Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 5 - ಕನ್ನಡ ಸಮಕಾಲಿಕ ಅನುವಾದ

1 ಇದಾದ ಮೇಲೆ ಯೆಹೋವ ದೇವರು ಇಸ್ರಾಯೇಲರು ದಾಟಿಹೋಗುವವರೆಗೆ ಅವರ ಮುಂದೆ ಯೊರ್ದನ್ ನದಿಯನ್ನು ಒಣಗಿ ಹೋಗುವಂತೆ ಮಾಡಿದ್ದನ್ನು ಯೊರ್ದನ್ ನದಿ ಪಶ್ಚಿಮದ ಆಚೆದಡದಲ್ಲಿ ವಾಸಿಸಿದ್ದ ಅಮೋರಿಯರ ಸಕಲ ಅರಸರು ಮತ್ತು ಸಮುದ್ರದ ಆಚೆಯಲ್ಲಿ ವಾಸಿಸಿದ್ದ ಕಾನಾನ್ಯರ ಸಕಲ ಅರಸರು ಕೇಳಿದಾಗ ಅವರ ಹೃದಯವು ಕುಂದಿಹೋಯಿತು. ಇಸ್ರಾಯೇಲರ ನಿಮಿತ್ತವಾಗಿ ಅವರಿಗೆ ಪ್ರಾಣಹೋದಂತೆ ಆಯಿತು.


ಗಿಲ್ಗಾಲಿನಲ್ಲಿ ಸುನ್ನತಿ ಸಂಸ್ಕಾರ

2 ಆ ಕಾಲದಲ್ಲಿ ಯೆಹೋವ ದೇವರು ಯೆಹೋಶುವನಿಗೆ, “ನೀನು ಗಟ್ಟಿಯಾದ ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಪುನಃ ಇಸ್ರಾಯೇಲರಿಗೆ ಸುನ್ನತಿ ಮಾಡು,” ಎಂದರು.

3 ಆಗ ಯೆಹೋಶುವನು ತಾನು ಗಟ್ಟಿಯಾದ ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಇಸ್ರಾಯೇಲರಿಗೆ ಗಿಬೆಯಾತ್ ಹಾರಲೋತ್ ಎಂಬ ಸ್ಥಳದಲ್ಲಿ ಸುನ್ನತಿ ಮಾಡಿದನು.

4 ಯೆಹೋಶುವನು ಸುನ್ನತಿ ಮಾಡಿದ ಕಾರಣವೇನೆಂದರೆ: ಈಜಿಪ್ಟಿನಿಂದ ಹೊರಟ ಗಂಡಸರಲ್ಲಿ ಯುದ್ಧಮಾಡುವ ಸೈನ್ಯದವರೆಲ್ಲರೂ ಮರುಭೂಮಿಯ ಮಾರ್ಗದಲ್ಲಿ ಸತ್ತುಹೋದರು.

5 ಈಜಿಪ್ಟಿನಿಂದ ಹೊರಟ ಗಂಡಸರೆಲ್ಲರಿಗೂ ಸುನ್ನತಿ ಆಗಿತ್ತು. ಆದರೆ ಈಜಿಪ್ಟಿನಿಂದ ಹೊರಟಾಗ ಮರುಭೂಮಿಯೊಳಗೆ ಮಾರ್ಗದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿ ಆಗಿರಲಿಲ್ಲ.

6 ಈಜಿಪ್ಟಿನಿಂದ ಹೊರಟ ಇಸ್ರಾಯೇಲರು ಯೆಹೋವ ದೇವರ ಸ್ವರಕ್ಕೆ ವಿಧೇಯರಾಗದಿದ್ದರಿಂದ ಅವರು, ತಮ್ಮ ಯುದ್ಧವೀರರೆಲ್ಲಾ ನಾಶವಾಗುವ ತನಕ ನಾಲ್ವತ್ತು ವರ್ಷಗಳವರೆಗೆ ಮರುಭೂಮಿಯಲ್ಲಿ ಅಲೆದಾಡುತ್ತಿದ್ದರು. ಏಕೆಂದರೆ ಯೆಹೋವ ದೇವರು ಅವರ ತಂದೆಗಳಿಗೆ ವಾಗ್ದಾನಮಾಡಿದ್ದ, ಹಾಲು ಜೇನು ಹರಿಯುವ ದೇಶವನ್ನು ಅವರು ಕಾಣುವುದಿಲ್ಲ ಎಂದು ಯೆಹೋವ ದೇವರು ಅವರಿಗೆ ಆಣೆಯಿಟ್ಟಿದ್ದರು.

7 ಅವರಿಗೆ ಹುಟ್ಟಿದ ಅವರ ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿಸಿದನು. ಅವರಿಗೆ ಮಾರ್ಗದಲ್ಲಿ ಸುನ್ನತಿ ಮಾಡದೆ ಇದ್ದುದರಿಂದ ಅವರು ಸುನ್ನತಿ ಇಲ್ಲದವರಾಗಿದ್ದರು.

8 ಜನರೆಲ್ಲರೂ ಸುನ್ನತಿ ಮಾಡಿಸಿಕೊಂಡ ತರುವಾಯ ಅವರು ವಾಸಿಯಾಗುವವರೆಗೂ ಪಾಳೆಯದೊಳಗೆ ತಮ್ಮ ತಮ್ಮ ಸ್ಥಳಗಳಲ್ಲಿ ಇದ್ದರು.

9 ಆಗ ಯೆಹೋವ ದೇವರು ಯೆಹೋಶುವನಿಗೆ, “ಈ ದಿನ ಈಜಿಪ್ಟಿನ ನಿಂದೆಯನ್ನು ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ,” ಎಂದರು. ಆದ್ದರಿಂದ ಆ ಸ್ಥಳವು ಇಂದಿನವರೆಗೂ ಗಿಲ್ಗಾಲ್ ಎಂದು ಕರೆಯಲಾಗಿದೆ.

10 ಇಸ್ರಾಯೇಲರು ಗಿಲ್ಗಾಲಿನಲ್ಲಿ ಇಳಿದುಕೊಂಡು ತಿಂಗಳಿನ ಹದಿನಾಲ್ಕನೆಯ ದಿವಸ ಸಂಜೆಯಲ್ಲಿ ಯೆರಿಕೋವಿನ ಬಯಲುಗಳಲ್ಲಿ ಪಸ್ಕವನ್ನು ಆಚರಿಸಿದರು.

11 ಪಸ್ಕದ ಮರುದಿವಸ ಅವರು ಆ ದೇಶದ ಬೆಳೆಯನ್ನು ಅಂದರೆ ಹುಳಿಯಿಲ್ಲದ ರೊಟ್ಟಿಗಳನ್ನೂ ಹುರಿದ ಧಾನ್ಯಗಳನ್ನೂ ತಿಂದರು.

12 ಅವರು ಆ ದೇಶದ ಧಾನ್ಯವನ್ನು ತಿಂದ ಮರುದಿವಸದಲ್ಲೇ ಮನ್ನವು ನಿಂತುಹೋಯಿತು. ಇಸ್ರಾಯೇಲರಿಗೆ ಮನ್ನ ಮತ್ತೆ ಸಿಕ್ಕಲಿಲ್ಲ. ಅವರು ಆ ವರುಷದಲ್ಲಿ ಕಾನಾನ್ ದೇಶದ ಫಲವನ್ನು ತಿಂದರು.


ಯೆರಿಕೋವಿನ ಪತನ

13 ಇದಾದ ಮೇಲೆ ಯೆಹೋಶುವನು ಯೆರಿಕೋವಿನ ಬಳಿಯಲ್ಲಿ ಇದ್ದಾಗ, ಒಮ್ಮೆ ಕಣ್ಣೆತ್ತಿ ನೋಡಿದನು. ಆಗ ಒಬ್ಬ ಮನುಷ್ಯನು ಅವನಿಗೆದುರಾಗಿ ನಿಂತಿದ್ದನು. ಆತನ ಕೈಯಲ್ಲಿ ಹಿರಿದ ಖಡ್ಗ ಇರುವುದನ್ನು ಕಂಡನು. ಯೆಹೋಶುವನು ಆತನ ಬಳಿಗೆ ಹೋಗಿ ಆತನಿಗೆ, “ನೀವು ನಮ್ಮವರೋ ಅಥವಾ ಶತ್ರು ಕಡೆಯವರೋ?” ಎಂದು ಕೇಳಿದನು.

14 ಅದಕ್ಕೆ ಆತನು, “ನಾನು ಅಂಥವನಲ್ಲ, ಯೆಹೋವ ದೇವರ ಸೈನ್ಯದ ಅಧಿಪತಿಯಾಗಿ ಈಗ ನಾನು ಬಂದಿದ್ದೇನೆ,” ಎಂದನು. ಆಗ ಯೆಹೋಶುವನು ಬೋರಲು ಬಿದ್ದು ಆತನನ್ನು ಆರಾಧಿಸಿ, ಆತನಿಗೆ, “ನನ್ನ ಒಡೆಯಾ, ತಮ್ಮ ಸೇವಕನಿಗೆ ಹೇಳಬೇಕಾಗಿರುವ ಸಂದೇಶವೇನು?” ಎಂದನು.

15 ಅದಕ್ಕೆ ಯೆಹೋವ ದೇವರ ಸೈನ್ಯದ ಅಧಿಪತಿಯು ಯೆಹೋಶುವನಿಗೆ, “ನಿನ್ನ ಕೆರಗಳನ್ನು ನಿನ್ನ ಕಾಲುಗಳಿಂದ ತೆಗೆದಿಡು. ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು,” ಎಂದನು. ಹಾಗೆಯೇ ಯೆಹೋಶುವನು ಮಾಡಿದನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು