ಯೋಬ 33 - ಕನ್ನಡ ಸತ್ಯವೇದವು J.V. (BSI)1 ಅದಿರಲಿ; ಯೋಬನೇ, ನನ್ನ ನುಡಿಯನ್ನು ಕೇಳು, ನನ್ನ ಮಾತುಗಳಿಗೆಲ್ಲಾ ಕಿವಿಗೊಡು, 2 ಇಗೋ, ನನ್ನ ಬಾಯನ್ನು ತೆರೆದಿದ್ದೇನೆ, ನನ್ನ ನಾಲಿಗೆಯು ಅಂಗುಳದೊಳಗಿಂದ ಮಾತಾಡುತ್ತಿದೆ. 3 ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುವವು, ನನ್ನ ತುಟಿಗಳು ತಿಳಿದುಕೊಂಡದ್ದನ್ನೇ ಸತ್ಯವಾಗಿ ಹೇಳುವವು. 4 ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ, ನನ್ನ ಜೀವವು ಸರ್ವಶಕ್ತನ ಶ್ವಾಸದಿಂದುಂಟಾಗಿದೆ. 5 ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು, ನನ್ನೆದುರಿನಲ್ಲಿಯೇ ವಾದವನ್ನು ಹೂಡಿ ನಿಂತುಕೋ. 6 ನೋಡು, ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ. 7 ಇಗೋ, ನನ್ನ ದಿಗಿಲು ನಿನ್ನನ್ನು ಹೆದರಿಸಲಾರದು, ನನ್ನ ಒತ್ತಾಯವು ನಿನಗೆ ಹೊರೆಯಾಗಿರದು. 8 ನಿನ್ನ ನುಡಿಯ ಧ್ವನಿಯನ್ನು ಕೇಳಿದ್ದೇನೆ, ನನ್ನ ಕಿವಿಗೆ ಬಿದ್ದ ಈ ಮಾತುಗಳನ್ನು ಆಡೇ ಆಡಿದ್ದೀ - 9 ನಾನು ಪರಿಶುದ್ಧನು, ನನ್ನೊಳಗೆ ದೋಷವಿಲ್ಲ, ನಾನು ನಿರ್ಮಲನು, ನನ್ನಲ್ಲಿ ಏನೂ ಪಾಪವಿಲ್ಲ. 10 ಆಹಾ, ಆತನು ನನ್ನಲ್ಲಿ ವಿರೋಧಕ್ಕೆ ಕಾರಣಗಳನ್ನು ಕಂಡುಹಿಡಿಯುತ್ತಾ ನನ್ನನ್ನು ಶತ್ರುವೆಂದೆಣಿಸಿಕೊಂಡಿದ್ದಾನೆ; 11 ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿ ನನ್ನ ಮಾರ್ಗಗಳನ್ನೆಲ್ಲಾ ಕಂಡುಕೊಂಡಿದ್ದಾನೆ ಎಂದು ಆಡಿದ್ದೀಯಲ್ಲಾ. 12 ಇಗೋ, ನೀನು ಹೀಗೆ ಆಡಿದ್ದು ನ್ಯಾಯವಲ್ಲವೆಂಬದೇ ನನ್ನ ಉತ್ತರ, ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನಷ್ಟೆ. 13 ಆತನು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ದಯಪಾಲಿಸನೆಂಬದಾಗಿ ನೀನು ಆತನೊಂದಿಗೆ ವ್ಯಾಜ್ಯವಾಡುವದೇಕೆ? 14 ದೇವರು ಮಾತಾಡುವ ರೀತಿ ಒಂದುಂಟು ಹೌದು, ಎರಡೂ ಉಂಟು, ಮನುಷ್ಯನಾದರೋ ಲಕ್ಷಿಸುವದಿಲ್ಲ. 15 ಮನುಷ್ಯರಿಗೆ ಗಾಢನಿದ್ರೆಯುಂಟಾದಾಗಲೂ ಹಾಸಿಗೆಯ ಮೇಲೆ ಜಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ 16 ಅವರ ಕಿವಿಗಳನ್ನು ತೆರೆದು ಅವರಿಗೆ ಶಿಕ್ಷಾವಚನವನ್ನು ಉಪದೇಶಿಸಿ ಅದಕ್ಕೆ ಮುದ್ರೆಹಾಕುವನು. 17 ಹೀಗೆ ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವನು, ಮಾನವನಿಗೆ ಗರ್ವವನ್ನು ಮರೆಮಾಡುವನು; 18 ಅವನ ಆತ್ಮವನ್ನು ಅಧೋಲೋಕಕ್ಕೆ ಬೀಳದಂತೆ ತಡೆದು ಅವನ ಜೀವವನ್ನು ದೈವಾಸ್ತ್ರದಿಂದ ಅಳಿದುಹೋಗದ ಹಾಗೆ ನಿಲ್ಲಿಸುವನು. 19 ಇದಲ್ಲದೆ ಸಂಕಟದಿಂದಲೂ ನಿತ್ಯವಾದ ಅಸ್ಥಿಪೀಡನದಿಂದಲೂ ಮನುಷ್ಯನು ಹಾಸಿಗೆಯ ಮೇಲೆ ಶಿಕ್ಷಿಸಲ್ಪಡುವನು. 20 ಅವನ ಜೀವವು ಆಹಾರಕ್ಕೆ ಬೇಸರಗೊಳ್ಳುವದು, ಅವನ ಆತ್ಮವು ಮೃಷ್ಟಾನ್ನಕ್ಕೂ ಅಸಹ್ಯಪಡುವದು. 21 ಅವನ ಮಾಂಸವು ಕ್ಷಯಿಸಿ ಕಾಣದೆಹೋಗುವದು, ಕಾಣದಿದ್ದ ಅವನ ಎಲುಬುಗಳು ಬಯಲಾಗುವವು. 22 ಅವನ ಆತ್ಮವು ಅಧೋಲೋಕವನ್ನು ಸಮೀಪಿಸುವದು, ಅವನ ಪ್ರಾಣವು ಸಂಹಾರದೂತರಿಗೆ ಹತ್ತಿರವಾಗುವದು. 23 ಮನುಷ್ಯಕರ್ತವ್ಯವನ್ನು ತೋರಿಸತಕ್ಕ ಸಹಸ್ರದೂತರಲ್ಲಿ ಒಬ್ಬನು ಅವನಿಗೆ ಮಧ್ಯಸ್ಥನಾಗಿ ಬೇಡುವದರಿಂದ 24 ದೇವರು ಒಂದು ವೇಳೆ ಆ ಮನುಷ್ಯನಿಗೆ ಮೆಚ್ಚಿ - ಈಡು ಸಿಕ್ಕಿತು, ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು ಎಂದು ಅಪ್ಪಣೆಕೊಟ್ಟರೆ 25 ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು. 26 ಅವನು ದೇವರನ್ನು ಪ್ರಾರ್ಥಿಸಿ ಆತನ ಒಲುಮೆಗೆ ಪಾತ್ರನಾಗಿ ಆತನ ದರ್ಶನ ಮಾಡಿ ಉತ್ಸಾಹಧ್ವನಿಗೈದು ತಿರಿಗಿ ಆತನಿಂದ ನೀತಿವಂತನೆನಿಸಿಕೊಳ್ಳುವನು. 27 ಅವನು ಮನುಷ್ಯರ ಮುಂದೆ ನಿಂತು - ನಾನು ಪಾಪಮಾಡಿ ನ್ಯಾಯವನ್ನು ಕೆಡಿಸಿದ್ದರೂ ಆತನು ಮುಯ್ಯಿ ತೀರಿಸದೆ 28 ನನ್ನ ಆತ್ಮವನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾನೆ, ನನ್ನ ಜೀವವು ಬೆಳಕನ್ನು ಕಾಣುತ್ತಿರುವದು ಎಂದು ಕೀರ್ತನೆಹಾಡುವನು. 29 ನೋಡು, ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ ಜೀವಲೋಕದ ಬೆಳಕನ್ನು ಅನುಭವಿಸುವಂತೆ 30 ದೇವರು ಎರಡು ಸಾರಿಯಲ್ಲದೆ ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮಾಡುವನು. 31 ಯೋಬನೇ, ನನ್ನ ಕಡೆಗೆ ಗಮನವಿಟ್ಟು ಕೇಳು, ಮೌನವಾಗಿರು, ನಾನೇ ಮಾತಾಡುವೆನು. 32 ನೀನು ಏನಾದರೂ ಹೇಳಬೇಕೆಂದಿದ್ದರೆ ನನಗೆ ಉತ್ತರವಾಗಿ ಹೇಳು, ಮಾತಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬದೇ ನನ್ನ ಆಶೆ. 33 ಇಲ್ಲವಾದರೆ ನೀನೇ ನನಗೆ ಕಿವಿಗೊಟ್ಟು ಮೌನವಾಗಿರು, ನಾನು ನಿನಗೆ ಜ್ಞಾನವನ್ನು ಬೋಧಿಸುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India