Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 12 - ಕನ್ನಡ ಸತ್ಯವೇದವು J.V. (BSI)


ಯೆಹೂದದ ನಾಶನವು ಖಂಡಿತ ( 12—19 ) ಯೆಹೂದದ ರಾಜಪ್ರಜೆಗಳ ಸೆರೆಯ ಸೂಚನೆ

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

2 ನರಪುತ್ರನೇ, ನೀನು ದ್ರೋಹಿವಂಶದ ಮಧ್ಯದಲ್ಲಿ ವಾಸಿಸುತ್ತೀ, ಆ ವಂಶದವರು ದ್ರೋಹಿಗಳಾಗಿರುವದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.

3 ನರಪುತ್ರನೇ, ವಲಸೆಹೋಗುವದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೆ ಹೊರಡು, ಅಂದರೆ ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು; ಅವರು ದ್ರೋಹಿವಂಶದವರಾಗಿದ್ದರೂ ಒಂದು ವೇಳೆ ಮನಸ್ಸಿಗೆ ತಂದಾರು.

4 ನೀನು ನಿನ್ನ ಸಾಮಾನನ್ನು ವಲಸೆಯ ಸಾಮಗ್ರಿಯನ್ನೋ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಈಚೆಗೆ ಹಾಕಿ ವಲಸೆಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮ ಹೊರಟುಹೋಗು.

5 ಅವರು ನೋಡುತ್ತಿರುವಾಗ ನೀನು ಗೋಡೆಯನ್ನು ತೋಡಿ ಕಂಡಿಯ ಮೂಲಕ ನಿನ್ನ ಸಾಮಾನನ್ನು ಸಾಗಿಸಿಕೊಂಡು ಹೋಗು.

6 ಅವರ ಕಣ್ಣ ಮುಂದೆ ಅದನ್ನು ಹೆಗಲ ಮೇಲೆ ಹಾಕಿ ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮೋರೆಯನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಾಯೇಲ್ ವಂಶದವರಿಗೆ ಮುಂಗುರುತನ್ನಾಗಿ ಮಾಡಿದ್ದೇನೆ.

7 ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆನು; ಹಗಲಿನಲ್ಲಿ ನನ್ನ ಸಾಮಾನನ್ನು ವಲಸೆಯ ಸಾಮಗ್ರಿಯನ್ನೋ ಎಂಬಂತೆ ಮನೆಯೊಳಗಿಂದ ಈಚೆಗೆ ಹಾಕಿ ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯನ್ನು ಕಂಡಿಮಾಡಿ ಕತ್ತಲಲ್ಲಿ ಆ ಸಾಮಾನನ್ನು ಆಚೆಗೆ ಸಾಗಿಸಿ ಅವರ ಕಣ್ಣಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆನು.

8 ಬೆಳಿಗ್ಗೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು -

9 ನರಪುತ್ರನೇ, ದ್ರೋಹಿವಂಶದವರಾದ ಇಸ್ರಾಯೇಲ್ಯರು - ನೀನು ಏನು ಮಾಡುತ್ತೀ ಎಂದು ನಿನ್ನನ್ನು ಕೇಳಿದ್ದಾರಲ್ಲವೆ.

10 ನೀನು ಅವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಈ ಹೊರೆಯು ಯೆರೂಸಲೇವಿುನಲ್ಲಿರುವ ಪ್ರಭುವಿಗೂ ಅಲ್ಲಿನ ಇಸ್ರಾಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ.

11 ಇದನ್ನೂ ನುಡಿ - ನಾನು ನಿಮಗೆ ಮುಂಗುರುತಾಗಿದ್ದೇನೆ; ನಾನು ಮಾಡಿದಂತೆಯೇ ಅವರಿಗಾಗುವದು; ಅವರು ವಲಸೆಯಾಗಿ ಸೆರೆಹೋಗುವರು.

12 ಅವರಲ್ಲಿನ ಪ್ರಭುವು ಹೆಗಲಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟುಹೋಗುವನು; ಅವರು ಗೋಡೆಯನ್ನು ತೋಡಿ ಕಂಡಿಯ ಮೂಲಕ ತಮ್ಮ ಸಾಮಾನನ್ನು ಆಚೆಗೆ ಸಾಗಿಸುವರು; ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂವಿುಯು ಅವನ ಕಣ್ಣಿಗೆ ಕಾಣಿಸದು.

13 ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರ್ಲಿನಲ್ಲಿ ಸಿಕ್ಕಿಬೀಳುವನು; ಕಸ್ದೀಯ ದೇಶದ ಬಾಬೆಲಿಗೆ ಅವನನ್ನು ಒಯ್ಯುವೆನು, ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡನು.

14 ಅವನ ಸುತ್ತಲಿನ ಸಕಲ ಸಹಾಯಕರನ್ನೂ ಅವನ ಸಮಸ್ತ ವ್ಯೂಹಗಳವರನ್ನೂ ನಾನು ಎಲ್ಲಾ ಕಡೆಯ ಗಾಳಿಗೂ ತೂರಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.

15 ನಾನು ಅವರನ್ನು ಜನಾಂಗಗಳೊಳಗೆ ಚದರಿಸಿಬಿಟ್ಟು ಅನ್ಯದೇಶಗಳಲ್ಲಿ ಚಲ್ಲಾಪಿಲ್ಲಿಮಾಡುವಾಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವದು.

16 ನಾನು ಕೆಲವರನ್ನು ಖಡ್ಗ ಕ್ಷಾಮವ್ಯಾಧಿಗಳಿಂದ ಉಳಿಸಿ ಅವರು ತಮ್ಮ ಅಸಹ್ಯಕಾರ್ಯಗಳ ವಿಷಯವನ್ನು ತಾವು ಸೇರಿದ ಜನಾಂಗಗಳಲ್ಲಿ ತಿಳಿಸುವದಕ್ಕೆ ಅವಕಾಶಮಾಡುವೆನು; ನಾನೇ ಯೆಹೋವನು ಎಂದು ಆ ಜನಾಂಗಗಳಿಗೂ ಗೊತ್ತಾಗುವದು.

17 ಇದಲ್ಲದೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

18 ನರಪುತ್ರನೇ, ನೀನು ಅನ್ನವನ್ನು ನಡುಕದಿಂದ ತಿಂದು ನೀರನ್ನು ಅದರುಬೆದರಿನಿಂದ ಕುಡಿದು

19 ಈ ದೇಶದಲ್ಲಿರುವ ಜನರಿಗೆ ಹೀಗೆ ಹೇಳು - ಕರ್ತನಾದ ಯೆಹೋವನು ಇಸ್ರಾಯೇಲ್ ದೇಶದ ಯೆರೂಸಲೇವಿುನ ನಿವಾಸಿಗಳ ವಿಷಯವಾಗಿ ಇಂತೆನ್ನುತ್ತಾನೆ - ಅವರು ಅನ್ನವನ್ನು ಬೆದರಿನಿಂದ ತಿಂದು ನೀರನ್ನು ಬೆರಗಿನಿಂದ ಕುಡಿಯುವರು; ಏಕಂದರೆ ಆ ದೇಶದವರೆಲ್ಲರು ಬಲಾತ್ಕಾರಿಗಳಾಗಿರುವದರಿಂದ ಅಲ್ಲಿನ ಸೊತ್ತೆಲ್ಲಾ ಸೂರೆಯಾಗಿ ದೇಶವು ಬರಿದಾಗುವದು.

20 ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಯೆಹೂದ್ಯರ ಭರವಸದ ಖಂಡನೆ

21 ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

22 ನರಪುತ್ರನೇ, ಕ್ಲುಪ್ತಕಾಲವು ದೂರದೂರ ಹೋಗುತ್ತಲಿದೆ, ದಿವ್ಯದರ್ಶನಗಳೆಲ್ಲಾ ನಿರರ್ಥಕ ಎಂಬದಾಗಿ ಇಸ್ರಾಯೇಲ್ ದೇಶದವರು ಆಡಿಕೊಳ್ಳುವ ಈ ಗಾದೆ ಏನು?

23 ಅವರಿಗೆ ಹೀಗೆ ಹೇಳು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಈ ಗಾದೆಯನ್ನು ನಿಲ್ಲಿಸಿ ಬಿಡುವೆನು, ಅದು ಇಸ್ರಾಯೇಲಿನಲ್ಲಿ ಇನ್ನು ಸಲ್ಲದು; ನಾನು ನುಡಿಯುವ ಈ ಮಾತನ್ನು ಕೇಳಿರಿ - ಕ್ಲುಪ್ತಕಾಲವು ಹತ್ತಿರಿಸಿದೆ, ದಿವ್ಯದರ್ಶನಗಳೆಲ್ಲಾ ಸಾರ್ಥಕವಾಗುವದು ಸಮೀಪ.

24 ಇನ್ನು ಮೇಲೆ ಇಸ್ರಾಯೇಲ್ ವಂಶದವರಲ್ಲಿ ಯಾರಿಗೂ ವಿುಥ್ಯಾದರ್ಶನವಾಗದು, ಮೋಸದ ಕಣಿಯೂ ಇರದು.

25 ನಾನೇ ಯೆಹೋವನು; ನಾನು ನುಡಿದೇ ನುಡಿಯುವೆನು; ನಾನು ನುಡಿದ ಮಾತು ನೆರವೇರುವದು, ಇನ್ನು ನಿಧಾನವಾಗದು; ದ್ರೋಹಿ ವಂಶದವರೇ, ನಾನು ನಿಮ್ಮ ಕಾಲದಲ್ಲಿ ನುಡಿಯುವದು ಮಾತ್ರವಲ್ಲದೆ ನುಡಿದದ್ದನ್ನು ನೆರವೇರಿಸುವೆನು; ಇದು ಕರ್ತನಾದ ಯೆಹೋವನ ವಾಕ್ಯ.

26 ಮತ್ತು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

27 ನರಪುತ್ರನೇ, ಇಗೋ ಇಸ್ರಾಯೇಲ್‍ವಂಶದವರು - ಇವನಿಗಾದ ದಿವ್ಯದರ್ಶನವು ಮುಂದೆ ಬಹುದೂರ ಕಾಲಕ್ಕೆ ಸಂಬಂಧಪಟ್ಟದ್ದು; ಬಹಳ ದಿನಗಳ ಮೇಲೆ ಆಗತಕ್ಕದ್ದನ್ನು ಮುಂತಿಳಿಸುತ್ತಾನೆ ಎಂದು ಹೇಳುತ್ತಾರೆ.

28 ಆದಕಾರಣ ನೀನು ಅವರಿಗೆ ಹೀಗೆ ಹೇಳು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇನ್ನು ಮೇಲೆ ನನ್ನ ಮಾತುಗಳಲ್ಲಿ ಯಾವದೂ ಸಾವಕಾಶವಾಗದು; ನಾನಾಡುವ ಮಾತು ನೆರವೇರುವದು ಖಂಡಿತ; ಇದು ಕರ್ತನಾದ ಯೆಹೋವನ ನುಡಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು