ಮಾರ್ಕ 3 - ಕನ್ನಡ ಸತ್ಯವೇದವು J.V. (BSI)1 ಇನ್ನೊಂದು ಸಮಯದಲ್ಲಿ ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈ ಬತ್ತಿಹೋದವನೊಬ್ಬನಿದ್ದನು. 2 ಅವರು ಆತನ ಮೇಲೆ ತಪ್ಪುಹೊರಿಸಬೇಕೆಂದು ಆಲೋಚಿಸಿ ಸಬ್ಬತ್ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚಿನೋಡುತ್ತಾ ಇದ್ದರು. 3 ಆತನು ಕೈಬತ್ತಿದ್ದವನಿಗೆ - ಎದ್ದು ನಡುವೆ ಬಾ ಎಂದು ಹೇಳಿ ಅವರಿಗೆ - 4 ಸಬ್ಬತ್ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ, ಕೇಡನ್ನು ಮಾಡುವದೋ? ಪ್ರಾಣವನ್ನು ಉಳಿಸುವದೋ, ತೆಗೆಯುವದೋ? ಎಂದು ಹೇಳಲು ಅವರು ಸುಮ್ಮನಿದ್ದರು. 5 ಆಗ ಆತನು ಅವರ ಮನಸ್ಸು ಕಲ್ಲಾಗಿರುವದನ್ನು ಕಂಡು ದುಃಖಪಟ್ಟು ಕೋಪದಿಂದ ಸುತ್ತಲೂ ಅವರನ್ನು ನೋಡಿ ಆ ಮನುಷ್ಯನಿಗೆ - ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದನು; ಕೈ ವಾಸಿಯಾಯಿತು. 6 ಫರಿಸಾಯರು ಹೊರಕ್ಕೆ ಹೋಗಿ ಕೂಡಲೆ ಹೆರೋದ್ಯರನ್ನು ಕೂಡಿಕೊಂಡು ಇವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು. ಯೇಸು ವಿಂಗಡವಾಗಿ ಹೋಗಿ ಹನ್ನೆರಡು ಮಂದಿ ಅಪೊಸ್ತಲರನ್ನು ನೇವಿುಸಿದ್ದು ( ಮತ್ತಾ. 10.1-4 ; ಲೂಕ. 6.12-19 ) 7 ಯೇಸು ತನ್ನ ಶಿಷ್ಯರ ಕೂಡ ಆ ಸ್ಥಳವನ್ನು ಬಿಟ್ಟು ಸಮುದ್ರದ ಬಳಿಗೆ ಹೋದನು. ಗಲಿಲಾಯದಿಂದ ಬಹುಜನರು ಆತನ ಹಿಂದೆ ಹೋದರು. 8 ಇದಲ್ಲದೆ ಆತನು ಇಂಥಿಂಥ ಕೆಲಸಗಳನ್ನು ಮಾಡುತ್ತಾನೆಂದು ಕೇಳಿ ಬಹುಜನರು ಯೂದಾಯದಿಂದಲೂ ಯೆರೂಸಲೇವಿುನಿಂದಲೂ ಇದೂಮಾಯದಿಂದಲೂ ಯೊರ್ದನ್ ಹೊಳೆಯ ಆಚೆಯಿಂದಲೂ ತೂರ್ ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಆತನ ಬಳಿಗೆ ಬಂದರು. 9 ಜನರು ಗುಂಪಾಗಿದ್ದದರಿಂದ ಮೈಮೇಲೆ ಬಿದ್ದು ನೂಕಾರೆಂದು ಆತನು ತನಗೆ ಒಂದು ದೋಣಿಯು ಸಿದ್ಧವಾಗಿರಲಿ ಎಂಬದಾಗಿ ಶಿಷ್ಯರಿಗೆ ಹೇಳಿದನು. 10 ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದದರಿಂದ ರೋಗಪೀಡಿತರಾಗಿದ್ದವರೆಲ್ಲರೂ ಆತನನ್ನು ಮುಟ್ಟಬೇಕೆಂದು ಮೇಲೆ ಬೀಳುತ್ತಿದ್ದರು. 11 ಮತ್ತು ದೆವ್ವಗಳು ಆತನನ್ನು ಕಂಡಾಗೆಲ್ಲಾ ಆತನ ಪಾದಕ್ಕೆ ಬಿದ್ದು - ನೀನು ದೇವಕುಮಾರನೆಂದು ಕೂಗುತ್ತಿದ್ದವು. 12 ಆದರೆ ಆತನು ತಾನು ಇಂಥವನೆಂಬದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಬಹು ಖಂಡಿತವಾಗಿ ಹೇಳಿದನು. 13 ಆಮೇಲೆ ಯೇಸು ಬೆಟ್ಟವನ್ನು ಹತ್ತಿ ತನಗೆ ಬೇಕಾದವರನ್ನು ಹತ್ತಿರಕ್ಕೆ ಕರೆಯಲು ಅವರು ಆತನ ಬಳಿಗೆ ಬಂದರು. 14 ಆತನು ಹನ್ನೆರಡು ಮಂದಿಯನ್ನು ಆರಿಸಿ ಅವರು ತನ್ನ ಸಂಗಡ ಇರಬೇಕೆಂತಲೂ 15 ದೆವ್ವಗಳನ್ನು ಬಿಡಿಸುವ ಅಧಿಕಾರವುಳ್ಳವರಾಗಿ ಸುವಾರ್ತೆಯನ್ನು ಸಾರುವದಕ್ಕೆ ತಾನು ಅವರನ್ನು ಕಳುಹಿಸುವೆನೆಂತಲೂ ಆ ಹನ್ನೆರಡು ಮಂದಿಯನ್ನು ಆರಿಸಿ ನೇವಿುಸಿದನು. 16 ಸೀಮೋನನೆಂಬವನಿಗೆ ಪೇತ್ರನೆಂದು ಹೆಸರನ್ನು ಇಟ್ಟನು. 17 ಜೆಬೆದಾಯನ ಮಗನಾದ ಯಾಕೋಬನಿಗೂ ಯಾಕೋಬನ ತಮ್ಮನಾದ ಯೋಹಾನನಿಗೂ ಬೊವನೆರ್ಗೆಸ್ ಅಂದರೆ ಗುಡುಗಿನ ಮರಿಗಳು ಎಂದು ಹೆಸರಿಟ್ಟನು. 18 ಉಳಿದವರು ಯಾರಂದರೆ, ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ, 19 ಯೇಸುವನ್ನು ಹಿಡುಕೊಟ್ಟ ಇಸ್ಕರಿಯೋತ ಯೂದ, ಇವರೇ. ಯೇಸುವಿನ ವೈರಿಗಳು ಆತನನ್ನು ದೂಷಿಸಿದ್ದು; ಆತನ ಸ್ವಂತ ಜನರು ಆತನ ವಿಷಯವಾಗಿ ಅನುಮಾನಪಟ್ಟದ್ದು ( ಮತ್ತಾ. 12.22-32 , 46-50 ; ಲೂಕ. 11.14-22 , 8.19-21 ) 20 ಆತನು ಮನೆಯೊಳಗೆ ಬಂದಾಗ ಜನರು ತಿರಿಗಿ ನೆರೆದದ್ದರಿಂದ ಊಟಕ್ಕೂ ಅವಕಾಶವಾಗಲಿಲ್ಲ. 21 ಇದನ್ನು ಕೇಳಿ ಆತನ ಬಂಧುಗಳು ಅವನಿಗೆ ಹುಚ್ಚುಹಿಡಿದದೆ ಎಂದು ಹೇಳಿ ಆತನನ್ನು ಹಿಡಿಯುವದಕ್ಕೆ ಹೊರಟರು. 22 ಇದಲ್ಲದೆ ಯೆರೂಸಲೇವಿುನಿಂದ ಬಂದಿದ್ದ ಶಾಸ್ತ್ರಿಗಳು - ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂತಲೂ ಇವನು ದೆವ್ವಗಳ ಒಡೆಯನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂತಲೂ ಹೇಳುತ್ತಿದ್ದರು. 23 ಆತನು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನಂದರೆ - ಸೈತಾನನು ಸೈತಾನನನ್ನು ಬಿಡಿಸುವದುಂಟೇ? 24 ಒಂದು ರಾಜ್ಯದಲ್ಲಿ ಭೇದಹುಟ್ಟಿದರೆ ಆ ರಾಜ್ಯವು ಉಳಿಯಲಾರದು; 25 ಒಂದು ಮನೆಯಲ್ಲಿ ಭೇದಹುಟ್ಟಿದರೆ ಆ ಮನೆಯು ನಿಲ್ಲಲಾರದು. 26 ಅದರಂತೆ ಸೈತಾನನು ತನಗೆ ವಿರೋಧವಾಗಿ ಎದ್ದು ತನ್ನಲ್ಲಿ ಭೇದ ಹುಟ್ಟಿಸಿಕೊಂಡರೆ ಅವನು ನಿಲ್ಲಲಾರದೆ ನಾಶವಾಗಿ ಹೋಗುವನು. 27 ಅದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ಹೊಕ್ಕು ಅವನ ಸೊತ್ತನ್ನು ಸುಲುಕೊಳ್ಳುವದಕ್ಕಾಗುವದಿಲ್ಲ; ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು. 28-30 ಇದಲ್ಲದೆ ಅವರು - ಇವನಿಗೆ ದೆವ್ವ ಹಿಡಿದದೆ ಎಂದು ಹೇಳಿದ್ದರಿಂದ ಆತನು ಅವರಿಗೆ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಮನುಷ್ಯರು ಎಷ್ಟು ದೂಷಿಸಿದಾಗ್ಯೂ ಅವರು ಮಾಡುವ ಎಲ್ಲಾ ಪಾಪಗಳಿಗೂ ದೂಷಣೆಗಳಿಗೂ ಕ್ಷಮಾಪಣೆ ಉಂಟಾಗುವದು, ಆದರೆ ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದನು; ಅವನು ಶಾಶ್ವತ ಪಾಪದೊಳಗೆ ಸೇರಿದವನಾದನು ಎಂದು ಹೇಳಿದನು. 31 ಜನರು ಆತನ ಸುತ್ತಲು ಕೂತುಕೊಂಡಿದ್ದಾಗ ಆತನ ತಾಯಿಯೂ ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೇ ಕಳುಹಿಸಿದರು. 32 ಆ ಜನರು ಆತನಿಗೆ - ನಿನ್ನ ತಾಯಿಯೂ ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿರುತ್ತಾರೆ ನೋಡು ಎಂದು ಹೇಳಿದ್ದಕ್ಕೆ 33 ಆತನು ಅವರಿಗೆ - ನನಗೆ ತಾಯಿಯೂ ತಮ್ಮಂದಿರೂ ಯಾರು? ಎಂದು ಹೇಳಿ 34 ತನ್ನ ಸುತ್ತಲು ಕೂತಿದ್ದವರನ್ನು ನೋಡಿ - ಇಗೋ, ನನ್ನ ತಾಯಿ, ನನ್ನ ತಮ್ಮಂದಿರು. 35 ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು ಅಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India