ಯೆಶಾಯ 31 - ಕನ್ನಡ ಸತ್ಯವೇದವು J.V. (BSI)ಯೆಹೋವನೇ ಯೆಹೂದ್ಯರಿಗೆ ನಿಜರಕ್ಷಕ 1 ಅಯ್ಯೋ, ಸಹಾಯಕ್ಕಾಗಿ ಐಗುಪ್ತವನ್ನು ಸೇರಿ ಅಶ್ವಬಲವನ್ನು ಆಶ್ರಯಿಸುವವರ ಗತಿಯನ್ನು ಏನು ಹೇಳಲಿ! ರಥಗಳು ಬಹಳವೆಂದು ಅವುಗಳಲ್ಲಿ ನಂಬಿಕೆಯಿಟ್ಟು ಸವಾರರು ಬಹು ಬಲಿಷ್ಠರೆಂದು ಅವರ ಮೇಲೆ ಭರವಸಪಡುತ್ತಾರೆ; ಆದರೆ ಇಸ್ರಾಯೇಲ್ಯರ ಸದಮಲಸ್ವಾವಿುಯ ಕಡೆಗೆ ದೃಷ್ಟಿಯಿಡುವದಿಲ್ಲ, ಯೆಹೋವನನ್ನು ಆಶ್ರಯಿಸುವದಿಲ್ಲ; 2 ಇಗೋ, ಆತನೂ ವಿವೇಕಿ, ತನ್ನ ಮಾತುಗಳನ್ನು ಹಿಂದಕ್ಕೆ ತೆಗೆಯದೆ ಕೇಡನ್ನು ಬರಮಾಡುವನು; ಕೆಡುಕರ ಮನೆತನಕ್ಕೂ ಅನ್ಯಾಯಗಾರರ ಸಹಾಯಕರಿಗೂ ವಿರುದ್ಧವಾಗಿ ಏಳುವನು. 3 ಐಗುಪ್ತ್ಯರು ಮನುಷ್ಯ ಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಮಾಂಸಮಯವೇ, ಆತ್ಮವಲ್ಲ; ಯೆಹೋವನು ಕೈಚಾಚುವಾಗ ಸಹಾಯ ಮಾಡಿದವನು ಮುಗ್ಗರಿಸುವನು, ಸಹಾಯಪಡೆದವನು ಬಿದ್ದು ಹೋಗುವನು, ಅಂತು ಎಲ್ಲರೂ ಒಟ್ಟಿಗೆ ಲಯವಾಗುವರು. 4 ಯೆಹೋವನು ನನಗೆ ಹೀಗೆ ಹೇಳಿದ್ದಾನೆ - ಸಿಂಹವು, ಪ್ರಾಯದ ಸಿಂಹವು, ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ ಕಾವಲುಗಾರನ ಕೂಗನ್ನು ಕೇಳಿ ಬಹುಮಂದಿ ಕುರುಬರು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ ಅದು ಅವರ ಕೂಗಾಟಕ್ಕೆ ಹೆದರದೆ ಅವರ ಗದ್ದಲದಿಂದ ಹೇಗೆ ಧೈರ್ಯಗುಂದುವದಿಲ್ಲವೋ ಹಾಗೆಯೇ ಸೇನಾಧೀಶ್ವರನಾದ ಯೆಹೋವನು ಯುದ್ಧಮಾಡಲು ಚೀಯೋನ್ ಪರ್ವತದ ಶಿಖರದ ಮೇಲೆ ಇಳಿಯುವನು. 5 ಹೆಣ್ಣುಹಕ್ಕಿಗಳು ಹಾರಿಯಾಡುತ್ತಾ [ಮರಿಗಳನ್ನು] ಕಾಪಾಡುವಂತೆ ಸೇನಾಧೀಶ್ವರನಾದ ಯೆಹೋವನು ಯೆರೂಸಲೇಮನ್ನು ಕಾಪಾಡುವನು; ಅದನ್ನು ರಕ್ಷಿಸಿ ಕಾಯುವನು, ಹಾದು ಹೋಗುತ್ತಾ ಅಪಾಯದಿಂದ ತಪ್ಪಿಸುವನು. 6 ಇಸ್ರಾಯೇಲ್ಯರೇ, ನೀವು ಯಾರಿಗೆ ಅಗಾಧ ದ್ರೋಹವನ್ನು ಮಾಡಿದಿರೋ ಆತನ ಕಡೆಗೆ ತಿರಿಗಿಕೊಳ್ಳಿರಿ. 7 ನೀವು ನಿಮ್ಮ ಕೈಯಿಂದ ರೂಪಿಸಿಕೊಂಡಿರುವ ಬೆಳ್ಳಿಯ ಮತ್ತು ಬಂಗಾರದ ವಿಗ್ರಹಗಳನ್ನು ಆ ದಿನದಲ್ಲಿ ಪ್ರತಿಯೊಬ್ಬನೂ ಬಿಸಾಟುಬಿಡುವನು; ಅವುಗಳನ್ನು ರೂಪಿಸಿದ್ದು ಪಾಪವಷ್ಟೆ. 8 ಆಗ ಅಶ್ಶೂರ್ಯರು ಕತ್ತಿಯಿಂದ ಬೀಳುವರು, ಅದು ಮನುಷ್ಯರ ಕತ್ತಿಯಲ್ಲ; ಖಡ್ಗವು ಅವರನ್ನು ನುಂಗುವದು, ಅದು ಮಾನವಖಡ್ಗವಲ್ಲ; ಅವರು ಕತ್ತಿಯ ಕಡೆಯಿಂದ ಓಡುವರು, ಅವರ ಯೌವನಸ್ಥರು ಬಿಟ್ಟಿಹಿಡಿಯಲ್ಪಡುವರು. 9 ಅವರ ಶರಣನು ಭಯದಿಂದ ಹೋಗಿಬಿಡುವನು; ಅವರ ಪ್ರಧಾನರು ಹೆದರಿ ಧ್ವಜಸ್ಥಾನದಿಂದ ದಿಕ್ಕಾಪಾಲಾಗುವರು. ಚೀಯೋನಿನಲ್ಲಿ ಅಗ್ನಿಯನ್ನೂ ಯೆರೂಸಲೇವಿುನಲ್ಲಿ ಒಲೆಯನ್ನೂ ಮಾಡಿಕೊಂಡಿರುವ ಯೆಹೋವನ ನುಡಿ ಇದೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India