ರೋಮಾಪುರದವರಿಗೆ 6 - ಕನ್ನಡ ಸತ್ಯವೇದವು J.V. (BSI)ಸತ್ತು ಜೀವಿತನಾಗಿ ಎದ್ದ ಕ್ರಿಸ್ತನಲ್ಲಿ ಐಕ್ಯವಾದವರು ಪಾಪದ ಪಾಲಿಗೆ ಸತ್ತು ಹೊಸ ನಡತೆಯುಳ್ಳವರಾಗುವರು ಎಂಬ ಬೋಧನೆ 1 ಹಾಗಾದರೆ ಏನು ಹೇಳೋಣ? ದೇವರ ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ? ಎಂದಿಗೂ ಇರಬಾರದು. 2 ಪಾಪದ ಪಾಲಿಗೆ ಸತ್ತವರಾದ ನಾವು ಇನ್ನೂ ಅದರಲ್ಲೇ ಬದುಕುವದು ಹೇಗೆ? 3 ಕ್ರಿಸ್ತ ಯೇಸುವಿನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಪಾಲುಗಾರರಾಗುವದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? 4 ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ಹೊಸಬರಾಗಿ ನಡಕೊಳ್ಳಬೇಕು. 5 ಹೇಗಂದರೆ ನಾವು ಆತನ ಮರಣಕ್ಕೆ ಸದೃಶವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು. 6 ಪಾಪಾಧೀನಸ್ವಭಾವವು ನಾಶವಾಗಿ ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿತೆಂದು ತಿಳಿದಿದ್ದೇವೆ. 7 ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನಷ್ಟೆ. 8 ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ. 9 ಯಾಕಂದರೆ ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, 10 ಮರಣವು ಇನ್ನೂ ಆತನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ. ಆತನು ಸತ್ತದ್ದು ಒಂದೇ ಸಾರಿ, ಅದು ಪಾಪದ ಪಾಲಿಗೆ; ಆತನು ಜೀವಿಸುವದು ದೇವರಿಗಾಗಿಯೇ. 11 ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ. ನಂಬಿದವರು ಪಾಪದ ದಾಸತ್ವದಿಂದ ಬಿಡುಗಡೆಯಾಗಿ ದೇವರಿಗೆ ದಾಸರಾಗುವರು 12 ಹೀಗಿರುವದರಿಂದ ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪಗಳನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ. 13 ಇದು ಮಾತ್ರವಲ್ಲದೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು ದುಷ್ಟತ್ವವನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು ನಿಮ್ಮ ಅಂಗಗಳನ್ನು ನೀತಿ ಕೃತ್ಯಗಳನ್ನು ನಡಿಸುವ ಸಾಧನಗಳನ್ನಾಗಿ ಆತನಿಗೆ ಸಮರ್ಪಿಸಿರಿ. 14 ಯಾಕಂದರೆ ಪಾಪವು ನಿಮ್ಮ ಮೇಲೆ ಅಧಿಕಾರನಡಿಸದು; ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಷ್ಟೆ. 15 ಹಾಗಾದರೇನು? ನಾವು ಧರ್ಮಶಾಸ್ತ್ರಾಧೀನರಲ್ಲ, ಕೃಪಾಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಎಂದಿಗೂ ಮಾಡಬಾರದು. 16 ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; [ನಂಬಿಕೆಯೆಂಬ] ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ. 17 ಆದರೆ ನೀವು ಮುಂಚೆ ಪಾಪಕ್ಕೆ ದಾಸರಾಗಿದ್ದರೂ ನಿಮಗೆ ಕಲಿಸಲ್ಪಟ್ಟ ಬೋಧನೆಗೆ ನೀವು ಮನಃಪೂರ್ವಕವಾಗಿ ಅಧೀನರಾದದರಿಂದಲೂ 18 ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದದರಿಂದಲೂ ದೇವರಿಗೆ ಸ್ತೋತ್ರವಾಗಲಿ. 19 ನಿಮ್ಮ ನರಭಾವದ ಬಲಹೀನತೆಯ ದೆಸೆಯಿಂದ ಲೋಕರೀತಿಯಾಗಿ ಮಾತಾಡುತ್ತೇನೆ. ಅಧರ್ಮಮಾಡುವದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ ಅಧರ್ಮಕ್ಕೂ ದಾಸರನ್ನಾಗಿ ಒಪ್ಪಿಸಿಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ. 20 ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಯ ಹಂಗಿನವರಾಗಿದ್ದಿಲ್ಲ. 21 ಆದರೆ ನೀವು ಆಗ ಮಾಡಿದ ಕೃತ್ಯಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ. ಕಡೆಗೆ ಅವುಗಳಿಂದ ಬರುವದು ಮರಣವಲ್ಲವೇ. 22 ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧರಾಗುವದೇ ನಿಮಗೆ ಫಲ; ಕಡೆಗೆ ದೊರೆಯುವಂಥದು ನಿತ್ಯಜೀವ. 23 ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India