ಯೆಹೆಜ್ಕೇಲನು 39 - ಕನ್ನಡ ಸತ್ಯವೇದವು J.V. (BSI)1 ನರಪುತ್ರನೇ, ನೀನು ಗೋಗನಿಗೆ ವಿರುದ್ಧವಾಗಿ ಈ ದೈವೋಕ್ತಿಯನ್ನು ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ರೋಷ್ ಮೆಷೆಕ್ ತೂಬಲ್ ಜನಾಂಗಗಳ ಪ್ರಭುವಾದ ಗೋಗನೇ, 2 ಆಹಾ, ನಾನು ನಿನಗೆ ವಿರುದ್ಧನಾಗಿ ನಿನ್ನನ್ನು ತಿರುಗಿಸಿ ಮುಂದರಿಸಿ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರಮಾಡಿ 3 ಇಸ್ರಾಯೇಲಿನ ಪರ್ವತಗಳ ಮೇಲೆ ನುಗ್ಗಿಸಿ ನಿನ್ನ ಎಡಗೈಯೊಳಗಿಂದ ಬಿಲ್ಲನ್ನು ಹೊಡೆದುಹಾಕಿ ನಿನ್ನ ಬಲಗೈಯೊಳಗಿಂದ ಬಾಣಗಳನ್ನು ಉದುರಿಸಿಬಿಡುವೆನು. 4 ನೀನೂ ನಿನ್ನ ಎಲ್ಲಾ ಗುವ್ಮಿುಗಳೂ ನಿನ್ನೊಂದಿಗಿರುವ ಜನಾಂಗಗಳೂ ಇಸ್ರಾಯೇಲಿನ ಪರ್ವತಗಳಲ್ಲಿ ಬಿದ್ದುಬಿಡುವಿರಿ; ನಾನು ನಿಮ್ಮನ್ನು ಮಾಂಸತಿನ್ನುವ ಬಗೆಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರ ಮಾಡುವೆನು; 5 ನೀವು ಬೈಲಿನಲ್ಲಿ ಬೀಳುವಿರಿ; ನಾನೇ ಅಪ್ಪಣೆಕೊಟ್ಟಿದ್ದೇನಲ್ಲಾ; ಇದು ಕರ್ತನಾದ ಯೆಹೋವನ ನುಡಿ. 6 ನಾನು ಮಾಗೋಗ್ ದೇಶದ ಮೇಲೂ ಕರಾವಳಿಯ ಸೀಮೆಗಳಲ್ಲಿ ನಿರ್ಭಯವಾಗಿ ವಾಸಿಸುವವರ ಮೇಲೂ ಬೆಂಕಿಯನ್ನು ಕಳುಹಿಸುವೆನು; ಆಗ ನಾನೇ ಯೆಹೋವನು ಎಂದು ಅವರಿಗೆ ನಿಶ್ಚಿತವಾಗುವದು. 7 ನಾನು ನನ್ನ ಪವಿತ್ರನಾಮವನ್ನು ನನ್ನ ಜನರಾದ ಇಸ್ರಾಯೇಲ್ಯರ ನಡುವೆ ವ್ಯಕ್ತಗೊಳಿಸುವೆನು, ಅದನ್ನು ಇನ್ನು ಮುಂದೆ ಅಪಕೀರ್ತಿಗೆ ಗುರಿಯಾಗಲೀಸೆನು; ನಾನೇ ಯೆಹೋವ, ಇಸ್ರಾಯೇಲಿನ ಸದಮಲಸ್ವಾವಿು ಎಂದು ಜನಾಂಗಗಳಿಗೆ ಗೊತ್ತಾಗುವದು. 8 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಗೋ ಬಂತು, ಸಂಭವಿಸಿತು; ನಾನು ಮುಂತಿಳಿಸಿದ ದಿನವು ಇದೇ. 9 ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಬೈಲಿಗೆ ಹೊರಟು ಶತ್ರುವಿನ ಆಯುಧಗಳಿಗೆ ಬೆಂಕಿಯಿಕ್ಕಿ ಸುಟ್ಟುಬಿಡುವರು; ಹೌದು, ಖೇಡ್ಯ, ಗುರಾಣಿ, ಬಿಲ್ಲು, ಬಾಣ, ದೊಣ್ಣೆ, ಈಟಿ ಇವುಗಳನ್ನು ಏಳು ವರುಷಗಳ ತನಕ ಸುಡುತ್ತಲೇ ಬರುವರು; 10 ಕಾಡಿನಿಂದ ಸೌದೆಯನ್ನು ತರಬೇಕಾಗುವದಿಲ್ಲ, ವನದಲ್ಲಿ ಮರವನ್ನು ಕಡಿಯಬೇಕಾಗುವದಿಲ್ಲ; ಆಯುಧಗಳನ್ನೇ ಉರಿಸುವರು; ತಮ್ಮನ್ನು ಸೂರೆಮಾಡಿದವರನ್ನು ತಾವು ಸೂರೆಮಾಡುವರು, ತಮ್ಮನ್ನು ಕೊಳ್ಳೆ ಹೊಡೆದವರನ್ನು ತಾವು ಕೊಳ್ಳೆಹೊಡೆಯುವರು; ಇದು ಕರ್ತನಾದ ಯೆಹೋವನ ನುಡಿ. 11 ಆ ದಿನದಲ್ಲಿ ನಾನು ಇಸ್ರಾಯೇಲಿನೊಳಗೆ ಲವಣ ಸಮುದ್ರದ ಮೂಡಣ ದಿಕ್ಕಿನಲ್ಲಿ ಪ್ರಯಾಣಿಕರ ಮಾರ್ಗವಾದ ತಗ್ಗನ್ನು ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು; ಅಲ್ಲಿ ಪ್ರಯಾಣಮಾಡಲು ಆಗುವದಿಲ್ಲ; ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು; ಅದು ಗೋಗನ ಸಮೂಹದ ತಗ್ಗು ಅನ್ನಿಸಿಕೊಳ್ಳುವದು. 12 ಇಸ್ರಾಯೇಲ್ಯರು ದೇಶವನ್ನು ಶುದ್ಧಿಮಾಡುವದಕ್ಕಾಗಿ ಏಳು ತಿಂಗಳು ಅವರನ್ನು ಹೂಣುತ್ತಲೇ ಇರುವರು. 13 ಹೌದು, ದೇಶದ ಸಕಲಪ್ರಜೆಗಳು ಅವರನ್ನು ಹೂಳಿಬಿಡುವರು; ಹೀಗೆ ನಾನು ಪ್ರಖ್ಯಾತಿಗೊಳ್ಳುವಾಗ ನನ್ನ ಜನರಿಗೆ ಹೆಸರುವಾಸಿಯಾಗುವದು; ಇದು ಕರ್ತನಾದ ಯೆಹೋವನ ನುಡಿ. 14 ತರುವಾಯ ಅವರು ದೇಶವನ್ನು ಶುದ್ಧಿಮಾಡುವದಕ್ಕೆ ತಕ್ಕವರನ್ನು ಆರಿಸಿ - ನೀವು ದೇಶದಲ್ಲಿ ತಿರುಗುತ್ತಾ ನೆಲದ ಮೇಲೆ ವಿುಕ್ಕಿರುವ ಎಲುಬುಗಳನ್ನು ಹೂಣಿಡಿರೆಂದು ನಿಯತವಾಗಿ ನೇವಿುಸುವರು; ಏಳು ತಿಂಗಳು ಕಳೆದ ಕೂಡಲೆ ಇವರು ಈ ಹುಡುಕುವ ಕೆಲಸವನ್ನು ತೊಡಗುವರು. 15 ದಾರಿಗಳಲ್ಲಿ ಯಾವನೇ ಆಗಲಿ ಪ್ರಯಾಣಮಾಡುತ್ತಿರುವಾಗ ಮನುಷ್ಯರ ಎಲುಬನ್ನು ಕಂಡರೆ ಅಲ್ಲಿ ಒಂದು ಗುರುತನ್ನು ನಿಲ್ಲಿಸುವನು; ಹೂಣಿಡುವವರು ಗೋಗನ ಸಮೂಹದ ತಗ್ಗಿನಲ್ಲಿ ಅದನ್ನು ಹೂಣುವ ತನಕ ಆ ಗುರುತು ಹಾಗೇ ನಿಂತಿರುವದು. 16 (ಇದಲ್ಲದೆ ಒಂದು ಪಟ್ಟಣಕ್ಕೆ ಸಮೂಹಪುರವೆಂಬ ಹೆಸರಾಗುವದು.) ಹೀಗೆ ದೇಶವನ್ನು ಶುದ್ಧಿಮಾಡುವರು. 17 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನರಪುತ್ರನೇ, ಎಲ್ಲಾ ಬಗೆಯ ಪಕ್ಷಿಗಳಿಗೂ ಸಮಸ್ತ ಭೂಜಂತುಗಳಿಗೂ ಹೀಗೆ ನುಡಿ - ನೀವು ಕೂಡಿಬನ್ನಿರಿ; ನಾನು ಇಸ್ರಾಯೇಲಿನ ಪರ್ವತಗಳ ಮೇಲೆ ನಿಮಗಾಗಿ ಮಾಡುವ ಮಹಾಯಜ್ಞಕ್ಕೆ ಎಲ್ಲಾ ಕಡೆಯಿಂದಲೂ ನೆರೆದು ಬಂದು ಮಾಂಸವನ್ನು ತಿಂದು ರಕ್ತವನ್ನು ಕುಡಿಯಿರಿ. 18 ಟಗರು ಕುರಿ ಹೋತ ಹೋರಿ ಅಂತು ಬಾಷಾನಿನ ಕೊಬ್ಬಿದ ಪಶುಗಳು ಅಂದರೆ ಬಲಿಷ್ಟರು, ಭೂಪತಿಗಳು ಇವರ ಮಾಂಸವೂ ರಕ್ತವೂ ನಿಮಗೆ ಸಿಕ್ಕುವವು. 19 ನಾನು ನಿಮಗೋಸ್ಕರ ವಧಿಸಿರುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬಾ ತಿನ್ನುವಿರಿ, ರಕ್ತವನ್ನು ಅಮಲೇರ ಕುಡಿಯುವಿರಿ. 20 ನಾನು ಸಿದ್ಧಪಡಿಸುವ ಆ ಔತಣದಲ್ಲಿ ಕುದುರೆ ರಾಹುತ ಶೂರ ಸಕಲ ವಿಧವಾದ ಸೈನಿಕ ಇವರನ್ನು ಬೇಕಾದಷ್ಟು ಭಕ್ಷಿಸುವಿರಿ; ಇದು ಕರ್ತನಾದ ಯೆಹೋವನ ನುಡಿ. 21 ಹೀಗೆ ನಾನು ಜನಾಂಗಗಳ ನಡುವೆ ನನ್ನ ಮಹಿಮೆಯನ್ನು ಸ್ಥಾಪಿಸಲು ಆ ಸೈನಿಕರ ಮೇಲೆ ಕೈಮಾಡಿ ನ್ಯಾಯದಂಡನೆ ನಡಿಸಿದವನು ನಾನೇ ಎಂಬದು ಆ ಜನಾಂಗಗಳಿಗೆಲ್ಲಾ ಗೋಚರವಾಗುವದು. 22 ಮತ್ತು ಇಸ್ರಾಯೇಲ್ ವಂಶದವರು ನಾನೇ ತಮ್ಮ ದೇವರಾದ ಯೆಹೋವನೆಂದು ಅಂದಿನಿಂದ ಯಾವಾಗಲೂ ತಿಳಿದುಕೊಳ್ಳುವರು. 23 ಇದಲ್ಲದೆ ಇಸ್ರಾಯೇಲ್ಯರು ತಮ್ಮ ಅಧರ್ಮದ ನಿವಿುತ್ತವೇ ಸೆರೆಯಾಗಿ ಹೋದರೆಂತಲೂ ಅವರು ನನಗೆ ದ್ರೋಹಮಾಡಿದ್ದರಿಂದ ನಾನು ಅವರಿಗೆ ವಿಮುಖನಾಗಿ ಅವರೆಲ್ಲರೂ ಖಡ್ಗಹತರಾಗುವಂತೆ ಅವರನ್ನು ಶತ್ರುವಶಮಾಡಿದೆನೆಂತಲೂ ಜನಾಂಗಗಳಿಗೆ ಗೊತ್ತಾಗುವದು; 24 ಅವರ ಹೊಲಸುತನಕ್ಕೂ ದುರಾಚಾರಗಳಿಗೂ ತಕ್ಕಂತೆ ನಾನು ಅವರನ್ನು ದಂಡಿಸಿ ಅವರಿಗೆ ವಿಮುಖನಾದೆನು. 25 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನನ್ನ ಪವಿತ್ರನಾಮಕ್ಕೆ ಇನ್ನು ಅಪಕೀರ್ತಿ ಬಾರದಂತೆ ನಾನು ಈಗ ಆಗ್ರಹವುಳ್ಳವನಾಗಿ ಯಾಕೋಬ್ಯರ ದುರವಸ್ಥೆಯನ್ನು ತಪ್ಪಿಸಿ ಇಸ್ರಾಯೇಲ್ ವಂಶದವರಿಗೆಲ್ಲಾ ಕೃಪೆತೋರಿಸುವೆನು; 26 ನಾನು ನನ್ನ ಜನರನ್ನು ಅನ್ಯಜನಾಂಗಗಳ ವಶದಿಂದ ತಪ್ಪಿಸಿ ಆ ಶತ್ರುಗಳ ದೇಶಗಳಿಂದ ಒಟ್ಟುಗೂಡಿಸಿ ಬಹು ಜನಾಂಗಗಳ ಕಣ್ಣೆದುರಿಗೆ ಅವರ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಂಡ ನಂತರ 27 ಅವರು ಸ್ವದೇಶದಲ್ಲಿ ಯಾರ ಭಯವೂ ಇಲ್ಲದೆ ನೆಮ್ಮದಿಯಿಂದ ವಾಸಿಸುತ್ತಿರುವಾಗ ತಾವು ನನಗೆ ಮಾಡಿದ ಎಲ್ಲಾ ದ್ರೋಹಗಳ ಹೊರೆಯನ್ನು ಹೊರುತ್ತಾ ನಾಚಿಕೆಪಡುವರು. 28 ನಾನು ಅವರನ್ನು ಜನಾಂಗಗಳೊಳಗೆ ಸೆರೆಹೋಗುವಂತೆ ಮಾಡಿ ಆಮೇಲೆ ಒಟ್ಟುಗೂಡಿಸಿ ಸ್ವದೇಶಕ್ಕೆ ತಂದದರಿಂದ ನಾನೇ ತಮ್ಮ ದೇವರಾದ ಯೆಹೋವನು ಎಂದು ದೃಢಮಾಡಿಕೊಳ್ಳುವರು. ಅವರಲ್ಲಿ ಯಾರನ್ನೂ ಸೆರೆಯಲ್ಲಿ ಬಿಟ್ಟುಬಿಡೆನು. 29 ಇನ್ನೆಂದಿಗೂ ಅವರಿಗೆ ವಿಮುಖನಾಗೆನು; ಇಸ್ರಾಯೇಲ್ ವಂಶದ ಮೇಲೆ ನನ್ನ ಆತ್ಮವನ್ನು ಸುರಿಸಿದ್ದೇನಷ್ಟೆ; ಇದು ಕರ್ತನಾದ ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India