ಯೆಶಾಯ 26 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲು ಮಾಡುವ ಸ್ತೋತ್ರಗೀತ 1 ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಗೀತವನ್ನು ಹಾಡುವರು - ನಮಗೆ ಬಲವಾದ ಪಟ್ಟಣವಿದೆ. [ಯೆಹೋವನು ತನ್ನ] ರಕ್ಷಣೆಯನ್ನು ಕೋಟೆಯನ್ನಾಗಿಯೂ ಹೊರಪೌಳಿಯನ್ನಾಗಿಯೂ ಮಾಡಿದ್ದಾನೆ. 2 ಬಾಗಿಲುಗಳನ್ನು ತೆರೆಯಿರಿ! ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗವು ಪ್ರವೇಶಿಸಲಿ! 3 ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ. 4 ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ. 5 ಆತನು ಎತ್ತರದಲ್ಲಿ ವಾಸಿಸುವವರನ್ನೂ [ಅವರ] ಉನ್ನತಪಟ್ಟಣವನ್ನೂ ತಗ್ಗಿಸಿದ್ದಾನೆ. ಅದನ್ನು ಕೆಡವಿ ನೆಲಸಮಮಾಡಿ ದೂಳಿಗೆ ತಂದಿದ್ದಾನೆ. 6 ಅದು ಕಾಲತುಳಿತಕ್ಕೆ ಈಡಾಗಿದೆ. ದಿಕ್ಕಿಲ್ಲದ ಬಡವರೂ ಅದನ್ನು ಕಾಲಿನಿಂದ ತುಳಿದುಬಿಡುತ್ತಾರೆ. 7 ಶಿಷ್ಟನ ಮಾರ್ಗವು ನೇರವಾಗಿದೆ; ನೀನು ಅವನ ದಾರಿಯನ್ನು ಸರಿಪಡಿಸಿ ಸಮಮಾಡುತ್ತಿ. 8 ಹೌದು, ಯೆಹೋವನೇ, ನಿನ್ನ ನ್ಯಾಯಕಾರ್ಯಗಳು ತೋರತಕ್ಕ ಮಾರ್ಗದಲ್ಲಿ ನಿನ್ನನ್ನು ಕಾದುಕೊಂಡಿದ್ದೇವೆ; ನಿನ್ನ ನಾಮಸ್ಮರಣೆಯು ನಮ್ಮ ಆತ್ಮಕ್ಕೆ ಕೇವಲ ಇಷ್ಟವಾಗಿದೆ. 9 ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಹಾರೈಸಿದ್ದೇವೆ, ಹೌದು, ನಮ್ಮ ಆತ್ಮದಲ್ಲಿ ನಿನ್ನನ್ನು ತವಕದಿಂದ ಹುಡುಕಿದ್ದೇವೆ. ನೀನು ಲೋಕದಲ್ಲಿ ನ್ಯಾಯಕಾರ್ಯಗಳನ್ನು ನಡಿಸುವಾಗ ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು. 10 ದುಷ್ಟರನ್ನು ಕರುಣಿಸಿದರೂ ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥವಂತರ ದೇಶದಲ್ಲಿಯೂ ಅನ್ಯಾಯವನ್ನಾಚರಿಸುವರು. 11 ಯೆಹೋವನೇ, ನೀನು ಕೈಯೆತ್ತಿದ್ದರೂ ಅವರು ಲಕ್ಷಿಸರು. ಆದರೆ ನಿನ್ನ ಸ್ವಜನಾಭಿಮಾನವನ್ನು ನೋಡಿ ನಾಚಿಕೆಪಡುವರು; ಹೌದು, ಆ ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು. 12 ಯೆಹೋವನೇ, ನೀನು ನಮಗೆ ಸಮಾಧಾನವನ್ನು ವಿಧಿಸುವಿ, ನಾವು ನಡಿಸಿದ್ದೆಲ್ಲವೂ ನೀನು ನಮಗೋಸ್ಕರ ನಡಿಸಿದ್ದೇ ಸರಿ. 13 ನಮ್ಮ ದೇವರಾದ ಯೆಹೋವನೇ, ನಿನ್ನ ಸ್ಥಾನದಲ್ಲಿ ಬೇರೆ ಒಡೆಯರು ನಮ್ಮ ಮೇಲೆ ದೊರೆತನಮಾಡುತ್ತಿದ್ದರು; ಈಗ ನಿನ್ನ ನಾಮವನ್ನು ಹೊಗಳುವದಕ್ಕೆ ನಿನ್ನಿಂದಲೇ ನಮಗೆ ಅವಕಾಶವಾಯಿತು. 14 ನೀನು ಆ ಒಡೆಯರ ಮೇಲೆ ಕೈಮಾಡಿ ನಿರ್ಮೂಲಪಡಿಸಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದೀ; ಸತ್ತವರು ಪುನಃ ಬದುಕುವದಿಲ್ಲ, ಪ್ರೇತಗಳು ಎದ್ದು ಬರುವದಿಲ್ಲವಲ್ಲಾ. 15 ಯೆಹೋವನೇ, ನಿನ್ನ ಜನವನ್ನು ಹೆಚ್ಚಿಸಿದ್ದಿ, ಹೌದು ನಿನ್ನ ಪ್ರಜೆಯನ್ನು ವೃದ್ಧಿಗೊಳಿಸಿದ್ದಿ; ನೀನು ದೇಶದ ಮೇರೆಗಳನ್ನೆಲ್ಲಾ ವಿಸ್ತರಿಸಿ ಮಹಿಮೆಗೊಂಡಿದ್ದಿ. 16 ಯೆಹೋವನೇ, [ನಿನ್ನ ಜನರು] ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಆಶ್ರಯಿಸಿದರು, ನಿನ್ನ ಶಿಕ್ಷೆಗೆ ಗುರಿಯಾಗಿ ಜಪಮಾಡಿದರು. 17 ಹೆರಿಗೆ ಹತ್ತಿರವಾದ ಗರ್ಭಿಣಿಯು ಯಾತನೆಪಡುತ್ತಾ ಬೇನೆಯಿಂದ ಅರಚುವಂತೆ ಯೆಹೋವನೇ, ನಾವು ನಿನ್ನ ಮುಂದೆ ಅರಚಿದ್ದೇವೆ; 18 ನಾವು ಗರ್ಭಧರಿಸಿ ವೇದನೆಪಟ್ಟು ಗಾಳಿಯನ್ನು ಹಡೆದಂತಾಯಿತು, ದೇಶಕ್ಕೆ ನಮ್ಮಿಂದ ಯಾವ ಉದ್ಧಾರವೂ ಆಗಲಿಲ್ಲ, ನಮ್ಮೊಳಗೆ ಯಾವ ಭೂನಿವಾಸಿಗಳೂ ಹುಟ್ಟಲಿಲ್ಲ. 19 ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು, ಮಣ್ಣಿನಲ್ಲಿ ಪವಳಿಸಿರುವವರೇ, ಎಚ್ಚತ್ತು ಹರ್ಷಧ್ವನಿಗೈಯಿರಿ! [ಯೆಹೋವನೇ,] ನೀನು ಸುರಿಯುವ ಇಬ್ಬನಿಯು ಜ್ಯೋತಿರ್ಮಯವಾದದ್ದು, ಭೂವಿುಯು ಸತ್ತವರನ್ನು ಹೊರಪಡಿಸುವದು. ಯೆಹೋವನು ಇಸ್ರಾಯೇಲನ್ನು ರಕ್ಷಿಸಿ ಇತರ ಜನಾಂಗಗಳನ್ನು ದಂಡಿಸುವದು 20 ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ. 21 ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂವಿುಯು ತನ್ನಲ್ಲಿ ಇಂಗಿದ್ದ ರಕ್ತವನ್ನು ವ್ಯಕ್ತಗೊಳಿಸುವದು, ತನ್ನ ನಿವಾಸಿಗಳಲ್ಲಿ ಹತರಾಗಿದ್ದವರನ್ನು ಇನ್ನು ಮರೆಮಾಜದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India