ಯೋಬ 14 - ಕನ್ನಡ ಸಮಕಾಲಿಕ ಅನುವಾದ1 “ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನೂ, ಕಷ್ಟಸಂಕಟಗಳಿಂದ ತುಂಬಿದವನೂ ಆಗಿದ್ದಾನೆ. 2 ಅವನು ಹೂವಿನ ಹಾಗೆ ಅರಳಿ ಬಾಡುವನು; ಅವನು ನೆರಳಿನಂತೆ ಓಡಿಹೋಗುತ್ತಾನೆ, ಶಾಶ್ವತವಾಗಿರುವದಿಲ್ಲ. 3 ಹಾಗಾದರೆ ಇಂಥವನ ಮೇಲೆ ದೇವರೇ, ನೀವು ನಿಮ್ಮ ಕಣ್ಣಿಟ್ಟೀದೀರಲ್ಲಾ? ನಿಮ್ಮ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುತ್ತೀರೋ? 4 ಅಶುದ್ಧತೆಯಿಂದ ಶುದ್ಧವಾದದ್ದನ್ನು ತರುವವನು ಯಾರು? ಯಾರೂ ತರಲಾರರು! 5 ಮನುಷ್ಯನ ದಿನಗಳು ಇಷ್ಟೇ ಎಂದು ತೀರ್ಮಾನವಾಗಿದೆ; ಅವನ ತಿಂಗಳುಗಳ ಲೆಕ್ಕ ದೇವರೇ ನಿಮ್ಮ ಬಳಿಯಲ್ಲಿ ಇದೆ; ಅವನು ದಾಟಲಾರದ ಹಾಗೆ ಅವನಿಗೆ ಮೇರೆಗಳನ್ನು ನೇಮಿಸಿದ್ದೀರಿ. 6 ಆದ್ದರಿಂದ ಅವನು ವಿಶ್ರಾಂತಿ ಪಡೆಯಲೆಂದು ನಿಮ್ಮ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸಿಬಿಡಿರಿ; ಅವನು ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ. 7 “ಮರಕ್ಕೆ ಸಹ ಒಂದು ನಿರೀಕ್ಷೆ ಇದೆ: ಅದೇನೆಂದರೆ, ಮರವನ್ನು ಕಡಿದು ಹಾಕಿದರೂ ತಾನು ಮತ್ತೆ ಚಿಗುರುವೆನೆಂಬ ನಿರೀಕ್ಷೆ ಅದಕ್ಕಿದೆ; ಚಿಗುರುವುದನ್ನು ಆ ಮರವು ನಿಲ್ಲಿಸುವುದೇ ಇಲ್ಲ. 8 ಅದರ ಬೇರು ಭೂಮಿಯಲ್ಲಿ ಹಳೆಯದಾದರೂ, ನೆಲದಲ್ಲಿ ಅದರ ಬುಡ ಸತ್ತಿದ್ದರೂ, 9 ನೀರಿನ ವಾಸನೆಯಿಂದ ಅದು ಮೊಳೆತು, ಗಿಡದ ಹಾಗೆ ಅದು ಕೊಂಬೆಗಳನ್ನು ಬಿಡುವುದು. 10 ಆದರೆ ಮನುಷ್ಯನು ಸತ್ತು ಬಿದ್ದಿರುತ್ತಾನೆ; ಅವನು ಕೊನೆಯುಸಿರೆಳೆದಾಗ ಅವನ ಅಂತ್ಯವಾಗುತ್ತದೆ. 11 ಸರೋವರದ ನೀರು ಒಣಗಿ ಹೋಗುವಂತೆಯೂ, ಬರಗಾಲದಲ್ಲಿ ನದಿಗಳು ಬತ್ತಿಹೋಗುವಂತೆಯೂ, 12 ಮನುಷ್ಯನು ಸತ್ತು ಮಲಗಿದರೆ ಏಳುವುದೇ ಇಲ್ಲ; ಆಕಾಶಗಳು ಅಳಿದು ಹೋಗುವವರೆಗೆ ಅವನು ಎಚ್ಚರಗೊಳ್ಳುವುದಿಲ್ಲ; ನಿದ್ರೆಯಿಂದ ಎಬ್ಬಿಸಲಾಗುವುದೂ ಇಲ್ಲ. 13 “ದೇವರೇ, ನೀವು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿಮ್ಮ ಶಿಕ್ಷೆ ಮುಗಿಯುವವರೆಗೂ ನನ್ನನ್ನು ಅಡಗಿಸಿರಿ! ನೀವು ನನಗೆ ಒಂದು ಕಾಲವನ್ನು ನಿಗದಿಪಡಿಸಿ, ಅನಂತರ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು! 14 ಒಬ್ಬ ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ಆದರೂ ನನಗೆ ನೇಮಕ ಮಾಡಿದ ಪರಿಶ್ರಮದ ದಿನವೆಲ್ಲಾ, ನನಗೆ ಬಿಡುಗಡೆಯಾಗುವವರೆಗೆ ನಾನು ಕಾದುಕೊಂಡಿರುವೆನು. 15 ದೇವರೇ, ನೀವು ನನ್ನನ್ನು ಕರೆಯುವಿರಿ, ನಾನು ನಿಮಗೆ ಉತ್ತರಕೊಡುವೆನು; ನಿಮ್ಮ ಈ ಸೃಷ್ಟಿಯ ಮೇಲೆ ನೀವು ಹಂಬಲಿಸುವಿರಿ. 16 ಆಗ ನೀವು ನನ್ನ ಹೆಜ್ಜೆಗಳನ್ನು ಲೆಕ್ಕಿಸುವಿರಿ; ಆದರೆ ನೀವು ನನ್ನ ಪಾಪದ ಬಗ್ಗೆ ದಾಖಲೆ ಇಡುವುದಿಲ್ಲ. 17 ನನ್ನ ಅಪರಾಧಗಳನ್ನು ಮೂಟೆಕಟ್ಟಿ ಮುದ್ರೆ ಹಾಕಿಬಿಡುವಿರಿ; ನೀವು ನನ್ನ ಅನ್ಯಾಯವನ್ನು ಮರೆಮಾಡುವಿರಿ. 18 “ಆದರೂ ಬೆಟ್ಟವು ಬಿದ್ದು ಹಾಳಾಗುವಂತೆಯೂ, ಬಂಡೆಯು ತನ್ನ ಸ್ಥಳದಿಂದ ತೊಲಗುವಂತೆಯೂ, 19 ನೀರು ಕಲ್ಲುಗಳನ್ನು ಸವೆಯಿಸುವಂತೆಯೂ, ಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವಂತೆಯೂ, ಮನುಷ್ಯನ ನಿರೀಕ್ಷೆಯನ್ನು ನೀವು ನಾಶಮಾಡುತ್ತೀರಿ. 20 ನೀವು ಅವನ ಮೇಲೆ ಶಾಶ್ವತವಾಗಿ ಮೇಲುಗೈ ಸಾಧಿಸಿರುವದರಿಂದ ಅವನು ಹೊರಟು ಹೋಗುವನು; ನೀವು ಅವನ ಮುಖಭಾವವನ್ನು ಮಾರ್ಪಡಿಸಿ, ಅವನನ್ನು ಕಳುಹಿಸಿಬಿಡುತ್ತೀರಿ. 21 ಮಕ್ಕಳು ಘನತೆಯನ್ನು ಹೊಂದಿದರೆ, ಅದು ಸತ್ತವರಿಗೆ ತಿಳಿಯುವುದಿಲ್ಲ; ಅವರ ಮಕ್ಕಳು ಕಡಿಮೆ ಸ್ಥಿತಿಗೆ ಬಂದರೆ ಸಹ, ಅದನ್ನು ಸತ್ತವರು ಗ್ರಹಿಸಿಕೊಳ್ಳುವುದಿಲ್ಲ. 22 ಆದರೆ ಸತ್ತವರು ತಮ್ಮ ದೇಹದ ನೋವನ್ನು ಅನುಭವಿಸುವರು, ಅವರ ಆತ್ಮವು ಅವರಿಗಾಗಿ ಮಾತ್ರ ಪ್ರಲಾಪಿಸುತ್ತಿರುವುದು.” |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.