ವಿಮೋಚನಕಾಂಡ 34 - ಕನ್ನಡ ಸತ್ಯವೇದವು J.V. (BSI)ದೇವರು ಇಸ್ರಾಯೇಲ್ಯರಿಗೆ ದಶಾಜ್ಞೆಗಳನ್ನು ತಿರಿಗಿ ಬರಿಸಿಕೊಟ್ಟದ್ದು 1 ಯೆಹೋವನು ಮೋಶೆಗೆ - ನೀನು ಮೊದಲಿನ ಕಲ್ಲಿನ ಹಲಿಗೆಗಳಂತೆ ಇನ್ನು ಎರಡು ಕಲ್ಲಿನ ಹಲಿಗೆಗಳನ್ನು ಸಿದ್ಧಪಡಿಸಿಕೋ. ನೀನು ಒಡೆದು ಬಿಟ್ಟ ಆ ಮೊದಲನೆಯ ಹಲಿಗೆಗಳ ಮೇಲಿದ್ದ ವಾಕ್ಯಗಳನ್ನು ನಾನು ಈ ಹಲಿಗೆಗಳ ಮೇಲೆ ಬರೆಯುವೆನು. 2 ಬೆಳಿಗ್ಗೆ ನೀನು ಸಿದ್ಧವಾಗಿದ್ದು ಸೀನಾಯಿ ಬೆಟ್ಟವನ್ನು ಹತ್ತಿ ಅಲ್ಲಿ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರಬೇಕು. 3 ಯಾರೂ ನಿನ್ನ ಜೊತೆಯಲ್ಲಿ ಮೇಲಕ್ಕೆ ಬರಕೂಡದು. ಈ ಬೆಟ್ಟದ ಪ್ರದೇಶದಲ್ಲಿ ಯಾರೂ ಎಲ್ಲಿಯೂ ಕಾಣಿಸಕೂಡದು; ಕುರಿದನಗಳೂ ಬೆಟ್ಟದ ಮುಂದೆ ಮೇಯಕೂಡದು ಎಂದು ಹೇಳಿದನು. 4 ಆದಕಾರಣ ಮೋಶೆ ಮೊದಲಿದ್ದ ಹಲಿಗೆಗಳಂತೆ ಎರಡು ಕಲ್ಲಿನ ಹಲಿಗೆಗಳನ್ನು ಸಿದ್ಧಪಡಿಸಿಕೊಂಡು ಯೆಹೋವನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಿಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿಬೆಟ್ಟವನ್ನು ಹತ್ತಿದನು. 5 ಆಗ ಯೆಹೋವನು ಮೇಘದಿಂದ ಆವರಿಸಲ್ಪಟ್ಟವನಾಗಿ ಇಳಿದು ಬಂದು ಅಲ್ಲಿ ಅವನ ಹತ್ತಿರ ನಿಂತು ಯೆಹೋವನೆಂಬ ನಾಮವನ್ನು ಪ್ರಕಟಿಸಿದನು. 6 ಯೆಹೋವನು ಮೋಶೆಯ ಎದುರಾಗಿ ಹೋಗುತ್ತಾ ಪ್ರಕಟವಾಗಿ ಹೇಳಿದ್ದೇನಂದರೆ :- ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಫಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; 7 ಸಾವಿರಾರು ತಲೆಗಳವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷವಿುಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು; ತಂದೆಗಳ ದೋಷ ಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು ಎಂಬದೇ. 8 ಮೋಶೆ ತ್ವರೆಪಟ್ಟು ನೆಲದಲ್ಲಿ ಅಡ್ದಬಿದ್ದು ನಮಸ್ಕರಿಸಿ - 9 ಕರ್ತನೇ, ನಿನ್ನ ಅನುಗ್ರಹವು ನನಗೆ ದೊರಕಿದ್ದಾದರೆ ನೀನೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಮೊಂಡರೇ; ಆದಾಗ್ಯೂ ನೀನು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷವಿುಸಿ ನಿನ್ನ ಜನರಾಗುವಂತೆ ನಮ್ಮನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು. 10 ಯೆಹೋವನು ಹೇಳಿದ್ದೇನಂದರೆ - ನಾನು ಒಂದು ನಿಬಂಧನೆಯನ್ನು ಸ್ಥಾಪಿಸುತ್ತೇನೆ, ಕೇಳು; ಲೋಕದಲ್ಲಿ ಎಲ್ಲಿಯೂ ಯಾವ ಜನಾಂಗದಲ್ಲಿಯಾದರೂ ನಡೆಯದಂಥ ಮಹತ್ಕಾರ್ಯಗಳನ್ನು ನಿನ್ನ ಜನರೆಲ್ಲರು ನೋಡುವಂತೆ ನಡಿಸುವೆನು. ನಿಮ್ಮ ಸುತ್ತಮುತ್ತಲಿರುವ ಎಲ್ಲಾ ಜನರೂ ಯೆಹೋವನು ಮಾಡುವ ಮಹತ್ಕಾರ್ಯವನ್ನು ನೋಡುವರು. ನಾನು ನಿಮ್ಮ ವಿಷಯದಲ್ಲಿ ಮಾಡಬೇಕೆಂದಿರುವದು ಭಯಂಕರವಾದದ್ದು. 11 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವದನ್ನು ನೀವು ಅನುಸರಿಸಿ ನಡೆಯಬೇಕು. ಇಗೋ, ನಾನು ಅಮೋರಿಯರನ್ನೂ ಕಾನಾನ್ಯರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿಮ್ಮ ಮುಂದೆ ಹೊರಡಿಸುವೆನು. 12 ನೀವು ಸೇರುವ ದೇಶದ ನಿವಾಸಿಗಳ ಸಂಗಡ ಯಾವ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು ನೋಡಿಕೊಳ್ಳಿರಿ; ಮಾಡಿಕೊಂಡರೆ ಅದು ನಿಮ್ಮ ಮಧ್ಯದಲ್ಲಿ ಉರುಲಿನಂತಿರುವದು. 13 [ಆದದರಿಂದ] ನೀವು ಅವರ ಬಲಿಪೀಠಗಳನ್ನು ಕೆಡವಿ ಅವರ ಕಲ್ಲುಕಂಬಗಳನ್ನು ಒಡೆದು ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದುಬಿಡಬೇಕು. 14 ಸ್ವಗೌರವವನ್ನು ಕಾಪಾಡಿಕೊಳ್ಳುವವನು ಎಂಬ ಹೆಸರುಳ್ಳ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದ್ದರಿಂದ ನೀವು ಬೇರೆ ಯಾವ ದೇವರ ಮುಂದೆಯೂ ಅಡ್ಡ ಬೀಳಬಾರದು. 15 ನೀವು ಆ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಮಾಡಿಕೊಳ್ಳದಂತೆ ಜಾಗರೂಕರಾಗಿರಿ, ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಯಜ್ಞಗಳನ್ನು ಮಾಡುವಾಗ ಅವರಲ್ಲಿ ಒಬ್ಬನು ಯಜ್ಞ ಭೋಜನಕ್ಕೆ ನಿಮ್ಮನ್ನೂ ಕರೆದಾನು, ನೀವು ಹೋಗಿ ಭೋಜನ ಮಾಡೀರಿ; 16 ಅದಲ್ಲದೆ ನೀವು ನಿಮ್ಮ ಗಂಡು ಮಕ್ಕಳಿಗೆ ಅವರಲ್ಲಿ ಕನ್ನಿಕೆಗಳನ್ನು ತೆಗೆದುಕೊಳ್ಳುವದಕ್ಕೆ ಆಸ್ಪದವುಂಟಾಗುವದು; ತರುವಾಯ ಆ ಸೊಸೆಯರು ತೌರಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನೂ ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ. 17 ದೇವರೆಂದು ಎರಕದ ವಿಗ್ರಹಗಳನ್ನು ಮಾಡಿಸಿಕೊಳ್ಳಬಾರದು. 18 ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಜಾತ್ರೆಯನ್ನು ಆಚರಿಸಬೇಕು. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರ ಮಾಸದ ನೇಮಕವಾದ ಕಾಲದಲ್ಲಿ ಏಳು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ನೀವು ಚೈತ್ರ ಮಾಸದಲ್ಲಿಯೇ ಐಗುಪ್ತದೇಶದಿಂದ ಬಿಡುಗಡೆಯಾಗಿ ಬಂದಿರಲ್ಲಾ. 19 ಪ್ರಥಮಗರ್ಭವೆಲ್ಲಾ ಅಂದರೆ ನಿಮ್ಮ ದನಕುರಿಗಳಲ್ಲಿ ಹುಟ್ಟುವ ಚೊಚ್ಚಲುಮರಿಗಳೆಲ್ಲಾ ಗಂಡಾದ ಪಕ್ಷಕ್ಕೆ ನನ್ನದೇ. 20 ಕತ್ತೆಯ ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೆಮರಿಯನ್ನು ಬಿಡಿಸಬಹುದು; ಹಾಗೆ ಬಿಡಿಸಲೊಲ್ಲದೆ ಹೋದರೆ ಅದರ ಕುತ್ತಿಗೆ ಮುರಿದು ಕೊಂದುಬಿಡಬೇಕು. ಆದರೆ ನಿಮ್ಮ ಚೊಚ್ಚಲು ಗಂಡುಮಗುವನ್ನು ಕೊಲ್ಲದೆ ಬದಲು ಕೊಟ್ಟು ಬಿಡಿಸಲೇಬೇಕು. ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು. 21 ಆರು ದಿವಸಗಳು ನಿಮ್ಮ ಕೆಲಸವನ್ನು ನಡಿಸಿ ಏಳನೆಯ ದಿನದಲ್ಲಿ ಯಾವ ಕೆಲಸವನ್ನೂ ಮಾಡದೆ ಇರಬೇಕು. ಉಳುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ ಹಾಗೆಯೇ ಏಳನೆಯ ದಿನದಲ್ಲಿ ಕೆಲಸಮಾಡದೆ ಇರಬೇಕು. 22 [ಪಸ್ಕವಾದ ಏಳು] ವಾರಗಳ ಮೇಲೆ ನಡೆಯುವ ಜಾತ್ರೆ ಅಂದರೆ ಗೋದೀ ಬೆಳೆಯ ಪ್ರಥಮ ಸಮರ್ಪಣದ ಸುಗ್ಗಿಜಾತ್ರೆಯನ್ನೂ ಸಂವತ್ಸರದ ಅಂತ್ಯದಲ್ಲಿ ಫಲಸಂಗ್ರಹದ ಜಾತ್ರೆಯನ್ನೂ ಆಚರಿಸಬೇಕು. 23 ವರುಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ಇಸ್ರಾಯೇಲ್ಯರ ದೇವರಾಗಿರುವ ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ನೆರೆಯಬೇಕು. 24 ನಾನು ನಿಮ್ಮ ಎದುರಿನಿಂದ ಅನ್ಯಜನಗಳನ್ನು ಹೊರಡಿಸಿ ನಿಮ್ಮ ದೇಶವನ್ನು ವಿಸ್ತರಿಸುವೆನು. ಅಷ್ಟೇ ಅಲ್ಲದೆ ನೀವು ವರುಷಕ್ಕೆ ಮೂರಾವರ್ತಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಾಗ ಯಾರೂ ನಿಮ್ಮ ಭೂವಿುಯನ್ನು ಅಪಹರಿಸುವದಕ್ಕೆ ಅಪೇಕ್ಷಿಸುವದಿಲ್ಲ. 25 ನನಗೆ ಯಜ್ಞವನ್ನು ಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಕೂಡದು. ಪಸ್ಕದಲ್ಲಿ ನೀವು ಸಮರ್ಪಿಸಿದ ಯಜ್ಞಮಾಂಸವನ್ನು ಮರುದಿನದವರೆಗೂ ಉಳಿಸಬಾರದು. 26 ಭೂವಿುಯ ಪ್ರಥಮ ಫಲಗಳಲ್ಲಿ ಶ್ರೇಷ್ಠವಾದದ್ದನ್ನು ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಕೂಡದು. 27 ಯೆಹೋವನು ಮೋಶೆಗೆ - ನೀನು ಈ ವಾಕ್ಯಗಳನ್ನು ಬರೆ. ಈ ವಾಕ್ಯಗಳ ಮೇರೆಗೆ ನಿನ್ನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ನಿಬಂಧನೆಮಾಡಿದ್ದೇನೆ ಎಂದು ಹೇಳಿದನು. 28 ಮೋಶೆ ಆ ಬೆಟ್ಟದಲ್ಲಿ ಯೆಹೋವನ ಸನ್ನಿಧಿಯಲ್ಲಿ ಹಗಲಿರಳು ನಾಲ್ವತ್ತು ದಿನ ಇದ್ದನು. ಅವನು ಏನೂ ಊಟಮಾಡಲಿಲ್ಲ, ಏನೂ ಕುಡಿಯಲಿಲ್ಲ. ಆತನು ನಿಬಂಧನದ ವಾಕ್ಯಗಳನ್ನು ಅಂದರೆ ಹತ್ತು ಆಜ್ಞೆಗಳನ್ನು ಆ ಕಲ್ಲಿನ ಹಲಿಗೆಗಳ ಮೇಲೆ ಬರೆದನು. 29 ಮೋಶೆ ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಿಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಅವನು ಯೆಹೋವನ ಸಂಗಡ ಸಂಭಾಷಿಸಿದ್ದರಿಂದ ಅವನ ಮುಖವು ಪ್ರಕಾಶಮಾನವಾಗಿತ್ತು; ಆದರೆ ಆ ಸಂಗತಿ ಅವನಿಗೆ ತಿಳಿಯಲಿಲ್ಲ. 30 ಮೋಶೆಯ ಮುಖವು ಪ್ರಕಾಶವಾಗಿರುವದನ್ನು ಆರೋನನೂ ಇಸ್ರಾಯೇಲ್ಯರೆಲ್ಲರೂ ನೋಡಿ ಅವನ ಹತ್ತಿರಕ್ಕೆ ಬರುವದಕ್ಕೆ ಭಯಪಟ್ಟರು. 31 ಆದರೆ ಮೋಶೆ ಅವರನ್ನು ಕರೆಯಲು ಆರೋನನೂ ಸಮೂಹದ ಅಧಿಪತಿಗಳೆಲ್ಲರೂ ಅವನ ಬಳಿಗೆ ಬಂದರು; ಮೋಶೆ ಅವರ ಸಂಗಡ ಮಾತಾಡಿದನು. 32 ತರುವಾಯ ಇಸ್ರಾಯೇಲ್ಯರೆಲ್ಲರೂ ಹತ್ತಿರಕ್ಕೆ ಬಂದರು. ಮೋಶೆ ತಾನು ಸೀನಾಯಿ ಬೆಟ್ಟದಲ್ಲಿ ಯೆಹೋವನಿಂದ ಹೊಂದಿದ ಆಜ್ಞೆಗಳನ್ನೆಲ್ಲಾ ಅವರಿಗೆ ತಿಳಿಸಿದನು. 33 ಮೋಶೆ ಅವರ ಸಂಗಡ ಮಾತಾಡುವದನ್ನು ಮುಗಿಸಿದಾಗ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು. 34 ಅವನು ಯೆಹೋವನ ಸಂಗಡ ಮಾತಾಡಬೇಕೆಂದು ಸನ್ನಿಧಿಗೆ ಹೋಗುವಾಗೆಲ್ಲಾ ಹೊರಗೆ ಬರುವ ತನಕ ಆ ಮುಸುಕನ್ನು ತೆಗೆದಿಡುವನು. ಅವನು ಹೊರಗೆ ಬಂದಾಗ ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಇಸ್ರಾಯೇಲ್ಯರಿಗೆ ತಿಳಿಸುವನು. 35 ಮೋಶೆಯ ಮುಖವು ಪ್ರಕಾಶಮಾನವಾಗಿರುವದನ್ನು ಇಸ್ರಾಯೇಲ್ಯರು ನೋಡುತ್ತಿದ್ದರು. ಆದಕಾರಣ ಅವನು ಯೆಹೋವನ ಸಂಗಡ ಮಾತಾಡುವದಕ್ಕೆ ಹೋಗುವವರೆಗೆ ತನ್ನ ಮುಖದ ಮೇಲೆ ಆ ಮುಸುಕನ್ನು ತಿರಿಗಿ ಹಾಕಿಕೊಂಡಿರುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India