ಮತ್ತಾಯ 8 - ಕನ್ನಡ ಸತ್ಯವೇದವು J.V. (BSI)1 ಆತನು ಬೆಟ್ಟದಿಂದಿಳಿದು ಬರುವಾಗ ಜನರು ಗುಂಪುಗುಂಪಾಗಿ ಆತನ ಹಿಂದೆ ಹೋದರು. ಯೇಸು ದಯವುಳ್ಳ ಅದ್ಭುತಕಾರ್ಯಗಳನ್ನು ಮಾಡಿ ತನ್ನ ಮಹಿಮೆಯನ್ನು ತೋರಿಸಿದ್ದು (8.2-9.34) ಕುಷ್ಠರೋಗಿಯನ್ನು ಸ್ವಸ್ಥಮಾಡಿದ್ದು ( ಮಾರ್ಕ. 1.40-44 ; ಲೂಕ. 5.12-14 ) 2 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು - ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಅಂದನು. 3 ಆತನು ಕೈನೀಡಿ ಅವನನ್ನು ಮುಟ್ಟಿ - ನನಗೆ ಮನಸ್ಸುಂಟು; ಶುದ್ಧವಾಗು ಅಂದನು. ಕೂಡಲೆ ಅವನ ಕುಷ್ಠವು ವಾಸಿಯಾಯಿತು. 4 ಆಗ ಯೇಸು ಅವನಿಗೆ - ಯಾರಿಗೂ ಹೇಳಬೇಡ ನೋಡು; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇವಿುಸಿದ ಕಾಣಿಕೆಯನ್ನು ಕೊಡು; ಅದು ಜನರಿಗೆ ಸಾಕ್ಷಿಯಾಗಲಿ ಎಂದು ಹೇಳಿದನು. ಶತಾಧಿಪತಿಯ ಆಳನ್ನು ಸ್ವಸ್ಥಮಾಡಿದ್ದು ( ಲೂಕ. 7.1-10 , 13.28 , 29 ) 5 ಆತನು ಕಪೆರ್ನೌವಿುಗೆ ಬಂದಾಗ ದಂಡಿನ ಶತಾಧಿಪತಿಯು ಆತನ ಬಳಿಗೆ ಬಂದು - 6 ಪ್ರಭುವೇ, ನನ್ನ ಆಳು ಪಾರ್ಶ್ವವಾಯುವಿನಿಂದ ಬಹಳ ಕಷ್ಟಪಡುತ್ತಾ ಮನೆಯಲ್ಲಿ ಬಿದ್ದಿದ್ದಾನೆ ಎಂದು ಹೇಳಿಕೊಂಡನು. 7 ಆತನು ಅವನಿಗೆ - ನಾನು ಬಂದು ಅವನನ್ನು ವಾಸಿಮಾಡುತ್ತೇನೆ ಎಂದು ಹೇಳಿದ್ದಕ್ಕೆ 8 ಆ ಶತಾಧಿಪತಿಯು - ಪ್ರಭುವೇ, ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವದು. 9 ನಾನು ಸಹ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ಹೋಗು ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ಬಾ ಎಂದು ಹೇಳಿದರೆ ಬರುತ್ತಾನೆ; ನನ್ನ ಆಳಿಗೆ ಇಂಥಿಂಥದನ್ನು ಮಾಡು ಎಂದು ಹೇಳಿದರೆ ಮಾಡುತ್ತಾನೆ ಅಂದನು. 10 ಯೇಸು ಇದನ್ನು ಕೇಳಿ ಆಶ್ಚರ್ಯಪಟ್ಟು, ತನ್ನ ಹಿಂದೆ ಬರುತ್ತಿದ್ದವರಿಗೆ - ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 11 ಇದಲ್ಲದೆ ನಿಮಗೆ ಹೇಳುವದೇನಂದರೆ ಮೂಡಣ ಪಡುವಣ ದಿಕ್ಕುಗಳಿಂದ ಬಹಳ ಜನ ಬಂದು ಪರಲೋಕ ರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಎಂಬವರ ಸಂಗಡ ಊಟಕ್ಕೆ ಕೂಡ್ರುವರು; 12 ಆದರೆ ಆ ರಾಜ್ಯದ ಬಾಧ್ಯಸ್ಥರು ಹೊರಗೆ ಕತ್ತಲೆಗೆ ಹಾಕಲ್ಪಡುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು ಎಂದು ಹೇಳಿದನು. 13 ಬಳಿಕ ಯೇಸು ಆ ಶತಾಧಿಪತಿಗೆ - ನೀನು ನಂಬಿದಂತೆ ನಿನಗಾಗಲಿ, ಹೋಗು ಎಂದು ಹೇಳಿದನು. ಅದೇ ಗಳಿಗೆಯಲ್ಲಿ ಅವನ ಆಳಿಗೆ ಗುಣವಾಯಿತು. ಯೇಸು ಬೇರೆ ಅದ್ಭುತಕಾರ್ಯಗಳಿಂದ ತನ್ನ ಕನಿಕರದ ಸ್ವಭಾವವನ್ನು ತೋರಿಸಿದ್ದು ( ಮಾರ್ಕ. 1.29-34 ; ಲೂಕ. 4.38-41 ) 14 ತರುವಾಯ ಯೇಸು ಪೇತ್ರನ ಮನೆಗೆ ಬಂದು ಅವನ ಅತ್ತೆ ಜ್ವರದಲ್ಲಿ ಬಿದ್ದಿರುವದನ್ನು ಕಂಡು ಆಕೆಯ ಕೈಯನ್ನು ಮುಟ್ಟಿದನು. 15 ಮುಟ್ಟಿದಾಗಲೇ ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆ ಎದ್ದು ಆತನಿಗೆ ಉಪಚಾರಮಾಡಿದಳು. 16 ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನು ವಾಸಿಮಾಡಿದನು. 17 ಇದರಿಂದ ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು ಎಂದು ಯೆಶಾಯನೆಂಬ ಪ್ರವಾದಿಯಿಂದ ಹೇಳಿರುವ ಮಾತು ನೆರವೇರಿತು. ಶಿಷ್ಯರಾಗಬೇಕೆಂದಿರುವವರಿಗೆ ವೈರಾಗ್ಯವೇ ಅವಶ್ಯವೆಂದು ಯೇಸು ಬೋಧಿಸಿದ್ದು ( ಲೂಕ. 9.57-60 ) 18 ಯೇಸು ತನ್ನ ಸುತ್ತಲಿದ್ದ ಬಹು ಜನಗಳ ದೊಡ್ಡ ಗುಂಪುಗಳನ್ನು ಕಂಡು ಆಚೇದಡಕ್ಕೆ ಹೊರಟುಹೋಗಬೇಕೆಂದು ಅಪ್ಪಣೆಕೊಟ್ಟನು. 19 ಆಗ ಒಬ್ಬ ಶಾಸ್ತ್ರಿಯು ಹತ್ತರಕ್ಕೆ ಬಂದು ಆತನಿಗೆ - ಗುರುವೇ, ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂದೆ ಬರುತ್ತೇನೆ ಎಂದು ಹೇಳಲು 20 ಯೇಸು ಅವನಿಗೆ - ನರಿಗಳಿಗೆ ಗುದ್ದುಗಳಿವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ ಎಂದು ಹೇಳಿದನು. 21 ಶಿಷ್ಯರಲ್ಲಿ ಬೇರೊಬ್ಬನು - ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿಬರುವಂತೆ ನನಗೆ ಅಪ್ಪಣೆಯಾಗಬೇಕು ಅನ್ನಲಾಗಿ 22 ಯೇಸು ಅವನಿಗೆ - ನನ್ನ ಹಿಂದೆ ಬಾ, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ ಎಂದು ಹೇಳಿದನು. ಯೇಸು ಬಿರುಗಾಳಿಯಲ್ಲಿ ನಿದ್ದೆಮಾಡಿ ದೇವರ ಮೇಲಿರುವ ತನ್ನ ನಂಬಿಕೆಯನ್ನು ತೋರಿಸಿದ್ದು ( ಮಾರ್ಕ. 4.35-41 ; ಲೂಕ. 8.22-25 ) 23 ಆತನು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನ ಹಿಂದೆ ಹೋದರು. 24 ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲಕಲ್ಲೋಲವಾಗಿ ದೋಣಿಯು ತೆರೆಗಳಿಂದ ಮುಚ್ಚಿಹೋಯಿತು; ಆದರೆ ಆತನು ನಿದ್ದೆ ಹತ್ತಿ ಮಲಗಿದ್ದನು. 25 ಅವರು ಹತ್ತರ ಬಂದು ಆತನನ್ನು ಎಬ್ಬಿಸಿ - ಸ್ವಾಮೀ, ಕಾಪಾಡು, ಸಾಯುತ್ತೇವೆ ಅನ್ನಲಾಗಿ 26 ಆತನು ಅವರಿಗೆ - ಅಲ್ಪವಿಶ್ವಾಸಿಗಳೇ, ಯಾಕೆ ಧೈರ್ಯಗೆಡುತ್ತೀರಿ ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಎಲ್ಲಾ ಶಾಂತವಾಯಿತು. 27 ಆ ಜನರು ಬೆರಗಾಗಿ - ಈತನು ಎಂಥವನಾಗಿರಬಹುದು! ಗಾಳಿಯೂ ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ ಅಂದರು. ಯೇಸು ಇಬ್ಬರಿಂದ ಅನೇಕ ದೆವ್ವಗಳನ್ನು ಬಿಡಿಸಿದ್ದು ( ಮಾರ್ಕ. 5.1-20 ; ಲೂಕ. 8.26-39 ) 28 ಆಮೇಲೆ ಆತನು ಆಚೇದಡಕ್ಕೆ ಗದರೇನರ ಸೀಮೆಗೆ ಮುಟ್ಟಿದಾಗ ದೆವ್ವಹಿಡಿದವರಿಬ್ಬರು ಸಮಾಧಿಯ ಗವಿಗಳೊಳಗಿಂದ ಹೊರಟು ಆತನೆದುರಿಗೆ ಬಂದರು. ಅವರು ಬಹು ಉಗ್ರರಾಗಿದ್ದದರಿಂದ ಆ ದಾರಿಯಲ್ಲಿ ಯಾರೂ ತಿರುಗಾಡಲಾರದೆ ಇದ್ದರು. 29 ಅವರು - ದೇವರ ಮಗನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವದಕ್ಕಿಂತ ಮುಂಚೆ ನಮ್ಮನ್ನು ಕಾಡುವದಕ್ಕೆ ಇಲ್ಲಿಗೆ ಬಂದಿಯಾ ಎಂದು ಕೂಗಿದರು. 30 ಸ್ವಲ್ಪ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು. 31 ಆ ದೆವ್ವಗಳು - ನೀನು ನಮ್ಮನ್ನು ಇವರೊಳಗಿಂದ ಹೊರಡಿಸುವದಾದರೆ ಆ ಹಂದಿಯ ಗುಂಪಿನೊಳಗೆ ಕಳುಹಿಸಿಕೊಡು ಎಂದು ಬೇಡಿಕೊಂಡವು. 32 ಆತನು - ಹೋಗಿರಿ ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಆ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಣುಗಿ ಸತ್ತುಹೋಯಿತು. 33 ಮೇಯಿಸುವವರು ಊರೊಳಕ್ಕೆ ಓಡಿಹೋಗಿ ಇದನ್ನೆಲ್ಲಾ ದೆವ್ವಹಿಡಿದವರ ಸಂಗತಿ ಸಹಿತವಾಗಿ ತಿಳಿಸಲು 34 ಊರಿನವರೆಲ್ಲರೂ ಯೇಸುವಿನೆದುರಿಗೆ ಹೊರಟುಬಂದು ಆತನನ್ನು ಕಂಡು ತಮ್ಮ ಸೀಮೆಯನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India