Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮಾರ್ಕ 5 - ಕನ್ನಡ ಸತ್ಯವೇದವು J.V. (BSI)


ದೆವ್ವಗಳ ದಂಡಿನಿಂದ ಹಿಡಿಯಲ್ಪಟ್ಟವನನ್ನು ಕುರಿತದ್ದು
( ಮತ್ತಾ. 8.28-34 ; ಲೂಕ. 8.26-39 )

1 ಆಮೇಲೆ ಅವರು ಸಮುದ್ರದ ಆಚೇದಡಕ್ಕೆ ಗೆರಸೇನರ ಸೀಮೆಗೆ ಮುಟ್ಟಿದರು.

2 ಆತನು ದೋಣಿಯಿಂದ ಇಳಿದುಬಂದ ಕೂಡಲೆ ದೆವ್ವಹಿಡಿದವನೊಬ್ಬನು ಸಮಾಧಿಯ ಗವಿಗಳೊಳಗಿಂದ ಆತನೆದುರಿಗೆ ಬಂದನು.

3-4 ಅವನಿಗೆ ಸಮಾಧಿಯ ಗವಿಗಳೇ ವಾಸಸ್ಥಳವಾಗಿದ್ದವು. ಅವನನ್ನು ಅನೇಕಸಾರಿ ಬೇಡಿಗಳಿಂದಲೂ ಸರಪಣಿಗಳಿಂದಲೂ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ಮುರಿದುಹಾಕಿದ್ದನು; ಅವನನ್ನು ಇನ್ನು ಯಾರೂ ಸರಪಣಿಯಿಂದಾದರೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವದಕ್ಕೆ ಯಾರಿಂದಲೂ ಆಗಲಿಲ್ಲ.

5 ಅವನು ನಿತ್ಯ ರಾತ್ರಿಹಗಲು ಸಮಾಧಿಯ ಗವಿಗಳಲ್ಲಿಯೂ ಗುಡ್ಡಗಳಲ್ಲಿಯೂ ಆರ್ಭಟಿಸುತ್ತಾ ಕಲ್ಲುಗಳಿಂದ ತನ್ನನ್ನು ಕಡಿದುಕೊಳ್ಳುತ್ತಾ ಇದ್ದನು.

6 ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು ಮಹಾಶಬ್ದದಿಂದ ಆರ್ಭಟಿಸಿ -

7 ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಾಣೆ, ನನ್ನನ್ನು ಕಾಡಬೇಡ ಎಂದು ಹೇಳಿದನು.

8 ಯಾಕಂದರೆ - ಎಲಾ ದೆವ್ವಾ, ಇವನನ್ನು ಬಿಟ್ಟುಹೋಗು ಎಂದು ಯೇಸು ಹೇಲಿದನು.

9 ಮತ್ತು - ನಿನ್ನ ಹೆಸರೇನೆಂದು ಅವನನ್ನು ಕೇಳಿದ್ದಕ್ಕೆ ಅವನು - ನನ್ನ ಹೆಸರು ದಂಡು; ಯಾಕಂದರೆ ನಾವು ಬಹು ಮಂದಿ ಇದ್ದೇವೆ ಎಂದು ಹೇಳಿ -

10 ನಮ್ಮನ್ನು ಈ ಸೀಮೆಯಿಂದ ಹೊರಡಿಸಬೇಡವೆಂದು ಆತನನ್ನು ಬಹಳವಾಗಿ ಬೇಡಿಕೊಂಡನು.

11 ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.

12 ಆ ದೆವ್ವಗಳು - ಆ ಹಂದಿಗಳೊಳಗೆ ಸೇರಿಕೊಳ್ಳುವದಕ್ಕೆ ನಮ್ಮನ್ನು ಕಳುಹಿಸಿಕೊಡು ಎಂದು ಬೇಡಿಕೊಂಡವು.

13 ಆತನು - ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು ಆ ದೆವ್ವಗಳು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಆ ಗುಂಪು ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ಅಲ್ಲಿ ಉಸುರುಕಟ್ಟಿ ಸತ್ತಿತು. ಹೆಚ್ಚು ಕಡಿಮೆ ಎರಡು ಸಾವಿರ ಹಂದಿಗಳಿದ್ದವು.

14 ಅವುಗಳನ್ನು ಮೇಯಿಸುವವರು ಓಡಿಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದು ಆ ದೆವ್ವಹಿಡಿದಿದ್ದವನು,

15 ಅಂದರೆ ದೆವ್ವಗಳ ದಂಡಿನಿಂದ ಹಿಡಿಯಲ್ಪಟ್ಟಿದ್ದವನು, ಬಟ್ಟೆಗಳನ್ನು ಹಾಕಿಕೊಂಡು ಸ್ವಸ್ಥಬುದ್ಧಿಯಿಂದ ಕೂತಿರುವದನ್ನು ನೋಡಿ ಹೆದರಿದರು.

16 ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದಿದ್ದವನಿಗೆ ಹೀಗೆ ಹೀಗಾಯಿತೆಂಬದನ್ನೂ ಹಂದಿಗಳ ವಿಷಯವನ್ನೂ ಅವರಿಗೆ ವಿವರಿಸಲು

17 ಅವರು ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.

18 ಆತನು ದೋಣಿಯನ್ನು ಹತ್ತುವಾಗ ಆ ದೆವ್ವಹಿಡಿದಿದ್ದವನು - ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡತೊಡಗಿದನು.

19 ಆದರೆ ಆತನು ಅವನನ್ನು ಇರಗೊಡದೆ ಅವನಿಗೆ - ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಸ್ವಾವಿುಯು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು ಅಂದನು.

20 ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ದೆಕಪೊಲಿ ಎಂಬ ಸೀಮೆಯಲ್ಲಿ ಸಾರುವದಕ್ಕೆ ಪ್ರಾರಂಭಿಸಿದನು; ಎಲ್ಲರೂ ಆಶ್ಚರ್ಯಪಟ್ಟರು.


ಯೇಸು ಸತ್ತ ಹುಡುಗಿಯನ್ನು ಬದುಕಿಸಿದ್ದು; ಮತ್ತು ಒಬ್ಬ ಸ್ತ್ರೀಯ ರಕ್ತಕುಸುಮ ರೋಗವನ್ನು ವಾಸಿಮಾಡಿದ್ದು
( ಮತ್ತಾ. 9.18-26 ; ಲೂಕ. 8.40-56 )

21 ಯೇಸು ತಿರಿಗಿ ದೋಣಿಯಲ್ಲಿ ಈಚೇದಡಕ್ಕೆ ಬಂದಾಗ ಜನರು ಬಹು ದೊಡ್ಡ ಗುಂಪಾಗಿ ಆತನ ಬಳಿಗೆ ಬಂದರು; ಆತನು ಸಮುದ್ರದ ದಡದಲ್ಲಿದ್ದನು.

22 ಆಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನೆಂಬವನು ಬಂದು ಯೇಸುವನ್ನು ಕಂಡು ಆತನ ಪಾದಗಳಿಗೆ ಬಿದ್ದು -

23 ನನ್ನ ಚಿಕ್ಕ ಮಗಳು ಈಗ ಸಾಯುತ್ತಾಳೆ; ಆಕೆಯು ವಾಸಿಯಾಗಿ ಬದುಕಿಕೊಳ್ಳುವಂತೆ ನೀನು ಬಂದು ಆಕೆಯ ಮೇಲೆ ಕೈಯಿಡಬೇಕು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.

24 ಆತನು ಅವನ ಸಂಗಡ ಹೋದನು; ಮತ್ತು ಬಹು ಜನರು ಆತನನ್ನು ನೂಕಿಕೊಂಡು ಹಿಂದೆ ಹೋದರು.

25 ಆಗ ಹನ್ನೆರಡು ವರುಷದಿಂದ ರಕ್ತ ಕುಸುಮರೋಗವಿದ್ದ ಒಬ್ಬ ಹೆಂಗಸು ಬಂದಳು.

26 ಆಕೆಯು ಅನೇಕ ವೈದ್ಯರಿಂದ ಬಹು ಕಷ್ಟವನ್ನು ಅನುಭವಿಸಿ ಕೈಯಲ್ಲಿದ್ದದ್ದನ್ನೆಲ್ಲಾ ಕಳಕೊಂಡರೂ ರೋಗವು ಹೆಚ್ಚುತ್ತಾ ಬಂದದ್ದೇ ಹೊರತು ಮತ್ತೇನು ಪ್ರಯೋಜನವನ್ನೂ ಹೊಂದಿರಲಿಲ್ಲ.

27-28 ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿ - ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು ಎಂದು ಆಲೋಚಿಸಿ

29 ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಗೆ ರಕ್ತಹರಿಯುವದು ನಿಂತುಹೋದದರಿಂದ ಆಕೆಯು - ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನೊಳಗೆ ತಿಳುಕೊಂಡಳು.

30 ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿನಲ್ಲಿ ಹಿಂತಿರುಗಿ - ನನ್ನ ಉಡುಪನ್ನು ಯಾರು ಮುಟ್ಟಿದರು? ಎಂದು ಕೇಳಲು

31 ಆತನ ಶಿಷ್ಯರು ಆತನಿಗೆ - ಜನರು ನಿನ್ನನ್ನು ನೂಕುವದನ್ನು ಕಂಡೂ ಕಂಡು ನನ್ನನ್ನು ಯಾರು ಮುಟ್ಟಿದರೆಂದು ಕೇಳುತ್ತೀಯಲ್ಲಾ ಎಂದು ಹೇಳಿದರು.

32 ಆದರೆ ಆತನು ಈ ಕೆಲಸ ಮಾಡಿದವಳನ್ನು ಕಾಣಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ

33 ಆ ಹೆಂಗಸು ತನಗಾದದ್ದನ್ನು ತಿಳುಕೊಂಡು ಅಂಜಿ ನಡುಗುತ್ತಾ ಬಂದು ಆತನಿಗೆ ಅಡ್ಡ ಬಿದ್ದು ಇದ್ದ ಸಂಗತಿಯನ್ನೆಲ್ಲಾ ಹೇಳಿದಳು.

34 ಆತನು ಆಕೆಗೆ - ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ ಎಂದು ಹೇಳಿದನು.

35 ಆತನು ಇನ್ನೂ ಮಾತಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು - ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವದು? ಅಂದರು.

36 ಅವರು ಆಡಿದ ಮಾತನ್ನು ಯೇಸು ಲಕ್ಷ್ಯಮಾಡದೆ ಸಭಾಮಂದಿರದ ಅಧಿಕಾರಿಗೆ - ಅಂಜಬೇಡ, ನಂಬಿಕೆ ಮಾತ್ರ ಇರಲಿ ಎಂದು ಹೇಳಿದನು.

37 ಮತ್ತು ಆತನು ಪೇತ್ರ, ಯಾಕೋಬ, ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರಗೊಡಲಿಲ್ಲ.

38 ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಆತನು ಗದ್ದಲವನ್ನೂ ಕೆಲವರು ಬಹಳವಾಗಿ ಅಳುವದನ್ನೂ ಗೋಳಾಡುವದನ್ನೂ ಕಂಡನು.

39 ಆತನು ಒಳಕ್ಕೆ ಹೋಗಿ - ನೀವು ಗದ್ದಲ ಮಾಡುವದೂ ಅಳುವದೂ ಯಾಕೆ? ಹುಡುಗಿ ಸತ್ತಿಲ್ಲ;

40 ನಿದ್ದೆಮಾಡುತ್ತಾಳೆ ಅನ್ನಲು ಅವರು ಆತನನ್ನು ಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರಕೊಂಡು ಹೋಗಿ ಅವಳ ಕೈಹಿಡಿದು -

41 ತಲಿಥಾ ಕೂಮ್ ಅಂದನು. ಆ ಮಾತಿಗೆ - ಅಮ್ಮಣ್ಣೀ, ಏಳನ್ನುತ್ತೇನೆ ಎಂದರ್ಥ.

42 ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರುಷ ವಯಸ್ಸಿನವಳು.

43 ಅವರು ಬಹಳ ಆಶ್ಚರ್ಯದಿಂದ ಬೆರಗಾದರು. ಆಮೇಲೆ ಆತನು ಅವರಿಗೆ - ಇದು ಯಾರಿಗೂ ತಿಳಿಯಬಾರದೆಂದು ಬಹು ಖಂಡಿತವಾಗಿ ಹೇಳಿ ಆ ಹುಡುಗಿಗೆ ಊಟಮಾಡಿಸಿರಿ ಅಂದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು