ಮಾರ್ಕ 14 - ಕನ್ನಡ ಸತ್ಯವೇದವು J.V. (BSI)ಅಧಿಕಾರಸ್ಥರು ಯೇಸುವನ್ನು ಕೊಲ್ಲುವದಕ್ಕೆ ಉಪಾಯ ಮಾಡಿದ್ದು; ಒಬ್ಬ ಸ್ತ್ರೀಯು ಪರಿಮಳತೈಲವನ್ನು ಆತನ ಮೇಲೆ ಹೊಯಿದದ್ದು ( ಮತ್ತಾ. 26.1-16 ; ಲೂಕ. 22.1-6 ; ಯೋಹಾ. 11.47-53 , 12.1-8 ) 1 ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವದಕ್ಕೆ ಇನ್ನೂ ಎರಡು ದಿನಗಳಿದ್ದಾಗ ಮಹಾಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲುವದಕ್ಕೆ ಮಾರ್ಗವನ್ನು ಹುಡುಕುತ್ತಿದ್ದರು. 2 ಯಾಕಂದರೆ - ಹಬ್ಬದಲ್ಲಿ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು ಎಂದು ಮಾತಾಡಿಕೊಂಡರು. 3 ಆತನು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಇದ್ದು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಆ ಭರಣಿಯನ್ನು ಒಡೆದು ತೈಲವನ್ನು ಆತನ ತಲೆಯ ಮೇಲೆ ಹೊಯಿದಳು. 4 ಆದರೆ ಕೆಲವರು ತಮ್ಮೊಳಗೆ ಕೋಪಗೊಂಡು - ಈ ತೈಲವನ್ನು ನಷ್ಟಮಾಡಿದ್ದೇಕೆ? 5 ಇದನ್ನು ಮುನ್ನೂರು ಹಣಕ್ಕಿಂತ ಹೆಚ್ಚು ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಎಂದು ಹೇಳಿ ಆಕೆಗೆ ಛೀ ಹಾಕಿದರು. 6 ಆದರೆ ಯೇಸು - ಈಕೆಯನ್ನು ಬಿಡಿರಿ. ಈಕೆಗೆ ಯಾಕೆ ತೊಂದರೆಕೊಡುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ. 7 ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸು ಬಂದಾಗ ಅವರಿಗೆ ಉಪಕಾರಮಾಡಬಹುದು; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ. 8 ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ; ಈಕೆಯು ಮುಂದಾಗಿ ನನ್ನ ಉತ್ತರಕ್ರಿಯೆಗೋಸ್ಕರ ನನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ. 9 ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. 10 ಆಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಯೇಸುವನ್ನು ಮಹಾಯಾಜಕರಿಗೆ ಹಿಡುಕೊಡಬೇಕೆಂತ ಅವರ ಬಳಿಗೆ ಹೋದನು. 11 ಅವರು ಕೇಳಿ ಸಂತೋಷಪಟ್ಟು - ನಿನಗೆ ಹಣಕೊಡುತ್ತೇವೆಂದು ಮಾತುಕೊಟ್ಟರು. ಅವನು ಆತನನ್ನು ಅನುಕೂಲವಾಗಿ ಹಿಡುಕೊಡುವದು ಹೇಗೆ ಎಂದು ನೋಡುತ್ತಿದ್ದನು. ಯೇಸು ತನ್ನ ಶಿಷ್ಯರ ಸಂಗಡ ಕಡೇ ಭೋಜನವನ್ನು ಮಾಡಿದ್ದು ( ಮತ್ತಾ. 26.17-29 ; ಲೂಕ. 22.7-23 ; ಯೋಹಾ. 13.21-30 ) 12 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸ, ಅಂದರೆ ಪಸ್ಕದ ಕುರಿಮರಿಯನ್ನು ಕೊಯ್ಯುವ ದಿವಸ, ಆತನ ಶಿಷ್ಯರು - ನೀನು ಪಸ್ಕದ ಊಟ ಮಾಡುವಂತೆ ನಾವು ಎಲ್ಲಿ ಹೋಗಿ ಸಿದ್ಧಮಾಡಬೇಕನ್ನುತ್ತೀ ಎಂದು ಆತನನ್ನು ಕೇಳಲು 13 ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು - ನೀವು ಪಟ್ಟಣದೊಳಕ್ಕೆ ಹೋಗಿರಿ; ಅಲ್ಲಿ ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು; ನೀವು ಅವನ ಹಿಂದೆ ಹೋಗಿರಿ; 14 ಅವನು ಯಾವ ಮನೆಗೆ ಹೋಗುವನೋ ಆ ಮನೆಯ ಯಜಮಾನನಿಗೆ - ನಮ್ಮ ಬೋಧಕನು ತನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವದಕ್ಕೆ ತನಗೆ ಭೋಜನಶಾಲೆ ಎಲ್ಲಿ ಎಂದು ಕೇಳುತ್ತಾನೆ ಎಂಬದಾಗಿ ಹೇಳಿರಿ. 15 ಅವನು ತಕ್ಕ ಸಾಮಾನೆಲ್ಲಾ ಸಿದ್ಧವಾಗಿ ಇಟ್ಟಿರುವ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ನಮಗೆ ಸಿದ್ಧಮಾಡಿರಿ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟನು. 16 ಶಿಷ್ಯರು ಹೊರಟು ಪಟ್ಟಣಕ್ಕೆ ಹೋಗಿ ಆತನು ತಮಗೆ ಹೇಳಿದಂತೆ ಕಂಡು ಪಸ್ಕಕ್ಕೆ ಸೌರಿಸಿದರು. 17 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು. 18 ಅವರು ಕೂತುಕೊಂಡು ಊಟಮಾಡುತ್ತಿರುವಾಗ ಯೇಸು - ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು, ಅವನು ನನ್ನ ಸಂಗಡ ಊಟಮಾಡುವವನೇ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. 19 ಆಗ ಅವರು ದುಃಖಿತರಾಗಿ - ನಾನಲ್ಲವಲ್ಲಾ, ನಾನಲ್ಲವಲ್ಲಾ ಎಂದು ಒಬ್ಬೊಬ್ಬರೂ ಆತನನ್ನು ಕೇಳತೊಡಗಿದರು. 20 ಆತನು ಅವರಿಗೆ - ಅವನು ನನ್ನ ಹನ್ನೆರಡು ಮಂದಿಯಲ್ಲಿ ಒಬ್ಬನು, ನನ್ನ ಸಂಗಡ ಬಟ್ಟಲಲ್ಲಿ ಕೈ ಅದ್ದುವವನೇ. 21 ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ; ಹಾಗೆ ಆತನ ವಿಷಯವಾಗಿ ಬರೆದದೆಯಲ್ಲಾ. ಆದರೆ ಯಾವನು ಮನುಷ್ಯಕುಮಾರನನ್ನು ಹಿಡುಕೊಡುವನೋ ಅವನ ಗತಿಯನ್ನು ಏನು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು ಎಂದು ಹೇಳಿದನು. 22 ಅವರು ಊಟಮಾಡುತ್ತಿರುವಾಗ ಆತನು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು - ತಕ್ಕೊಳ್ಳಿರಿ; ಇದು ನನ್ನ ದೇಹ ಅಂದನು. 23 ಆಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು. 24 ಮತ್ತು ಆತನು ಅವರಿಗೆ - ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ; ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. 25 ನಿಮಗೆ ಸತ್ಯವಾಗಿ ಹೇಳುತ್ತೇನೆ, ನಾನು ದೇವರ ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವದೇ ಇಲ್ಲ ಅಂದನು. ಯೇಸು ಗೆತ್ಸೇಮನೆ ತೋಟಕ್ಕೆ ಹೋಗಿ ಪ್ರಾರ್ಥಿಸಿದ್ದು; ಯೂದನು ಆತನನ್ನು ಶತ್ರುಗಳಿಗೆ ಹಿಡುಕೊಟ್ಟದ್ದು ( ಮತ್ತಾ. 26.30-56 ; ಲೂಕ. 22.31-53 ; ಯೋಹಾ. 13.36-38 , 18.1-11 ) 26 ಬಳಿಕ ಅವರು ಕೀರ್ತನೆಹಾಡಿ ಎಣ್ಣೇಮರಗಳ ಗುಡ್ಡಕ್ಕೆ ಹೊರಟುಹೋದರು. 27 ಆಗ ಯೇಸು ಅವರಿಗೆ - ನೀವೆಲ್ಲರೂ ದಿಗಿಲು ಪಟ್ಟು ಹಿಂಜರಿಯುವಿರಿ. ಕುರುಬನನ್ನು ಹೊಡೆಯುವೆನು, ಕುರಿಗಳು ಚದರಿಹೋಗುವವು ಎಂದು ಬರೆದದೆಯಲ್ಲಾ. 28 ಆದಾಗ್ಯೂ ನಾನು ಜೀವಿತನಾಗಿ ಎದ್ದ ಮೇಲೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುವೆನು ಎಂದು ಹೇಳಿದನು. 29 ಆದರೆ ಪೇತ್ರನು ಆತನಿಗೆ - ಎಲ್ಲರೂ ದಿಗಿಲುಪಟ್ಟು ಹಿಂಜರಿದರೂ ನಾನು ಹಿಂಜರಿಯುವದಿಲ್ಲ ಎಂದು ಹೇಳಲು 30 ಯೇಸು - ನಿನಗೆ ಸತ್ಯವಾಗಿ ಹೇಳುತ್ತೇನೆ, ಈ ಹೊತ್ತು ಈ ರಾತ್ರಿಯಲ್ಲಿಯೇ ಕೋಳಿ ಎರಡು ಸಾರಿ ಕೂಗುವದಕ್ಕಿಂತ ಮುಂಚೆ ನೀನು ನನ್ನ ವಿಷಯದಲ್ಲಿ - ಅವನನ್ನು ಅರಿಯೆನೆಂಬದಾಗಿ ಮೂರು ಸಾರಿ ಹೇಳುವಿ ಅಂದನು. 31 ಆದರೆ ಅವನು - ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲವೆಂದು ಬಹು ಖಂಡಿತವಾಗಿ ಮಾತಾಡಿದನು. ಅದರಂತೆ ಅವರೆಲ್ಲರೂ ಹೇಳಿದರು. 32 ತರುವಾಯ ಅವರು ಗೆತ್ಸೇಮನೆ ಎಂಬ ತೋಟಕ್ಕೆ ಬಂದರು. ಆತನು ತನ್ನ ಶಿಷ್ಯರಿಗೆ - ಇಲ್ಲೇ ಕೂತುಕೊಳ್ಳಿರಿ, ನಾನು ಪ್ರಾರ್ಥನೆಮಾಡಿ ಬರುತ್ತೇನೆ ಎಂದು ಹೇಳಿ ಪೇತ್ರ ಯಾಕೋಬ ಯೋಹಾನರನ್ನು ತನ್ನ ಜೊತೆಯಲ್ಲಿ ಕರಕೊಂಡು ಹೋಗಿ 33 ಬೆಚ್ಚಿಬೆರಗಾಗಿ ಮನಗುಂದಿದವನಾದನು. 34 ಮತ್ತು ಅವರಿಗೆ - ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ. ನೀವು ಇಲ್ಲೇ ಇದ್ದು ಎಚ್ಚರವಾಗಿರ್ರಿ ಎಂದು ಹೇಳಿ ಸ್ವಲ್ಪ ಮುಂದೆ ಹೋಗಿ 35 ನೆಲದ ಮೇಲೆ ಅಡ್ಡಬಿದ್ದು ಸಾಧ್ಯವಾದರೆ ಆ ಗಳಿಗೆ ತನ್ನನ್ನು ಬಿಟ್ಟುಹೋಗುವಂತೆ ದೇವರನ್ನು ಪ್ರಾರ್ಥಿಸಿ- 36 ಅಪ್ಪಾ, ತಂದೆಯೇ, ನಿನಗೆ ಎಲ್ಲವೂ ಸಾಧ್ಯ; ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ ಅಂದನು. 37 ಆಮೇಲೆ ಆತನು ಬಂದು ಅವರು ನಿದ್ದೆಮಾಡುವದನ್ನು ಕಂಡು ಪೇತ್ರನಿಗೆ - ಸೀಮೋನನೇ, ನಿದ್ದೆಮಾಡುತ್ತೀಯಾ? ಒಂದು ಗಳಿಗೆಯಾದರೂ ಎಚ್ಚರವಾಗಿರಲಾರೆಯಾ? 38 ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು ಎಂದು ಹೇಳಿದನು. 39 ಆಮೇಲೆ ತಿರಿಗಿ ಹೋಗಿ ಅದೇ ಮಾತನ್ನು ಹೇಳುತ್ತಾ ಪ್ರಾರ್ಥಿಸಿದನು. 40 ತಿರಿಗಿ ಬಂದಾಗ ಅವರು ನಿದ್ದೆ ಮಾಡುವದನ್ನು ಕಂಡನು; ಅವರ ಕಣ್ಣುಗಳು ಬಹು ಭಾರವಾಗಿದ್ದವು; ಮತ್ತು ಆತನು ಕೇಳಿದ್ದಕ್ಕೆ ಏನು ಉತ್ತರ ಕೊಡಬೇಕೋ ಅವರಿಗೆ ತಿಳಿಯಲಿಲ್ಲ. 41 ಆತನು ಮೂರನೆಯ ಸಾರಿ ಹೋಗಿ ಬಂದು ಅವರಿಗೆ - ನೀವು ಇನ್ನೂ ನಿದ್ದೆಮಾಡಿ ದಣುವಾರಿಸಿಕೊಳ್ಳಿರಿ; ಸಾಕು; 42 ಆ ಗಳಿಗೆ ಬಂತು; ಇಗೋ, ಮನುಷ್ಯಕುಮಾರನು ದುರ್ಜನರ ಕೈಗೆ ಒಪ್ಪಿಸಲ್ಪಡುತ್ತಾನೆ. ಏಳಿರಿ, ಹೋಗೋಣ; ನನ್ನನ್ನು ಹಿಡುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ ಎಂದು ಹೇಳಿದನು. 43 ಆತನು ಇನ್ನೂ ಮಾತಾಡುತ್ತಿರುವಾಗಲೇ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮಹಾಯಾಜಕರು ಶಾಸ್ತ್ರಿಗಳು ಹಿರಿಯರು ಇವರ ಕಡೆಯಿಂದ ಒಂದು ಗುಂಪು ಕತ್ತಿದೊಣ್ಣೆಗಳನ್ನು ಹಿಡುಕೊಂಡು ಅವನ ಸಂಗಡ ಬಂತು; 44 ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ - ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡುಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು. 45 ಅಲ್ಲಿಗೆ ಬಂದ ಕೂಡಲೆ ಅವನು ಯೇಸುವಿನ ಬಳಿಗೆ ಹೋಗಿ - ಗುರುವೇ ಎಂದು ಹೇಳಿ 46 ಆತನಿಗೆ ಮುದ್ದಿಡಲು ಅವರು ಆತನ ಮೇಲೆ ಕೈಹಾಕಿ ಆತನನ್ನು ಹಿಡಿದರು. 47 ಆದರೆ ಹತ್ತಿರ ನಿಂತಿದ್ದವರಲ್ಲಿ ಒಬ್ಬನು ತನ್ನ ಕತ್ತಿಯನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು. 48 ಅವರು ಯೇಸುವನ್ನು ಹಿಡಿದಾಗ ಆತನು ಅವರಿಗೆ - ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವದಕ್ಕೆ ಬಂದಿರಾ? 49 ನಾನು ದಿನಾಲು ನಿಮ್ಮ ಸಂಗಡ ಇದ್ದು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ. ಆದರೆ ಶಾಸ್ತ್ರ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಉತ್ತರಕೊಟ್ಟನು. 50 ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು. 51 ಒಬ್ಬಾನೊಬ್ಬ ಯೌವನಸ್ಥನು ಬರೀ ಮೈ ಮೇಲೆ ನಾರುಮಡಿಯನ್ನು ಹೊದ್ದವನಾಗಿ ಆತನ ಹಿಂದೆ ಜನರ ಕೂಡ ಬರುತ್ತಿದ್ದನು. 52 ಅವರು ಅವನನ್ನು ಹಿಡಿಯಲಾಗಿ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಲಿ ಓಡಿಹೋದನು. ಹಿರೀಸಭೆಯವರು ಯೇಸುವನ್ನು ಮರಣದಂಡನೆಗೆ ತಕ್ಕವನೆಂದು ತೀರ್ಪುಮಾಡಿ ದೇಶಾಧಿಪತಿಯ ಬಳಿಗೆ ತೆಗೆದುಕೊಂಡು ಹೋದದ್ದು; ಪೇತ್ರನು ಯೇಸುವನ್ನು ನಾನರಿಯೆನೆಂದು ಹೇಳಿದ್ದು ( ಮತ್ತಾ. 26.57-75 ; ಲೂಕ. 22.54-71 ; ಯೋಹಾ. 18.12-27 ) 53 ಅಷ್ಟರಲ್ಲಿ ಅವರು ಯೇಸುವನ್ನು ಮಹಾಯಾಜಕನ ಬಳಿಗೆ ತೆಗೆದುಕೊಂಡು ಹೋದರು. ಇವನ ಬಳಿಗೆ ಮಹಾಯಾಜಕರು ಹಿರಿಯರು ಶಾಸ್ತ್ರಿಗಳು ಇವರೆಲ್ಲರೂ ಕೂಡಿಬಂದರು. 54 ಮತ್ತು ಪೇತ್ರನು ದೂರದಿಂದ ಆತನ ಹಿಂದೆ ಹೋಗುತ್ತಾ ಮಹಾಯಾಜಕನ ಮಠದ ಅಂಗಳದೊಳಗೂ ಬಂದು ಓಲೇಕಾರರ ಸಂಗಡ ಬೆಂಕಿಯ ಮುಂದೆ ಕೂತುಕೊಂಡು ಚಳಿಕಾಯಿಸಿಕೊಳ್ಳುತ್ತಿದ್ದನು. 55 ಆಗ ಮಹಾಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸಾಕ್ಷಿಯನ್ನು ಹುಡುಕಿದರು; ಆದರೆ ಏನೂ ಸಿಕ್ಕಲಿಲ್ಲ. 56 ಬಹುಮಂದಿ ಬಂದು ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಬೀಳಲಿಲ್ಲ. 57-58 ತರುವಾಯ ಕೆಲವರು ಎದ್ದು ನಿಂತು - ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಇವನು ಹೇಳಿದ್ದನ್ನು ನಾವು ಕೇಳಿದ್ದೇವೆ ಎಂಬದಾಗಿ ಆತನ ಮೇಲೆ ಸುಳ್ಳುಸಾಕ್ಷಿ ಹೇಳಿದರು. 59 ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಬೀಳಲಿಲ್ಲ. 60 ಆಗ ಮಹಾಯಾಜಕನು ಎದ್ದು ನಡುವೆ ನಿಂತು - ನೀನೇನೂ ಉತ್ತರಹೇಳುವದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು? ಎಂದು ಯೇಸುವನ್ನು ಪ್ರಶ್ನಿಸಿದನು. 61 ಆದರೆ ಆತನು ಸುಮ್ಮನಿದ್ದು ಏನೂ ಉತ್ತರ ಹೇಳಲಿಲ್ಲ. ತಿರಿಗಿ ಮಹಾಯಾಜಕನು - ಭಗವಂತನ ಕುಮಾರನಾದ ಕ್ರಿಸ್ತನೋ ನೀನು? ಎಂದು ಆತನನ್ನು ಕೇಳಲಾಗಿ 62 ಯೇಸು - ನಾನೇ, ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳೊಂದಿಗೆ ಬರುವದನ್ನೂ ನೋಡುವಿರಿ ಅಂದನು. 63 ಇದನ್ನು ಕೇಳಿ ಮಹಾಯಾಜಕನು ತನ್ನ ಅಂಗಿಗಳನ್ನು ಹರಕೊಂಡು - ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? 64 ಇವನು ಮಾಡಿದ ದೂಷಣೆಯನ್ನು ಕೇಳಿದಿರಲ್ಲಾ; ನಿಮಗೆ ಹೇಗೆ ಕಾಣುತ್ತದೆ ಅನ್ನಲು ಅವರೆಲ್ಲರು - ಇವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು. 65 ಆಮೇಲೆ ಕೆಲವರು ಆತನನ್ನು ಉಗುಳಿ ಆತನ ಮುಖಕ್ಕೆ ಮುಸುಕುಹಾಕಿ ಗುದ್ದಿ - ಪ್ರವಾದನೆ ಹೇಳು ಅನ್ನುತ್ತಿದ್ದರು. ಮತ್ತು ಓಲೇಕಾರರು ಆತನ ಕೆನ್ನೆಗೆ ಏಟು ಹಾಕುತ್ತಾ ತಮ್ಮ ವಶಕ್ಕೆ ತೆಗೆದುಕೊಂಡರು. 66 ಇತ್ತಲಾಗಿ ಪೇತ್ರನು ಕೆಳಗೆ ಅಂಗಳದಲ್ಲಿ ಇದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಬಂದು 67 ಅವನು ಚಳಿಕಾಯಿಸಿಕೊಳ್ಳುತ್ತಿರುವದನ್ನು ಕಂಡು ಅವನನ್ನು ನೋಡಿ - ನೀನು ಸಹ ಆ ನಜರೇತಿನವನಾದ ಯೇಸುವಿನ ಕೂಡ ಇದ್ದವನು ಅಂದಳು. 68 ಅವನು - ಅಲ್ಲ; ನೀನು ಏನನ್ನುತ್ತೀಯೋ ನನಗೆ ಗೊತ್ತಿಲ್ಲ, ತಿಳಿಯುವದಿಲ್ಲ ಎಂದು ಹೇಳಿ ಹೊರಂಗಳಕ್ಕೆ ಹೋದನು. 69 ಅಲ್ಲಿ ದಾಸಿಯು ಅವನನ್ನು ಕಂಡು ಹತ್ತಿರದಲ್ಲಿ ನಿಂತಿದ್ದವರಿಗೆ - ಇವನೂ ಅವರಲ್ಲಿ ಒಬ್ಬನು ಎಂದು ತಿರಿಗಿ ಹೇಳುವದಕ್ಕೆ ತೊಡಗಿದಳು. 70 ಅವನು ತಿರಿಗಿ ಅಲ್ಲ ಅಂದನು. ಸ್ವಲ್ಪ ಹೊತ್ತಿನ ಮೇಲೆ ಅಲ್ಲಿ ನಿಂತವರು ಪೇತ್ರನಿಗೆ - ನಿಶ್ಚಯವಾಗಿ ನೀನು ಅವರಲ್ಲಿ ಒಬ್ಬನು; ನೀನು ಗಲಿಲಾಯದವನಷ್ಟೆ ಎಂದು ತಿರಿಗಿ ಹೇಳಿದರು. 71 ಆದರೆ ಅವನು - ನೀವು ಹೇಳುವ ಆ ಮನುಷ್ಯನನ್ನು ನಾನರಿಯೆನು ಎಂದು ಹೇಳಿ ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು. ಕೂಡಲೆ ಕೋಳಿ ಎರಡನೆಯ ಸಾರಿ ಕೂಗಿತು. 72 ಆಗ ಪೇತ್ರನು - ಕೋಳಿ ಎರಡು ಸಾರಿ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ನೆನಪಿಗೆ ತಂದುಕೊಂಡು ಆ ವಿಷಯದಲ್ಲಿ ಯೋಚಿಸಿ ಅತ್ತನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India