ವಿಮೋಚನಕಾಂಡ 14 - ಕನ್ನಡ ಸತ್ಯವೇದವು J.V. (BSI)1-2 ಯೆಹೋವನು ಮೋಶೆಗೆ - ಇಸ್ರಾಯೇಲ್ಯರು ಅಡ್ಡ ತಿರುಗಿ ಪೀಹಹೀರೋತಿನ ಪೂರ್ವಕಡೆಯಲ್ಲಿ ವಿುಗ್ದೋಲಿಗೂ ಸಮುದ್ರಕ್ಕೂ ನಡುವೆ ಬಾಳ್ಚೆಫೋನಿಗೆ ಎದುರಾಗಿ ಇಳುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು; ಅದರ ಎದುರಾಗಿಯೇ ಸಮುದ್ರದ ಬಳಿಯಲ್ಲಿ ಅವರು ಇಳಿದುಕೊಳ್ಳಬೇಕು. 3 ಫರೋಹನು ಅದನ್ನು ಕಂಡು - ಇಸ್ರಾಯೇಲ್ಯರಿಗೆ ದಾರಿತಪ್ಪಿತು, ಎಲ್ಲಾ ಕಡೆಯಲ್ಲಿಯೂ ಅರಣ್ಯವು ಅವರನ್ನು ಸುತ್ತಿಕೊಂಡದೆ ಅಂದುಕೊಳ್ಳುವನು. 4 ನಾನು ಫರೋಹನ ಹೃದಯವನ್ನು ಕಠಿಣಪಡಿಸುವೆನಾದದರಿಂದ ಅವನು ಅವರನ್ನು ಬೆನ್ನಟ್ಟಿ ಬರುವನು; ಆಗ ನಾನು ಫರೋಹನಲ್ಲಿಯೂ ಅವನ ಸೈನ್ಯದಲ್ಲಿಯೂ ಪ್ರಖ್ಯಾತಿಗೊಳ್ಳುವೆನು. ನಾನೇ ಯೆಹೋವನೆಂಬದು ಐಗುಪ್ತ್ಯರಿಗೆ ತಿಳಿದುಬರುವದು ಎಂದು ಹೇಳಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ನಡೆದರು. 5 ಇಸ್ರಾಯೇಲ್ಯರು ಓಡಿಹೋದರೆಂಬ ವರ್ತಮಾನವು ಫರೋಹನಿಗೆ ತಿಳಿದುಬಂದಾಗ ಅವರ ವಿಷಯದಲ್ಲಿ ಫರೋಹನ ಮನಸ್ಸೂ ಅವನ ಪರಿವಾರದವರ ಮನಸ್ಸೂ ಬೇರೆಯಾಯಿತು. ಅವರು - ಇದೇನು ನಾವು ಮಾಡಿದ್ದು? ನಮಗೆ ದಾಸರಾಗಿದ್ದ ಇಸ್ರಾಯೇಲ್ಯರನ್ನು ಯಾತಕ್ಕೆ ಹೋಗಗೊಡಿಸಿದೆವು ಅಂದುಕೊಂಡರು. 6 ಆಗ ಫರೋಹನು ತನ್ನ ರಥಬಲವನ್ನು ಸಿದ್ಧಪಡಿಸಿಕೊಂಡು ತನ್ನ ಭಟರೊಡನೆ ಹೊರಟನು. 7 ಶ್ರೇಷ್ಠವಾದ ಆರುನೂರು ರಥಗಳನ್ನೂ ಐಗುಪ್ತದೇಶದ ಎಲ್ಲಾ ರಥಗಳನ್ನೂ ತೆಗೆದುಕೊಂಡು ಹೋದನು. ಆ ಎಲ್ಲಾ ರಥಗಳಲ್ಲಿ ಭಟರಿದ್ದರು. 8 ಯೆಹೋವನು ಐಗುಪ್ತದೇಶದ ಅರಸನಾದ ಫರೋಹನ ಹೃದಯವನ್ನು ಕಠಿಣಪಡಿಸಿದ್ದದರಿಂದ ಅವನು ಇಸ್ರಾಯೇಲ್ಯರನ್ನು ಬೆನ್ನಟ್ಟಿಹೋದನು. ಇಸ್ರಾಯೇಲ್ಯರು ಅಟ್ಟಹಾಸದಿಂದ ಹೊರಟರು. 9 ಐಗುಪ್ತ್ಯರು ಅಂದರೆ ಫರೋಹನ ಕುದುರೆಗಳೂ ರಥಗಳೂ ಅವನ ರಾಹುತರೂ ಸೈನ್ಯದವರೆಲ್ಲರೂ ಅವರ ಹಿಂದೆ ಹೊರಟು ಇಸ್ರಾಯೇಲ್ಯರು ಪೀಹಹೀರೋತಿನ ಹತ್ತಿರ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುವಾಗಲೇ ಅವರ ಹತ್ತಿರಕ್ಕೆ ಬಂದರು. 10 ಫರೋಹನು ಸಮೀಪಿಸುತ್ತಿರುವಾಗ ಇಸ್ರಾಯೇಲ್ಯರು ಕಣ್ಣೆತ್ತಿ ತಮ್ಮ ಹಿಂದೆ ಹೊರಟುಬಂದಿದ್ದ ಐಗುಪ್ತ್ಯರನ್ನು ಕಂಡು ಬಹಳ ಭಯಪಟ್ಟವರಾಗಿ ಯೆಹೋವನಿಗೆ ಮೊರೆಯಿಟ್ಟರು. 11 ಅವರು ಮೋಶೆಗೆ - ಐಗುಪ್ತದೇಶದಲ್ಲಿ ಸಮಾಧಿಗಳಿಲ್ಲವಾದದರಿಂದ ಅರಣ್ಯದಲ್ಲಿ ಸಾಯಲಿ ಎಂಬದಾಗಿ ನಮ್ಮನ್ನು ಇಲ್ಲಿಗೆ ಕರಕೊಂಡು ಬಂದಿಯೇನು? ಯಾಕೆ ನಮಗೆ ಈ ಪ್ರಕಾರ ಮಾಡಿ ಐಗುಪ್ತದೇಶದಿಂದ ಕರಕೊಂಡು ಬಂದಿ? 12 ನಾವು ಐಗುಪ್ತದೇಶದಲ್ಲಿದ್ದಾಗಲೇ - ನೀನು ನಮ್ಮ ಗೊಡವೆಗೆ ಬರಬೇಡ; ನಾವು ಐಗುಪ್ತ್ಯರಿಗೆ ದಾಸರಾಗಿಯೇ ಇರುವೆವು ಎಂಬದಾಗಿ ನಿನಗೆ ಹೇಳಲಿಲ್ಲವೇ? ನಾವು ಅರಣ್ಯದಲ್ಲಿ ಸಾಯುವದಕ್ಕಿಂತ ಐಗುಪ್ತ್ಯರಿಗೆ ದಾಸರಾಗಿರುವದೇ ವಾಸಿಯಲ್ಲವೇ ಎಂದು ಹೇಳಿದರು. 13 ಆದರೆ ಮೋಶೆ ಆ ಜನರಿಗೆ - ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ. 14 ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು. 15 ಆಗ ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ನನಗೆ ಮೊರೆಯಿಡುವದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲ್ಯರಿಗೆ ಹೇಳು. 16 ಮತ್ತು ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು; ಆಗ ಇಸ್ರಾಯೇಲ್ಯರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಹೋಗುವರು. 17 ನಾನಂತೂ ಐಗುಪ್ತ್ಯರ ಹೃದಯಗಳನ್ನು ಕಠಿಣಪಡಿಸುವೆನಾದದರಿಂದ ಅವರು ಇವರ ಹಿಂದೆ ಸಮುದ್ರದೊಳಗೆ ಹೋಗುವರು; ಆಗ ನಾನು ಫರೋಹನಲ್ಲಿಯೂ ಅವನ ಸಮಸ್ತ ಸೈನ್ಯದಲ್ಲಿಯೂ ರಥಗಳಲ್ಲಿಯೂ ಕುದುರೆಗಳಲ್ಲಿಯೂ ಪ್ರಖ್ಯಾತಿಗೊಳ್ಳುವೆನು. 18 ನಾನು ಫರೋಹನಲ್ಲಿಯೂ ಅವನ ರಥಗಳಲ್ಲಿಯೂ ಕುದುರೆಗಳಲ್ಲಿಯೂ ಪ್ರಖ್ಯಾತಿಹೊಂದಿದ ನಂತರ ನಾನು ಯೆಹೋವನು ಎಂಬದನ್ನು ಐಗುಪ್ತ್ಯರು ತಿಳುಕೊಳ್ಳುವರು ಅಂದನು. 19 ಆಗ ಇಸ್ರಾಯೇಲ್ಯರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು; ಅವರ ಮುಂದಾಗಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. 20 ಆ ಮೇಘಸ್ತಂಭವು ಐಗುಪ್ತ್ಯರ ಪಾಳೆಯಕ್ಕೂ ಇಸ್ರಾಯೇಲ್ಯರ ಪಾಳೆಯಕ್ಕೂ ನಡುವೆ ಬಂದು [ಐಗುಪ್ತ್ಯರಿಗೆ] ಕತ್ತಲನ್ನು ಉಂಟುಮಾಡಿದರೂ [ಇಸ್ರಾಯೇಲ್ಯರಿಗೋಸ್ಕರ] ರಾತ್ರಿಯನ್ನು ಬೆಳಕುಮಾಡಿತು; ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರಕ್ಕೆ ಒಬ್ಬರು ಬರಲಿಲ್ಲ. 21 ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ವಿಭಾಗವಾಯಿತು. 22 ಇಸ್ರಾಯೇಲ್ಯರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು. 23 ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ ರಥಗಳೂ ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಹೋದರು. 24 ಬೆಳಗಿನ ಜಾವದಲ್ಲಿ ಯೆಹೋವನು ಆ ಅಗ್ನಿಮೇಘಸ್ತಂಭದೊಳಗಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿ ಮಾಡಿದನು. 25 ಆತನು ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಬಹು ಕಷ್ಟದಿಂದ ಹೊಡಕೊಂಡು ಹೋದರು. ಆಗ ಐಗುಪ್ತ್ಯರು - ನಾವು ಇಸ್ರಾಯೇಲ್ಯರ ಮುಂದೆ ನಿಲ್ಲಲಾರೆವು, ಓಡಿಹೋಗೋಣ; ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಾನೆ ಎಂದು ಹೇಳಿಕೊಂಡರು. 26 ಅಷ್ಟರಲ್ಲಿ ಯೆಹೋವನು ಮೋಶೆಗೆ - ಸಮುದ್ರದ ಮೇಲೆ ನಿನ್ನ ಕೈ ಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಣುಗಿಸುವದೆಂದು ಹೇಳಿದನು. ಮೋಶೆ ಸಮುದ್ರದ ಮೇಲೆ ಕೈಚಾಚಿದನು. 27 ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಳ್ಳಲು ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ಕೆಡವಿಬಿಟ್ಟನು. 28 ನೀರು ಮೊದಲಿನಂತೆ ಬಂದು ಆ ರಥಗಳನ್ನೂ ರಾಹುತರನ್ನೂ ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಣುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. 29 ಇಸ್ರಾಯೇಲ್ಯರೋ ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು; ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು. 30 ಆ ದಿನದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತ್ಯರ ಕೈಗೆ ತಪ್ಪಿಸಿದನು. ಐಗುಪ್ತ್ಯರು ಸತ್ತು ಸಮುದ್ರತೀರದಲ್ಲಿ ಬಿದ್ದಿರುವದನ್ನು ಇಸ್ರಾಯೇಲ್ಯರು ಕಂಡರು. 31 ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India