ಯಾಜಕಕಾಂಡ 17 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರು ಯಾವ ದುರಾಚಾರಕ್ಕೂ ಒಳಗಾಗದೆ ದೇವಜನರಿಗೆ ತಕ್ಕಂತೆಯೇ ನಡೆದುಕೊಳ್ಳಬೇಕೆಂಬದು ( 17—26 ) ಯಜ್ಞಪಶುಗಳನ್ನು ದೇವಸ್ಥಾನದಲ್ಲಿಯೇ ವಧಿಸಬೇಕೆಂದೂ ರಕ್ತವನ್ನು ಭುಜಿಸಲೇಬಾರದೆಂದೂ ವಿಧಿಸುವದು 1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 2 ನೀನು ಆರೋನನಿಗೂ ಅವನ ಮಕ್ಕಳಿಗೂ ಇಸ್ರಾಯೇಲ್ಯರಿಗೂ ಹೀಗೆ ಹೇಳಬೇಕು. ಯೆಹೋವನು ಆಜ್ಞಾಪಿಸುವದೇನಂದರೆ - 3 ಇಸ್ರಾಯೇಲ್ಯರಲ್ಲಿ ಯಾವನಾದರೂ ಹೋರಿಯನ್ನಾಗಲಿ ಕುರಿಯನ್ನಾಗಲಿ ಆಡನ್ನಾಗಲಿ ಕೊಯ್ಯುವಾಗ ಅದನ್ನು ಯೆಹೋವನಿಗೆ ಸಮರ್ಪಿಸುವದಕ್ಕಾಗಿ ಆತನ ಗುಡಾರದ ಬಾಗಲಿಗೆ ತಾರದೆ 4 ಪಾಳೆಯದ ಒಳಗಾಗಲಿ ಹೊರಗಾಗಲಿ ಕೊಯಿದರೆ ಅವನನ್ನು ಕೊಲೆಪಾತಕ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದದರಿಂದ ಕುಲದಿಂದ ತೆಗೆದುಹಾಕಲ್ಪಡಬೇಕು. 5 ಯಾಕಂದರೆ ಯಜ್ಞಪಶುಗಳನ್ನು ಬೈಲಿನಲ್ಲಿ ವಧಿಸುತ್ತಿದ್ದ ಇಸ್ರಾಯೇಲ್ಯರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಲಿಗೆ ಯಾಜಕನ ಬಳಿಗೆ ತಂದು ಯೆಹೋವನ ಮುಂದೆ ಸಮಾಧಾನಯಜ್ಞರೂಪವಾಗಿ ಯೆಹೋವನಿಗೇ ಸಮರ್ಪಿಸಬೇಕು. 6 ಯಾಜಕನು ಅವುಗಳ ರಕ್ತವನ್ನು ದೇವದರ್ಶನದ ಗುಡಾರದ ಬಾಗಲಿನ ಮುಂದಿರುವ ಯಜ್ಞವೇದಿಗೆ ಎರಚಿ ಅವುಗಳ ಕೊಬ್ಬನ್ನು ಹೋಮಮಾಡಿ ಯೆಹೋವನಿಗೆ ಸುವಾಸನೆಯನ್ನುಂಟುಮಾಡಬೇಕು. 7 ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಅವರ ಸಂತತಿಯವರಿಗೂ ಇದು ಶಾಶ್ವತ ನಿಯಮ. 8 ಮತ್ತು ನೀನು ಅವರಿಗೆ ಹೀಗೆ ಆಜ್ಞಾಪಿಸು - ಇಸ್ರಾಯೇಲ್ಯರಲ್ಲಿ ಆಗಲಿ ಅವರ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ಸರ್ವಾಂಗಹೋಮವನ್ನು ಅಥವಾ ಬೇರೆ ವಿಧವಾದ ಯಜ್ಞವನ್ನು ಮಾಡುವಾಗ 9 ಅದರ ಪಶುವನ್ನು ಯೆಹೋವನಿಗೆ ಸಮರ್ಪಿಸುವದಕ್ಕಾಗಿ ದೇವದರ್ಶನದ ಗುಡಾರದ ಬಾಗಲಿಗೆ ತಾರದಿದ್ದರೆ ಅವನು ಕುಲದಿಂದ ತೆಗೆದುಹಾಕಲ್ಪಡಬೇಕು. 10 ಇದಲ್ಲದೆ ಇಸ್ರಾಯೇಲ್ಯರಲ್ಲಿಯಾಗಲಿ ಅವರ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು. 11 ಯಾಕಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದಷ್ಟೆ. 12 ಆದದರಿಂದ - ನಿಮ್ಮಲ್ಲಿಯಾಗಲಿ ನಿಮ್ಮ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದೇನೆ. 13 ಇಸ್ರಾಯೇಲ್ಯರಲ್ಲಿಯಾಗಲಿ ಅವರ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ಬೇಟೆಯಾಡಿ ತಿನ್ನತಕ್ಕ ಮೃಗವನ್ನು ಇಲ್ಲವೆ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು. 14 ಯಾಕಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರವು. ಆದಕಾರಣ ನಾನು ಇಸ್ರಾಯೇಲ್ಯರಿಗೆ - ಪ್ರತಿ ಪ್ರಾಣಿಗೂ ರಕ್ತವೇ ಪ್ರಾಣಾಧಾರವಾದದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನೂ ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರವಾಗಬೇಕೆಂದು ಆಜ್ಞಾಪಿಸಿದ್ದೇನೆ. 15 ತಾನಾಗಿ ಸತ್ತು ಬಿದ್ದದ್ದನ್ನಾಗಲಿ ಕಾಡುಮೃಗಕೊಂದದ್ದನ್ನಾಗಲಿ ತಿಂದವನು ಸ್ವದೇಶದವನಾದರೂ ಅನ್ಯದೇಶದವನಾದರೂ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಆ ಸಾಯಂಕಾಲದವರೆಗೆ ಅಶುದ್ಧನಾಗಿದ್ದು ಬಳಿಕ ಶುದ್ಧನಾಗುವನು. 16 ಅವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳದೆಯೂ ಸ್ನಾನಮಾಡದೆಯೂ ಹೋದರೆ ತನ್ನ ಪಾಪದ ಫಲವನ್ನು ಅನುಭವಿಸಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India