ಯೋಬ 36 - ಕನ್ನಡ ಸತ್ಯವೇದವು J.V. (BSI)1 ಆಮೇಲೆ ಎಲೀಹು ಮತ್ತೆ ಹೀಗೆಂದನು - 2 ಸ್ವಲ್ಪ ತಾಳು, ನಾನು ತಿಳಿಸುತ್ತೇನೆ, ದೇವರ ಪಕ್ಷವಾಗಿ ಹೇಳತಕ್ಕ ಮಾತುಗಳು ಇನ್ನೂ ಕೆಲವುಂಟು. 3 ದೂರದಿಂದ ಸಂಪಾದಿಸಿದ ನನ್ನ ತಿಳುವಳಿಕೆಯ ಪ್ರಕಾರ ನನ್ನ ಸೃಷ್ಟಿಕರ್ತನನ್ನು ಧರ್ಮಸ್ವರೂಪನೆಂದು ಹೊಗಳುವೆನು. 4 ನನ್ನ ಮಾತುಗಳು ಸುಳ್ಳಲ್ಲವೆಂಬದು ನಿಶ್ಚಯ, ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ. 5 ಇಗೋ, ದೇವರು ಮಹಾಶಕ್ತನಾಗಿದ್ದರೂ ಯಾರನ್ನೂ ತಿರಸ್ಕರಿಸುವದಿಲ್ಲ. ಆತನ ಬುದ್ಧಿಸಾಮರ್ಥ್ಯವು ಅಪಾರವಾಗಿದೆ. 6 ಆತನು ದುಷ್ಟರ ಪ್ರಾಣವನ್ನು ಉಳಿಸುವದಿಲ್ಲ, ಗತಿಹೀನರ ನ್ಯಾಯವನ್ನು ಸ್ಥಾಪಿಸುವನು. 7 ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ ಅರಸರೊಂದಿಗೆ ಸಿಂಹಾಸನದ ಮೇಲೆ ಶಾಶ್ವತವಾಗಿ ಕೂತುಕೊಳ್ಳುವ ಉನ್ನತಪದವಿಗೆ ಅವರನ್ನು ತರುವನು. 8 ಅವರು ಒಂದು ವೇಳೆ ಬಂಧಕ್ಕೆ ಸಿಕ್ಕಿ ಬಾಧೆಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟಿದ್ದರೆ, 9 ಆತನು ಅವರ ದುಷ್ಕೃತ್ಯವನ್ನೂ ಸೊಕ್ಕಿನ ದ್ರೋಹಗಳನ್ನೂ ಅವರಿಗೆ ತೋರಿಸುವನು. 10 ಇದಲ್ಲದೆ ಶಿಕ್ಷಣವನ್ನು ಕೇಳುವಂತೆ ಅವರ ಕಿವಿಯನ್ನು ತೆರೆದು ಅಧರ್ಮವನ್ನು ಬಿಟ್ಟುಬಿಡಬೇಕೆಂದು ಅವರಿಗೆ ಆಜ್ಞಾಪಿಸುವನು. 11 ಅವರು ಅದನ್ನು ಕೇಳಿ ಆತನನ್ನು ಸೇವಿಸಿದರೆ ತಮ್ಮ ದಿನಗಳನ್ನು ಸುಖದಲ್ಲಿಯೂ ವರುಷಗಳನ್ನು ಸಂತೋಷದಲ್ಲಿಯೂ ಕಳೆಯುವರು. 12 ಕೇಳದಿದ್ದರೆ ದೈವಾಸ್ತ್ರದಿಂದ ಅಳಿದು ಹೋಗುವರು, ಜ್ಞಾನಹೀನರಾಗಿಯೇ ಪ್ರಾಣಬಿಡುವರು. 13 ಭ್ರಷ್ಟಹೃದಯವುಳ್ಳವರಾದರೋ ಸಿಟ್ಟುಗೊಂಡಿರುವರು, ಆತನು ಅವರನ್ನು ಬಂಧಿಸುವಾಗಲೂ [ಆತನಿಗೆ] ಮೊರೆಯಿಡುವದಿಲ್ಲ. 14 ಯೌವನದಲ್ಲೇ ಸಾಯುವರು. ಅವರ ಜೀವವು ಪುರುಷಗಾವಿುಗಳ ಜೀವದಂತೆ ಕ್ಷಯಿಸುವದು. 15 ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು, ಅವರು ಅನುಭವಿಸುವ ಹಿಂಸೆಯಿಂದಲೇ ಅವರ ಕಿವಿಯನ್ನು ತೆರೆಯುವನು. 16 ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ ಇಕ್ಕಟ್ಟಿಲ್ಲದ ವಿಶಾಲಸ್ಥಳಕ್ಕೆ ಬರಮಾಡಬೇಕೆಂಬದೂ, ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬದೂ ಆತನ ಉದ್ದೇಶವಾಗಿದೆ. 17 ನೀನಾದರೋ ದುಷ್ಟನಿರ್ಣಯಗಳಿಂದ ತುಂಬಿದವನಾಗಿ ನ್ಯಾಯವಿಚಾರಣೆಗೂ ನ್ಯಾಯತೀರ್ಪಿಗೂ ಒಳಗಾಗಿದ್ದೀ. 18 ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕೀತು, ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ! 19 ಕಷ್ಟಾನುಭವವಿಲ್ಲದೆ ನಿನ್ನ ಐಶ್ವರ್ಯವೂ ಧನಸಾಮರ್ಥ್ಯವೂ ಈಡಾದಾವೇ? 20 ಜನಾಂಗಗಳು ತಟ್ಟನೆ ನಿರ್ಮೂಲವಾಗುವ ರಾತ್ರಿಯನ್ನು ಬಯಸಬೇಡ. 21 ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಕ್ಕಬೇಡ. ಕಷ್ಟವನ್ನು ಅನುಭವಿಸಲೊಲ್ಲದೆ ಅಧರ್ಮವನ್ನೇ ಆರಿಸಿಕೊಂಡಿದ್ದೀ. 22 ಇಗೋ, ದೇವರು ತನ್ನ ಶಕ್ತಿಯಿಂದ ಉನ್ನತಕಾರ್ಯಗಳನ್ನು ನಡಿಸುವನು, ಆತನಂಥ ಉಪದೇಶಕನು ಯಾರು? 23 ಆತನ ಮಾರ್ಗವನ್ನು ಆತನಿಗೆ ಯಾರು ನೇವಿುಸಿದರು? ನೀನು ಅನ್ಯಾಯವನ್ನು ನಡಿಸಿದಿ ಎಂದು ಹೇಳಬಲ್ಲವರಾರು? 24 ಮನುಷ್ಯರು ಕೀರ್ತಿಸಿರುವ ಆತನ ಕೆಲಸವನ್ನು ಹೊಗಳಲು ಮರೆಯಬೇಡ. 25 ಎಲ್ಲಾ ಮನುಷ್ಯರೂ ಅದನ್ನು ಕಂಡಿದ್ದಾರೆ; ನರನು ದೂರದಿಂದ ನೋಡುತ್ತಾನಷ್ಟೆ. 26 ಆಹಾ, ದೇವರು ಮಹೋನ್ನತನಾಗಿದ್ದಾನೆ, ನಾವು ಆತನನ್ನು ಅರಿಯಲಾರೆವು; ಆತನ ವರುಷಗಳು ಅಸಂಖ್ಯಾತವಾಗಿವೆ. 27 ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು. 28 ಮೋಡಗಳು ಅದನ್ನು ಸುರಿಸಿ ಬಹುಜನರ ಮೇಲೆ ಚಿಮಕಿಸುವವು. 29 ಹಾ, ಮೇಘಗಳ ಹಬ್ಬುಗೆಯನ್ನೂ ಆತನ ಗುಡಾರದಲ್ಲಿನ ಗರ್ಜನೆಗಳನ್ನೂ ಗ್ರಹಿಸಬಹುದೇ? 30 ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು ಅದನ್ನು ಜಲಸಮೂಹಗಳಿಂದ ಕವಿಸಿಕೊಳ್ಳುವನು. 31 ಮೋಡಗಳ ಮುಖಾಂತರವಾಗಿಯೇ ಜನಾಂಗಗಳಿಗೆ ನ್ಯಾಯವನ್ನು ವಿಧಿಸಿ ಆಹಾರವನ್ನು ಧಾರಾಳವಾಗಿ ದಯಪಾಲಿಸುವನಷ್ಟೆ. 32 ಕೈತುಂಬಾ ಸಿಡಿಲನ್ನು ಹಿಡಿದು ನೀನು ವೈರಿಯನ್ನು ಹೊಡೆ ಎಂದು ಅದನ್ನು ಬಿಡುವನು. 33 ಅದರ ಆರ್ಭಟವು ಆತನ ವಿಷಯವಾಗಿ ಪ್ರಕಟಿಸುವದು, ದನಗಳು ಸಹ ಆತನ ಆಗಮನವನ್ನು ತಿಳಿಸುವವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India