Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 46 - ಕನ್ನಡ ಸತ್ಯವೇದವು J.V. (BSI)


ಸಬ್ಬತ್ತಿನ ಮತ್ತು ಅಮಾವಾಸ್ಯೆಯ ಪೂಜೆ

1 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ವಾರದೊಳಗೆ ಕೆಲಸನಡೆಯುವ ಆರು ದಿವಸಗಳಲ್ಲಿ ಒಳಗಣ ಪ್ರಾಕಾರದ ಮೂಡಲ ಹೆಬ್ಬಾಗಿಲು ಮುಚ್ಚಿರಬೇಕು; ಆದರೆ ಸಬ್ಬತ್ ದಿನದಲ್ಲಿಯೂ ಅಮಾವಾಸ್ಯೆಯಲ್ಲಿಯೂ ತೆರೆದಿರಬೇಕು.

2 ಪ್ರಭುವು ಹೊರಗಣ ಕೈಸಾಲೆಯ ಮಾರ್ಗವಾಗಿ ಆ ಹೆಬ್ಬಾಗಿಲನ್ನು ಪ್ರವೇಶಿಸಿ ಬಾಗಿಲ ನಿಲವುಕಂಬದ ಪಕ್ಕದಲ್ಲಿ ನಿಂತುಕೊಂಡು ತಾನು ಒಪ್ಪಿಸಿದ ಸರ್ವಾಂಗಹೋಮಪಶುವನ್ನೂ ಸಮಾಧಾನಯಜ್ಞಪಶುಗಳನ್ನೂ ಯಾಜಕರು ಅರ್ಪಿಸುತ್ತಿರುವಾಗ ಬಾಗಿಲ ಹೊಸ್ತಲಿನಲ್ಲಿ ಅಡ್ಡಬೀಳಲಿ; ಆಮೇಲೆ ಹೊರಟುಹೋಗಲಿ; ಅಂದು ಸಂಜೆಯ ತನಕ ಬಾಗಿಲನ್ನು ಮುಚ್ಚಬಾರದು.

3 ಸಬ್ಬತ್ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ದೇಶದ ಜನರು ಆ ಹೆಬ್ಬಾಗಿಲ ದ್ವಾರದ ಮುಂದೆ ಯೆಹೋವನ ಸಮ್ಮುಖವಾಗಿ ಅಡ್ಡಬೀಳಲಿ.

4 ಸಬ್ಬತ್‍ದಿನದಲ್ಲಿ ಪ್ರಭುವು ಯೆಹೋವನಿಗೆ ಪೂರ್ಣಾಂಗವಾದ ಆರು ಕುರಿಗಳನ್ನೂ ಪೂರ್ಣಾಂಗವಾದ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಅರ್ಪಿಸತಕ್ಕದ್ದು;

5 ಟಗರಿನೊಡನೆ ಮೂವತ್ತು ಸೇರು [ಗೋದಿ ಹಿಟ್ಟನ್ನೂ] ಕುರಿಗಳೊಡನೆ ಶಕ್ತಿಯಿದ್ದಷ್ಟು [ಗೋದಿ ಹಿಟ್ಟನ್ನೂ] ಮೂವತ್ತು ಮೂವತ್ತು ಸೇರು [ಗೋದಿ ಹಿಟ್ಟಿಗೆ] ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಕೊಡಲಿ.

6 ಅಮಾವಾಸ್ಯೆಯಲ್ಲಿ ಅವನು ಪೂರ್ಣಾಂಗವಾದ ಒಂದು ಹೋರಿಯನ್ನೂ ಆರು ಕುರಿಗಳನ್ನೂ ಒಂದು ಟಗರನ್ನೂ ಒಪ್ಪಿಸತಕ್ಕದ್ದು; ಅದು ಪೂರ್ಣಾಂಗವಾಗಿಯೇ ಇರಬೇಕು;

7 ಮತ್ತು ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಶಕ್ತಿಯಿದ್ದಷ್ಟು ಸೇರು [ಗೋದಿ ಹಿಟ್ಟನ್ನೂ] ಮೂವತ್ತು ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.


ದೇವಾಲಯ ಗಮನಾಗಮನ ಕ್ರಮ, ವಿವಿಧ ನಿಯಮಗಳು

8 ಪ್ರಭುವು ಪ್ರವೇಶಮಾಡುವಾಗ ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಸೇರಿ ಅದೇ ಮಾರ್ಗವಾಗಿ ಹೊರಡಲಿ.

9 ದೇಶದ ಜನರಾದರೋ ಹಬ್ಬಗಳಲ್ಲಿ ಯೆಹೋವನ ಸಮ್ಮುಖದಲ್ಲಿ ಕಾಣಿಸಿಕೊಳ್ಳುವಾಗ ಬಡಗಣ ಬಾಗಿಲಿಂದ ಆರಾಧಿಸುವದಕ್ಕೆ ಪ್ರವೇಶಿಸಿದವನು ತೆಂಕಣ ಬಾಗಿಲಿಂದ ಹೊರಡಲಿ; ತೆಂಕಣ ಬಾಗಿಲಿಂದ ಪ್ರವೇಶಿಸಿದವನು ಬಡಗಣ ಬಾಗಿಲಿಂದ ಹೊರಡಲಿ; ತಾನು ಪ್ರವೇಶಿಸಿದ ಬಾಗಿಲಿಂದ ಹಿಂದಿರುಗದೆ ಬಂದ ಮುಖವಾಗಿಯೇ ಹೋಗಲಿ.

10 ಜನರು ಪ್ರವೇಶಿಸುವಾಗ ಪ್ರಭುವು ಅವರ ಮಧ್ಯದಲ್ಲಿ ಪ್ರವೇಶಿಸಲಿ; ಅವರು ಹೊರಡುವಾಗ ಅವನೂ ಹೊರಡಲಿ.

11 [ಪ್ರಭುವು] ಉತ್ಸವಗಳಲ್ಲಿಯೂ ಹಬ್ಬಗಳಲ್ಲಿಯೂ ಹೋರಿಯೊಡನೆ ಮೂವತ್ತು ಸೇರು, ಟಗರಿನೊಡನೆ ಮೂವತ್ತು ಸೇರು, ಕುರಿಗಳೊಡನೆ ಶಕ್ತಿಯಿದ್ದಷ್ಟು ಸೇರು [ಗೋದಿ ಹಿಟ್ಟನ್ನೂ] ಮೂವತ್ತು ಮೂವತ್ತು ಸೇರಿಗೆ ಆರಾರು ಸೇರಿನಂತೆ ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒದಗಿಸಬೇಕು.

12 ಪ್ರಭುವು ಸ್ವಂತ ಇಚ್ಫೆಯಿಂದ ಕಾಣಿಕೆಯನ್ನಾಗಲಿ ಸರ್ವಾಂಗಹೋಮವನ್ನಾಗಲಿ ಸಮಾಧಾನ ಯಜ್ಞಗಳನ್ನಾಗಲಿ ಯೆಹೋವನಿಗೆ ಸಮರ್ಪಿಸಬೇಕೆಂದಿರುವಾಗ ಅವನಿಗಾಗಿ ಮೂಡಲ ಹೆಬ್ಬಾಗಿಲನ್ನು ತೆರೆಯಬೇಕು; ಅವನು ಸಬ್ಬತ್‍ದಿನದಲ್ಲಿ ಸಮರ್ಪಿಸುವಂತೆ ಸರ್ವಾಂಗಹೋಮಪಶುವನ್ನೂ ಸಮಾಧಾನಯಜ್ಞಪಶುಗಳನ್ನೂ ಸಮರ್ಪಿಸಿ ಹೊರಡಲಿ; ಹೊರಟ ಮೇಲೆ ಬಾಗಿಲನ್ನು ಮುಚ್ಚಬೇಕು.


ನಿತ್ಯಸರ್ವಾಂಗಹೋಮ

13 ನೀನು ಪೂರ್ಣಾಂಗವಾದ ವರುಷದ ಕುರಿಯನ್ನು ಯೆಹೋವನಿಗೆ ಸರ್ವಾಂಗಹೋಮವಾಗಿ ದಿನವಹಿ ಅರ್ಪಿಸಬೇಕು; ಪ್ರತಿದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.

14 ಅದರೊಂದಿಗೆ ಪ್ರತಿದಿನ ಬೆಳಿಗ್ಗೆ ಧಾನ್ಯನೈವೇದ್ಯವಾಗಿ ಐದು ಸೇರು ಗೋದಿಹಿಟ್ಟನ್ನೂ ಅದನ್ನು ನೆನೆಯಿಸುವದಕ್ಕೆ ಎರಡು ಸೇರು ಎಣ್ಣೆಯನ್ನೂ ನೀನು ಸಮರ್ಪಿಸಬೇಕು; ಇವುಗಳನ್ನು ಪ್ರತಿನಿತ್ಯವೂ ಯೆಹೋವನಿಗೆ ಧಾನ್ಯನೈವೇದ್ಯವಾಗಿ ಅರ್ಪಿಸತಕ್ಕದ್ದು; ಇದು ಶಾಶ್ವತನಿಯಮ.

15 ಯಾಜಕರು ಕುರಿಯನ್ನೂ ಧಾನ್ಯ ನೈವೇದ್ಯವನ್ನೂ ಎಣ್ಣೆಯನ್ನೂ ನಿತ್ಯಸರ್ವಾಂಗಹೋಮವಾಗಿ ಪ್ರತಿದಿನ ಬೆಳಿಗ್ಗೆ ಸಮರ್ಪಿಸಬೇಕು.


ಪ್ರಭುವಿನ ಸ್ವಾಸ್ತ್ಯವು ಪರಾಧೀನವಾಗಕೂಡದು

16 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಪ್ರಭುವು ತನ್ನ ಮಕ್ಕಳಲ್ಲಿ ಒಬ್ಬನಿಗೆ ಭೂದಾನಮಾಡಿದರೆ ಅದು ತಂದೆಯ ಸ್ವಾಸ್ತ್ಯವಾದ ಕಾರಣ ಮಕ್ಕಳಿಗೆ ಹಕ್ಕುಬರುವದು, ಅದು ಬಾಧ್ಯವಾಗಿ ಸಿಕ್ಕಿದ ಸ್ವಾಸ್ತ್ಯವೇ.

17 ಆದರೆ ಪ್ರಭುವು ತನ್ನ ಭೂವಿುಯ ಒಂದು ಭಾಗವನ್ನು ತನ್ನ ಸೇವಕರಲ್ಲಿ ಒಬ್ಬನಿಗೆ ದಾನಮಾಡಿದರೆ ಬಿಡುಗಡೆಯ ವರುಷದವರೆಗೆ ಅದು ಅವನ ಅಧೀನವಾಗಿರುವದು; ಆಮೇಲೆ ಅದು ಪುನಃ ಪ್ರಭುವಿನ ವಶವಾಗುವದು; ಆದರೆ ಪ್ರಭುವು ತನ್ನ ಮಕ್ಕಳಿಗೆ ಕೊಟ್ಟ ಸ್ವಾಸ್ತ್ಯವು ಅವರಿಗೇ ಸೇರಿಬಿಡುವದು.

18 ಇದಲ್ಲದೆ ಪ್ರಭುವು ಪ್ರಜೆಗಳ ಪಿತ್ರಾರ್ಜಿತ ಭೂವಿುಯನ್ನು ಸ್ವಾಧೀನಮಾಡಿಕೊಂಡು ಅವರ ಬಾಧ್ಯತೆಯನ್ನು ತಪ್ಪಿಸಬಾರದು; ಸ್ವಂತ ಭೂವಿುಯನ್ನೇ ಭಾಗಿಸಿ ತನ್ನ ಮಕ್ಕಳಿಗೆ ಪಾಲುಕೊಡಲಿ; ಇಲ್ಲವಾದರೆ ನನ್ನ ಪ್ರಜೆಯಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಭೂಸ್ಥಿತಿಯನ್ನು ಕಳಕೊಂಡು ದಿಕ್ಕಾಪಾಲಾಗಿ ಹೋದಾನು.


ದೇವಾಲಯದ ಪಾಕಶಾಲೆಗಳು

19 ಬಳಿಕ ಆ ಪುರುಷನು ನನ್ನನ್ನು ಹೆಬ್ಬಾಗಿಲ ಪಕ್ಕದಲ್ಲಿನ ಪ್ರವೇಶದ ಮಾರ್ಗವಾಗಿ ಬಡಗಲಿಗೆ ಅಭಿಮುಖವಾಗಿಯೂ ಯಾಜಕರಿಗೆ ನೇಮಕವಾಗಿಯೂ ಇರುವ ಪರಿಶುದ್ಧವಾದ ಕೋಣೆಗಳಿಗೆ ಬರಮಾಡಿದನು; ಇಗೋ, ಅವುಗಳ ಹಿಂದೆ ಪಡುವಲಲ್ಲಿ ಒಂದು ಸ್ಥಳವಿತ್ತು.

20 ಆಗ ಅವನು ನನಗೆ - ಯಾಜಕರು ಹವಿಸ್ಸನ್ನು ಹೊರಗಣ ಪ್ರಾಕಾರಕ್ಕೆ ಒಯ್ದು ಜನರನ್ನು ಶುದ್ಧಿಮಾಡದ ಹಾಗೆ ಪ್ರಾಯಶ್ಚಿತ್ತಯಜ್ಞಪಶುವಿನ ಮತ್ತು ದೋಷಪರಿಹಾರಕಯಜ್ಞಪಶುವಿನ ಮಾಂಸವನ್ನು ಬೇಯಿಸುವದಕ್ಕೂ ಧಾನ್ಯನೈವೇದ್ಯವನ್ನು ಪಕ್ವಮಾಡುವದಕ್ಕೂ ಈ ಸ್ಥಳವು ಏರ್ಪಟ್ಟಿದೆ ಎಂದು ಹೇಳಿದನು.

21 ತರುವಾಯ ಅವನು ನನ್ನನ್ನು ಹೊರಗಣ ಪ್ರಾಕಾರಕ್ಕೆ ಬರಮಾಡಿ ಅಲ್ಲಿನ ನಾಲ್ಕು ಮೂಲೆಗಳ ಮಾರ್ಗವಾಗಿ ಕರಕೊಂಡು ಹೋದನು; ಇಗೋ, ಪ್ರಾಕಾರದ ಒಂದೊಂದು ಮೂಲೆಯಲ್ಲಿ ಒಂದೊಂದು ಒಳ ಅಂಗಳವು ಕಾಣಿಸಿತು.

22 ಹೌದು, ಪ್ರಾಕಾರದ ನಾಲ್ಕು ಮೂಲೆಗಳಲ್ಲಿಯೂ ನಾಲ್ವತ್ತು ಮೊಳ ಉದ್ದದ ಮೂವತ್ತು ಮೊಳ ಅಗಲದ ಪ್ರತ್ಯೇಕವಾದ ಅಂಗಳಗಳು ಇದ್ದವು; ಮೂಲೆಗಳಲ್ಲಿನ ಆ ನಾಲ್ಕು ಅಂಗಳಗಳು ಒಂದೇ ಅಳತೆಯಾಗಿದ್ದವು.

23 ಅವುಗಳೊಳಗೆ ಸುತ್ತಲು, ಅಂದರೆ ಆ ನಾಲ್ಕು ಅಂಗಳಗಳ ಸುತ್ತುಮುತ್ತಲು [ಕಲ್ಲಿನ] ವರಸೆಯು ಚಾಚಿಕೊಂಡಿತು; ಆ ವರಸೆಗಳ ಕೆಳಗೆ ಒಲೆಗಳು ಸುತ್ತಲೂ ಕಟ್ಟಿದ್ದವು.

24 ಆಗ ಅವನು ನನಗೆ - ಇವು ದೇವಾಲಯದ ಸೇವಕರು ಯಜ್ಞಪಶುಗಳನ್ನು ತಂದ ಜನರಿಗೋಸ್ಕರ ಅವುಗಳ ಮಾಂಸವನ್ನು ಬೇಯಿಸುವ ಪಾಕಶಾಲೆಗಳು ಎಂದು ಹೇಳಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು