ಯೆಹೋಶುವ 8 - ಕನ್ನಡ ಸತ್ಯವೇದವು J.V. (BSI)ಆಯಿ ಎಂಬ ಪಟ್ಟಣವು ಇಸ್ರಾಯೇಲ್ಯರಿಗೆ ಸ್ವಾಧೀನವಾದದ್ದು 1 ಅನಂತರ ಯೆಹೋವನು ಯೆಹೋಶುವನಿಗೆ - ಅಂಜಬೇಡ, ಕಳವಳಗೊಳ್ಳಬೇಡ; ಎದ್ದು ಭಟರೆಲ್ಲರನ್ನೂ ತೆಗೆದುಕೊಂಡು ಆಯಿಗೆ ಹೋಗು. 2 ನೋಡು, ಆಯಿ ಎಂಬ ಊರಿನ ರಾಜ, ಪ್ರಜೆ, ನಗರ, ದೇಶ ಇವುಗಳನ್ನೆಲ್ಲಾ ನಿನಗೆ ಕೊಟ್ಟಿದ್ದೇನೆ. ಯೆರಿಕೋವಿಗೂ ಅದರ ಅರಸನಿಗೂ ಮಾಡಿದಂತೆಯೇ ಆಯಿಗೂ ಅದರ ಅರಸನಿಗೂ ಮಾಡು. 3 ಆದರೆ ಕೊಳ್ಳೆಯನ್ನೂ ಪಶುಗಳನ್ನೂ ನಿಮಗೋಸ್ಕರ ತೆಗೆದುಕೊಳ್ಳಬಹುದು. ನಿಮ್ಮಲ್ಲಿ ಕೆಲವರು ಆ ಊರಿನ ಹಿಂದುಗಡೆಯಲ್ಲಿ ಹೊಂಚುಹಾಕಿಕೊಂಡಿರಲಿ ಎಂದು ಆಜ್ಞಾಪಿಸಲು ಅವನು ಎದ್ದು ಭಟರೆಲ್ಲರ ಸಹಿತವಾಗಿ ಆಯಿಗೆ ಹೋಗುವದಕ್ಕೋಸ್ಕರ ಸಿದ್ಧನಾಗಿ 4 ಮೂವತ್ತು ಸಾವಿರ ಯುದ್ಧವೀರರನ್ನು ಆರಿಸಿ ಅವರಿಗೆ - ನೀವು ಪಟ್ಟಣದ ಹಿಂಭಾಗದಲ್ಲಿ ಹೊಂಚುಹಾಕಿಕೊಂಡಿರ್ರಿ. 5 ಪಟ್ಟಣಕ್ಕೆ ಬಹು ದೂರವಾಗಿರಬೇಡಿರಿ; ಎಲ್ಲರೂ ಸಿದ್ಧವಾಗಿರ್ರಿ. ನಾನೂ ನನ್ನ ಸಂಗಡ ಇರುವ ಜನರೆಲ್ಲರೂ ಪಟ್ಟಣದ ಸಮೀಪಕ್ಕೆ ಹೋಗುವೆವು. 6 ಅವರು ಮುಂಚಿನಂತೆ ನಮ್ಮೊಡನೆ ಯುದ್ಧಕ್ಕೆ ಬಂದ ಕೂಡಲೆ ನಾವು ಓಡಿ ಹೋಗುವೆವು. ಇವರು ಮುಂಚಿನಂತೆ ನಮಗೆ ಹೆದರಿ ಓಡಿಹೋಗುತ್ತಾರೆಂದು ನೆನಸಿ ಅವರು ನಮ್ಮನ್ನು ಹಿಂದಟ್ಟುವರು; ನಾವು ಓಡುತ್ತಲೇ ಇರುವೆವು. 7 ನಾವೂ ಅವರೂ ಪಟ್ಟಣಕ್ಕೆ ದೂರವಾದ ಮೇಲೆ ನೀವು ಹೊಂಚಿನೋಡುತ್ತಿದ್ದ ಸ್ಥಳದಿಂದ ಎದ್ದು ಪಟ್ಟಣದೊಳಗೆ ನುಗ್ಗಿ ಅದನ್ನು ಸ್ವಾಧೀನಮಾಡಿಕೊಳ್ಳಿರಿ. ನಿಮ್ಮ ದೇವರಾದ ಯೆಹೋವನು ಅದನ್ನು ನಿಮ್ಮ ಕೈಗೆ ಒಪ್ಪಿಸುವನು. 8 ನೀವು ಪಟ್ಟಣವನ್ನು ಹಿಡಿದ ಕೂಡಲೆ ಅದಕ್ಕೆ ಬೆಂಕಿಹೊತ್ತಿಸಿರಿ. ಯೆಹೋವನ ಮಾತಿನಂತೆ ನಡೆಯಿರಿ, ನನ್ನ ಅಪ್ಪಣೆ ಇಷ್ಟೇ ಎಂದು ಹೇಳಿ ಅವರನ್ನು ರಾತ್ರಿಯಲ್ಲೇ ಕಳುಹಿಸಿದನು. 9 ಅವರು ಹೊಂಚುಹಾಕುವದಕ್ಕೆ ಹೊರಟುಹೋಗಿ ಬೇತೇಲಿಗೂ ಆಯಿಗೂ ನಡುವೆ ಆಯಿ ಎಂಬ ಊರಿನ ಪಶ್ಚಿಮದಲ್ಲಿ ಅಡಗಿಕೊಂಡರು. ಯೆಹೋಶುವನು ಆ ರಾತ್ರಿಯನ್ನು ಜನರ ಮಧ್ಯದಲ್ಲಿ ಕಳೆದನು. 10 ಅವನು ಬೆಳಿಗ್ಗೆ ಎದ್ದು ಇಸ್ರಾಯೇಲ್ಯರ ಹಿರಿಯರ ಸಂಗಡ ಸೈನ್ಯವನ್ನು ಕೂಡಿಸಿ ಅವರ ಮುಂದೆ ಆಯಿಗೆ ಹೊರಟನು. 11 ಅವನ ಸಂಗಡ ಇದ್ದ ಭಟರೆಲ್ಲರೂ ಗಟ್ಟಾಹತ್ತಿ ಪಟ್ಟಣದ ಸಮೀಪಕ್ಕೆ ಬಂದು ಅದರ ಉತ್ತರದಿಕ್ಕಿನಲ್ಲಿ ಇಳುಕೊಂಡರು. ಅವರಿಗೂ ಆಯಿಗೂ ನಡುವೆ ಒಂದು ತಗ್ಗು ಇತ್ತು. 12 ಆದರೆ ಅವನು ಹೆಚ್ಚು ಕಡಿಮೆ ಐದು ಸಾವಿರ ಜನರನ್ನು ಆರಿಸಿಕೊಂಡು ಬೇತೇಲಿಗೂ ಆಯಿಗೂ ನಡುವೆ ಪಟ್ಟಣದ ಪಶ್ಚಿಮದಲ್ಲಿ ಹೊಂಚಿನೋಡುವದಕ್ಕೋಸ್ಕರ ಇರಿಸಿದನು. 13 ಪಟ್ಟಣದ ಉತ್ತರದಲ್ಲಿದ್ದ ಎಲ್ಲಾ ಸೈನ್ಯವನ್ನೂ ಪಟ್ಟಣದ ಪಶ್ಚಿಮದಲ್ಲಿ ಹೊಂಚಿನೋಡುತ್ತಿದ್ದ ಸೈನ್ಯವನ್ನೂ ಕ್ರಮಪಡಿಸಿಕೊಂಡು ಯೆಹೋಶುವನು ಆ ರಾತ್ರಿಯಲ್ಲಿ ತಗ್ಗಿಗೆ ಹೋದನು. 14 ಆಯಿ ಎಂಬ ಊರಿನ ಅರಸನು ಬೆಳಿಗ್ಗೆ ಇದನ್ನು ತಿಳಿದು ತ್ವರೆಯಿಂದ ಜನರೆಲ್ಲರ ಸಹಿತವಾಗಿ ಇಸ್ರಾಯೇಲ್ಯರ ಸಂಗಡ ಯುದ್ಧಮಾಡುವದಕ್ಕೆ ಹೊರಟನು. ಅವನೂ ಅವನ ಜನರೂ ಅರಾಬಾ ಎಂಬ ತಗ್ಗಾದ ಪ್ರದೇಶವು ಕಾಣುವ ಸ್ಥಳಕ್ಕೆ ಬಂದರು. ಪಟ್ಟಣದ ಹಿಂಭಾಗದಲ್ಲಿ ಹೊಂಚಿನೋಡುತ್ತಿರುವದು ಅವನಿಗೆ ಗೊತ್ತಿದ್ದಿಲ್ಲ. 15 ಯೆಹೋಶುವನೂ ಅವನ ಸಂಗಡ ಇದ್ದ ಇಸ್ರಾಯೇಲ್ಯರೆಲ್ಲರೂ ತಾವು ಸೋತವರೋ ಎಂಬಂತೆ ಅರಣ್ಯ ಮಾರ್ಗವಾಗಿ ಓಡತೊಡಗಿದರು. 16 ಆಯಿ ಎಂಬ ಊರಿನವರು ಊರಿನಲ್ಲಿದ್ದ ತಮ್ಮ ಎಲ್ಲಾ ಜನರನ್ನೂ ಕರೆದುಕೊಂಡು ಯೆಹೋಶುವನನ್ನು ಹಿಂದಟ್ಟುತ್ತಾ ಪಟ್ಟಣಕ್ಕೆ ದೂರವಾಗಿ ಸೆಳೆಯಲ್ಪಟ್ಟರು. 17 ಆಯಿ ಎಂಬ ಊರಲ್ಲಿಯೂ ಬೇತೇಲಿನಲ್ಲಿಯೂ ಒಬ್ಬ ಗಂಡಸಾದರೂ ಉಳಿಯಲಿಲ್ಲ. ಊರು ಬಾಗಲುಗಳನ್ನು ತೆರೆದುಬಿಟ್ಟು ಎಲ್ಲರೂ ಇಸ್ರಾಯೇಲ್ಯರನ್ನು ಹಿಂದಟ್ಟುವದಕ್ಕೋಸ್ಕರ ಹೊರಟರು. 18 ಯೆಹೋವನು ಯೆಹೋಶುವನಿಗೆ - ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿ ಎಂಬ ಊರಿನ ಕಡೆಗೆ ಚಾಚು; ಆ ಪಟ್ಟಣವನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ ಎನ್ನಲು ಅವನು ಅದನ್ನು ಚಾಚಿದನು. 19 ಅವನು ಕೈಯನ್ನು ಚಾಚಿದ ಕೂಡಲೆ ಹೊಂಚಿ ನೋಡುತ್ತಿದ್ದವರು ತಾವಿದ್ದ ಸ್ಥಳದಿಂದ ಎದ್ದು ಓಡಿಬಂದು ಪಟ್ಟಣದೊಳಕ್ಕೆ ನುಗ್ಗಿ ಕೂಡಲೆ ಅದಕ್ಕೆ ಬೆಂಕಿ ಹೊತ್ತಿಸಿದರು. 20 ಆಯಿ ಎಂಬ ಊರಿನ ಜನರು ಹಿಂದಿರುಗಿ ನೋಡಿದಾಗ ಪಟ್ಟಣದ ಹೊಗೆಯು ಆಕಾಶಕ್ಕೆ ಏರಿಹೋಗುವದನ್ನು ಕಂಡು ಯಾವ ಮಾರ್ಗದಿಂದಲಾದರೂ ತಪ್ಪಿಸಿಕೊಳ್ಳಲಾರದವರಾದರು. ಅರಣ್ಯದ ಕಡೆಗೆ ಓಡಿಹೋಗಿದ್ದ ಇಸ್ರಾಯೇಲ್ಯರು ಹಿಂದಟ್ಟುವವರ ಕಡೆಗೆ ತಿರುಗಿದರು. 21 ಯೆಹೋಶುವನೂ ಇಸ್ರಾಯೇಲ್ಯರೂ ಪಟ್ಟಣವು ಹೊಂಚಿ ನೋಡುತ್ತಿದ್ದವರಿಗೆ ಸ್ವಾಧೀನವಾದದ್ದನ್ನೂ ಹೊಗೆಯು ಆಕಾಶಕ್ಕೆ ಏರಿಹೋಗುತ್ತಿದ್ದದ್ದನ್ನೂ ಕಂಡು ಹಿಂದಿರುಗಿ ಆಯಿ ಎಂಬ ಊರಿನ ಜನರನ್ನು ಹೊಡೆದರು. 22 ಪಟ್ಟಣದೊಳಗೆ ನುಗ್ಗಿದವರೂ ಬಂದುಬಿಟ್ಟದ್ದರಿಂದ ಆಯಿ ಎಂಬ ಊರಿನವರು ಈಚೆಯಲ್ಲಿಯೂ ಆಚೆಯಲ್ಲಿಯೂ ಇದ್ದ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿಬಿದ್ದರು. ಅವರು ಎಲ್ಲರನ್ನೂ ಹೊಡೆದು ಹಾಕಿದರು. ಒಬ್ಬನಾದರೂ ಉಳಿಯಲಿಲ್ಲ, ಯಾವನೂ ತಪ್ಪಿಸಿಕೊಳ್ಳಲಿಲ್ಲ. 23 ಆಯಿ ಎಂಬ ಪಟ್ಟಣದ ಅರಸನನ್ನು ಹಿಡಿದು ಜೀವದೊಡನೆ ಯೆಹೋಶುವನ ಬಳಿಗೆ ತೆಗೆದುಕೊಂಡು ಬಂದರು. 24 ಇಸ್ರಾಯೇಲ್ಯರು ತಮ್ಮನ್ನು ಅರಣ್ಯದವರೆಗೂ ಹಿಂದಟ್ಟಿ ಬಂದ ಆಯಿ ಎಂಬ ಊರಿನವರನ್ನು ಅಲ್ಲೇ ಕತ್ತಿಯಿಂದ ಸಂಹರಿಸಿ ಮುಗಿಸಿಬಿಟ್ಟನಂತರ ಎಲ್ಲರೂ ಪಟ್ಟಣಕ್ಕೆ ಹೋಗಿ ಅಲ್ಲಿದ್ದವರನ್ನು ಹತಿಸಿದರು. 25 ಆ ದಿನ ಆಯಿ ಎಂಬ ಊರಿನವರಲ್ಲಿ ಸಂಹೃತರಾದ ಗಂಡಸರೂ ಹೆಂಗಸರೂ ಹನ್ನೆರಡು ಸಾವಿರ ಮಂದಿ. 26 ಪಟ್ಟಣದವರೆಲ್ಲರನ್ನೂ ಸಂಹರಿಸುವವರೆಗೆ ಯೆಹೋಶುವನು ಈಟಿಹಿಡಿದು ಚಾಚಿದ ಕೈಯನ್ನು ಹಿಂದೆಗೆಯಲಿಲ್ಲ. 27 ಯೆಹೋವನು ಯೆಹೋಶುವನಿಗೆ ಆಜ್ಞಾಪಿಸಿದಂತೆ ಇಸ್ರಾಯೇಲ್ಯರು ಪಟ್ಟಣದೊಳಗಿಂದ ಪಶು ಮೊದಲಾದವುಗಳನ್ನು ಮಾತ್ರ ಕೊಳ್ಳೆಯಾಗಿ ತೆಗೆದುಕೊಂಡರು. 28 ಯೆಹೋಶುವನು ಆಯಿ ಎಂಬ ಪಟ್ಟಣವನ್ನು ಸುಟ್ಟು ಅದು ಯಾವ ಕಾಲಕ್ಕೂ ತಿರಿಗಿ ಕಟ್ಟಲ್ಪಡದಂತೆ ಹಾಳುದಿಬ್ಬವಾಗ ಮಾಡಿದನು. ಅದು ಇಂದಿನವರೆಗೂ ಹಾಗೆಯೇ ಇದೆ. 29 ಆಯಿ ಎಂಬ ಊರಿನ ಅರಸನನ್ನು ಸಾಯಂಕಾಲದವರೆಗೂ ಮರದಲ್ಲಿ ನೇತುಹಾಕಿಸಿ ಸೂರ್ಯನು ಅಸ್ತವಿುಸುತ್ತಲೇ ಅವನ ಶವವನ್ನು ಕೆಳಗಿಳಿಸಿ ಅದನ್ನು ಊರು ಬಾಗಲಲ್ಲಿ ಹಾಕಿಸಿಬಿಟ್ಟು ಅದರ ಮೇಲೆ ಕಲ್ಲಿನ ದೊಡ್ಡ ಕುಪ್ಪೆಯನ್ನು ಮಾಡಿಸಿದನು. ಅದು ಇಂದಿನವರೆಗೂ ಹಾಗೆಯೇ ಇದೆ. ಏಬಾಲ್ ಬೆಟ್ಟದಲ್ಲಿ ಯಜ್ಞವೇದಿಯನ್ನು ಕಟ್ಟಿದ್ದೂ ಧರ್ಮಶಾಸ್ತ್ರವನ್ನು ಪಾರಾಯಣಮಾಡಿದ್ದೂ 30 ಯೆಹೋವನ ಸೇವಕನಾದ ಮೋಶೆಯು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದಂತೆಯೂ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೂ ಯೆಹೋಶುವನು ಆ ಸಮಯದಲ್ಲಿ ಇಸ್ರಾಯೇಲ್ದೇವರಾದ ಯೆಹೋವನಿಗೆ ಏಬಾಲ್ ಬೆಟ್ಟದಲ್ಲಿ ಉಳಿ ಮುಂತಾದವುಗಳನ್ನು ಉಪಯೋಗಿಸದೆ ಹುಟ್ಟುಕಲ್ಲುಗಳಿಂದಲೇ ಒಂದು ಯಜ್ಞವೇದಿಯನ್ನು ಕಟ್ಟಿಸಿದನು. 31 ಜನರು ಅದರ ಮೇಲೆ ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು. 32 ಯೆಹೋಶುವನು ಅಲ್ಲಿದ್ದ ಕಲ್ಲುಗಳ ಮೇಲೆ ಜನರೆಲ್ಲರ ಸಮಕ್ಷದಲ್ಲಿ ಮೋಶೆಯ ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆದನು. 33 ಎಲ್ಲಾ ಇಸ್ರಾಯೇಲ್ಯರು ಅಂದರೆ ಹಿರಿಯರೂ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಅನ್ಯದೇಶಸ್ಥರೂ ಸ್ವದೇಶಸ್ಥರೂ ಯೆಹೋವನ ಒಡಂಬಡಿಕೆಯ ಮಂಜೂಷದ ಎಡಬಲಗಡೆಗಳಲ್ಲಿ ಅದನ್ನು ಹೊತ್ತ ಲೇವಿಯರಾದ ಯಾಜಕರ ಎದುರಾಗಿ ನಿಂತುಕೊಂಡರು. ಗೆರಿಜ್ಜೀಮ್ ಬೆಟ್ಟದ ಕಡೆ ಅರ್ಧಜನರೂ ಏಬಾಲ್ ಬೆಟ್ಟದ ಕಡೆ ಅರ್ಧಜನರೂ ಯೆಹೋವನ ಸೇವಕನಾದ ಮೋಶೆಯು ಮೊದಲೇ ಹೇಳಿದ್ದಂತೆ ಆಶೀರ್ವಾದಗಳನ್ನು ನುಡಿಯುವದಕ್ಕೋಸ್ಕರ ನಿಂತರು. 34 ಅನಂತರ ಯೆಹೋಶುವನು ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದ ಶಾಪ ವಾಕ್ಯಗಳನ್ನು ಆ ಗ್ರಂಥದಲ್ಲಿ ಇದ್ದ ಹಾಗೆಯೇ ಓದಿದನು. 35 ಮೋಶೆಯು ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಬಿಡದೆ ಹೆಂಗಸರಿಗೂ ಚಿಕ್ಕವರಿಗೂ ಅವರಲ್ಲಿದ್ದ ಅನ್ಯದೇಶಸ್ಥರಿಗೂ ಕೇಳಿಸುವಂತೆ ಸರ್ವಸಮೂಹದ ಮುಂದೆ ಓದಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India