯನ್ನಾಗಿ ಮಾಡುವೆನು; ನೀನು ಬಲೆಗಳನ್ನು ಹಾಕುವ ಸ್ಥಳವಾಗುವಿ; ನಿನ್ನ ಮೇಲೆ ಇನ್ನು ಕಟ್ಟಡವನ್ನು ಕಟ್ಟುವುದಿಲ್ಲ; ಯೆಹೋವನಾದ ನಾನೇ ಅಪ್ಪಣೆ ಕೊಟ್ಟಿದ್ದೇನೆ” ಇದು ಕರ್ತನಾದ ಯೆಹೋವನ ನುಡಿ.


ಸಭೆಯವರು ಇವರ ಮೇಲೆ ಕಲ್ಲೆಸೆದು, ಕತ್ತಿಗಳಿಂದ ಇವರನ್ನು ಸಂಹರಿಸಿ, ಇವರ ಗಂಡು ಮತ್ತು ಹೆಣ್ಣು ಮಕ್ಕಳನ್ನು ಕೊಂದು, ಇವರ ಮನೆಗಳನ್ನು ಬೆಂಕಿಯಿಂದ ಸುಟ್ಟುಬಿಡುವರು.


ನಾನು ನಿನ್ನನ್ನು ದಂಡಿಸುವ ಕಾಲದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡಿರುವೆಯೋ? ಕೈಗಳನ್ನು ಬಲಪಡಿಸಿಕೊಂಡಿರುವೆಯೋ? ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ, ಅದರಂತೆ ನಡೆಸುತ್ತೇನೆ.


ನೀನು ಅಗ್ನಿಗೆ ಆಹುತಿಯಾಗುವಿ; ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವುದು; ನೀನು ಇನ್ನು ಜ್ಞಾಪಕಕ್ಕೆ ಬರುವುದಿಲ್ಲ’ ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”


ಇಸ್ರಾಯೇಲ್ ದೇಶಕ್ಕೆ ಹೀಗೆ ಸಾರಿ ಹೇಳು, ‘ಯೆಹೋವನು ಇಂತೆನ್ನುತ್ತಾನೆ, ಆಹಾ, ನಾನು ನಿನಗೆ ವಿರುದ್ಧವಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು, ನಿನ್ನಲ್ಲಿನ ಶಿಷ್ಟರನ್ನೂ, ದುಷ್ಟರನ್ನೂ ಸಂಹರಿಸಿ ಬಿಡುವೆನು.


ಆಗ ಯೆಹೋವನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರಗೊಳಿಸಿ, ಹಸುರಾದದ್ದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವವು. ಇದನ್ನು ಯೆಹೋವನಾದ ನಾನೇ ನುಡಿದು ನಡೆಸಿದ್ದೇನೆ.”


ಅವನ ಸೇನೆಗಳೆಲ್ಲಾ ಚದರಿ ಓಡಿಹೋಗಿ, ಕತ್ತಿಯ ಬಾಯಿಗೆ ತುತ್ತಾಗುವುವು; ಉಳಿದವರನ್ನು ಎಲ್ಲಾ ಕಡೆಯ ಗಾಳಿಗೂ ತೂರಿಬಿಡುವೆನು; ಈ ಮಾತನ್ನು ಆಡಿದವನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವುದು.”


“ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು, ರಕ್ತವನ್ನು ಸುರಿಸಿ, ವ್ಯಾಧಿಯನ್ನು ಕಳುಹಿಸಿ, ಜನರನ್ನು, ಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ,


ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು, ಹತ್ತಿರದಲ್ಲಿರುವವನು ಖಡ್ಗದಿಂದ ಸಾಯುವನು, ತಪ್ಪಿಸಿಕೊಂಡು ಉಳಿದವನು ಕ್ಷಾಮದಿಂದ ಸಾಯುವನು; ಅಂತು ನಾನು ಅವರ ಮೇಲೆ ಇಟ್ಟಿರುವ ರೋಷವನ್ನು ತೀರಿಸಿಬಿಡುವೆನು.


“ನಾನು ಕೋಪದಿಂದಲೂ, ರೋಷದಿಂದಲೂ, ಕಠಿಣವಾದ ಖಂಡನೆಯಿಂದಲೂ, ನಿನಗೆ ಮಾಡುವ ದಂಡನೆಗಳು ಸುತ್ತಲಿನ ಜನಾಂಗಗಳ ದೂಷಣೆಗೂ, ಪರಿಹಾಸ್ಯಗಳಿಗೂ, ಬುದ್ಧಿವಾದಗಳಿಗೂ ಆಸ್ಪದವಾಗುವವು; ಇದು ಯೆಹೋವನಾದ ನನ್ನ ನುಡಿ.


“ನಾನು ಅವರಿಗೆ ನಾಲ್ಕು ವಿಧವಾದ ಬಾಧಕರನ್ನು, ಅಂದರೆ ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವುದಕ್ಕೆ ಆಕಾಶದ ಪಕ್ಷಿಗಳನ್ನೂ ಮತ್ತು ಭೂಜಂತುಗಳನ್ನೂ ನೇಮಿಸುವೆನು” ಎಂಬುದು ಯೆಹೋವನಾದ ನನ್ನ ಮಾತು.


ಆದರೆ ನಾನು ಒಂದೇ ವರ್ಷದೊಳಗೆ ಅವರೆಲ್ಲರನ್ನು ಅಲ್ಲಿಂದ ಹೊರಡಿಸುವುದಿಲ್ಲ. ಏಕೆಂದರೆ ದೇಶದಲ್ಲಿ ಜನರು ಕಡಿಮೆಯಾಗುವುದರಿಂದ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಯಾದೀತು.


ಆಗ ನಾನು ನೋಡಲು ಇಗೋ, ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು.


ಆಗ ನಾನು ನಿನ್ನನ್ನು ಹಾಳುಮಾಡಲಿಕ್ಕೆ ಕ್ಷಾಮವೆಂಬ ನಾಶಕರವಾದ ತೀಕ್ಷ್ಣ ಬಾಣಗಳನ್ನು ನಿನ್ನ ಮೇಲೆ ಬಿಡುವೆನು; ನಿನ್ನನ್ನು ಬರದಿಂದ ಬಹಳವಾಗಿ ಬಾಧಿಸಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು.


ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು,


‘ನಾನು ಅದರಲ್ಲಿ ವ್ಯಾಧಿಯನ್ನೂ, ಅದರ ಚೌಕಗಳಲ್ಲಿ ಸಂಹಾರವನ್ನೂ ಉಂಟು ಮಾಡುವೆನು, ಖಡ್ಗವು ಸುತ್ತುಮುತ್ತಲೂ ಅದರ ಮೇಲೆ ಬೀಸುತ್ತಿರುವಾಗ ಪ್ರಜೆಗಳು ಅದರ ನಡುವೆ ಹತರಾಗಿ ಬೀಳುವರು; ಆಗ ನಾನೇ ಯೆಹೋವನು’ ಎಂದು ಅವರಿಗೆ ತಿಳಿದು ಬರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು