ಮೀಕ 6 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲಿನ ಮಾನಸಾಂತರ ( 6 , 7 ) ಯೆಹೋವನಿಗೂ ಆತನ ಜನರಿಗೂ ಇರುವ ವ್ಯಾಜ್ಯ 1 ನೀನೆದ್ದು ಬೆಟ್ಟಗಳ ಮುಂದೆ ವ್ಯಾಜ್ಯಹಾಕು, ನಿನ್ನ ಧ್ವನಿಯು ಗುಡ್ಡಗಳಿಗೆ ಕೇಳಿಸಲಿ ಎಂದು ಯೆಹೋವನು [ನನಗೆ] ನುಡಿಯುವದನ್ನು ಆಲಿಸಿರಿ. 2 ಬೆಟ್ಟಗಳೇ, ಯೆಹೋವನ ವ್ಯಾಜ್ಯವನ್ನು ಕೇಳಿರಿ! ಭೂವಿುಯ ಶಾಶ್ವತವಾದ ಅಸ್ತಿವಾರಗಳೇ, ಕಿವಿಗೊಡಿರಿ; ಯೆಹೋವನಿಗೆ ಆತನ ಪ್ರಜೆಯ ಮೇಲೆ ವ್ಯಾಜ್ಯವಿದೆ; ಆತನು ಇಸ್ರಾಯೇಲಿನೊಂದಿಗೆ ವಿವಾದಿಸುತ್ತಾನೆ. 3 ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆನು, ನಿನ್ನನ್ನು ಯಾವ ವಿಷಯದಲ್ಲಿ ಬೇಸರಗೊಳಿಸಿದೆನು? ನನ್ನ ಮೇಲೆ ಸಾಕ್ಷಿ ಹೇಳು. 4 ನಾನು ನಿನ್ನನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ ದಾಸತ್ವದಿಂದ ಬಿಡಿಸಿದೆನು; ಮೋಶೆಯನ್ನೂ ಆರೋನನನ್ನೂ ವಿುರ್ಯಾಮಳನ್ನೂ ನಿನಗೆ ನಾಯಕರನ್ನಾಗಿ ಕಳುಹಿಸಿದೆನು. 5 ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಕೊಟ್ಟ ಸಲಹೆಯನ್ನೂ ಬೆಯೋರನ ಮಗನಾದ ಬಿಳಾಮನು ಹೇಳಿದ ಉತ್ತರವನ್ನೂ ಜ್ಞಾಪಕಮಾಡಿಕೊಳ್ಳಿರಿ; ಯೆಹೋವನ ಧರ್ಮಕಾರ್ಯಗಳು ನಿಮ್ಮ ಗ್ರಹಿಕೆಗೆ ಬರುವ ಹಾಗೆ ನೀವು ಶಿಟ್ಟೀಮನ್ನು ಬಿಟ್ಟಂದಿನಿಂದ ಗಿಲ್ಗಾಲನ್ನು ಸೇರುವ ತನಕ ನಡೆದದನ್ನೆಲ್ಲಾ ಸ್ಮರಿಸಿಕೊಳ್ಳಿರಿ. 6 ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ, ಯಾವದನ್ನರ್ಪಿಸಿ ಮಹೋನ್ನತದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನೂ ಒಂದು ವರುಷದ ಕರುಗಳನ್ನೂ ತೆಗೆದುಕೊಂಡುಬಂದು ಆತನ ಮುಂದೆ ಕಾಣಿಸಿಕೊಳ್ಳಲೋ? 7 ಸಾವಿರಾರು ಟಗರುಗಳನ್ನೂ ಲಕ್ಷೋಪಲಕ್ಷ ತೈಲಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚಾನೇ? ನನ್ನ ದ್ರೋಹದ ನಿವಿುತ್ತ ನನ್ನ ಚೊಚ್ಚಲ ಮಗನನ್ನು ಅರ್ಪಿಸಲೋ, ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ? 8 ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು? ಯೆರೂಸಲೇವಿುನ ವಂಚನೆಹಿಂಸೆಗಳೂ ಅದಕ್ಕಾಗುವ ಆಶಾಭಂಗವೂ 9 ಯೆಹೋವನು ದನಿಗೈದು ಪಟ್ಟಣದ ಕಡೆಗೆ ಕೂಗುತ್ತಾನೆ; (ನಿನ್ನ ನಾಮದಲ್ಲಿ ಭಯಭಕ್ತಿಯಿಡುವದು ಸುಜ್ಞಾನವೇ;) [ಬೀಸುವ] ದಂಡಕ್ಕೆ ಕಿವಿಗೊಡಿರಿ, ಅದನ್ನು ನೇವಿುಸಿದವನು ಯಾವನೆಂದು ತಿಳಿದುಕೊಳ್ಳಿರಿ. 10 ದುಷ್ಟನ ಮನೆಯಲ್ಲಿ ದುಷ್ಟತನದಿಂದ ಗಳಿಸಿದ ನಿಧಿ; ಅಸಹ್ಯಕರವಾದ ಕಿರಿಯಳತೆ, ಇವು ಇನ್ನೂ ಸಿಕ್ಕುತ್ತಿವೆಯೋ? 11 ಕಳ್ಳತಕ್ಕಡಿಯೂ ಮೋಸದ ಕಲ್ಲಿನ ಚೀಲವೂ ಒಬ್ಬನಲ್ಲಿದ್ದರೆ ಅವನು ನಿರ್ದೋಷಿಯೋ? 12 ಪಟ್ಟಣದ ಧನಿಕರು ತುಂಬಾ ಬಲಾತ್ಕಾರಿಗಳು, ಅದರ ನಿವಾಸಿಗಳು ಸುಳ್ಳುಗಾರರು, ಅವರ ಬಾಯನಾಲಿಗೆಯು ಮೋಸಕರ. 13 ಆದಕಾರಣ, [ಯೆರೂಸಲೇಮೇ,] ನಿನಗೆ ಕ್ರೂರವಾದ ಪೆಟ್ಟುಹಾಕುವೆನು. ನಿನ್ನ ಪಾಪಗಳ ನಿವಿುತ್ತ ನಿನ್ನನ್ನು ಹಾಳುಮಾಡುವೆನು. 14 ನೀನು ಉಂಡರೂ ನಿನಗೆ ತೃಪ್ತಿಯಾಗದು; ಹಸಿವೆಯು ನಿನ್ನೊಳಗೆ ಇದ್ದೇ ಇರುವದು; ನೀನು [ನಿನ್ನವರನ್ನು] ಕಳುಹಿಸಿಬಿಟ್ಟರೂ ಅವರನ್ನು ಪಾರುಮಾಡಲಾರಿ; ಪಾರುಮಾಡಿದವರನ್ನೂ ಕತ್ತಿಗೆ ತುತ್ತನ್ನಾಗಿ ಮಾಡುವೆನು. 15 ನೀನು ಬಿತ್ತಿದರೂ ಕೊಯ್ಯುವದಿಲ್ಲ; ಎಣ್ಣೆಯ ಕಾಯಿಯನ್ನು ತುಳಿದರೂ ಮೈಗೆ ಎಣ್ಣೆ ಹಚ್ಚಿಕೊಳ್ಳುವದಿಲ್ಲ, ದ್ರಾಕ್ಷೆಯ ಹಣ್ಣನ್ನು ತುಳಿದರೂ ದ್ರಾಕ್ಷಾರಸವನ್ನು ಕುಡಿಯುವದಿಲ್ಲ. 16 ಒಮ್ರಿಯ ನಿಯಮಗಳೂ ಅಹಾಬನ ಮನೆತನದ ಸಕಲಾಚಾರಗಳೂ [ನಿನ್ನಲ್ಲಿ] ಸಲ್ಲುತ್ತಿವೆ, ನಿನ್ನವರು ಅವರ ದುರ್ನೀತಿಗೆ ಅನುಸಾರವಾಗಿ ನಡೆಯುತ್ತಾರೆ; ಆದಕಾರಣ ನಾನು ನಿನ್ನನ್ನು ಬೆರಗಿಗೂ ನನ್ನ ನಿವಾಸಿಗಳನ್ನು ಸಿಳ್ಳಿಗೂ ಗುರಿಮಾಡುವೆನು; ನನ್ನ ಜನರಿಗೆ ಸಂಭವಿಸಬೇಕಾದ ಅವಮಾನವನ್ನು ಅನುಭವಿಸುವಿರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India