ಯೆಶಾಯ 10 - ಕನ್ನಡ ಸತ್ಯವೇದವು J.V. (BSI)1 ಅಯ್ಯೋ, ಬಡವರನ್ನು ನ್ಯಾಯಸ್ಥಾನದಿಂದ ತಳ್ಳಿ ನನ್ನ ಜನರಲ್ಲಿನ ದರಿದ್ರರಿಗೆ ನ್ಯಾಯವನ್ನು ತಪ್ಪಿಸಬೇಕೆಂತಲೂ ವಿಧವೆಯರನ್ನು ಸೂರೆಮಾಡಿ ಅನಾಥರನ್ನು ಕೊಳ್ಳೆಹೊಡೆಯಬೇಕೆಂತಲೂ 2 ಅನ್ಯಾಯವಾದ ತೀರ್ಪುಗಳನ್ನು ತೀರಿಸಿ ಕೇಡಿನ ಪತ್ರಗಳನ್ನು ಬರೆಯಿಸುವವರ ಗತಿಯನ್ನು ಏನೆಂದು ಹೇಳಲಿ! 3 ದಂಡನೆಯ ದಿನದಲ್ಲಿಯೂ ದೂರದಿಂದ ಬರುವ ನಾಶನದಲ್ಲಿಯೂ ಏನು ಮಾಡುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಯಾರ ವಶಮಾಡುವಿರಿ? 4 ಕೈದಿಗಳ [ಕಾಲ] ಕೆಳಗೆ ಮುದುರಿಕೊಂಡು ಹತರಾದವರ ಕೆಳಗೆ ಬಿದ್ದಿರುವದೇ ಇವರ ಗತಿ! ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೆ ಕೈ ಎತ್ತಿಯೇ ಇದೆ. ಯೆಹೋವನು ಅಶ್ಶೂರದಿಂದ ತನ್ನ ಜನರನ್ನು ದಂಡಿಸುವದು. ಅದರ ಗರ್ವವೂ ಭಂಗವೂ 5 ಆಹಾ, ಅಶ್ಶೂರವೇ, ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೋಷವೇ! 6 ನಾನು ಅದನ್ನು ಭ್ರಷ್ಟ ಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ [ನನ್ನ] ಪ್ರಜೆಯನ್ನು ಸೂರೆಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದುಹಾಕಬೇಕೆಂದು ಅದಕ್ಕೆ ಅಪ್ಪಣೆಕೊಡುವೆನು. 7 ಅದರ ಅಭಿಪ್ರಾಯವೋ ಹಾಗಲ್ಲ; ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡುವೆನೆಂಬದೇ ಹೊರತು ಈ ಯೋಚನೆಯು ಅದರ ಮನಸ್ಸಿನಲ್ಲಿ ಇಲ್ಲವೇ ಇಲ್ಲ. 8 ಅದು ಅಂದುಕೊಳ್ಳುವದೇನಂದರೆ - ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೆ. 9 ಕರ್ಕೆಮೀಷಿನ ಗತಿಯು ಕಲ್ನೋವಿಗೂ ಆಯಿತಲ್ಲವೆ, ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಷ್ಟೆ; ದಮಸ್ಕದ ಅವಸ್ಥೆಯು ಸಮಾರ್ಯಕ್ಕೂ ಸಂಭವಿಸಿತಲ್ಲಾ. 10 ಯೆರೂಸಲೇವಿುನ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ವಿಶೇಷ ವಿಗ್ರಹಗಳುಳ್ಳ ದೇವತೆಗಳ ವಶವಾಗಿರುವ ರಾಜ್ಯಗಳ ಮೇಲೆ ನಾನು ಕೈಮಾಡಿದಂತೆಯೂ 11 ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾನು ಕೆಡವಿಬಿಟ್ಟಹಾಗೂ ಯೆರೂಸಲೇಮನ್ನೂ ಅದರ ಬೊಂಬೆಗಳನ್ನೂ ಕೆಡವಲಾರೆನೋ? ಎಂಬದೇ. 12 ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ ಯೆರೂಸಲೇವಿುನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ ಅಶ್ಶೂರದ ರಾಜನ ಉಬ್ಬಟೆಯ ಕೊಚ್ಚಾಟಕ್ಕೂ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು. 13 ಏಕಂದರೆ ಅವನು ತನ್ನೊಳಗೆ - ನನ್ನ ಜ್ಞಾನಭುಜ ಬಲಗಳಿಂದಲೇ ಇದನ್ನು ಮಾಡಿದ್ದೇನೆ, ನಾನೇ ವಿವೇಕಿ; ಜನಾಂಗಗಳ ಎಲ್ಲೆಗಳನ್ನು ಕಿತ್ತು ಅವರ ನಿಧಿನಿಕ್ಷೇಪಗಳನ್ನು ಸೂರೆಮಾಡಿ ಸಿಂಹಾಸನಾರೂಢರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ; 14 ಜನಗಳ ಆಸ್ತಿಪಾಸ್ತಿಯು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ; ಪಕ್ಷಿಯು ಇಟ್ಟುಹೋದ ಮೊಟ್ಟೆಗಳನ್ನು ಸಂಗ್ರಹಿಸಿಕೊಳ್ಳುವವನಂತೆ ಭೂವಿುಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾಡಿಸಿ ಬಾಯಿದೆರೆದು ಕೀಚುಗುಟ್ಟುವ ಯಾರೂ ಇರಲಿಲ್ಲ ಎಂದು ಅಂದುಕೊಂಡನು. 15 ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಆಡಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ? ಎತ್ತಿಕೊಂಡವನನ್ನು ಕೋಲು ಬೀಸಿದಂತಾಯಿತು, ಮರಕ್ಕಿಂತ ಶ್ರೇಷ್ಠನಾಗಿರುವ ಮನುಷ್ಯನನ್ನು ದೊಣ್ಣೆಯು ಎತ್ತಿಕೊಂಡ ಹಾಗಾಯಿತು. 16 ಆದಕಾರಣ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಅವನ ಕೊಬ್ಬಿದ ಪ್ರಜೆಗಳಿಗೆ ಕ್ಷಯವನ್ನುಂಟುಮಾಡುವನು; ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಕೆಳಗೆ ಹತ್ತಿಕೊಳ್ಳುವದು. 17 ಇಸ್ರಾಯೇಲ್ಯರ ಪರಂಜ್ಯೋತಿಯು ದಹಿಸುವ ಅಗ್ನಿಯಾಗುವದು, ಅವರ ಸದಮಲಸ್ವಾವಿುಯು ಜ್ವಾಲೆಯಂತಿರುವನು; ಅದು ಒಂದೇ ದಿವಸದಲ್ಲಿ ಅಶ್ಶೂರದ ಮುಳ್ಳುಗಿಳ್ಳನ್ನು ಸುಟ್ಟು ನುಂಗಿಬಿಡುವದು. 18 ಅದು ದೇಹಾತ್ಮಗಳನ್ನುಳಿಸದೆ ಅಲ್ಲಿನ ವನದ ಮತ್ತು ತೋಟದ ವೈಭವವನ್ನು ನಿರ್ಮೂಲಮಾಡುವದು; ದೇಶವೋ ಉಡುಗುತ್ತಿರುವ ರೋಗಿಯಂತಿರುವದು. 19 ಅದರ ವನವೃಕ್ಷಗಳ ಸಂಖ್ಯೆಯು ಮಗು ಬರೆದು ಎಣಿಸುವಷ್ಟು ಕಡಿಮೆಯಾಗುವದು. 20 ಆ ದಿನದಲ್ಲಿ ಇಸ್ರಾಯೇಲ್ಯರೊಳಗೆ ಉಳಿದವರು, ಯಾಕೋಬನ ಮನೆತನದವರಲ್ಲಿ ತಪ್ಪಿಸಿಕೊಂಡವರು ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಯೆಹೋವನೆಂಬ ಇಸ್ರಾಯೇಲ್ಯರ ಸದಮಲಸ್ವಾವಿುಯನ್ನು ಯಥಾರ್ಥವಾಗಿ ಆಧಾರಮಾಡಿಕೊಳ್ಳುವರು. 21 ಜನಶೇಷವು, ಅಂದರೆ ಯಾಕೋಬ್ಯರಲ್ಲಿ ಉಳಿದದ್ದು, ಪರಾಕ್ರವಿುಯಾದ ದೇವರ ಕಡೆಗೆ ತಿರುಗಿಕೊಳ್ಳುವದು. 22 ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದ ಒಂದು ಶೇಷ ಮಾತ್ರ ತಿರುಗಿಕೊಳ್ಳುವದು; ತುಂಬಿತುಳುಕುವ ನ್ಯಾಯಪ್ರವಾಹದ ಪ್ರಲಯ ನಿಶ್ಚಿತವಾಗಿದೆ. 23 ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಭೂಮಂಡಲದಲ್ಲೆಲ್ಲಾ ನಿಶ್ಚಿತಪ್ರಲಯವನ್ನು ಉಂಟುಮಾಡುವನಷ್ಟೆ. 24 ಇಂತಿರಲು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ಹೇಳುತ್ತಾನೆ - ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, ಐಗುಪ್ತ್ಯರು ನಿಮಗೆ ಮಾಡಿದಂತೆ ನಿಮ್ಮನ್ನು ಕೋಲಿನಿಂದ ಹೊಡೆದು ನಿಮಗೆ ವಿರುದ್ಧವಾಗಿ ದೊಣ್ಣೆಯನ್ನೆತ್ತುವ ಅಶ್ಶೂರ್ಯರಿಗೆ ಭಯಪಡಬೇಡಿರಿ. 25 ಬಹು ಸ್ವಲ್ಪ ಕಾಲದೊಳಗೆ [ನಿಮ್ಮ ಮೇಲಿನ] ಉಗ್ರವು ತೀರಿ ನನ್ನ ಕೋಪವು ಅವರ ನಾಶನಕ್ಕಾಗುವದು. 26 ಸೇನಾಧೀಶ್ವರನಾದ ಯೆಹೋವನು ಓರೇಬನ ಬಂಡೆಯ ಹತ್ತಿರ ವಿುದ್ಯಾನ್ಯರನ್ನು ಹತಮಾಡಿದಂತೆ ಅವರ ಮೇಲೆಯೂ ಕೊರಡೆಯನ್ನು ಬೀಸುವನು; ಆತನು ದಂಡವನ್ನು ಸಮುದ್ರದ ಮೇಲೆ ಚಾಚಿ ಐಗುಪ್ತ್ಯರ ಮೇಲೆ ಎತ್ತಿದಂತೆ ಎತ್ತುವನು. 27 ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಹೂಡಿದ ನೊಗವು ಕತ್ತಿನಿಂದಲೂ ತೊಲಗುವವು; ನೀವು ಪುಷ್ಟರಾದ ಕಾರಣ ನೊಗವು ಮುರಿದು ಹೋಗುವದು. 28 ಇಗೋ, ಬಂದರು, ಅಯ್ಯಾಥಿನ ಮೇಲೆ ಬಂದಿದ್ದಾರೆ, ವಿುಗ್ರೋನನ್ನು ಹಾದುಹೋಗಿದ್ದಾರೆ, ವಿುಕ್ಮಾಷಿನಲ್ಲಿ ತಮ್ಮ ಸಾಮಗ್ರಿಯನ್ನು ಇಟ್ಟುಬಿಟ್ಟಿದ್ದಾರೆ, 29 ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ [ಅನ್ನುತ್ತಾರೆ], ರಾಮಾ ನಡುಗುತ್ತದೆ, 30 ಸೌಲನ ಗಿಬೆಯ ಓಡಿಹೋಯಿತು; ಗಲ್ಲೀಮ್ ಗ್ರಾಮವೇ, ಕೂಗಿ ಕಿರಚಿಕೋ! ಲಯೆಷವೇ, ಕಿವಿಗೊಡು! 31 ಅನಾತೋತೇ, ಪ್ರತಿಧ್ವನಿ ಕೊಡು! ಮದ್ಮೇನ ದಿಕ್ಕಾಪಾಲಾಯಿತು; ಗೇಬೀವಿುನ ನಿವಾಸಿಗಳು ವಲಸೆಹೋದರು; 32 ಇದೇ ದಿವಸ [ಶತ್ರುಗಳು] ನೋಬಿನಲ್ಲಿ ಬೀಡುಗೊಳ್ಳುವರು; ಚೀಯೋನ್ ನಗರಿಯ ಪರ್ವತದ ಕಡೆಗೆ, ಯೆರೂಸಲೇವಿುನ ಬೆಟ್ಟದ ಕಡೆಗೆ, ಕೈ ಬೀಸುತ್ತಾರೆ. 33 ಆಹಾ, ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಕೊಂಬೆಗಳನ್ನು ಕತ್ತರಿಸಿ ಢಮ್ಮನೆ ಬೀಳಿಸುವನು; ಉನ್ನತ ವೃಕ್ಷಗಳು ಕಡಿದುಹೋಗುವವು, 34 ಎತ್ತರ ಮರಗಳು ನೆಲದ ಪಾಲಾಗುವವು; ಆತನು ಅಡವಿಯ ಪೊದೆಗಳನ್ನು ಕಬ್ಬಿಣದ ಮುಟ್ಟಿನಿಂದ ಕಡಿದುಬಿಡುವನು; ಲೆಬನೋನಿನ ವನವು ಆ ಬಲಿಷ್ಠನಿಂದ ಬಿದ್ದುಹೋಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India