ಯೆಶಾಯ 7 - ಕನ್ನಡ ಸತ್ಯವೇದವು J.V. (BSI)ಒಪ್ಪಂದದಿಂದ ಕೂಡಿದ ಶತ್ರುಗಳಿಗೆ ಭಯಪಡದೆ ಯೆಹೋವನನ್ನೇ ಆಶ್ರಯಿಸಬೇಕೆಂದು ಯೆಶಾಯನು ಆಹಾಜನಿಗೆ ಬೋಧಿಸಿ ವರಪುತ್ರಜನನದ ಗುರುತನ್ನು ಮುಂತಿಳಿಸಿದ್ದು 1 ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಪೆಕಹ ಎಂಬವರು ಯೆರೂಸಲೇವಿುನ ಮೇಲೆ ದಂಡೆತ್ತಿ ಬಂದರು. (ಅದನ್ನು ಜಯಿಸುವದಕ್ಕೆ ಆಗಲಿಲ್ಲ.) 2 ಅರಾಮ್ಯರು ಎಫ್ರಾಯೀಮ್ಯರನ್ನು ಹೊಂದಿಕೊಂಡಿದ್ದಾರೆಂಬ ಸುದ್ದಿಯು ಅರಮನೆಗೆ ಮುಟ್ಟಿದಾಗ ಅರಸನ ಮನವೂ ಪ್ರಜೆಯ ಮನವೂ ಗಾಳಿಯಿಂದ ವನವೃಕ್ಷಗಳು ಅಲ್ಲಾಡುವಂತೆ ನಡುಗಿದವು. 3 ಆಗ ಯೆಹೋವನು ಯೆಶಾಯನಿಗೆ ಹೀಗೆ ಹೇಳಿದನು - ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ರಾಜಮಾರ್ಗದಲ್ಲಿ ಮೇಲಿನ ಕೆರೆಯ ಕಾಲಿವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು 4 ಅವನಿಗೆ ಈ ಪ್ರಕಾರ ಹೇಳಬೇಕು - ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ! ರೆಚೀನ ಅರಾಮ್ಯರು ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಗೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ. 5 ಅರಾಮ್ಯರೂ ಎಫ್ರಾಯೀಮ್ಯರೂ ರೆಮಲ್ಯನ ಮಗನೂ ನಿನ್ನ ವಿಷಯವಾಗಿ ದುರಾಲೋಚನೆಮಾಡಿ 6 ಯೆಹೂದದ ಮೇಲೆ ದಂಡೆತ್ತಿ ಹೆದರಿಸಿ ಒಳಗೆ ನುಗ್ಗಿಕೊಂಡು ಹೋಗಿ ಅದರಲ್ಲಿ ಟಾಬೇಲನ ಮಗನಿಗೆ ಪಟ್ಟಕಟ್ಟೋಣವೆಂದುಕೊಂಡದ್ದರಿಂದ 7 ಕರ್ತನಾದ ಯೆಹೋವನು ಹೇಳುವದೇನಂದರೆ - ಇದು ನೆರವೇರದು, ಆಗುವದೇ ಇಲ್ಲ. 8 ಅರಾವಿುಗೆ ಶಿರಸ್ಸು ದಮಸ್ಕ, ದಮಸ್ಕಕ್ಕೆ ಶಿರಸ್ಸು ರೆಚೀನನಷ್ಟೆ; ಎಫ್ರಾಯೀವಿುಗೆ ಶಿರಸ್ಸು ಸಮಾರ್ಯ, ಸಮಾರ್ಯಕ್ಕೆ ಶಿರಸ್ಸು ರೆಮಲ್ಯನ ಮಗನೇ ತಾನೆ. 9 ಅರುವತ್ತೈದು ವರುಷಗಳೊಳಗೆ ಎಫ್ರಾಯೀಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು. ನಿಮಗೆ ನಂಬಿಕೆಯು ಸ್ಥಿರವಿಲ್ಲದಿದ್ದರೆ ನಿಮಗೆ ಸ್ಥಿರತೆಯೇ ಇಲ್ಲ ಎಂಬದೇ. 10-11 ಮತ್ತೆ ಯೆಹೋವನು ಆಹಾಜನಿಗೆ - ನಿನ್ನ ದೇವರಾದ ಯೆಹೋವನಿಂದ ಒಂದು ಗುರುತನ್ನು ಕೇಳಿಕೋ; ಅದು ಪಾತಾಳದಷ್ಟು ಆಳದಲ್ಲಿದ್ದರೂ ಮೇಲಣ ಲೋಕದಷ್ಟು ಎತ್ತರದಲ್ಲಿದ್ದರೂ ಕೇಳಿಕೋ ಎಂದು ಹೇಳಿದನು. 12 ಆಗ ಆಹಾಜನು, ನಾನು ಕೇಳಿಕೊಳ್ಳುವದೇ ಇಲ್ಲ. ಯೆಹೋವನನ್ನು ಪರೀಕ್ಷಿಸುವದಿಲ್ಲ ಅಂದನು. 13 ಅದಕ್ಕೆ [ಯೆಶಾಯನು] ಹೀಗೆ ಹೇಳಿದನು - ದಾವೀದನ ಮನೆತನದವರೇ, ಕೇಳಿರಿ! ಮನುಷ್ಯರನ್ನು ಬೇಸರಗೊಳಿಸುವದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವರನ್ನೂ ಬೇಸರಗೊಳಿಸುವಿರಾ? 14 ಇದರಿಂದ ಕರ್ತನು ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವಳು. 15 ಅವನು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವಾಗ ಮೊಸರನ್ನೂ ಜೇನತುಪ್ಪವನ್ನೂ ತಿನ್ನುವನು. 16 ಆ ಮಗುವು ಕೆಟ್ಟದ್ದು ಬೇಡ, ಒಳ್ಳೇದು ಬೇಕು ಅನ್ನುವಷ್ಟು ಬಲ್ಲವನಾಗುವದರೊಳಗೆ, ಯಾವ ಇಬ್ಬರು ರಾಜರಿಗೆ ನೀನು ಹೆದರಿ ನಡುಗುತ್ತೀಯೋ ಅವರ ದೇಶವು ನಿರ್ಜನವಾಗುವದು. 17 ಮತ್ತು ಯೆಹೂದದಿಂದ ಎಫ್ರಾಯೀಮು ಅಗಲಿದಂದಿನಿಂದ ಈಚೆಗೆ ಸಂಭವಿಸಿದ ದುಷ್ಕಾಲವನ್ನು ಯೆಹೋವನು ನಿನ್ನ ಮೇಲೂ ನಿನ್ನ ಪ್ರಜೆಯ ಮೇಲೂ ನಿನ್ನ ತಂದೆಯ ಮನೆತನದ ಮೇಲೂ ಬರಮಾಡುವನು; ಆ ದುಷ್ಕಾಲವು ಅಶ್ಶೂರದ ಅರಸೇ. 18 ಆ ಕಾಲದಲ್ಲಿ ಐಗುಪ್ತದ ನದಿಗಳ ಕಟ್ಟಕಡೆಯಲ್ಲಿನ ನೊಣಗಳೂ ಅಶ್ಶೂರ್ದೇಶದ ತುಂಬಿಗಳೂ ಬರಲೆಂದು ಯೆಹೋವನು ಸಿಳ್ಳುಹಾಕುವನು. 19 ಅವೆಲ್ಲಾ ಬಂದು ಕಡಿದಾದ ಡೊಂಗರಗಳಲ್ಲಿಯೂ ಬಂಡೆಗಳ ಸಂದುಗೊಂದುಗಳಲ್ಲಿಯೂ ಎಲ್ಲಾ ಮುಳ್ಳುಪೊದೆಗಳಲ್ಲಿಯೂ ಗೋಮಾಳಗಳಲ್ಲಿಯೂ ಮುತ್ತಿಕೊಳ್ಳುವವು. 20 ಆಗ ಕರ್ತನು ಯೂಫ್ರೇಟೀಸ್ ನದಿಯ ಆಚೆಗಿರುವ ಅಶ್ಶೂರದ ರಾಜನೆಂಬ ಬಾಡಿಗೆಯ ಕ್ಷೌರದ ಕತ್ತಿಯಿಂದ [ಯೆಹೂದದ] ತಲೆಯನ್ನೂ ಕಾಲಕೂದಲನ್ನೂ ಬೋಳಿಸುವನು; ಅದು ಗಡ್ಡವನ್ನು ಸಹ ತೆಗೆದುಬಿಡುವದು. 21 ಆ ಕಾಲದಲ್ಲಿ ಯಾವನೇ ಆಗಲಿ ಹಸುವಿನ ಕಡಸನ್ನೂ ಎರಡು ಕುರಿಗಳನ್ನೂ ಸಾಕಿ 22 ಅವು ಕರೆಯುವ ಹೆಚ್ಚು ಹಾಲಿನಿಂದ ಮೊಸರನ್ನು ತಿನ್ನುವನು; ದೇಶದಲ್ಲಿ ಉಳಿದ ಪ್ರತಿಯೊಬ್ಬನೂ ಮೊಸರುಜೇನುಗಳನ್ನೇ ಉಂಡು ಜೀವಿಸುವನು. 23 ಆಗ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷೆಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶದಲ್ಲಿಯೂ ಮುಳ್ಳುಗಿಳ್ಳು ಮುಚ್ಚಿಕೊಂಡು ಹೋಗುವದು. 24 ದೇಶವೆಲ್ಲಾ ಮುಳ್ಳುಪೊದೆಯಾಗಿರುವದರಿಂದ ಜನರು ಬಿಲ್ಲುಬಾಣಗಳೊಡನೆ ಸಂಚರಿಸುವರು. 25 ಗುದ್ದಲಿಯಿಂದ ಅಗತೆಮಾಡುತ್ತಿದ್ದ ಯಾವ ಗುಡ್ಡಕ್ಕೂ ನೀನು ಮುಳ್ಳುಕಂಪೆಗಳಿಗೆ ಅಂಜಿ ಬರಲಾರದೆ ಇರುವಿ; ಅದು ದನಗಳನ್ನು ಬಿಡುವದಕ್ಕೂ ಕುರಿಗಳು ತುಳಿದಾಡುವದಕ್ಕೂ ಎಡೆಯಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India