Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 10 - ಪರಿಶುದ್ದ ಬೈಬಲ್‌

1 ಸತ್ತ ನೊಣಗಳಿಂದ ಉತ್ತಮವಾದ ಪರಿಮಳತೈಲವು ದುರ್ವಾಸನೆ ಬೀರುವುದು. ಅದೇರೀತಿಯಲ್ಲಿ ಚಿಕ್ಕ ಮೂಢತನವು ಬಹುಜ್ಞಾನವನ್ನೂ ಸನ್ಮಾನವನ್ನೂ ಹಾಳುಮಾಡಬಲ್ಲದು.

2 ಜ್ಞಾನಿಯ ಆಲೋಚನೆಗಳು ಅವನನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ಆದರೆ ಮೂಢನ ಆಲೋಚನೆಗಳು ಅವನನ್ನು ತಪ್ಪಾದ ದಾರಿಯಲ್ಲಿ ನಡೆಸುತ್ತವೆ.

3 ಮೂಢನು ತನ್ನ ಮೂಢತನವನ್ನು ದಾರಿಯಲ್ಲಿ ನಡೆದುಹೋಗುತ್ತಿರುವಾಗಲೂ ತೋರಿಸುವನು. ಅವನು ತನ್ನ ವಿವೇಕಶೂನ್ಯವನ್ನು ಎಲ್ಲರಿಗೂ ಪ್ರಕಟಪಡಿಸುವನು.

4 ನಿನ್ನ ಯಜಮಾನನು ನಿನ್ನ ಮೇಲೆ ಕೋಪಗೊಂಡ ಮಾತ್ರಕ್ಕೆ ನಿನ್ನ ಉದ್ಯೋಗವನ್ನು ಬಿಡಬೇಡ. ನೀನು ತಾಳ್ಮೆಯಿಂದ ಸಹಾಯಕನಾಗಿದ್ದರೆ ದೊಡ್ಡ ತಪ್ಪುಗಳನ್ನು ಸಹ ನೀನು ಸರಿಪಡಿಸಲು ಸಾಧ್ಯ.

5 ಲೋಕದಲ್ಲಿ ನಾನು ಮತ್ತೊಂದು ಅನ್ಯಾಯವನ್ನು ನೋಡಿದ್ದೇನೆ. ಅದು ಅಧಿಪತಿಗಳು ಮಾಡುವ ತಪ್ಪಿನಂತೆ ಇದೆ.

6 ಘನವಂತರಿಗೆ ಹೀನವಾದ ಸ್ಥಾನ ದೊರೆಯುವುದು; ಮೂಢರಿಗೆ ಮುಖ್ಯವಾದ ಪದವಿಗಳು ದೊರೆಯುವವು.

7 ಸೇವಕರಾಗಿರಬೇಕಿದ್ದವರು ಕುದುರೆಸವಾರಿ ಮಾಡುವುದನ್ನೂ ಅಧಿಪತಿಗಳಾಗಬೇಕಿದ್ದವರು ಸೇವಕರಂತೆ ನಡೆದುಹೋಗುವುದನ್ನೂ ನಾನು ನೋಡಿದ್ದೇನೆ.


ಪ್ರತಿಯೊಂದು ಉದ್ಯೋಗವೂ ಅಪಾಯಕರ

8 ಗುಂಡಿತೋಡುವವನು ತಾನೇ ಅದರಲ್ಲಿ ಬೀಳಬಹುದು. ಗೋಡೆಯನ್ನು ಹೊಡೆದು ಉರುಳಿಸುವವನನ್ನು ಹಾವು ಕಚ್ಚುವುದು.

9 ಬಂಡೆಗಳನ್ನು ಉರುಳಿಸುವವನಿಗೆ ನೋವಾಗುವುದು; ಮರಗಳನ್ನು ಕಡಿಯುವವನಿಗೆ ಕೇಡಾಗುವುದು.

10 ಮೊಂಡಕತ್ತಿಯನ್ನು ಹರಿತಗೊಳಿಸಿದರೆ ಕೆಲಸ ಸುಲಭವಾಗುವಂತೆಯೇ ಜ್ಞಾನವು ಯಾವ ಕೆಲಸವನ್ನಾದರೂ ಸುಲಭಗೊಳಿಸಬಲ್ಲದು.

11 ಹಾವುಗಳನ್ನು ಹಿಡಿಯಬಲ್ಲವನು ಇಲ್ಲದಿರುವಾಗ ಹಾವು ಬೇರೊಬ್ಬನನ್ನು ಕಚ್ಚಿದರೆ ಹಾವು ಹಿಡಿಯುವವನಿಂದ ಪ್ರಯೋಜನವೇನು? ಜ್ಞಾನವು ಸಹ ಹಾಗೆಯೇ.

12 ಜ್ಞಾನಿಯ ಮಾತುಗಳು ಅವನಿಗೆ ಘನತೆಯನ್ನು ತರುತ್ತವೆ; ಮೂಢನ ಮಾತುಗಳು ಅವನಿಗೆ ನಾಶನವನ್ನು ತರುತ್ತವೆ.

13 ಮೂಢನ ಮಾತು ಮೂರ್ಖತನದೊಡನೆ ಆರಂಭಗೊಂಡು ದುಷ್ಟಕರವಾದ ಹುಚ್ಚುತನದೊಡನೆ ಕೊನೆಗೊಳ್ಳುವುದು.

14 ಮೂಢನು ತಾನು ಮಾಡುವಂಥದ್ದರ ಬಗ್ಗೆ ಯಾವಾಗಲೂ ಮಾತಾಡುವನು. ಆದರೆ ಮುಂದೆ ಏನಾಗುವುದೋ ಯಾರಿಗೂ ತಿಳಿಯದು. ಮುಂದೆ ಸಂಭವಿಸುವುದನ್ನು ಯಾರೂ ಹೇಳಲಾರರು.

15 ಮೂಢನು ತನ್ನ ಮನೆದಾರಿಯನ್ನು ತಿಳಿದುಕೊಳ್ಳುವಷ್ಟು ಜಾಣನಲ್ಲ, ಆದ್ದರಿಂದ ಅವನು ತನ್ನ ಜೀವಮಾನವೆಲ್ಲಾ ಕಷ್ಟಪಟ್ಟು ಕೆಲಸ ಮಾಡಬೇಕು.


ದುಡಿಮೆಯ ಮೌಲ್ಯ

16 ರಾಜನು ಮಗುವಿನಂತೆ ಇದ್ದರೆ ದೇಶವು ಹಾಳಾಗುವುದು. ಅಧಿಪತಿಗಳು ಮುಂಜಾನೆಯಲ್ಲಿಯೇ ಔತಣ ಮಾಡಿದರೆ ದೇಶವು ಹಾಳಾಗುವುದು.

17 ಆದರೆ ರಾಜನು ಒಳ್ಳೆಯ ಕುಟುಂಬದಿಂದ ಬಂದವನಾಗಿದ್ದರೆ ದೇಶಕ್ಕೆ ತುಂಬ ಒಳ್ಳೆಯದಾಗುವುದು; ಅಧಿಪತಿಗಳು ತಿನ್ನುವುದನ್ನೂ ಕುಡಿಯುವುದನ್ನೂ ಹತೋಟಿಯಲ್ಲಿಟ್ಟುಕೊಂಡರೆ ದೇಶಕ್ಕೆ ತುಂಬ ಒಳ್ಳೆಯದಾಗುವುದು. ಅಧಿಪತಿಗಳು ತಿನ್ನುವುದೂ ಕುಡಿಯುವುದೂ ಬಲಹೊಂದುವುದಕ್ಕಾಗಿಯೇ ಹೊರತು ಮತ್ತರಾಗುವುದಕ್ಕಾಗಿಯಲ್ಲ.

18 ಒಬ್ಬನು ಕೆಲಸಮಾಡಲಾರದಷ್ಟು ತುಂಬ ಸೋಮಾರಿಯಾಗಿದ್ದರೆ, ಅವನ ಮನೆಯು ಸೋರಲಾರಂಭಿಸುವುದು; ಅದರ ಮೇಲ್ಛಾವಣಿಗೆಯು ಬೀಳತೊಡಗುವುದು.

19 ಊಟವು ಸಂತೋಷಗೊಳಿಸುವುದು; ದ್ರಾಕ್ಷಾರಸವು ಉಲ್ಲಾಸಗೊಳಿಸುವುದು; ಹಣವು ಅನೇಕ ಸಮಸ್ಯೆಗಳನ್ನು ಬಗೆಹರಿಸುವುದು.


ಹರಟೆ ಮಾತು

20 ರಾಜನನ್ನು ಮನಸ್ಸಿನಲ್ಲಿಯೂ ದೂಷಿಸಬೇಡ; ನಿನ್ನ ಮನೆಯಲ್ಲಿ ಒಬ್ಬಂಟಿಗನಾಗಿರುವಾಗಲೂ ಐಶ್ವರ್ಯವಂತರನ್ನು ದೂಷಿಸಬೇಡ. ಯಾಕೆಂದರೆ ಚಿಕ್ಕ ಪಕ್ಷಿಯೊಂದು ಹಾರಿಹೋಗಿ, ನೀನು ಹೇಳಿದ ಪ್ರತಿಯೊಂದನ್ನು ಅವರಿಗೆ ಹೇಳಬಹುದು.

Kannada Holy Bible: Easy-to-Read Version

All rights reserved.

© 1997 Bible League International

Bible League International
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು