ಯೆಶಾಯ 51 - ಕನ್ನಡ ಸತ್ಯವೇದವು J.V. (BSI)ಯೆಹೋವನು ತನ್ನ ಭಕ್ತರನ್ನು ಧೈರ್ಯಗೊಳಿಸುವದು 1 ಸದ್ಧರ್ಮನಿರತರಾದ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ, ನೀವು ಯಾವ ಬಂಡೆಯೊಳಗಿಂದ ಒಡೆದು ತೆಗೆಯಲ್ಪಟ್ಟಿರಿ, ಯಾವ ಗುಂಡಿಯಿಂದ ತೋಡಲ್ಪಟ್ಟಿರಿ ಎಂಬದನ್ನು ನೋಡಿರಿ. 2 ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮನ್ನು ಹೆತ್ತ ಸಾರಳನ್ನೂ ದೃಷ್ಟಿಸಿರಿ; ಅಬ್ರಹಾಮನು ಒಬ್ಬನೇ ಇದ್ದಾಗ ನಾನು ಅವನನ್ನು ಕರೆದು ಆಶೀರ್ವದಿಸಿ ಸಂತಾನದಿಂದ ಹೆಚ್ಚಿಸಿದೆನಲ್ಲವೆ. 3 ಯೆಹೋವನು ಚೀಯೋನನ್ನು ಸಂತೈಸೇ ಸಂತೈಸುವನು; ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುಧಾರಿಸಿ ಕಾಡುನೆಲವನ್ನು ಏದೆನ್ ಉದ್ಯಾನದಂತೆಯೂ ಬೀಳುಭೂವಿುಯನ್ನು ಯೆಹೋವನ ವನದ ಹಾಗೂ ಕಳಕಳಿಸುವಂತೆ ಮಾಡುವನು; ಹರ್ಷ, ಉಲ್ಲಾಸ, ಸ್ತೋತ್ರ, ಗಾನಧ್ವನಿ, ಇವುಗಳು ಅಲ್ಲಿ ನೆಲೆಯಾಗಿರುವವು. 4 ನನ್ನ ಜನರೇ, ಆಲಿಸಿರಿ! ನನ್ನ ಪ್ರಜೆಗಳೇ, ಕಿವಿಗೊಡಿರಿ! ಧರ್ಮೋಪದೇಶವು ನನ್ನಿಂದ ಹೊರಡುವದು, ನನ್ನ ನ್ಯಾಯಬೋಧನೆಯನ್ನು ಜನಾಂಗಗಳಿಗೆ ಬೆಳಕನ್ನಾಗಿ ಸ್ಥಾಪಿಸುವೆನು. 5 ನನ್ನ ರಕ್ಷಣಧರ್ಮದ ಕಾರ್ಯವು ಸಮೀಪಿಸಿದೆ, ನನ್ನ ವಿಮೋಚನಕ್ರಿಯೆಯು ತಲೆದೋರಿದೆ, ನನ್ನ ಹಸ್ತವು ಜನಾಂಗಗಳಿಗೆ ನ್ಯಾಯತೀರಿಸುವದು; ದ್ವೀಪನಿವಾಸಿಗಳು ನನ್ನನ್ನು ನಿರೀಕ್ಷಿಸಿಕೊಂಡು ನನ್ನ ಹಸ್ತಕಾರ್ಯಕ್ಕೆ ಕಾದಿರುವರು. 6 ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಆಕಾಶಮಂಡಲವನ್ನು ನೋಡಿರಿ, ಕೆಳಗೆ ಭೂಮಂಡಲವನ್ನು ದೃಷ್ಟಿಸಿರಿ; ಆಕಾಶವು ಹೊಗೆಯಂತೆ ಚದರಿ ಹೋಗುವದು, ಭೂವಿುಯು ವಸ್ತ್ರದ ಹಾಗೆ ಜೀರ್ಣವಾಗುವದು, ಭೂನಿವಾಸಿಗಳು ಸೊಳ್ಳೆಗಳೋಪಾದಿಯಲ್ಲಿ ಸಾಯುವರು; ನನ್ನ ವಿಮೋಚನಕ್ರಿಯೆಯೋ ಶಾಶ್ವತವಾಗಿ ನಿಲ್ಲುವದು, ನನ್ನ ರಕ್ಷಣಧರ್ಮದ ಕಾರ್ಯಕ್ಕೆ ಭಂಗವೇ ಇಲ್ಲ. 7 ಧರ್ಮವನ್ನರಿತು ನನ್ನ ಉಪದೇಶವನ್ನು ಹೃದಯದಲ್ಲಿಟ್ಟುಕೊಂಡಿರುವ ಜನರೇ ಕಿವಿಗೊಡಿರಿ, ಮನುಷ್ಯರ ದೂರಿಗೆ ಹೆದರಬೇಡಿರಿ, ಅವರ ದೂಷಣೆಗೆ ಅಂಜದಿರಿ. ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವದು, ಹುಳವು ಅವರನ್ನು ಉಣ್ಣೆಯಂತೆ ಮೆದ್ದುಬಿಡುವದು; 8 ನನ್ನ ರಕ್ಷಣ ಧರ್ಮದ ಕಾರ್ಯವೋ ಶಾಶ್ವತವಾಗಿ ನಿಲ್ಲುವದು, ನನ್ನ ವಿಮೋಚನ ಕ್ರಿಯೆಯು ತಲತಲಾಂತರಕ್ಕೂ ನೆಲೆಯಾಗಿರುವದು. 9 ಯೆಹೋವನ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಬಲವನ್ನು ತಂದುಕೋ! ಪೂರ್ವಕಾಲದಲ್ಲಿ, ಪುರಾತನದ ತಲಾಂತರಗಳಲ್ಲಿ, ಎಚ್ಚರಪಟ್ಟಂತೆ ಈಗಲೂ ಎಚ್ಚತ್ತುಕೋ, ರಹಬನ್ನು ಛೇದಿಸಿ ಘಟಸರ್ಪವನ್ನು ತಿವಿದುಬಿಟ್ಟ ತೋಳು ನೀನಲ್ಲವೆ; 10 ಸಮುದ್ರವನ್ನೂ ಮಹಾಸಾಗರದ ಜಲರಾಶಿಯನ್ನೂ ಬತ್ತಿಸಿ ವಿಮುಕ್ತಜನರು ಹಾದುಹೋಗುವದಕ್ಕೆ ಸಮುದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದ ಬಾಹು ನೀನೇ ಹೌದು. 11 ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು; ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು. 12 ನಾನೇ, ನಾನೇ ನಿನ್ನನ್ನು ಸಂತೈಸುವವನಾಗಿರುವಲ್ಲಿ ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು? 13 ಆಕಾಶಮಂಡಲವನ್ನು ಹರಡಿ ಭೂಲೋಕವನ್ನು ಸ್ಥಾಪಿಸಿದ ನಿನ್ನ ಸೃಷ್ಟಿಕರ್ತನಾದ ಯೆಹೋವನನ್ನು ಮರೆತುಬಿಟ್ಟಿಯಾ? ನಾಶಮಾಡಬೇಕೆಂದು [ಬಾಣವನ್ನು] ಹೂಡುವ ಹಿಂಸಕನ ಕ್ರೋಧಕ್ಕೆ ದಿನವೆಲ್ಲಾ ಎಡೆಬಿಡದೆ ಅಂಜುತ್ತೀಯಾ? ಆ ಹಿಂಸಕನ ಕ್ರೋಧವು ಎಲ್ಲಿ ತಾನೇ ಇದೆ? 14 [ಸೆರೆಯಲ್ಲಿ] ಕುಗ್ಗಿರುವವನು ಸಾಯನು, ಪಾತಾಳಕ್ಕೆ ಇಳಿಯನು, ಬೇಗನೆ ಬಿಡುಗಡೆಯಾಗುವನು; ಅವನಿಗೆ ಅನ್ನದ ಕೊರತೆಯೇ ಇರದು. 15 ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ರೇಗಿಸುವ ನಿನ್ನ ದೇವರಾದ ಯೆಹೋವನು ನಾನೇ; ಸೇನಾಧೀಶ್ವರನಾದ ಯೆಹೋವನೆಂಬದೇ ನನ್ನ ನಾಮಧೇಯ. 16 ಆಕಾಶವನ್ನು ನಿಲ್ಲಿಸಬೇಕೆಂತಲೂ ಭೂಲೋಕವನ್ನು ಸ್ಥಾಪಿಸಬೇಕೆಂತಲೂ ಚೀಯೋನಿಗೆ ನೀನು ನನ್ನ ಜನವೆಂದು ಹೇಳಬೇಕೆಂತಲೂ ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟು ನನ್ನ ಕೈಯ ನೆರಳಿನಲ್ಲಿ ನಿನ್ನನ್ನು ಹುದುಗಿಸಿದ್ದೇನೆ. ಚೀಯೋನಿಗೆ ಅವಮಾನವು ತೀರಿ ಮಾನಬರುವದು 17 ಯೆಹೋವನು ತನ್ನ ರೋಷವನ್ನು ತುಂಬಿಕೊಟ್ಟ ಪಾತ್ರೆಯಿಂದ ಕುಡಿದ ಯೆರೂಸಲೇಮೇ, ಎಚ್ಚತ್ತುಕೋ, ಎಚ್ಚತ್ತುಕೋ, ಎದ್ದು ನಿಲ್ಲು! ಭ್ರಮಣಗೊಳಿಸುವ ಆ ಪಾನದ ಪಾತ್ರೆಯಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿದು ಬಿಟ್ಟಿದ್ದೀ. 18 ಹೆತ್ತ ಮಕ್ಕಳಲ್ಲೆಲ್ಲಾ ಅವಳನ್ನು ಕರೆದುಕೊಂಡು ಹೋಗುವವನು ಯಾರೂ ಇಲ್ಲ; ಸಾಕಿದ ಆ ಸಕಲ ಕುಮಾರರಲ್ಲಿ ಅವಳ ಕೈ ಹಿಡಿಯುವವನು ಒಬ್ಬನೂ ಇಲ್ಲ. 19 ಸಹತಾಪದಿಂದ ನಿನಗಾಗಿ ಬಡುಕೊಳ್ಳುವವರು ಯಾರಿದ್ದಾರೆ? ನಿನಗೆ ಈ ಎರಡು ಬಾಧೆಗಳು ಬಂದಿವೆ, [ನಿನ್ನ ದೇಶವು] ಹಾಳುಪಾಳಾಗಿದೆ, [ನಿನ್ನ ಪ್ರಜೆಗೆ] ಕ್ಷಾಮವೂ ಖಡ್ಗವೂ ಪ್ರಾಪ್ತವಾಗಿವೆ; ನಾನು ನಿನ್ನನ್ನು ಹೇಗೆ ಸಂತೈಸಲಿ? 20 ನಿನ್ನ ಮಕ್ಕಳು ಪ್ರಜ್ಞೆತಪ್ಪಿದವರಾಗಿ ಬಲೆಗೆ ಸಿಕ್ಕಿದ ಜಿಂಕೆಯಂತೆ ಬೀದಿಗಳೆಲ್ಲಾ ಕೂಡುವ ಚೌಕದಲ್ಲಿ ಬಿದ್ದಿದ್ದಾರೆ; ಯೆಹೋವನ ರೋಷವನ್ನೂ ನಿನ್ನ ದೇವರ ತರ್ಜನವನ್ನೂ ಹೊಟ್ಟೆ ತುಂಬಾ ಕುಡಿದಿದ್ದಾರೆ. 21 ಹೀಗಿರಲು, ಗತಿಹೀನಳೇ, ದ್ರಾಕ್ಷಾರಸವಿಲ್ಲದೆ ಅಮಲೇರಿದವಳೇ, ಇದನ್ನು ಕೇಳು; 22 ನಿನ್ನ ಕರ್ತನೂ ತನ್ನ ಜನರ ಪಕ್ಷವಾಗಿ ವ್ಯಾಜ್ಯವಾಡುವ ನಿನ್ನ ದೇವರೂ ಆದ ಯೇಹೋವನು ಹೀಗನ್ನುತ್ತಾನೆ - ಇಗೋ, ಭ್ರಮಣಗೊಳಿಸುವ ಪಾನದ ಪಾತ್ರೆಯನ್ನು ಅಂದರೆ ನನ್ನ ರೋಷವು ತುಂಬಿರುವ ಬಟ್ಟಲನ್ನು ನಿನ್ನ ಕೈಯೊಳಗಿಂದ ತೆಗೆದುಹಾಕುವೆನು; ಅದನ್ನು ನೀನು ಇನ್ನು ಕುಡಿಯೆ; 23 ನಿನ್ನನ್ನು ಬಾಧಿಸುವವರ ಕೈಗೆ ಅದನ್ನು ಕೊಡುವೆನು; ಅವರು ನಿನಗೆ - ನೀನು ಬಿದ್ದುಕೋ, ನಿನ್ನನ್ನು ತುಳಿಯುತ್ತಾ ಹೋಗುವೆವು ಎಂದು ಹೇಳಲು ನೀನು ಹಾದುಹೋಗುವ ಅವರಿಗೆ ನಿನ್ನ ಬೆನ್ನನ್ನು ನೆಲವನ್ನಾಗಿಯೂ ಬೀದಿಯ ಮಣ್ಣನ್ನಾಗಿಯೂ ಮಾಡಿಕೊಂಡಿಯಲ್ಲಾ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India