ಯೆರೆಮೀಯ 42 - ಕನ್ನಡ ಸತ್ಯವೇದವು J.V. (BSI)ಸ್ವದೇಶದಲ್ಲಿ ಉಳಿದ ಯೆಹೂದ್ಯರು ಐಗುಪ್ತಕ್ಕೆ ವಲಸೆಹೋದದ್ದು 1 ಆಗ ಸಕಲ ಸೇನಾಪತಿಗಳೂ ಕಾರೇಹನ ಮಗನಾದ ಯೋಹಾನಾನನೂ ಹೋಷಾಯನ ಮಗನಾದ ಯೆಜನ್ಯನೂ ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ 2 ಎಲ್ಲಾ ಜನರೂ ಪ್ರವಾದಿಯಾದ ಯೆರೆಮೀಯನ ಬಳಿಗೆ ಬಂದು ಅವನಿಗೆ - ದಯಮಾಡು, ನಮ್ಮ ಬಿನ್ನಹವನ್ನು ಲಾಲಿಸು; 3 ನಿನ್ನ ದೇವರಾದ ಯೆಹೋವನು ನಾವು ನಡೆಯಬೇಕಾದ ಮಾರ್ಗವನ್ನೂ ಮಾಡತಕ್ಕ ಕಾರ್ಯವನ್ನೂ ತೋರಿಸುವ ಹಾಗೆ ನಮಗಾಗಿ, ಅಂದರೆ ಉಳಿದಿರುವ ಈ ಜನರೆಲ್ಲರಿಗಾಗಿ ನಿನ್ನ ದೇವರಾದ ಯೆಹೋವನನ್ನು ಪ್ರಾರ್ಥಿಸು; ನಿನ್ನ ಕಣ್ಣಿಗೆ ಕಾಣುವ ಪ್ರಕಾರ ಅಪಾರ ಜನರಲ್ಲಿ ನಾವು ಕೆಲವರು ಮಾತ್ರ ಉಳಿದಿದ್ದೇವೆ ಎಂದು ವಿಜ್ಞಾಪಿಸಿದರು. 4 ಇದನ್ನು ಕೇಳಿ ಪ್ರವಾದಿಯಾದ ಯೆರೆಮೀಯನು ಅವರಿಗೆ - ನಿಮ್ಮ ಬಿನ್ನಹವನ್ನು ಕೇಳಿದೆನು; ಇಗೋ, ನಿಮ್ಮ ಮಾತಿನಂತೆ ನಿಮ್ಮ ದೇವರಾದ ಯೆಹೋವನನ್ನು ಪ್ರಾರ್ಥಿಸುವೆನು; ಯೆಹೋವನು ಯಾವ ಉತ್ತರವನ್ನು ದಯಪಾಲಿಸುವನೋ ಒಂದನ್ನೂ ಮುಚ್ಚದೆ ನಿಮಗೆ ತಿಳಿಸುವೆನು ಎಂದು ಹೇಳಲು 5 ಅವರು ಯೆರೆಮೀಯನಿಗೆ - ನಿನ್ನ ದೇವರಾದ ಯೆಹೋವನು ನಿನ್ನ ಮೂಲಕ ನಮಗೆ ಕಳುಹಿಸುವ ಮಾತಿನಂತೆ ನಾವು ನಡೆಯದಿದ್ದರೆ ಯೆಹೋವನು ಸ್ಥಿರವಾದ ಸತ್ಯಸಾಕ್ಷಿಯಾಗಿ ನಿಂತು ನಮ್ಮನ್ನು ಖಂಡಿಸಲಿ! 6 ನಮ್ಮ ದೇವರಾದ ಯೆಹೋವನ ಮಾತು ಹಿತವಾಗಲಿ ಅಹಿತವಾಗಲಿ ಆತನ ಸನ್ನಿಧಿಯಲ್ಲಿ ವಿಚಾರಿಸುವದಕ್ಕೆ ನಿನ್ನನ್ನು ಕಳುಹಿಸುವ ನಾವು ಅದನ್ನು ಕೈಕೊಳ್ಳುವೆವು; ನಮ್ಮ ದೇವರಾದ ಯೆಹೋವನ ಮಾತನ್ನು ನಾವು ಕೇಳಿದರೆ ನಮಗೆ ಶುಭವಾಗುವದಷ್ಟೆ ಎಂಬದಾಗಿ ಹೇಳಿದರು. 7 ಹತ್ತು ದಿನಗಳಾದ ಮೇಲೆ ಯೆಹೋವನು ತನ್ನ ವಾಕ್ಯವನ್ನು ಯೆರೆಮೀಯನಿಗೆ ದಯಪಾಲಿಸಿದನು. 8 ಆಗ ಅವನು ಕಾರೇಹನ ಮಗನಾದ ಯೋಹಾನಾನನನ್ನೂ ಅವನೊಂದಿಗಿದ್ದ ಸಕಲ ಸೇನಾಪತಿಗಳನ್ನೂ ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲಾ ಜನರನ್ನೂ ಕರೆದು - 9 ನಿಮ್ಮ ವಿಜ್ಞಾಪನೆಯನ್ನು ಯೆಹೋವನಿಗೆ ಅರಿಕೆ ಮಾಡುವದಕ್ಕಾಗಿ ನನ್ನನ್ನು ಕಳುಹಿಸಿದ್ದಿರಲ್ಲಾ; ಅದಕ್ಕೆ ಇಸ್ರಾಯೇಲಿನ ದೇವರಾದ ಯೆಹೋವನು ಹೀಗನ್ನುತ್ತಾನೆ - 10 ನೀವು ಈ ದೇಶದಲ್ಲಿ ನೆಲೆಗೊಂಡಿದ್ದರೆ ನಾನು ನಿಮ್ಮನ್ನು ಕಟ್ಟುವೆನು, ಕೆಡವುವದಿಲ್ಲ; ನೆಡುವೆನು, ಕೀಳುವದಿಲ್ಲ; ನಾನು ನಿಮಗೆ ಮಾಡಿದ ಕೇಡಿಗೆ ಪಶ್ಚಾತ್ತಾಪಪಡುತ್ತೇನೆ. 11 ನೀವು ಹೆದರಿರುವ ಬಾಬೆಲಿನ ಅರಸನಿಗೆ ಹೆದರಬೇಡಿರಿ; ಅವನಿಗೆ ಅಂಜದಿರಿ; ನಾನು ನಿಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಲಿಕ್ಕೆ ನಿಮ್ಮೊಂದಿಗಿದ್ದೇನಲ್ಲಾ. ಇದು ಯೆಹೋವನಾದ ನನ್ನ ನುಡಿ. 12 ಅವನು ನಿಮ್ಮನ್ನು ಕರುಣಿಸಿ ಸ್ವದೇಶಕ್ಕೆ ಹೋಗಗೊಡಿಸುವಂತೆ ನಾನು ನಿಮಗೆ ಕರುಣೆಯನ್ನು ಅನುಗ್ರಹಿಸುವೆನು. 13 ಆದರೆ ನೀವು ನಿಮ್ಮ ದೇವರಾದ ಯೆಹೋವನ ನುಡಿಗೆ ಕಿವಿಗೊಡದೆ - ಈ ದೇಶದಲ್ಲಿ ನಾವು ನೆಲೆಸುವದೇ ಇಲ್ಲ; ಬೇಡವೇ ಬೇಡ; 14 ನಾವು ಯುದ್ಧಕಾಣದೆ ತುತೂರಿಯ ಶಬ್ದಕೇಳದೆ ಅನ್ನದ ಕೊರತೆಯಿಂದ ಹಸಿವೆಗೊಳ್ಳದೆ ಇರುವ ಐಗುಪ್ತದೇಶಕ್ಕೆ ಹೋಗಿ ಅಲ್ಲೇ ವಾಸಿಸುವೆವು ಎಂದುಕೊಂಡರೆ 15 ಯೆಹೂದ್ಯರಲ್ಲಿ ಉಳಿದವರೇ, ಯೆಹೋವನ ವಾಕ್ಯವನ್ನು ಈಗ ಕೇಳಿರಿ; ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನೀವು ಐಗುಪ್ತಕ್ಕೆ ಹೋಗಬೇಕೆಂದು ಹಟಹಿಡಿದು ಅಲ್ಲಿಗೆ ಸೇರಿ ವಾಸಮಾಡುವದಾದರೆ 16 ಆಗ ನೀವು ಹೆದರುತ್ತಿರುವ ಖಡ್ಗವು ಐಗುಪ್ತದಲ್ಲಿಯೂ ನಿಮ್ಮನ್ನು ಹಿಂದಟ್ಟಿ ಹಿಡಿಯುವದು, ನೀವು ಅಂಜುತ್ತಿರುವ ಕ್ಷಾಮವು ಅಲ್ಲಿಯೂ ನಿಮ್ಮ ಬೆನ್ನು ಹತ್ತುವದು; ಅಲ್ಲೇ ಸಾಯುವಿರಿ. 17 ಐಗುಪ್ತಕ್ಕೆ ಹೋಗಿ ಅಲ್ಲಿ ವಾಸಿಸಲು ಹಟಹಿಡಿಯುವ ಎಲ್ಲಾ ಜನರಿಗೂ ಇದೇ ಗತಿಯಾಗುವದು; ಖಡ್ಗಕ್ಷಾಮವ್ಯಾಧಿಗಳಿಂದ ಸಾಯುವರು; ನಾನು ಅವರಿಗೆ ಬರಮಾಡುವ ವಿಪತ್ತಿನಿಂದ ಯಾರೂ ತಪ್ಪಿಸಿಕೊಳ್ಳರು, ಯಾರೂ ಉಳಿಯರು. 18 ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನನ್ನ ಉಗ್ರರೋಷಾಗ್ನಿಯು ಯೆರೂಸಲೇವಿುನವರ ಮೇಲೆ ಹೇಗೆ ಸುರಿಯಿತೋ ಹಾಗೆಯೇ ನೀವು ಐಗುಪ್ತದಲ್ಲಿ ಕಾಲಿಟ್ಟ ಕೂಡಲೆ ನನ್ನ ರೋಷಾಗ್ನಿಯು ನಿಮ್ಮ ಮೇಲೆಯೂ ಸುರಿಯುವದು; ನೀವು ಅಪವಾದ ವಿಸ್ಮಯ ಶಾಪ ದೂಷಣೆಗಳಿಗೆ ಗುರಿಯಾಗುವಿರಿ; ಈ ಸ್ಥಳವು ಮತ್ತೆ ನಿಮ್ಮ ಕಣ್ಣಿಗೆ ಬೀಳದು. 19 ಯೆಹೂದ್ಯರಲ್ಲಿ ಉಳಿದವರೇ, ಯೆಹೋವನು ನಿಮ್ಮನ್ನು ಕುರಿತು - ಐಗುಪ್ತಕ್ಕೆ ಹೋಗಬೇಡಿರಿ ಎಂದು ಅಪ್ಪಣೆಮಾಡಿದ್ದಾನೆ; ನಾನು ಈ ದಿವಸ [ಆ ಮಾತನ್ನು] ನಿಮಗೆ ಪ್ರಕಟಿಸಿದ್ದೇನೆ, ಚೆನ್ನಾಗಿ ತಿಳಿದಿರಲಿ. 20 ನಿಮ್ಮನ್ನು ನೀವೇ ಮೋಸಪಡಿಸಿಕೊಂಡಿದ್ದೀರಿ; ನೀವು ನನ್ನ ಬಳಿಗೆ ಬಂದು - ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು; ನಮ್ಮ ದೇವರಾದ ಯೆಹೋವನು ಯಾವ ಅಪ್ಪಣೆಕೊಡುತ್ತಾನೋ ಅದನ್ನು ನಮಗೆ ತಿಳಿಸು, ಅದರಂತೆಯೇ ನಡೆಯುವೆವು ಎಂಬದಾಗಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವದಕ್ಕೆ ನನ್ನನ್ನು ಕಳುಹಿಸಿದಿರಲ್ಲಾ. 21 ನಾನು ಯೆಹೋವನ ಅಪ್ಪಣೆಯನ್ನು ಈ ದಿವಸ ನಿಮಗೆ ತಿಳಿಸಿದ್ದೇನೆ; ನೀವಾದರೆ ನಿಮ್ಮ ದೇವರಾದ ಯೆಹೋವನು ನನ್ನ ಮೂಲಕ ನಿಮಗೆ ಹೇಳಿಕಳುಹಿಸಿದ ಯಾವ ಮಾತನ್ನೂ ಕೇಳಲಿಲ್ಲ. 22 ನೀವು ಯಾವ ಸ್ಥಳದಲ್ಲಿ ವಾಸಮಾಡಲಪೇಕ್ಷಿಸಿ ಹೋಗುತ್ತೀರೋ ಆ ಸ್ಥಳದಲ್ಲೇ ಖಡ್ಗಕ್ಷಾಮವ್ಯಾಧಿಗಳಿಂದ ಸಾಯುವಿರಿ ಎಂದು ಖಂಡಿತ ತಿಳಿಯಿರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India