Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 33 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲಿನ ಜೀರ್ಣೋದ್ಧಾರದ ದೈವೋಕ್ತಿಗಳು ( 33—39 ) ಕಾವಲುಗಾರನ ಮೇಲೆ ಬಿದ್ದ ಭಾರವು

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

2 ನರಪುತ್ರನೇ, ನಿನ್ನ ಜನರನ್ನು ಸಂಬೋಧಿಸಿ ಅವರಿಗೆ ಹೀಗೆ ನುಡಿ - ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ ಆ ದೇಶದವರು ತಮ್ಮಲ್ಲಿ ಆರಿಸಿ ನೇವಿುಸಿಕೊಂಡ ಕಾವಲುಗಾರನು

3 ದೇಶದ ಮೇಲೆ ಬೀಳುವ ಖಡ್ಗವನ್ನು ನೋಡಿದ ಕೂಡಲೆ ಕೊಂಬನ್ನೂದಿ ಸ್ವಜನರನ್ನು ಎಚ್ಚರಿಸಿದರೂ

4 ಕೊಂಬಿನ ಕೂಗನ್ನು ಕೇಳಿದ ಯಾವನೇ ಆಗಲಿ ಎಚ್ಚರಗೊಳ್ಳದೆ ಬೀಳುವ ಖಡ್ಗಕ್ಕೆ ಸಿಕ್ಕಿ ನಾಶವಾದರೆ ತನ್ನ ಮರಣಕ್ಕೆ ತಾನೇ ಕಾರಣ.

5 ಅವನು ಕೊಂಬಿನ ಕೂಗನ್ನು ಕೇಳಿಯೂ ಎಚ್ಚರಗೊಳ್ಳಲಿಲ್ಲವಷ್ಟೆ; ತನ್ನ ಮರಣಕ್ಕೆ ತಾನೇ ಕಾರಣನು; ಎಚ್ಚರಗೊಂಡಿದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದನು.

6 ಆದರೆ ಕಾವಲುಗಾರನು ಬೀಳುವ ಖಡ್ಗವನ್ನು ನೋಡಿಯೂ ಕೊಂಬನ್ನೂದದೆ ಸ್ವಜನರನ್ನು ಎಚ್ಚರಿಸದೆ ಇರುವಲ್ಲಿ ಖಡ್ಗವು ಬಿದ್ದು ಆ ಜನರೊಳಗೆ ಯಾವನನ್ನೇ ಆಗಲಿ ನಾಶಮಾಡಿದರೆ ತನ್ನ ಅಧರ್ಮದಲ್ಲೇ ನಾಶಗೊಂಡ ಆ ಮನುಷ್ಯನ ಮರಣಕ್ಕೆ ಹೊಣೆಯಾದ ಕಾವಲುಗಾರನಿಗೆ ಮುಯ್ಯಿತೀರಿಸುವೆನು.

7 ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ ನೇವಿುಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ದೂತನಾಗಿ ಅವರನ್ನು ಎಚ್ಚರಪಡಿಸು.

8 ನಾನು ದುಷ್ಟನಿಗೆ - ದುಷ್ಟನೇ, ಸತ್ತೇಸಾಯುವಿ ಎಂದು ನುಡಿಯುವಾಗ ನೀನು ಆ ದುಷ್ಟನನ್ನು ತನ್ನ ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಪಡಿಸದೆ ಹೋದರೆ ಅವನು ತನ್ನ ಅಪರಾಧದಿಂದಲೇ ಸಾಯಬೇಕಾಗುವದು; ಅವನ ಮರಣಕ್ಕೆ ಹೊಣೆಯಾದ ನಿನಗೆ ನಾನು ಮುಯ್ಯಿತೀರಿಸುವೆನು.

9 ಆದರೆ ನೀನು ದುಷ್ಟನನ್ನು ದುರ್ಮಾಗದಿಂದ ತಪ್ಪಿಸಲು ಅವನನ್ನು ಎಚ್ಚರಿಸಿದರೂ ಅವನು ಅದನ್ನು ಬಿಡದೆಹೋದರೆ ತನ್ನ ಅಪರಾಧದಲ್ಲೇ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.


ದೇವರು ತನ್ನ ಜನರನ್ನು ಸನ್ಮಾರ್ಗಹಿಡಿಯುವಂತೆ ಪ್ರೇರಿಸಿದ್ದು

10 ನರಪುತ್ರನೇ, ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ - ಅಯ್ಯೋ, ನಮ್ಮ ದ್ರೋಹಗಳ ಮತ್ತು ಪಾಪಗಳ ಭಾರವು ನಮ್ಮ ಮೇಲೆ ಬಿದ್ದಿದೆ; ಅವುಗಳಿಂದ ಕ್ಷೀಣವಾಗಿ ಹೋಗುತ್ತಿದ್ದೇವೆ; ನಾವು ಹೇಗೆ ಉಳಿದೇವು ಅಂದುಕೊಳ್ಳುತ್ತೀರಲ್ಲಾ.

11 ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ. ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿರಿ, ಬಿಟ್ಟುಬಿಡಿರಿ; ನೀವು ಸಾಯಲೇಕೆ? ಇದು ಕರ್ತನಾದ ಯೇಹೋವನ ನುಡಿ.

12 ನರಪುತ್ರನೇ, ಜನರಿಗೆ ಹೀಗೆ ಹೇಳು - ಶಿಷ್ಟನು ದ್ರೋಹಮಾಡಿದ್ದಲ್ಲಿ ಅವನ ಪುಣ್ಯವು ಅವನನ್ನು ಉದ್ಧರಿಸದು; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ ಅವನ ಪಾಪವು ಅವನನ್ನು ಬೀಳಿಸದು; ಶಿಷ್ಟನು ಪಾಪಮಾಡಿದಲ್ಲಿ ಅವನ ಪುಣ್ಯವು ಅವನನ್ನು ಉಳಿಸಲಾರದು.

13 ನಾನು ಶಿಷ್ಟನಿಗೆ - ನೀನು ಬಾಳೇ ಬಾಳುವಿ ಎಂದು ಹೇಳಲು ಅವನು ತನ್ನ ಪುಣ್ಯದ ಮೇಲೆ ಭರವಸವಿಟ್ಟು ಪಾಪ ಮಾಡಿದರೆ ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು; ಅವನು ಮಾಡುವ ಪಾಪದಿಂದಲೇ ಅವನು ಸಾಯುವನು.

14 ನಾನು ದುಷ್ಟನಿಗೆ - ನೀನು ಸತ್ತೇ ಸಾಯುವಿ ಎಂದು ಹೇಳಲು ಅವನು ತನ್ನ ಪಾಪವನ್ನು ಬಿಟ್ಟು ನೀತಿನ್ಯಾಯಗಳನ್ನು ನಡಿಸುವ ಪಕ್ಷದಲ್ಲಿ,

15 ಅಂದರೆ ಆ ದುಷ್ಟನು ಒತ್ತೆಯನ್ನು ಬಿಗಿಹಿಡಿಯದೆ ದೋಚಿಕೊಂಡದ್ದನ್ನು ಹಿಂದಕ್ಕೆ ಕೊಟ್ಟು ಜೀವಾಧಾರವಾದ ವಿಧಿಗಳನ್ನು ಅನುಸರಿಸಿ ಸಕಲ ದುಷ್ಕರ್ಮಗಳಿಗೂ ದೂರನಾಗಿರುವ ಪಕ್ಷದಲ್ಲಿ ಸಾಯನು, ಬಾಳೇಬಾಳುವನು.

16 ಅವನು ಮಾಡಿದ ಯಾವ ಪಾಪವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು; ನೀತಿನ್ಯಾಯಗಳನ್ನು ನಡಿಸುತ್ತಿದ್ದಾನಲ್ಲಾ; ಬಾಳೇಬಾಳುವನು.

17 ಆದರೆ ನಿನ್ನ ಜನರು ಕರ್ತನ ಕ್ರಮವು ಸಮವಲ್ಲವೆಂದು ಹೇಳುತ್ತಿದ್ದಾರೆ, ಅವರ ಕ್ರಮವೇ ಸಮವಲ್ಲವಷ್ಟೆ.

18 ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮಮಾಡಿದರೆ ಆ ಅಧರ್ಮದಿಂದಲೇ ಸಾಯುವನು.

19 ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನೀತಿನ್ಯಾಯಗಳನ್ನು ನಡಿಸಿದರೆ ಅವುಗಳಿಂದ ಉಳಿಯುವನು.

20 ಆದರೆ ನೀವು ಯೆಹೋವನ ಕ್ರಮವು ಸಮವಲ್ಲವೆಂದು ಹೇಳುತ್ತಿದ್ದೀರಿ; ಇಸ್ರಾಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುಮಾಡುವೆನು.


ಯೆಹೂದ ದೇಶದಲ್ಲಿ ಉಳಿದವರ ದುರಾಚಾರವೂ ದುರ್ಗತಿಯೂ

21 ನಾವು ಸೆರೆಯಾಗಿ ಹನ್ನೆರಡನೆಯ ವರುಷದ ಹತ್ತನೆಯ ತಿಂಗಳಿನ ಐದನೆಯ ದಿನದಲ್ಲಿ ಯೆರೂಸಲೇವಿುನಿಂದ ಪಲಾಯನಮಾಡಿದವನೊಬ್ಬನು ನನ್ನ ಬಳಿಗೆ ಬಂದು - ಪಟ್ಟಣವು ಶತ್ರುವಶವಾಯಿತು ಎಂದು ಹೇಳಿದನು.

22 ಅವನು ಬರುವದಕ್ಕೆ ಹಿಂದಿನ ಸಾಯಂಕಾಲ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು ಯೆಹೋವನು ಆ ಪಲಾಯಿತನು ಬೆಳಿಗ್ಗೆ ಬರುವನೆಂದು ನನ್ನ ಬಾಯನ್ನು ಬಿಚ್ಚಿದ್ದನು; ಹೌದು, ನನ್ನ ಬಾಯಿ ಬಿಚ್ಚಿತು, ನನ್ನ ಮೂಕತನವು ಹೋಯಿತು.

23 ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

24 ನರಪುತ್ರನೇ, ಇಸ್ರಾಯೇಲ್ ಸೀಮೆಯ ಹಾಳು ಪ್ರದೇಶಗಳಲ್ಲಿ ವಾಸಿಸುವವರು - ಅಬ್ರಹಾಮನು ಒಂಟಿಗನಾಗಿದ್ದರೂ ಈ ದೇಶವು ಅವನಿಗೆ ಸ್ವಾಸ್ತ್ಯವಾಗಿ ಸಿಕ್ಕಿತಲ್ಲಾ; ಅದು ಬಹುಜನರಾದ ನಮಗೆ ಸ್ವಾಸ್ತ್ಯವಾಗಿ ಸಿಕ್ಕಿದ್ದು ಏನು ದೊಡ್ಡದು ಅಂದುಕೊಳ್ಳುತ್ತಿದ್ದಾರೆ.

25 ಆದದರಿಂದ ನೀನು ಅವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುತ್ತೀರಿ, ಬೊಂಬೆಗಳ ಕಡೆಗೆ ಕಣ್ಣೆತ್ತುತ್ತೀರಿ; ರಕ್ತವನ್ನು ಸುರಿಸುತ್ತೀರಿ; ನಿಮ್ಮಂಥವರು ದೇಶವನ್ನು ಅನುಭವಿಸಬಹುದೇ?

26 ನೀವು ಕತ್ತಿಯಲ್ಲೇ ನಿರತರಾಗಿದ್ದೀರಿ, ದುರಾಚಾರನಡಿಸುತ್ತೀರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ನೆರೆಯವನ ಹೆಂಡತಿಯನ್ನು ಕೆಡಿಸುತ್ತಾನೆ; ನಿಮ್ಮಂಥವರು ದೇಶವನ್ನು ಅನುಭವಿಸಬಹುದೋ?

27 ಮತ್ತು ಅವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನನ್ನ ಜೀವದಾಣೆ, ಹಾಳು ಪ್ರದೇಶಗಳಲ್ಲಿರುವವರನ್ನು ಖಡ್ಗವು ಹತಿಸುವದು; ಬೈಲಿನಲ್ಲಿರುವವರನ್ನು ನಾನು ಮೃಗಗಳಿಗೆ ತುತ್ತುಮಾಡುವೆನು; ಗುಹೆ ದುರ್ಗಗಳಲ್ಲಿರುವವರನ್ನು ವ್ಯಾಧಿಯು ಸಾಯಿಸುವದು.

28 ನಾನು ದೇಶವನ್ನು ಹಾಳುಪಾಳುಮಾಡುವೆನು, ಅದರ ಶಕ್ತಿಯ ಮದವು ಇಳಿದುಹೋಗುವದು; ಇಸ್ರಾಯೇಲಿನ ಮಲೆನಾಡು ಬೀಡುಬೀಳುವದು; ಯಾರೂ ಅಲ್ಲಿ ಹಾದುಹೋಗರು.

29 ಅವರು ನಡಿಸಿದ ಬಹುದುರಾಚಾರಗಳ ನಿವಿುತ್ತ ನಾನು ದೇಶವನ್ನು ಹಾಳುಪಾಳುಮಾಡಿದಾಗ ನಾನೇ ಯೆಹೋವನು ಎಂದು ಅವರಿಗೆ ದೃಢವಾಗುವದು.


ಅಶ್ರದ್ಧೆಯ ಶ್ರವಣ

30 ನರಪುತ್ರನೇ, ನಿನ್ನ ಜನರು ಗೋಡೆಗಳ ನೆರಳಿನಲ್ಲಿಯೂ ಮನೆಯ ಬಾಗಿಲುಗಳಲ್ಲಿಯೂ ನಿನ್ನ ಪ್ರಸ್ತಾಪವನ್ನೆತ್ತಿ ಪರಸ್ಪರವಾಗಿ ಒಬ್ಬರಿಗೊಬ್ಬರು - ಯೆಹೋವನ ಬಾಯಿಂದ ಹೊರಟ ಮಾತೇನು ಕೇಳೋಣ ಬನ್ನಿರಿ ಎಂದು ಹೇಳಿಕೊಳ್ಳುತ್ತಿದ್ದಾರೆ.

31 [ಪ್ರಶ್ನೆ ಕೇಳುವದಕ್ಕೆ] ಬರುವ ಜನರಂತೆ ಅವರು ನಿನ್ನ ಬಳಿಗೆ ಬಂದು ನನ್ನ ಭಕ್ತರಾಗಿ ನಿನ್ನ ಮುಂದೆ ಕೂತುಕೊಂಡು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಕೈಕೊಳ್ಳುವದಿಲ್ಲ; ಬಾಯಿಂದ ಬಹುಪ್ರೀತಿಯನ್ನು ತೋರಿಸುತ್ತಾರೆ. ಅವರ ಮನಸ್ಸೇನೋ ತಾವು ದೋಚಿಕೊಂಡದರ ಮೇಲೆ ಹೋಗುತ್ತದೆ.

32 ಇಗೋ, ನಿನ್ನ ಮಾತು ಅವರ ಎಣಿಕೆಯಲ್ಲಿ ಒಬ್ಬ ಸಂಗೀತಗಾರನು ವಾದ್ಯವನ್ನು ಜಾಣತನದಿಂದ ಬಾರಿಸಿ ಮಧುರಸ್ವರದಿಂದ ಹಾಡುವ ಪ್ರೇಮಗೀತಕ್ಕೆ ಸಮಾನವಾಗಿದೆ; ನಿನ್ನ ಮಾತುಗಳನ್ನು ಕೇಳುತ್ತಾರೆ ಆದರೆ ಕೈಕೊಳ್ಳುವದಿಲ್ಲ.

33 ನೀನು ಮುಂತಿಳಿಸಿದ್ದು ಸಂಭವಿಸುವಾಗ [ಆಹಾ, ಸಂಭವಿಸಿತು] ತಮ್ಮ ಮಧ್ಯದಲ್ಲಿದ್ದವನು ಪ್ರವಾದಿಯೇ ಎಂದು ಅವರಿಗೆ ನಿಶ್ಚಿತವಾಗುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು