Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 28 - ಕನ್ನಡ ಸತ್ಯವೇದವು J.V. (BSI)

1 ಬೆಳ್ಳಿ ಸಿಕ್ಕುವ ಗಣಿಯೂ ಚಿನ್ನದ ಅದುರು ದೊರಕುವ ಸ್ಥಳವೂ ಉಂಟಷ್ಟೆ.

2 ಮಣ್ಣಿನೊಳಗಿಂದ ಕಬ್ಬಿಣವನ್ನು ತೆಗೆಯುವರು, ಕಲ್ಲನ್ನು ಕರಗಿಸಿ ತಾಮ್ರವನ್ನು ಪಡೆಯುವರು.

3 ಮನುಷ್ಯರು ಕತ್ತಲನ್ನು ಹೋಗಲಾಡಿಸಿ ಕಾರ್ಗತ್ತಲಲ್ಲಿಯೂ ಘೋರಾಂಧಕಾರದಲ್ಲಿಯೂ ಮರೆಯಾಗಿರುವ ಕಲ್ಲುಗಳನ್ನು ಕಟ್ಟಕಡೆಯ ತನಕ ಹುಡುಕುವರು.

4 ಗಣಿಯನ್ನು ತೋಡಿ ತೋಡಿ ಜನನಿವಾಸಗಳಿಗೆ ದೂರವಾಗಿ [ಮೇಲೆ] ನಡೆದಾಡುವವರಿಗೆ ಮರೆತುಹೋಗಿ ನರಲೋಕಕ್ಕೆ ಅನ್ಯರಾಗಿ ಅತ್ತಿತ್ತ ನೇತಾಡುವರು.

5 ಭೂವಿುಯು ಅನ್ನವನ್ನು ಕೊಡುವದು, ಅದರ ಕೆಳಭಾಗವೋ ಬೆಂಕಿಬಿದ್ದಂತೆ ಹಾಳಾಗಿರುವದು.

6 ಅದರ ಕಲ್ಲುಗಳಲ್ಲಿ ಇಂದ್ರನೀಲ ಮಣಿಗಳು ಸಿಕ್ಕುವವು, ಅದರಲ್ಲಿ ಚಿನ್ನದ ಪುಡಿಯೂ ಇರುವದು.

7 ಆ ದಾರಿಯು ಯಾವ ಹದ್ದಿಗೂ ತಿಳಿಯದು, ಗಿಡಗದ ಕಣ್ಣಿಗೂ ಬಿದ್ದಿಲ್ಲ.

8 ಸೊಕ್ಕಿದ ಮೃಗಗಳು ಅದನ್ನು ತುಳಿದಿಲ್ಲ, ಸಿಂಹವು ಆ ಮಾರ್ಗವನ್ನು ಹಾದಿಲ್ಲ.

9 ಮನುಷ್ಯನು ಕಗ್ಗಲ್ಲಿನ ಮೇಲೆ ಕೈಮಾಡಿ ಬೆಟ್ಟಗಳನ್ನು ಬುಡಮುಟ್ಟ ಕೆಡವಿಬಿಡುವನು.

10 ಬಂಡೆಗಳಲ್ಲಿ ಸುರಂಗಗಳನ್ನು ಕೊರೆಯುವನು; ಅವನ ಕಣ್ಣು ಅಮೂಲ್ಯಪದಾರ್ಥಗಳನ್ನೆಲ್ಲಾ ಕಾಣುವದು.

11 ಒರತೆಗಳ ನೀರು ಬಸಿಯದ ಹಾಗೆ ಅವುಗಳನ್ನು ಕಟ್ಟಿ ಗುಪ್ತವಸ್ತುವನ್ನು ಬೈಲಿಗೆ ತರುವನು.

12 ಜ್ಞಾನವಾದರೋ ಎಲ್ಲಿ ಸಿಕ್ಕೀತು? ವಿವೇಕವು ದೊರೆಯುವ ಸ್ಥಳವೆಲ್ಲಿ?

13 ಅದರ ಕ್ರಯವು ಯಾರಿಗೂ ಗೊತ್ತಿಲ್ಲ, ಜೀವಲೋಕದಲ್ಲಿ ಅದನ್ನು ಯಾರೂ ಕಂಡುಕೊಳ್ಳಲಾರರು.

14 ಭೂವಿುಯ ಕೆಳಗಣ ಸಾಗರವು - ನನ್ನಲ್ಲಿಲ್ಲ ಎನ್ನುವದು, ಸಮುದ್ರವು - ತನ್ನ ಹತ್ತಿರ ಸಿಕ್ಕದೆಂದು ಹೇಳುವದು.

15 ಚೊಕ್ಕ ಬಂಗಾರವನ್ನು ಕೊಟ್ಟು ಅದನ್ನು ಕೊಂಡುಕೊಳ್ಳುವದು ಅಸಾಧ್ಯ, ಅದರ ಬೆಲೆಗೆ ಬೆಳ್ಳಿಯನ್ನು ತೂಗುವದು ಅಶಕ್ಯ.

16 ಓಫೀರ್ ದೇಶದ ಅಪರಂಜಿ, ಅಮೂಲ್ಯ ಗೋಮೇಧಿಕ, ಇಂದ್ರನೀಲ, ಇವುಗಳ ಪ್ರಮಾಣದಿಂದ ಜ್ಞಾನದ ಬೆಲೆ ಇಷ್ಟೆಂದು ಗೊತ್ತುಮಾಡುವದಕ್ಕಾಗದು.

17 ಹೊನ್ನಾಗಲಿ ಗಾಜಾಗಲಿ ಅದಕ್ಕೆ ಸಮವಾದೀತೇ? ಚಿನ್ನದ ಆಭರಣಗಳನ್ನು ಅದಕ್ಕೆ ಬದಲು ಕೊಡುವದು ಸಾಧ್ಯವೋ?

18 [ಜ್ಞಾನವಿರುವಲ್ಲಿ] ಹವಳವೂ ಸ್ಪಟಿಕವೂ ನೆನಪಿಗೆ ಬರುವದಿಲ್ಲ. ಮುತ್ತುಗಳನ್ನು ಸಂಪಾದಿಸುವದಕ್ಕಿಂತಲೂ ಜ್ಞಾನವನ್ನು ಸಂಪಾದಿಸುವದು ಎಷ್ಟೋ ಕಷ್ಟ!

19 ಕೂಷ್ ದೇಶದ ಪುಷ್ಯರಾಗವು ಅದಕ್ಕೆ ಸಾಟಿಯಲ್ಲ, ಶುದ್ಧ ಕನಕದೊಡನೆ ಅದನ್ನು ತೂಗಲಾಗದು.

20 ಹೀಗಿರಲು ಜ್ಞಾನವು ಎಲ್ಲಿಂದ ಬರುವದು, ವಿವೇಕವು ಯಾವ ಸ್ಥಳದಲ್ಲಿ ದೊರಕೀತು?

21 ಅದು ಎಲ್ಲಾ ಜೀವಿಗಳ ದೃಷ್ಟಿಗೆ ಅಗೋಚರವಾಗಿದೆ, ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.

22 ನಾಶಲೋಕವೂ ಮೃತ್ಯುವೂ - ಅದರ ಸುದ್ದಿ ಮಾತ್ರ ನಮ್ಮ ಕಿವಿಗೆ ಬಿದ್ದಿದೆಯೆಂದು ಹೇಳುವವು.

23 ಅದರ ಮಾರ್ಗವನ್ನು ಬಲ್ಲವನು ದೇವರೇ; ಅದರ ಸ್ಥಳವು ಆತನೊಬ್ಬನಿಗೇ ಗೊತ್ತು.

24 ಆತನೊಬ್ಬನೇ ಭೂವಿುಯ ಕಟ್ಟಕಡೆಯ ತನಕ ದೃಷ್ಟಿಸಿ ಆಕಾಶದ ಕೆಳಗಿನ ಸಮಸ್ತವನ್ನೂ ನೋಡುವವನಾಗಿದ್ದಾನೆ.

25 ಆತನು ಗಾಳಿಗೆ ತಕ್ಕಷ್ಟು ತೂಕವನ್ನು ನೇವಿುಸಿ ನೀರುಗಳನ್ನು ತಕ್ಕ ಪರಿಮಾಣಗಳಿಂದ ಅಳತೆಮಾಡಿ

26 ಮಳೆಗೆ ಕಟ್ಟಳೆಯನ್ನೂ ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ

27 ಜ್ಞಾನವನ್ನು ಕಂಡು ಲಕ್ಷಿಸಿದನು, ಅದನ್ನು ಸ್ಥಾಪಿಸಿದ್ದಲ್ಲದೆ ವಿಮರ್ಶೆ ಮಾಡಿದನು.

28 ಆಮೇಲೆ ಮನುಷ್ಯರಿಗೆ - ಇಗೋ, ಕರ್ತನ ಭಯವೇ ಜ್ಞಾನವು ದುಷ್ಟತನವನ್ನು ಬಿಡುವದೇ ವಿವೇಕವು ಎಂದು ಹೇಳಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು