Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 21 - ಕನ್ನಡ ಸತ್ಯವೇದವು J.V. (BSI)

1 ಆಗ ಯೋಬನು ಇಂತೆಂದನು -

2 ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ. ನಿಮ್ಮಿಂದ ನನಗಾಗಬೇಕಾದ ಆದರಣೆಯು ಇಷ್ಟೇ.

3 ತಾಳಿರಿ, ನಾನೂ ಮಾತಾಡುವೆನು, ಆಮೇಲೆ ಹಾಸ್ಯಮಾಡಿದರೂ ಮಾಡಿರಿ.

4 ನಾನೇನು ಮನುಷ್ಯನ ವಿಷಯದಲ್ಲಿ ಗುಣುಗುಟ್ಟುತ್ತಿದ್ದೇನೋ? ನಾನೇಕೆ ಬೇಸರಗೊಳ್ಳಬಾರದು?

5 ನನ್ನ ಕಡೆಗೆ ಗಮನಿಸಿ ಬೆರಗಾಗಿ ಬಾಯ ಮೇಲೆ ಕೈಯಿಟ್ಟುಕೊಳ್ಳಿರಿ.

6 ಈ ವಿಷಯವನ್ನು ನೆನಪಿಗೆ ತಂದುಕೊಂಡ ಹಾಗೆಲ್ಲಾ ನಡುಕವು ನನ್ನ ಮಾಂಸವನ್ನು ಹಿಡಿಯುತ್ತದೆ.

7 ದುಷ್ಟರು ಬಾಳಿ ವೃದ್ಧರಾಗುವದಕ್ಕೂ ಇದಲ್ಲದೆ ಪ್ರಬಲಿಸುವದಕ್ಕೂ ಕಾರಣವೇನು?

8 ಅವರ ಸಂತಾನದವರು ಅವರೊಂದಿಗಿರುತ್ತಾ ಅವರ ಮುಂದೆಯೇ ಸುಸ್ಥಿರವಾಗಿರುವರು, ಅವರ ಮಕ್ಕಳು ಅವರ ಕಣ್ಣೆದುರಿನಲ್ಲಿ ಅಚಲವಾಗಿ ನಿಲ್ಲುವರು.

9 ಅವರ ಮನೆಗಳು ಸುರಕ್ಷಿತವಾಗಿ ನಿರ್ಭಯದಿಂದಿರುವವು; ದೇವರ ದಂಡವು ಅವರ ಮೇಲೆ ಬೀಳದು.

10 ಅವರ ಗೂಳಿಯು ಬೇಸರಗೊಳ್ಳದೆ ಹಾರುವದು; ಅವರ ಹಸುವು ಕಂದುಹಾಕದೆ ಈಯುವದು.

11 ತಮ್ಮ ಮಕ್ಕಳನ್ನು ಮಂದೆಮಂದೆಯಾಗಿ ನಡಿಸುವರು, ಅವರ ಬಾಲಬಾಲೆಯರು ಕುಣಿದಾಡುವರು.

12 ಅವರು ದಮ್ಮಡಿಕಿನ್ನರಿಗಳೊಡನೆ ಸ್ವರವೆತ್ತಿ ಕೊಳಲಿನ ಧ್ವನಿಗೆ ಉಲ್ಲಾಸಪಡುವರು.

13 ಹೀಗೆ ತಮ್ಮ ದಿನಗಳನ್ನು ಸುಖವಾಗಿ ಕಳೆದು ಕ್ಷಣಮಾತ್ರದಲ್ಲಿ [ಅನಾಯಾಸವಾಗಿ] ಸಮಾಧಿಗೆ ಇಳಿಯುವರು.

14 ಆದರೆ ಇವರೇ ದೇವರನ್ನು ಕುರಿತು - ನಮ್ಮಿಂದ ತೊಲಗಿ ಹೋಗು, ನಿನ್ನ ಮಾರ್ಗಗಳ ತಿಳುವಳಿಕೆಯೇ ನಮಗೆ ಬೇಡ ಎಂದೂ

15 ಆ ಸರ್ವಶಕ್ತನು ಎಷ್ಟರವನು, ಆತನನ್ನು ನಾವು ಏಕೆ ಸೇವಿಸಬೇಕು? ಆತನಿಗೆ ವಿಜ್ಞಾಪನೆಮಾಡುವದರಿಂದ ಪ್ರಯೋಜನವೇನು? ಎಂದೂ ಹೇಳುತ್ತಿದ್ದರು.

16 ಆಹಾ, ಅವರ ಸುಖವು ಅವರ ಕೈಯಲ್ಲಿ ನೆಲಸಿರುವದಿಲ್ಲ. ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!

17 ದುಷ್ಟರ ದೀಪವು ಆರಿಹೋದದ್ದು ಎಷ್ಟು ಸಾರಿ? ಎಷ್ಟು ಸಾರಿ ಉಪದ್ರವವು ಅವರಿಗೆ ಸಂಭವಿಸಿದೆ? ದೇವರು ಕೋಪಗೊಂಡು ಅವರ ಪಾಲಿಗೆ ಸಂಕಟಗಳನ್ನು ಕೊಟ್ಟದ್ದು ಎಷ್ಟು ಸಲ?

18 ಅವರು ಗಾಳಿಗೆ ಸಿಕ್ಕಿಬಿದ್ದ ಹುಲ್ಲಿನಂತೆ ಆದದ್ದು ಎಷ್ಟು ಸರ್ತಿ? ಎಷ್ಟಾವರ್ತಿ ಬಿರುಗಾಳಿಯು ಕೊಚ್ಚಿಕೊಂಡು ಹೋಗುವ ಹೊಟ್ಟಿನಂತಿದ್ದರು?

19 ದೇವರು ದುಷ್ಟನ ಪಾಪಫಲವನ್ನು ಅವನ ಮಕ್ಕಳಿಗಾಗಿ ಇಟ್ಟಿದ್ದಾನೆ [ಅನ್ನುತ್ತೀರೋ?] ಆ ಫಲವನ್ನು ಅನುಭವಿಸುವ ಹಾಗೆ ದೇವರು ಅವನಿಗೇನೆ ಕೊಟ್ಟುಬಿಡಲಿ.

20 ಅವನು ತನ್ನ ನಾಶವನ್ನು ಕಣ್ಣಾರೆ ಕಾಣಲಿ, ಸರ್ವಶಕ್ತನ ರೌದ್ರರಸವನ್ನು ಪಾನಮಾಡಲಿ.

21 ಅವನ ಆಯುಸ್ಸೇ ಕತ್ತರಿಸಿಹೋದ ಮೇಲೆ ತನ್ನನ್ನು ಹಿಂಬಾಲಿಸುವ ಸಂತತಿಯವರ ಚಿಂತೆ ಏನು?

22 ಮೇಲಣ ಲೋಕದವರಿಗೂ ನ್ಯಾಯತೀರಿಸುವ ದೇವರಿಗೆ ಜ್ಞಾನಬೋಧನೆಯನ್ನು ಮಾಡಬಹುದೇ?

23 ಒಬ್ಬನು ಸಮೃದ್ಧನಾಗಿ ತುಂಬಾ ಸುಖದಿಂದಲೂ ನೆಮ್ಮದಿಯಿಂದಲೂ ಇರುವಾಗ ಸಾಯುವನು.

24 ಅವನ ತೊಟ್ಟಿಗಳಲ್ಲಿ ಹಾಲು ತುಂಬಿರುವದು, ಅವನ ಅಸ್ಥಿಗಳ ಮಜ್ಜೆಯು ಸಾರವಾಗಿರುವದು.

25 ಮತ್ತೊಬ್ಬನು ಲೇಶವೂ ಸುಖಾನುಭವವಿಲ್ಲದೆ ಮನೋವ್ಯಥೆಪಡುತ್ತಾ ಸಾಯುವನು.

26 ಇಬ್ಬರೂ ದೂಳಿನಲ್ಲಿ ಮಲಗುವರು, ಹುಳಗಳು ಅವರನ್ನು ಮುತ್ತಿಕೊಳ್ಳುವವು.

27 ಆಹಾ, ನಿಮ್ಮ ಯೋಚನೆಗಳನ್ನು ಬಲ್ಲೆ, ನೀವು ನನಗೆ ವಿರುದ್ಧವಾಗಿ ಮಾಡುವ ಕುಯುಕ್ತಿಗಳನ್ನು ತಿಳಿದುಕೊಂಡಿದ್ದೇನೆ.

28 ಪ್ರಧಾನನ ಮನೆ ಏನಾಯಿತು, ದುಷ್ಟರು ವಾಸಿಸಿದ ಗುಡಾರವೆಲ್ಲಿ, ಅನ್ನುತ್ತೀರಷ್ಟೆ.

29 ನೀನು ಮಾರ್ಗಸ್ಥರನ್ನು ವಿಚಾರಿಸಲಿಲ್ಲವೋ? ಅವರು ಕೊಟ್ಟ ದೃಷ್ಟಾಂತಗಳಿಂದ,

30 ಆಪತ್ತಿನ ದಿನದಲ್ಲಿ ದುಷ್ಟನು ಉಳಿದು ಕೋಪವು ತುಂಬಿ ತುಳುಕುವ ದಿವಸದಲ್ಲಿ ತಪ್ಪಿಸಲ್ಪಡುವನು ಎಂಬದು ನಿಮಗೆ ಗೊತ್ತಾಗಲಿಲ್ಲವೋ?

31 ನೀನು ದುರ್ಮಾರ್ಗಿ ಎಂದು ಅವನಿಗೆ ಮುಖಾಮುಖಿಯಾಗಿ ಯಾರು ತಾನೇ ಹೇಳುವರು? ಅವನ ಮುಯ್ಯಿಗೆ ಮುಯ್ಯಿ ತೀರಿಸುವವರಾರು?

32 ಅವನನ್ನು ಮೆರವಣಿಗೆಯಿಂದ ಸಮಾಧಿಗೆ ತೆಗೆದುಕೊಂಡು ಹೋಗುವರು; ಅವನ ಗೋರಿಗೆ ಕಾವಲಿಡುವರು.

33 ಆ ತಗ್ಗಿನ ಪ್ರದೇಶದ ಹೆಂಟೆಗಳು ಅವನಿಗೆ ಒಪ್ಪಿತವಾಗಿರುವವು. ಅವನಿಗಿಂತ ಹಿಂದೆ ಲೆಕ್ಕವಿಲ್ಲದಷ್ಟು ಜನರು ಹೀಗೆಯೇ ಇದ್ದರು, ಇನ್ನು ಮುಂದೆ ಸಮಸ್ತರೂ ಹೀಗೆಯೇ ಅವನನ್ನು ಹಿಂಬಾಲಿಸುವರು.

34 ನೀವು ನನಗೆ ಮಾಡುವ ಆದರಣೆಯು ಎಷ್ಟು ವ್ಯರ್ಥವಾಗಿದೆ! ನಿಮ್ಮ ಉತ್ತರಗಳಲ್ಲಿ ಉಳಿದಿರುವದು ವಿುತ್ರದ್ರೋಹವೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು