Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 2 - ಕನ್ನಡ ಸಮಕಾಲಿಕ ಅನುವಾದ


ಎಲೀಯನು ಪರಲೋಕಕ್ಕೆ ಎತ್ತಿಕೊಂಡದ್ದು

1 ಯೆಹೋವ ದೇವರು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ, ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.

2 ಆಗ ಎಲೀಯನು ಎಲೀಷನಿಗೆ, “ನೀನು ದಯಮಾಡಿ ಇಲ್ಲಿ ಇರು. ಯೆಹೋವ ದೇವರು ನನ್ನನ್ನು ಬೇತೇಲಿಗೆ ಕಳುಹಿಸುತ್ತಿದ್ದಾರೆ,” ಎಂದನು. ಅದಕ್ಕೆ ಎಲೀಷನು, “ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಬೇತೇಲಿಗೆ ಹೋದರು.

3 ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಇಂದು ಯೆಹೋವ ದೇವರು ನಿನ್ನ ಯಜಮಾನನನ್ನು ನಿನ್ನಿಂದ ತೆಗೆದುಕೊಳ್ಳುವರೆಂದು ತಿಳಿದಿದ್ದೀಯೋ?” ಎಂದರು. ಅದಕ್ಕವನು, “ಹೌದು, ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು.

4 ಆಗ ಎಲೀಯನು ಅವನಿಗೆ, “ಎಲೀಷನೇ, ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೆರಿಕೋವಿಗೆ ಕಳುಹಿಸುತ್ತಿದ್ದಾರೆ” ಎಂದನು. ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಯೆರಿಕೋವಿಗೆ ಬಂದರು.

5 ಆಗ ಯೆರಿಕೋವಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತೆಗೆದುಕೊಳ್ಳುವನೆಂದು ತಿಳಿದಿದ್ದೀಯೋ?” ಎಂದರು. ಅದಕ್ಕವನು, “ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು.

6 ಎಲೀಯನು ಅವನಿಗೆ, “ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೊರ್ದನಿಗೆ ಕಳುಹಿಸುತ್ತಿದ್ದಾರೆ,” ಎಂದನು. ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರಿಬ್ಬರೂ ಮುಂದಕ್ಕೆ ನಡೆದರು.

7 ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಹೋಗಿ ದೂರದಲ್ಲಿ ಎದುರಾಗಿ ನಿಂತರು. ಆದರೆ ಆ ಇಬ್ಬರು ಯೊರ್ದನ್ ನದಿ ಬಳಿಯಲ್ಲಿ ನಿಂತರು.

8 ಆದರೆ ಎಲೀಯನು ತನ್ನ ಹೊದಿಕೆಯನ್ನು ತೆಗೆದು ಮಡಿಸಿಕೊಂಡು, ನೀರನ್ನು ಹೊಡೆದನು. ಆಗ ಆ ನೀರು ಈ ಕಡೆ, ಆ ಕಡೆ ವಿಭಾಗವಾದುದರಿಂದ ಅವರಿಬ್ಬರೂ ಒಣಭೂಮಿಯ ಮೇಲೆ ದಾಟಿಹೋದರು.

9 ಅವರು ದಾಟಿಹೋದ ತರುವಾಯ, ಎಲೀಯನು ಎಲೀಷನಿಗೆ, “ನಾನು ನಿನ್ನನ್ನು ಬಿಟ್ಟುಹೋಗುವುದಕ್ಕೆ ಮುಂಚೆ, ನಿನಗೋಸ್ಕರ ನಾನು ಮಾಡಬೇಕಾದದ್ದನ್ನು ಕೇಳು,” ಎಂದನು. ಅದಕ್ಕೆ ಎಲೀಷನು, “ನಿನ್ನ ಆತ್ಮದ ಎರಡು ಪಾಲನ್ನು ನಾನು ಬಾಧ್ಯವಾಗಿ ಹೊಂದುವಂತೆ ಮಾಡು,” ಎಂದನು.

10 ಅದಕ್ಕವನು, “ನೀನು ಕಠಿಣವಾದದ್ದನ್ನು ಕೇಳಿದೆ. ಆದಾಗ್ಯೂ ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ಕಂಡರೆ, ನಿನಗೆ ಅದು ದೊರಕುವುದು, ಇಲ್ಲದಿದ್ದರೆ, ದೊರಕುವುದಿಲ್ಲ,” ಎಂದನು.

11 ಅವರು ನಡೆಯುತ್ತಾ ಬಂದು ಮಾತನಾಡಿಕೊಂಡಿರುವಾಗ, ಬೆಂಕಿಯ ರಥವೂ ಬೆಂಕಿಯ ಕುದುರೆಗಳೂ ಅವರಿಬ್ಬರನ್ನೂ ಬೇರೆಯಾಗಿ ಮಾಡಿದವು. ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು.

12 ಎಲೀಷನು ಅದನ್ನು ಕಂಡು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥ ಮತ್ತು ಸಾರಥಿಯಾದ್ದಾತನೇ!” ಎಂದು ಕೂಗಿದನು. ಮತ್ತೆ ಅವನನ್ನು ಕಾಣಲಿಲ್ಲ. ಆಗ ಅವನು ತನ್ನ ವಸ್ತ್ರಗಳನ್ನು ತೆಗೆದು ಎರಡು ತುಂಡುತುಂಡಾಗಿ ಹರಿದನು.

13 ಎಲೀಷನು ಎಲೀಯನಿಂದ ಬಿದ್ದ ಹೊದಿಕೆಯನ್ನು ಎತ್ತಿಕೊಂಡು, ಹಿಂದಕ್ಕೆ ಹೋಗಿ, ಯೊರ್ದನ್ ನದಿ ತೀರದಲ್ಲಿ ನಿಂತನು.

14 ಎಲೀಯನಿಂದ ಬಿದ್ದ ಹೊದಿಕೆಯನ್ನು ತೆಗೆದುಕೊಂಡು ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವ ದೇವರು ಎಲ್ಲಿ?” ಎಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ, ಅದು ಬಲಗಡೆಗೂ ಎಡಗಡೆಗೂ ವಿಭಾಗವಾದದ್ದರಿಂದ, ಎಲೀಷನು ದಾಟಿಹೋದನು.

15 ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಗುಂಪು ಅವನನ್ನು ಕಂಡಾಗ, “ಎಲೀಯನ ಆತ್ಮವು ಎಲೀಷನ ಮೇಲೆ ನಿಂತಿರುವುದು,” ಎಂದು ಹೇಳಿ, ಎದುರುಗೊಳ್ಳಲು ಬಂದು, ಅವನ ಮುಂದೆ ನೆಲದವರೆಗೂ ಅಡ್ಡಬಿದ್ದರು.

16 ಇದಲ್ಲದೆ ಅವರು ಅವನಿಗೆ, “ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ. ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಆಗಲಿ. ಒಂದು ವೇಳೆ ಯೆಹೋವ ದೇವರ ಆತ್ಮರು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ, ತಗ್ಗಿನಲ್ಲಾದರೂ ಇಟ್ಟಿರಬಹುದು,” ಎಂದರು. ಅದಕ್ಕೆ ಅವನು, “ಕಳುಹಿಸಬೇಡಿರಿ,” ಎಂದನು.

17 ಆದರೆ ಅವರು ಅವನನ್ನು ಬೇಸರಪಡುವವರೆಗೂ ಬಲವಂತ ಮಾಡಿದ್ದರಿಂದ ಅವನು, “ಕಳುಹಿಸಿರಿ,” ಎಂದನು. ಅವರು ಐವತ್ತು ಮಂದಿಯನ್ನು ಕಳುಹಿಸಿದರು. ಇವರು ಮೂರು ದಿವಸ ಹುಡುಕಿ ಅವನನ್ನು ಕಾಣದೆ ಹೋದರು.

18 ಅವನು ಯೆರಿಕೋವಿನಲ್ಲಿ ನಿಂತಿರುವಾಗ, ಅವರು ತಿರುಗಿ ಅವನ ಬಳಿಗೆ ಬಂದರು. ಆಗ ಅವನು ಅವರಿಗೆ, “ಹೋಗಬೇಡಿರೆಂದು ನಾನು ನಿಮಗೆ ಹೇಳಲಿಲ್ಲವೋ?” ಎಂದನು.


ನೀರನ್ನು ಶುದ್ಧಮಾಡಿದ್ದು

19 ಆಗ ಪಟ್ಟಣದ ಮನುಷ್ಯರು ಎಲೀಷನಿಗೆ, “ಈ ಪಟ್ಟಣದ ಸ್ಥಳವು ಒಳ್ಳೆಯದಾಗಿದೆ. ನಮ್ಮ ಯಜಮಾನನೇ, ನೋಡು ನಿನಗೆ ಕಾಣುವುದು. ಆದರೆ ನೋಡು ನೀರು ಕೆಟ್ಟದ್ದು, ಭೂಮಿ ಬಂಜೆಯಾದದ್ದು,” ಎಂದರು.

20 ಅದಕ್ಕವನು, “ನನ್ನ ಬಳಿಗೆ ಹೊಸ ಗಡಿಗೆಯನ್ನು ತೆಗೆದುಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ,” ಎಂದನು. ಅವರು ಅವನ ಬಳಿಗೆ ತೆಗೆದುಕೊಂಡು ಬಂದರು.

21 ಅವನು ನೀರಿನ ಬುಗ್ಗೆಯ ಬಳಿಗೆ ಹೊರಟುಹೋಗಿ, ನೀರಿನಲ್ಲಿ ಉಪ್ಪು ಹಾಕಿ, “ ‘ಆ ನೀರನ್ನು ಶುದ್ಧಮಾಡಿದೆನು. ಇನ್ನು ಮೇಲೆ ಅದರಿಂದ ಮರಣವೂ, ಬಂಜೆತನವೂ ಆಗದಿರಲಿ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.

22 ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನವರೆಗೂ ಶುದ್ಧವಾಗಿಯೇ ಇದೆ.


ಎಲೀಷನನ್ನು ಹಾಸ್ಯಮಾಡಿದ್ದು

23 ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿರುವಾಗ, ಚಿಕ್ಕ ಹುಡುಗರು ಪಟ್ಟಣದಿಂದ ಹೊರಟುಬಂದು ಅವನನ್ನು ಹಾಸ್ಯಮಾಡಿ ಅವನಿಗೆ, “ಬೋಳು ತಲೆಯವನೇ, ಏರಿ ಹೋಗು; ಬೋಳು ತಲೆಯವನೇ, ಏರಿ ಹೋಗು,” ಎಂದರು.

24 ಅವನು ಹಿಂದಿರುಗಿ ಅವರನ್ನು ನೋಡಿ, ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯಿಂದ ಎರಡು ಕರಡಿಗಳು ಹೊರಟು, ಅವರಲ್ಲಿ ನಾಲ್ವತ್ತೆರಡು ಹುಡುಗರನ್ನು ಸೀಳಿಬಿಟ್ಟವು.

25 ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಸಮಾರ್ಯಕ್ಕೆ ಇಳಿದು ಹೋದನು.

ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™

ಕೃತಿಸ್ವಾಮ್ಯ © 1999, 2020, 2022 Biblica, Inc.

ಅನುಮತಿಯೊಂದಿಗೆ ಬಳಸಲಾಗಿದೆ

ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

Holy Bible, Kannada Contemporary Version™

Copyright © 1999, 2020, 2022 by Biblica, Inc.

Used with permission. All rights reserved worldwide.

Biblica, Inc.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು