Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 19 - ಕನ್ನಡ ಸತ್ಯವೇದವು J.V. (BSI)


ದೇವಜನರಾದ ಇಸ್ರಾಯೇಲ್ಯರು ಅನುಸರಿಸಬೇಕಾದ ಧರ್ಮವಿಧಿಗಳು

1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

2 ನೀನು ಇಸ್ರಾಯೇಲ್ಯರ ಸಮೂಹದವರಿಗೆ ಹೀಗೆ ಆಜ್ಞಾಪಿಸಬೇಕು - ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.

3 ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ನೇವಿುಸಿರುವ ಸಬ್ಬತ್‍ದಿನಗಳನ್ನು ಆಚರಿಸಬೇಕು. ನಾನು ನಿಮ್ಮ ದೇವರಾದ ಯೆಹೋವನು.

4 ಸುಳ್ಳುದೇವರುಗಳ ಕಡೆಗೆ ತಿರುಗಿಕೊಳ್ಳಬಾರದು; ದೇವರೆಂದು ಎರಕದ ವಿಗ್ರಹಗಳನ್ನು ಮಾಡಿಕೊಳ್ಳಬಾರದು. ನಾನು ನಿಮ್ಮ ದೇವರಾದ ಯೆಹೋವನು.

5 ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ ಆತನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಸಮರ್ಪಿಸಬೇಕು.

6 ನೀವು ಮಾಡುವ ಯಜ್ಞದ ಮಾಂಸವನ್ನು ಆ ದಿನದಲ್ಲಿಯಾಗಲಿ ಮರುದಿನದಲ್ಲಿಯಾಗಲಿ ಊಟಮಾಡಬೇಕು. ಮೂರನೆಯ ದಿನದವರೆಗೆ ಏನಾದರೂ ವಿುಕ್ಕಿದ್ದರೆ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

7 ಮೂರನೆಯ ದಿನದ ತನಕ ವಿುಕ್ಕಿದ್ದು ಹೇಯವಾದದರಿಂದ ಅದರಲ್ಲಿ ಏನಾದರೂ ತಿಂದರೆ ಆ ಯಜ್ಞವು ಯೆಹೋವನಿಗೆ ಅಂಗೀಕಾರವಾಗುವದೇ ಇಲ್ಲ.

8 ಅದರಲ್ಲಿ ಏನಾದರೂ ತಿಂದವನು ಯೆಹೋವನ ದ್ರವ್ಯವನ್ನು ಹೊಲೆಮಾಡಿದವನಾದದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು; ಅವನು ಕುಲದಿಂದ ತೆಗೆದುಹಾಕಲ್ಪಡಬೇಕು.

9 ನೀವು ಪೈರುಗಳನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವದನ್ನೆಲ್ಲಾ ಕೊಯ್ಯಬಾರದು; ಮತ್ತು ಕೊಯ್ದಾಗ ಹಕ್ಕಲಾಯಬಾರದು.

10 ದ್ರಾಕ್ಷೆಯ ತೋಟಗಳಲ್ಲಿಯೂ ಹಕ್ಕಲಾಯಕೂಡದು; ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡವರಿಗೂ ಪರದೇಶಿಗಳಿಗೂ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವನು.

11 ಕದಿಯಬಾರದು; ಮೋಸಮಾಡಬಾರದು; ಒಬ್ಬರಿಗೊಬ್ಬರು ಸುಳ್ಳಾಡಬಾರದು.

12 ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು.

13 ಮತ್ತೊಬ್ಬನನ್ನು ಬಲಾತ್ಕರಿಸಬಾರದು; ಅವನ ಸೊತ್ತನ್ನು ಅಪಹರಿಸಬಾರದು. ಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲಿ ಇಟ್ಟುಕೊಳ್ಳಬಾರದು.

14 ಕಿವುಡರನ್ನು ದೂಷಿಸಬಾರದು; ಕುರುಡರು ನಡೆಯುವ ದಾರಿಯಲ್ಲಿ ಕಾಲು ಎಡವುವಂತೆ ಕಲ್ಲನ್ನು ಇಡಬಾರದು; ನಿಮ್ಮ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ಯೆಹೋವನು.

15 ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು.

16 ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು. ಮತ್ತೊಬ್ಬನಿಗೆ ಮರಣ ಶಿಕ್ಷೆಯಾಗಲೇಬೇಕೆಂದು ಛಲ ಹಿಡಿಯಬಾರದು. ನಾನು ಯೆಹೋವನು.

17 ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು.

18 ನಿಮ್ಮ ಸ್ವಜನರಲ್ಲಿ ಯಾರಿಗಾದರೂ ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು.

19 ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು. ಪಶುಗಳಿಗೆ ಬೇರೆ ಜಾತಿಯ ಪಶುಗಳನ್ನು ಹಾರಿಸಬಾರದು; ನಿಮ್ಮ ಹೊಲಗಳಲ್ಲಿ ವಿುಶ್ರಬೀಜಗಳನ್ನು ಬಿತ್ತಬಾರದು; ನಾರೂ ಉಣ್ಣೆಯೂ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು.

20 ಒಬ್ಬನ ಅಧೀನದಲ್ಲಿರುವ ದಾಸಿ ಹಣಕೊಡುವದರಿಂದಾಗಲಿ ಉಚಿತವಾಗಿಯಾಗಲಿ ಬಿಡುಗಡೆಯನ್ನು ಹೊಂದದೆ ಇರುವಲ್ಲಿ ಯಾವನಾದರೂ ಅವಳಲ್ಲಿ ಕೂಡಿದರೆ ಅವರಿಗೆ ವಿಧಿಸಬೇಕಾದ ಶಿಕ್ಷೆಯ ವಿಷಯವಾಗಿ ನ್ಯಾಯವಿಚಾರಣೆಯಾಗಬೇಕು. ಅವಳು ಸ್ವತಂತ್ರಳಲ್ಲವಾದದರಿಂದ ಅವರಿಗೆ ಮರಣಶಿಕ್ಷೆಯನ್ನು ವಿಧಿಸಬಾರದು.

21 ಆ ಪುರುಷನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಯೆಹೋವನ ಸನ್ನಿಧಿಗೆ ದೇವದರ್ಶನದ ಗುಡಾರದ ಬಾಗಲಿಗೆ ಒಂದು ಟಗರನ್ನು ತರಬೇಕು.

22 ಅವನ ದೋಷಪರಿಹಾರಕ್ಕಾಗಿ ಯಾಜಕನು ಆ ಟಗರನ್ನು ಪ್ರಾಯಶ್ಚಿತ್ತಯಜ್ಞವಾಗಿ ಯೆಹೋವನಿಗೆ ಸಮರ್ಪಿಸಿ ಅವನಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವನಿಗೆ ಕ್ಷಮಾಪಣೆಯಾಗುವದು.

23 ನೀವು ಆ ದೇಶದಲ್ಲಿ ಸೇರಿದಾಗ ಆಹಾರಕ್ಕಾಗಿ ಯಾವ ಜಾತಿಯ ಹಣ್ಣಿನ ಸಸಿಯನ್ನು ನೆಟ್ಟರೂ ಅದರ ಫಲವನ್ನು ಮೂರು ವರುಷದ ತನಕ ಅಶುದ್ಧವೆಂದೆಣಿಸಿ ತಿನ್ನದಿರಬೇಕು.

24 ನಾಲ್ಕನೆಯ ವರುಷದಲ್ಲಿ ಅದರ ಎಲ್ಲಾ ಹಣ್ಣುಗಳೂ ದೇವರವಾಗಿರಬೇಕು; ಅವುಗಳನ್ನು ಯೆಹೋವನಿಗೆ ಕೃತಜ್ಞತೆಯ ಕಾಣಿಕೆಯನ್ನಾಗಿ ಸಮರ್ಪಿಸಬೇಕು.

25 ಐದನೆಯ ವರುಷದಲ್ಲಿ ಅದರಿಂದುಂಟಾಗುವ ಆದಾಯವು ನಿಮ್ಮದೇ ಆಗಿರುವದು; ಅದರ ಫಲಗಳನ್ನು ನೀವು ತಿನ್ನಬಹುದು. ನಾನು ನಿಮ್ಮ ದೇವರಾದ ಯೆಹೋವನು.

26 ರಕ್ತ ಸಹಿತವಾದ ಯಾವ ಮಾಂಸವನ್ನೂ ತಿನ್ನಬಾರದು. ಯಂತ್ರಮಂತ್ರಗಳನ್ನು ಮಾಡಬಾರದು, ಶಕುನಗಳನ್ನು ನೋಡಬಾರದು.

27 ಚಂಡಿಕೆ ಬಿಡಬಾರದು, ಗಡ್ಡವನ್ನು ವಿಕಾರಗೊಳಿಸಬಾರದು.

28 ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು. ಶರೀರದ ಮೇಲೆ ಹಚ್ಚೇ ಚುಚ್ಚಿಸಿಕೊಳ್ಳಬಾರದು. ನಾನು ಯೆಹೋವನು.

29 ಮಗಳನ್ನು ಬಸವಿಬಿಟ್ಟು ಸೂಳೆಯನ್ನಾಗಿ ಮಾಡಬಾರದು. ಹಾಗೆ ಮಾಡಿದರೆ ಸೂಳೆಗಾರಿಕೆ ಪ್ರಬಲವಾಗಿ ದೇಶದಲ್ಲೆಲ್ಲಾ ತುಂಬಿಹೋಗುವದು.

30 ನಾನು ನೇವಿುಸಿರುವ ಸಬ್ಬತ್‍ದಿನಗಳನ್ನು ಆಚರಿಸಬೇಕು; ನನ್ನ ದೇವಸ್ಥಾನದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನು ಯೆಹೋವನು.

31 ಸತ್ತವರಲ್ಲಿ ವಿಚಾರಿಸುವವರ ಮತ್ತು ಬೇತಾಳಿಕರ ಹತ್ತಿರ ಹೋಗಬಾರದು; ಅವರ ಆಲೋಚನೆಯನ್ನು ಕೇಳಿ ಅಶುದ್ಧರಾಗಬಾರದು. ನಾನು ನಿಮ್ಮ ದೇವರಾದ ಯೆಹೋವನು.

32 ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ನಾನು ಯೆಹೋವನು.

33 ನಿಮ್ಮ ದೇಶದಲ್ಲಿ ಇಳುಕೊಂಡಿರುವ ಪರದೇಶದವರಿಗೆ ಅನ್ಯಾಯವೇನೂ ಮಾಡಬಾರದು.

34 ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.

35 ನ್ಯಾಯವಿಚಾರಣೆ, ತೂಕ, ಅಳತೆ, ಪರಿಮಾಣ ಇವುಗಳಲ್ಲಿ ನೀವು ನ್ಯಾಯವಿರುದ್ಧವಾಗಿ ನಡೆಯಬಾರದು.

36 ತಕ್ಕಡಿ, ತೂಕದ ಕಲ್ಲು, ಕೊಳಗ, ಸೇರು ಇವುಗಳೆಲ್ಲಾ ನ್ಯಾಯವಾಗಿಯೇ ಇರಬೇಕು. ನಾನು ನಿಮ್ಮನ್ನು ಐಗುಪ್ತದೇಶದಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು.

37 ಆದದರಿಂದ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು. ನಾನು ಯೆಹೋವನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು