ಯಾಜಕಕಾಂಡ 27 - ಕನ್ನಡ ಸತ್ಯವೇದವು J.V. (BSI)ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನೂ ಸಲ್ಲಬೇಕಾದ ದಶಮಾಂಶಗಳನ್ನೂ ಕುರಿತದ್ದು 1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 2 ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ಯಾವನಾದರೂ ಮನುಷ್ಯರ ಪ್ರಾಣಗಳನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ [ಅವುಗಳನ್ನು ಬಿಡಿಸುವದಕ್ಕೆ] ದೇವರ ಸೇವೆಗೆ ನೇಮಕವಾದ ರೂಪಾಯಿಯ ಮೇರೆಗೆ ನೀವು ಅವನಿಂದ ಕೊಡಿಸಬೇಕಾದ ಈಡು ಹೇಗಂದರೆ - 3 ಇಪ್ಪತ್ತು ವರುಷದಿಂದ ಅರುವತ್ತು ವರುಷದ ಪರ್ಯಂತರ ವಯಸ್ಸುಳ್ಳ ಪುರುಷನಿಗೋಸ್ಕರ ಐವತ್ತು ರೂಪಾಯಿಗಳನ್ನೂ 4 ಸ್ತ್ರೀಗೋಸ್ಕರ ಮೂವತ್ತು ರೂಪಾಯಿಗಳನ್ನೂ ಕೊಡಿಸಬೇಕು. 5 ಐದು ವರುಷದ ವಯಸ್ಸಿನಿಂದ ಇಪ್ಪತ್ತು ವರುಷದ ವಯಸ್ಸಿನವರೆಗೆ ಪುರುಷನಿಗೋಸ್ಕರ ಇಪ್ಪತ್ತು ರೂಪಾಯಿಗಳನ್ನೂ ಸ್ತ್ರೀಗೋಸ್ಕರ ಹತ್ತು ರೂಪಾಯಿಗಳನ್ನೂ ಕೊಡಿಸಬೇಕು. 6 ಒಂದು ತಿಂಗಳಿನ ವಯಸ್ಸು ಮೊದಲುಗೊಂಡು ಐದು ವರುಷದ ವಯಸ್ಸಿನ ಪರ್ಯಂತರ ಹುಡುಗನಿಗೋಸ್ಕರ ಐದು ರೂಪಾಯಿಗಳನ್ನೂ ಹುಡುಗಿಗೋಸ್ಕರ ಮೂರು ರೂಪಾಯಿಗಳನ್ನೂ ಕೊಡಿಸಬೇಕು. 7 ಅರುವತ್ತು ವರುಷಗಳ ಪ್ರಾಯವನ್ನು ದಾಟಿದ ಪುರುಷನಿಗೋಸ್ಕರ ಹದಿನೈದು ರೂಪಾಯಿಗಳನ್ನೂ ಸ್ತ್ರೀಗೋಸ್ಕರ ಹತ್ತು ರೂಪಾಯಿಗಳನ್ನೂ ಕೊಡಿಸಬೇಕು. 8 ಯಾವನಾದರೂ ಬಡವನಾಗಿ ನೇಮಕವಾದ ಹಣವನ್ನು ಕೊಡಲಾರದೆ ಹೋದರೆ ಅವನು ಹರಕೆಮಾಡಿ ಪ್ರತಿಷ್ಠಿಸಿದ ಮನುಷ್ಯನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ಕೊಡಬೇಕಾದ ಹಣ ಇಷ್ಟೆಂದು ನಿರ್ಣಯಿಸಬೇಕು. 9 ಯೆಹೋವನಿಗೆ ಸಮರ್ಪಿಸಬಹುದಾದ ಪಶುವನ್ನು ಯಾವನಾದರೂ ಹರಕೆಮಾಡಿ ಪ್ರತಿಷ್ಠಿಸಿದ್ದಾದರೆ ಅದು ದೇವರ ಸೊತ್ತಾಗಿರಬೇಕು. 10 ಅದನ್ನು ಬದಲಾಯಿಸಕೂಡದು; ಕೆಟ್ಟದ್ದಕ್ಕೆ ಬದಲಾಗಿ ಒಳ್ಳೇದನ್ನೂ ಒಳ್ಳೇದಕ್ಕೆ ಬದಲಾಗಿ ಕೆಟ್ಟದ್ದನ್ನೂ ಒಂದಕ್ಕೆ ಬದಲಾಗಿ ಬೇರೊಂದನ್ನೂ ಕೊಡಕೂಡದು. ಅವನು ಗೊತ್ತುಮಾಡಿದ ಪಶುವಿಗೆ ಬದಲಾಗಿ ಬೇರೊಂದು ಪಶುವನ್ನು ಪ್ರತ್ಯೇಕಿಸಿಟ್ಟಿರುವ ಪಕ್ಷಕ್ಕೆ ಮೊದಲನೆಯ ಪಶುವೂ ಅದಕ್ಕೆ ಬದಲಾಗಿ ಇಟ್ಟ ಪಶುವೂ ಎರಡೂ ಯೆಹೋವನವಾಗಿರಬೇಕು. 11 ಯೆಹೋವನಿಗೆ ಸಮರ್ಪಿಸಕೂಡದ ಬೇರೆ ಜಾತಿಯ ಪಶುವನ್ನು ಪ್ರತಿಷ್ಠಿಸಿದ್ದಾದರೆ ಅದನ್ನು ಯಾಜಕನ ಮುಂದೆ ನಿಲ್ಲಿಸಬೇಕು; 12 ಅದು ಒಳ್ಳೇದೋ ಕೆಟ್ಟದ್ದೋ ಎಂದು ಯಾಜಕನು ನೋಡಿಕೊಂಡು ಅದರ ಬೆಲೆ ಇಷ್ಟೆಂದು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಸ್ಥಿರವಾಗಿರುವದು. 13 ಹರಕೆ ಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು. 14 ಯಾವನಾದರೂ ತನ್ನ ಮನೆಯನ್ನು ಯೆಹೋವನಿಗೆ ಮೀಸಲಾಗಿ ಪ್ರತಿಷ್ಠಿಸಿದರೆ ಯಾಜಕನು ಅದು ಉತ್ತಮವಾದ ಮನೆಯೋ ಅಲ್ಲವೋ ಎಂದು ಪರೀಕ್ಷಿಸಿ ಬೆಲೆಯನ್ನು ನಿರ್ಣಯಿಸಬೇಕು; ಯಾಜಕನು ನಿರ್ಣಯಿಸಿದ ಬೆಲೆ ಸ್ಥಿರವಾಗಿರುವದು. 15 ಹರಕೆಮಾಡಿದವನು ಆ ಮನೆಯನ್ನು ಬಿಡಿಸಿಕೊಳ್ಳಬೇಕೆಂದಿದ್ದರೆ ಅದರ ಕ್ರಯದೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಮನೆ ಅವನದಾಗುವದು. 16 ಯಾವನಾದರೂ ಪಿತ್ರಾರ್ಜಿತಭೂವಿುಯಲ್ಲಿ ಒಂದು ಭಾಗವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ ಅದರಲ್ಲಿ ಇಷ್ಟು ಬೀಜವನ್ನು ಬಿತ್ತತಕ್ಕದ್ದು ಎಂದು ನೀವು ಆಲೋಚಿಸಿ ಅದರ ಬೆಲೆಯನ್ನು ನಿರ್ಣಯಿಸಬೇಕು. ಎರಡು ಕಂಡುಗ ಜವೆಗೋದಿಯ ಬೀಜವರಿಯುಳ್ಳ ಹೊಲವು ಐವತ್ತು ರೂಪಾಯಿ ಬಾಳುವದು. 17 ಅವನು ಜೂಬಿಲಿ ಸಂವತ್ಸರದಿಂದ ಆ ಹೊಲವನ್ನು ಪ್ರತಿಷ್ಠಿಸಿದರೆ ಈ ಕ್ರಯ ಸ್ಥಿರವಾಗಿರುವದು. 18 ಜೂಬಿಲಿ ಸಂವತ್ಸರದ ತರುವಾಯ ಭೂವಿುಯನ್ನು ಹರಕೆಮಾಡಿದರೆ ಮುಂದಣ ಜೂಬಿಲಿ ಸಂವತ್ಸರಕ್ಕೆ ಕಳೆಯಬೇಕಾದ ವರುಷಗಳ ಸಂಖ್ಯೆಯ ಮೇರೆಗೆ ಅದರ ಬೆಲೆಯನ್ನು ಕವ್ಮಿುಮಾಡಬೇಕು. 19 ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿರುವ ಪಕ್ಷಕ್ಕೆ ಅದರ ಕ್ರಯದೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಹೊಲ ಅವನದಾಗಿರುವದು. 20 ತಾನು ಅದನ್ನು ಬಿಡಿಸಿಕೊಳ್ಳದೆ ಮತ್ತೊಬ್ಬನಿಗೆ ಮಾರಿದರೆ ಮುಂದೆ ಅದನ್ನು ಬಿಡಿಸಿಕೊಳ್ಳುವ ಅಧಿಕಾರವಿರುವದಿಲ್ಲ. 21 ಬಿಡುಗಡೆಯಾಗುವ ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಯೆಹೋವನ ಸ್ವಕೀಯವಾದ ಹೊಲದಂತೆ ಆತನ ಸೊತ್ತಾಗಿಯೇ ಇರಬೇಕು; ಅದು ಯಾಜಕರ ವಶದಲ್ಲಿರಬೇಕು. 22 ಯಾವನಾದರೂ ಕ್ರಯಕ್ಕೆ ತೆಗೆದುಕೊಂಡ ಹೊಲವನ್ನು ಅಂದರೆ ಪಿತ್ರಾರ್ಜಿತ ಭೂವಿುಗೆ ಸೇರದಿರುವ ಹೊಲವನ್ನು ಯೆಹೋವನಿಗೆ ಹರಕೆಮಾಡಿ ಪ್ರತಿಷ್ಠಿಸಿದರೆ 23 ಯಾಜಕನು ಮುಂದಣ ಜೂಬಿಲಿ ಸಂವತ್ಸರದ ತನಕ ಇರುವ ವರುಷಗಳಿಗೆ ತಕ್ಕಂತೆ ಅದರ ಬೆಲೆಯನ್ನು ನಿರ್ಣಯಿಸಬೇಕು. ಪ್ರತಿಷ್ಠಿಸಿದವನು ನಿರ್ಣಯಿಸಲ್ಪಟ್ಟ ಹಣವನ್ನು ಯೆಹೋವನಿಗೆ ಮೀಸಲಾದದ್ದೆಂದು ಭಾವಿಸಿ ಅದೇ ದಿನದಲ್ಲಿ ಕೊಟ್ಟುಬಿಡಬೇಕು. 24 ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಮಾರಿದವನಿಗೆ ಅಂದರೆ ಯಾರ ಪಿತ್ರಾರ್ಜಿತ ಭೂವಿುಗೆ ಸೇರಿದೆಯೋ ಅವನಿಗೆ ತಿರಿಗಿ ಬರಬೇಕು. 25 ದೇವರ ಸೇವೆಯಲ್ಲಿ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ನೀವು ಬೆಲೆಯನ್ನು ಯಾವಾಗಲೂ ನಿರ್ಣಯಿಸಬೇಕು. 26 [ಶುದ್ಧ] ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಕೂಡದು; ಹೋರಿಯಾಗಿದ್ದರೂ ಆಡುಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ. 27 ಅಶುದ್ಧ ಪಶುವಿನಲ್ಲಿ ಚೊಚ್ಚಲುಮರಿ ಹುಟ್ಟಿದ್ದಾದರೆ ಹರಕೆಮಾಡಿದವನು ನಿರ್ಣಯವಾದ ಬೆಲೆಯೊಂದಿಗೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಅವನು ಬಿಡಿಸದೆಹೋದರೆ ಅದನ್ನು ನಿರ್ಣಯಿಸಲ್ಪಟ್ಟ ಕ್ರಯಕ್ಕೆ ಮಾರಬೇಕು. 28 ಯಾವನಾದರೂ ಮನುಷ್ಯನನ್ನಾಗಲಿ ಪಶುವನ್ನಾಗಲಿ ಪಿತ್ರಾರ್ಜಿತಭೂವಿುಯನ್ನಾಗಲಿ ಬೇರೆ ಯಾವದನ್ನಾಗಲಿ ಕೇವಲ ಯೆಹೋವನದಾಗಿರುವದಕ್ಕೆ ಹರಕೆಮಾಡಿಕೊಟ್ಟರೆ ಅದನ್ನು ಮಾರಲೂ ಕೂಡದು ಬಿಡಿಸಿಕೊಳ್ಳಲೂ ಕೂಡದು. ಕೇವಲ ಯೆಹೋವನದಾಗಿರುವದಕ್ಕೆ ಸಮರ್ಪಿಸುವಂಥದೆಲ್ಲಾ ಯೆಹೋವನಿಗೆ ಮೀಸಲಾಗಿಯೇ ಇರಬೇಕು. 29 ಕೇವಲ ಯೆಹೋವನ ಸೊತ್ತಾಗುವದಕ್ಕೆ ಒಪ್ಪಿಸಲ್ಪಟ್ಟದ್ದು ಮನುಷ್ಯ ಜಾತಿಯಾದರೆ ಬಿಡಿಸುವದಕ್ಕಾಗದು; ಅವನಿಗೆ ಮರಣವೇ ಆಗಬೇಕು. 30 ಹೊಲದ ಬೆಳೆಯಾಗಲಿ ತೋಟದ ಹಣ್ಣುಗಳಾಗಲಿ ಭೂವಿುಯಿಂದುಂಟಾದ ಎಲ್ಲಾ ಆದಾಯದಲ್ಲಿ ಹತ್ತನೆಯ ಪಾಲು ಯೆಹೋವನದಾಗಿರಬೇಕು; ಅದು ಯೆಹೋವನಿಗೆ ಮೀಸಲಾದದ್ದು. 31 ಯಾವನಾದರೂ ತಾನು ಕೊಡಬೇಕಾದ ಹತ್ತನೆಯ ಪಾಲಿನಲ್ಲಿ ಏನಾದರೂ ಬಿಡಿಸಿಕೊಳ್ಳಬೇಕೆಂದಿದ್ದರೆ ಅಷ್ಟರೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು. 32 ದನಗಳೇಯಾಗಲಿ ಆಡುಕುರಿಗಳೇಯಾಗಲಿ ಒಡೆಯನು ಲೆಕ್ಕಿಸಿದ ಎಲ್ಲಾ ಪಶುಗಳಲ್ಲಿ ಪ್ರತಿ ಹತ್ತನೆಯದು ಯೆಹೋವನಿಗೆ ಮೀಸಲಾಗಿರಬೇಕು. 33 ಆ ಪಶುವು ಒಳ್ಳೇದೋ ಕೆಟ್ಟದ್ದೋ ಎಂದು ನೋಡಬಾರದು; ಅದನ್ನು ಬದಲಾಯಿಸಬಾರದು. ಕೊಡಬೇಕಾದವನು ಅದನ್ನು ಬದಲಾಯಿಸಿದ್ದಾದರೆ ಅವನು ಮೊದಲಾಗಿ ಲೆಕ್ಕಿಸಿದ್ದೂ ಅದಕ್ಕೆ ಬದಲಾಗಿ ಇಟ್ಟದ್ದೂ ಎರಡೂ ಯೆಹೋವನವಾಗಿರಬೇಕು; ಅದನ್ನು ಬಿಡಿಸಿಕೊಳ್ಳುವ ಅಧಿಕಾರವಿರುವದಿಲ್ಲ. 34 ಯೆಹೋವನು ಸೀನಾಯಿಬೆಟ್ಟದಲ್ಲಿ ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಗಳು ಇವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India