ಜ್ಞಾನೋಕ್ತಿಗಳು 12 - ಕನ್ನಡ ಸಮಕಾಲಿಕ ಅನುವಾದ1 ಶಿಸ್ತನ್ನು ಪ್ರೀತಿಸುವವನು ಪರಿಜ್ಞಾನವನ್ನು ಪ್ರೀತಿಸುವವನಾಗಿದ್ದಾನೆ, ಆದರೆ ತಿದ್ದುವಿಕೆಯನ್ನು ಹಗೆಮಾಡುವವನು ದಡ್ಡನು. 2 ಒಳ್ಳೆಯವನು ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ, ಆದರೆ ಕುಯುಕ್ತಿ ಮಾಡುವವನನ್ನು ಅವರು ದುಷ್ಟನೆಂದು ಖಂಡಿಸುತ್ತಾರೆ. 3 ಒಬ್ಬ ಮನುಷ್ಯನು ದುಷ್ಟತನದಿಂದ ಸ್ಥಿರವಾಗುವುದಿಲ್ಲ. ಆದರೆ ನೀತಿವಂತರನ್ನು ಕಿತ್ತುಹಾಕಲಾಗುವುದಿಲ್ಲ. 4 ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ಆದರೆ ನಾಚಿಕೆ ಪಡಿಸುವವಳು ಅವನ ಎಲುಬುಗಳಿಗೆ ಕ್ಷಯ ರೋಗದಂತೆ ಇರುವಳು. 5 ನೀತಿವಂತರ ಯೋಜನೆಗಳು ನ್ಯಾಯವಾಗಿವೆ; ದುಷ್ಟರ ಸಲಹೆ ಮೋಸಭರಿತ. 6 ದುಷ್ಟರ ಮಾತುಗಳು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಅವರನ್ನು ಬಿಡಿಸುವುದು. 7 ದುಷ್ಟರು ನೆಲಕ್ಕುರುಳಿ ನಿರ್ಮೂಲರಾಗುವರು, ಆದರೆ ನೀತಿವಂತರ ಮನೆಯು ಸ್ಥಿರವಾಗಿ ನಿಲ್ಲುವುದು. 8 ತನ್ನ ಜ್ಞಾನಕ್ಕನುಸಾರವಾಗಿ ಮನುಷ್ಯನು ಗೌರವ ಹೊಂದುವನು; ವಕ್ರಹೃದಯವುಳ್ಳವನು ಕಡೆಗಣಿಸಲಾಗುವನು. 9 ಹೊಟ್ಟೆಗೆ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸಾಮಾನ್ಯ ಸೇವಕನೇ ಮೇಲು. 10 ನೀತಿವಂತನು ತನ್ನ ಪ್ರಾಣಿಗಳಿಗೂ ಕಾಳಜಿ ತೋರುವನು; ಆದರೆ ದುಷ್ಟರ ಕರುಣೆಯ ಕಾರ್ಯಗಳು ಕ್ರೂರತನವೇ. 11 ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು, ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನು ವಿವೇಕಶೂನ್ಯನು. 12 ದುಷ್ಟರು ಕೆಟ್ಟವರ ಭದ್ರಕೋಟೆಯನ್ನು ಅಪೇಕ್ಷಿಸುತ್ತಾರೆ; ಆದರೆ ನೀತಿವಂತರ ಬೇರು ಫಲವನ್ನು ಕೊಡುತ್ತದೆ. 13 ದುಷ್ಟನು ತನ್ನ ತಪ್ಪು ಮಾತುಗಳಿಂದ ಬಲೆಗೆ ಬೀಳುವನು, ಆದರೆ ನೀತಿವಂತರು ಇಕ್ಕಟ್ಟಿನೊಳಗಿಂದ ತಪ್ಪಿಸಿಕೊಳ್ಳುವರು. 14 ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದರಿಂದ ತೃಪ್ತನಾಗುವನು, ಮನುಷ್ಯನ ಕೈಕೆಲಸಗಳು ಅವನಿಗೆ ಪ್ರತಿಫಲವನ್ನು ಕೊಡುವುವು. 15 ಮೂರ್ಖನ ಮಾರ್ಗವು ತನ್ನ ಕಣ್ಣುಗಳಿಗೆ ಸರಿಯಾಗಿದೆ, ಆದರೆ ಜ್ಞಾನಿಯು ಸಲಹೆಗೆ ಕಿವಿಗೊಡುವನು. 16 ಮೂರ್ಖನ ಕೋಪವು ತಟ್ಟನೆ ರಟ್ಟಾಗುವುದು, ಆದರೆ ಜಾಣನು ಅವಮಾನವನ್ನು ನಿರ್ಲಕ್ಷಿಸುತ್ತಾನೆ. 17 ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ. 18 ಅಜಾಗರೂಕತೆಯ ಮಾತುಗಳು ಖಡ್ಗಗಳಂತೆ ಚುಚ್ಚುತ್ತವೆ, ಆದರೆ ಜ್ಞಾನವಂತರ ನಾಲಿಗೆಯು ಸ್ವಸ್ಥತೆಯನ್ನು ತರುವುದು. 19 ಸತ್ಯದ ತುಟಿಯು ಸದಾ ಸ್ಥಿರಗೊಳ್ಳುವುದು, ಸುಳ್ಳಾಡುವ ನಾಲಿಗೆಯು ಕ್ಷಣಿಕ. 20 ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ. 21 ನೀತಿವಂತನಿಗೆ ಯಾವ ಕೇಡೂ ಸಂಭವಿಸದು, ಆದರೆ ದುಷ್ಟರು ಕೇಡಿನಿಂದ ತುಂಬಿಕೊಳ್ಳುವರು. 22 ಸುಳ್ಳಾಡುವ ತುಟಿಗಳು ಯೆಹೋವ ದೇವರಿಗೆ ಅಸಹ್ಯವಾಗಿವೆ; ಆದರೆ ಸತ್ಯವಂತರಲ್ಲಿ ಅವರು ಆನಂದಿಸುತ್ತಾರೆ. 23 ಜಾಣನು ತನ್ನ ಜ್ಞಾನವನ್ನು ಗುಪ್ತಪಡಿಸುತ್ತಾನೆ; ಆದರೆ ಮೂರ್ಖನ ಹೃದಯವು ಮೂರ್ಖತನವನ್ನು ಹೇಳುತ್ತದೆ. 24 ಚುರುಕು ಕೈಯುಳ್ಳವನು ಆಳುವನು; ಸೋಮಾರಿಗಳು ಗುಲಾಮರಾಗುವರು. 25 ಆತಂಕವು ಹೃದಯವನ್ನು ಕುಗ್ಗಿಸುವುದು, ಆದರೆ ಕನಿಕರದ ಮಾತು ಹುರಿದುಂಬಿಸುವುದು. 26 ನೀತಿವಂತರು ತಮ್ಮ ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸುತ್ತಾರೆ, ಆದರೆ ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆಯುತ್ತದೆ. 27 ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವುದಿಲ್ಲ, ಆದರೆ ಶ್ರಮಪಡುವವರು ಅದನ್ನು ತೃಪ್ತಿಯಿಂದ ತಿನ್ನುತ್ತಾರೆ. 28 ನೀತಿಯ ಮಾರ್ಗದಲ್ಲಿ ಜೀವವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ. |
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.
Biblica, Inc.