ಯಾಜಕಕಾಂಡ 7 - ಕನ್ನಡ ಸತ್ಯವೇದವು J.V. (BSI)1 ಪ್ರಾಯಶ್ಚಿತ್ತ ಯಜ್ಞನಿಯಮಗಳು. ಆ ಯಜ್ಞವು ಮಹಾಪರಿಶುದ್ಧವಾದದ್ದು. 2 ಸರ್ವಾಂಗಹೋಮಪಶುವನ್ನು ವಧಿಸುವ ಸ್ಥಳದಲ್ಲೇ ಪ್ರಾಯಶ್ಚಿತ್ತ ಯಜ್ಞಪಶುವನ್ನೂ ವಧಿಸಬೇಕು. ಯಾಜಕನು ಅದರ ರಕ್ತವನ್ನು ಯಜ್ಞವೇದಿಗೆ ಸುತ್ತಲೂ ಎರಚಬೇಕು. 3 ಅವನು ಅದರ ಕೊಬ್ಬನ್ನೆಲ್ಲಾ ಅಂದರೆ ಬಾಲದ ಕೊಬ್ಬನ್ನೂ ವಪೆಯನ್ನೂ ಎರಡು ಹುರುಳಿಕಾಯಿಗಳನ್ನೂ 4 ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಕಾಳಿಜದ ಮೇಲೆ ಹುರುಳಿಕಾಯಿಗಳ ತನಕ ಇರುವ ಕೊಬ್ಬನ್ನೂ ತೆಗೆದು 5 ಯಜ್ಞವೇದಿಯ ಮೇಲೆ ಯೆಹೋವನಿಗೆ ಹೋಮಮಾಡಬೇಕು. ಅದು ಪ್ರಾಯಶ್ಚಿತ್ತ ಯಜ್ಞವಾಗಿದೆ. 6 ಹೋಮಶೇಷವನ್ನು ಯಾಜಕರಲ್ಲಿ ಗಂಡಸರೆಲ್ಲರೂ ತಿನ್ನಬಹುದು; ಅದು ಮಹಾಪರಿಶುದ್ಧವಾದದ್ದರಿಂದ ಪವಿತ್ರಸ್ಥಳದೊಳಗೆ ಅದನ್ನು ತಿನ್ನಬೇಕು. 7 ಪ್ರಾಯಶ್ಚಿತ್ತಯಜ್ಞದ ಹೋಮಶೇಷದ ವಿಷಯದಲ್ಲಿಯೂ ದೋಷಪರಿಹಾರಕಯಜ್ಞದ ಹೋಮಶೇಷದ ವಿಷಯದಲ್ಲಿಯೂ ಒಂದೇ ವಿಧಿಯುಂಟು; ಹೇಗಂದರೆ ಆ ಹೋಮಶೇಷವು ದೋಷಪರಿಹಾರವನ್ನು ಮಾಡಿಸುವ ಯಾಜಕನಿಗೆ ಸಲ್ಲತಕ್ಕದ್ದು; 8 ಯಾರಾದರೂ ಸರ್ವಾಂಗಹೋಮಕ್ಕಾಗಿ ಪಶುವನ್ನು ತಂದಾಗ ಅದರ ಚರ್ಮವು ಆ ಪಶುವನ್ನು ಸಮರ್ಪಿಸುವ ಯಾಜಕನದಾಗಿಯೇ ಇರಬೇಕು. 9 ಒಲೆಯಲ್ಲಾಗಲಿ ಕಬ್ಬಿಣದ ಹಂಚಿನಲ್ಲಾಗಲಿ ಬಾಂಡ್ಲೆಯಲ್ಲಾಗಲಿ ಬೇಯಿಸಿದ ನೈವೇದ್ಯಪದಾರ್ಥವೆಲ್ಲಾ ಅದನ್ನು ಸಮರ್ಪಿಸುವ ಯಾಜಕನಿಗೆ ಆಗಬೇಕು. 10 ಆದರೆ ಎಣ್ಣೆ ಹೊಯಿದ ಹಿಟ್ಟನ್ನಾಗಲಿ ಬರೀ ಹಿಟ್ಟನ್ನಾಗಲಿ ಯಾರಾದರೂ ನೈವೇದ್ಯಕ್ಕಾಗಿ ತಂದಾಗ ಅದನ್ನು ಆರೋನನ ವಂಶದವರೆಲ್ಲರೂ ಸಮವಾಗಿ ಅನುಭವಿಸಬೇಕು. 11-12 ಸಮಾಧಾನಯಜ್ಞನಿಯಮಗಳು. ಯಾರಾದರೂ ಕೃತಜ್ಞತೆಯನ್ನು ತೋರಿಸುವದಕ್ಕಾಗಿ ಸಮಾಧಾನಯಜ್ಞವನ್ನು ಯೆಹೋವನಿಗೆ ಮಾಡುವದಾದರೆ ಅದರೊಡನೆ ಎಣ್ಣೆ ವಿುಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಾಕಿದ ಹುಳಿಯಿಲ್ಲದ ಕಡುಬುಗಳನ್ನೂ ಎಣ್ಣೆಯಿಂದ ಪೂರಾ ನೆನಸಿದ ಗೋದಿಹಿಟ್ಟಿನ ಹೋಳಿಗೆಗಳನ್ನೂ ಸಮರ್ಪಿಸಬೇಕು. 13 ಕೃತಜ್ಞತೆಯನ್ನು ತೋರಿಸುವದಕ್ಕಾಗಿ ಸಮಾಧಾನಯಜ್ಞದಲ್ಲಿ ಒಪ್ಪಿಸುವ ಪಶುವಿನೊಡನೆ ಹುಳಿರೊಟ್ಟಿಗಳನ್ನೂ ಸಮರ್ಪಿಸಬೇಕು. 14 ಸಮರ್ಪಿಸಿದ ಪ್ರತಿಯೊಂದು ವಿಧವಾದ ಪದಾರ್ಥಗಳಲ್ಲಿಯೂ ಒಂದೊಂದನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. ಅವು ವೇದಿಗೆ ಯಜ್ಞಪಶುವಿನ ರಕ್ತವನ್ನು ಎರಚಿದ ಯಾಜಕನಿಗೆ ಆಗಬೇಕು. 15 ಕೃತಜ್ಞತಾಯಜ್ಞಪಶುವಿನ ಮಾಂಸವನ್ನು ಯಜ್ಞವು ನಡೆದ ದಿನದಲ್ಲೇ ಭೋಜನ ಮಾಡಬೇಕು; ಮರುದಿನದವರೆಗೆ ಸ್ವಲ್ಪವನ್ನಾದರೂ ಉಳಿಸಕೂಡದು. 16 ಯಾರಾದರೂ ಹರಕೆಯನ್ನು ಸಲ್ಲಿಸುವದಕ್ಕಾಗಲಿ ಸ್ವೇಚ್ಫೆಯಿಂದಾಗಲಿ ಅಂಥ ಯಜ್ಞವನ್ನು ಮಾಡಿಸಿದರೆ ಅದನ್ನು ಸಮರ್ಪಿಸಿದ ದಿನದಲ್ಲೇ ಅದರ ಮಾಂಸವನ್ನು ಊಟಮಾಡಬೇಕು; ಆದರೆ ವಿುಕ್ಕದ್ದನ್ನು ಮರುದಿನದಲ್ಲಿ ತಿನ್ನಬಹುದು. 17 ಮೂರನೆಯ ದಿನದವರೆಗೆ ಉಳಿದಿದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 18 ಆ ಯಜ್ಞಪಶುವಿನ ಮಾಂಸದಲ್ಲಿ ಸ್ವಲ್ಪವನ್ನಾದರೂ ಮೂರನೆಯ ದಿನದಲ್ಲಿ ಊಟಮಾಡಿದರೆ ಆ ಯಜ್ಞವೇ ಸಮರ್ಪಕವಾದದ್ದಲ್ಲ; ಅರ್ಪಿಸಿದವನಿಗೆ ಅದರಿಂದ ಫಲವೇನೂ ದೊರೆಯುವದಿಲ್ಲ. ಅದು ಹೇಯವಾದದ್ದರಿಂದ ಅದನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸಬೇಕು. 19 ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ತಿನ್ನದೆ ಬೆಂಕಿಯಲ್ಲಿ ಸುಟ್ಟುಬಿಡಬೇಕು. ಶುದ್ಧರಾಗಿರುವವರೆಲ್ಲರೂ [ಯಜ್ಞಪಶುವಿನ] ಮಾಂಸವನ್ನು ತಿನ್ನಬಹುದು. 20 ಯಾವನಾದರೂ ಅಶುದ್ಧನಾಗಿದ್ದು ಯೆಹೋವನಿಗೆ ಸಮರ್ಪಿತವಾದ ಸಮಾಧಾನಯಜ್ಞಪಶುವಿನ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ತೆಗೆದುಹಾಕಲ್ಪಡಬೇಕು. 21 ಯಾವನಿಗಾದರೂ ಮನುಷ್ಯ ದೇಹದಿಂದುಂಟಾದ ಅಶುದ್ಧ ವಸ್ತು, ಅಶುದ್ಧ ಮೃಗ, ನಿಷಿದ್ಧವಸ್ತು ಇವುಗಳಲ್ಲಿ ಯಾವದಾದರೂ ಸೋಂಕಿದರೆ ಅವನು ಯೆಹೋವನಿಗೆ ಸಮರ್ಪಿತವಾದ ಯಜ್ಞಪಶುವಿನ ಮಾಂಸವನ್ನು ತಿಂದರೆ ಕುಲದಿಂದ ತೆಗೆದುಹಾಕಲ್ಪಡಬೇಕು. 22 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 23 ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ನೀವು ಎತ್ತು ಕುರಿ ಆಡುಗಳ ಕೊಬ್ಬನ್ನು ತಿನ್ನಬಾರದು. 24 ಅಂಥ ಪಶುವು ರೋಗದಿಂದ ಸತ್ತದ್ದಾದರೆ ಇಲ್ಲವೇ ಕಾಡು ಮೃಗವು ಕೊಂದದ್ದಾದರೆ ಅದರ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಹುದೇ ಹೊರತು ಎಷ್ಟು ಮಾತ್ರವೂ ತಿನ್ನಬಾರದು. 25 ಮನುಷ್ಯನು ಯೆಹೋವನಿಗೆ ಹೋಮಮಾಡುವಂಥ ಪಶುಜಾತಿಯ ಕೊಬ್ಬನ್ನು ಯಾವನಾದರೂ ತಿಂದರೆ ಅವನು ಕುಲದಿಂದ ತೆಗೆದುಹಾಕಲ್ಪಡಬೇಕು. 26 ಪಕ್ಷಿಯದಾಗಲಿ ಪಶುವಿನದಾಗಲಿ ಯಾವ ರಕ್ತವನ್ನೂ ನೀವು ಎಲ್ಲಿಯೂ ಊಟಮಾಡಬಾರದು. 27 ರಕ್ತಭೋಜನಮಾಡಿದವನು ಕುಲದಿಂದ ತೆಗೆದುಹಾಕಲ್ಪಡಬೇಕು. 28 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 29 ನೀನು ಇಸ್ರಾಯೇಲ್ಯರಿಗೆ ಹೀಗೆ ಅಜ್ಞಾಪಿಸು - ಸಮಾಧಾನಯಜ್ಞಪಶುಗಳನ್ನು ಯೆಹೋವನಿಗೆ ಸಮರ್ಪಿಸುವವನು ಆ ಯಜ್ಞದ್ರವ್ಯಗಳಲ್ಲಿ ಯೆಹೋವನಿಗೆ ಸಲ್ಲಬೇಕಾದದ್ದನ್ನು ತಂದುಕೊಡಬೇಕು. 30 ಯೆಹೋವನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದದ್ದನ್ನು ಅಂದರೆ ಪಶುವಿನ ಕೊಬ್ಬನ್ನು ತನ್ನ ಕೈಯಿಂದಲೇ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನೂ ನೈವೇದ್ಯರೂಪವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವದಕ್ಕಾಗಿ ತಂದು ಸಮರ್ಪಿಸಬೇಕು. 31 ಯಾಜಕನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು; ಎದೆಯ ಭಾಗವು ಆರೋನನಿಗೂ ಅವನ ವಂಶದವರಿಗೂ ಆಗಬೇಕು. 32 ನೀವು ಸಮಾಧಾನಯಜ್ಞದ್ರವ್ಯಗಳಲ್ಲಿ ಬಲದೊಡೆಯನ್ನು ಯಾಜಕನಿಗೋಸ್ಕರ ಪ್ರತ್ಯೇಕಿಸಿಕೊಡಬೇಕು. 33 ಆರೋನನ ವಂಶದವರಲ್ಲಿ ಯಾವನು ಆ ಯಜ್ಞಪಶುವಿನ ರಕ್ತವನ್ನೂ ಕೊಬ್ಬನ್ನೂ ಸಮರ್ಪಿಸುತ್ತಾನೋ ಅದರ ಬಲದೊಡೆಯು ಅವನ ಭಾಗವಾಗಿರಬೇಕು. 34 ಇಸ್ರಾಯೇಲ್ಯರು ಸಮಾಧಾನಯಜ್ಞಪಶುವಿನ ಮಾಂಸದಲ್ಲಿ ನೈವೇದ್ಯರೂಪವಾಗಿ ನಿವಾಳಿಸುವ ಎದೆಯ ಭಾಗವನ್ನೂ ಯಾಜಕನಿಗೋಸ್ಕರ ಪ್ರತ್ಯೇಕಿಸುವ ತೊಡೆಯನ್ನೂ ನಾನು ತೆಗೆದುಕೊಂಡು ಮಹಾಯಾಜಕನಾದ ಆರೋನನಿಗೂ ಅವನ ವಂಶದವರಿಗೂ ಕೊಟ್ಟು ಇವು ಇಸ್ರಾಯೇಲ್ಯರಿಂದ ಯಾಜಕರಿಗೆ ಯಾವಾಗಲೂ ಸಲ್ಲಬೇಕೆಂದು ಶಾಶ್ವತನಿಯಮ ಮಾಡಿದ್ದೇನೆ. 35 ಯೆಹೋವನಿಗೆ ಹೋಮರೂಪವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಇವೇ ಆರೋನನಿಗೂ ಅವನ ವಂಶದವರಿಗೂ ಶಾಶ್ವತವಾಗಿ ಸಲ್ಲತಕ್ಕ ಭಾಗಗಳಾಗಿರುವವು. [ಮೋಶೆ] ಅವರನ್ನು ಯೆಹೋವನ ಸನ್ನಿಧಿಯಲ್ಲಿ ಯಾಜಕೋದ್ಯೋಗಕ್ಕಾಗಿ ಪ್ರತಿಷ್ಠಿಸಿದ ದಿನದಲ್ಲೇ ಇದು ನೇಮಕವಾಯಿತು. 36 ಇಸ್ರಾಯೇಲ್ಯರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಯೆಹೋವನು [ಮೋಶೆಯ ಕೈಯಿಂದ] ಅವರನ್ನು ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲಿ ಅಪ್ಪಣೆಮಾಡಿದನು. 37 ಸರ್ವಾಂಗಹೋಮ, ಧಾನ್ಯನೈವೇದ್ಯ, ದೋಷಪರಿಹಾರಕಯಜ್ಞ, ಪ್ರಾಯಶ್ಚಿತ್ತಯಜ್ಞ, ಯಾಜಕ ಪ್ರತಿಷ್ಠೆ, ಸಮಾಧಾನ ಯಜ್ಞ ಎಂಬಿವುಗಳ ವಿಷಯದಲ್ಲಿ ಮೇಲೆ ಕಂಡದ್ದೆ ವಿಧಿ. 38 ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟನು. ಮೋಶೆ ಸೀನಾಯಿ ಅರಣ್ಯದಲ್ಲಿ - ಇಸ್ರಾಯೇಲ್ಯರು ಅರ್ಪಿಸಬೇಕಾದದ್ದನ್ನು ಯೆಹೋವನಿಗೆ ಸಮರ್ಪಿಸಬೇಕೆಂದು ಆಜ್ಞಾಪಿಸಿ ಅವರಿಗೆ ಮೇಲೆ ಕಂಡ ವಿಧಿಗಳನ್ನು ಕೊಟ್ಟನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India