ಮತ್ತಾಯ 4 - ಕನ್ನಡ ಸತ್ಯವೇದವು J.V. (BSI)ಸೈತಾನನು ಯೇಸುವನ್ನು ಪಾಪದಲ್ಲಿ ಸಿಕ್ಕಿಸುವದಕ್ಕೆ ಪ್ರಯತ್ನಿಸಿದ್ದು ( ಮಾರ್ಕ. 1.12 , 13 ; ಲೂಕ. 4.1-13 ) 1 ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವದಕ್ಕಾಗಿ ಆತ್ಮನು ಆತನನ್ನು ಅಡವಿಗೆ ಒಯ್ದನು. 2 ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು. 3 ಆಗ ಆ ಶೋಧಕನು ಆತನ ಬಳಿಗೆ ಬಂದು - ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಎಂದು ಹೇಳಲು ಆತನು - 4 ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ ಅಂದನು. 5 ಆಗ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರಕೊಂಡು ಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ - 6 ನೀನು ದೇವರ ಮಗನಾಗಿದ್ದರೆ ಕೆಳಕ್ಕೆ ದುಮುಕು; ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು ಎಂಬದಾಗಿ ಬರೆದದೆಯಲ್ಲಾ ಎಂದು ಹೇಳಿದನು. 7 ಅದಕ್ಕೆ ಯೇಸು - ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬದಾಗಿ ಸಹ ಬರೆದದೆ ಅಂದನು. 8 ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ - 9 ನೀನು ನನಗೆ ಸಾಷ್ಟಾಂಗನಮಸ್ಕಾರ ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು ಅಂದನು. 10 ಯೇಸು ಅವನಿಗೆ - ಸೈತಾನನೇ, ನೀನು ತೊಲಗಿ ಹೋಗು. ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ ಎಂದು ಹೇಳಿದನು. 11 ಆಗ ಸೈತಾನನು ಆತನನ್ನು ಬಿಟ್ಟುಬಿಟ್ಟನು. ಮತ್ತು ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು. ಯೇಸು ಗಲಿಲಾಯ ಸೀಮೆಯಲ್ಲಿ ಸುವಾರ್ತೆಯನ್ನು ಸಾರುವದಕ್ಕೆ ಪ್ರಾರಂಭಮಾಡಿದ್ದು ( ಮಾರ್ಕ. 1.14 , 15 ; ಲೂಕ. 4.14 , 15 ) 12 ಯೋಹಾನನು ಸೆರೆಗೆ ಬಿದ್ದನೆಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಗಲಿಲಾಯ ಸೀಮೆಗೆ ಹೊರಟುಹೋದನು. 13 ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್ ನೆಫ್ತಲೀಮ್ ಎಂಬ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ಮನೆಮಾಡಿಕೊಂಡು ಇದ್ದನು. 14 ಇದರಿಂದ ಯೆಶಾಯನೆಂಬ ಪ್ರವಾದಿಯ ಮುಖಾಂತರ ಹೇಳಿಸಿರುವ ಮಾತು ನೆರವೇರಿತು; ಆ ಮಾತು ಏನಂದರೆ - 15 ಜೆಬುಲೋನ್ ಸೀಮೆ ಮತ್ತು ನೆಫ್ತಲೀಮ್ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ, 16 ಕತ್ತಲಲ್ಲಿ ವಾಸಿಸಿದ ಈ ಸೀಮೆಗಳ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಸೂರ್ಯೋದಯವಾಯಿತು ಎಂಬದು. 17 ಅಂದಿನಿಂದ ಯೇಸು - ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು. ಯೇಸು ಪ್ರಥಮ ಶಿಷ್ಯರನ್ನು ಮಾಡಿಕೊಂಡದ್ದು ( ಮಾರ್ಕ. 1.16-20 ; ಲೂಕ. 5.2-11 ; ಯೋಹಾ. 1.40-42 ) 18 ಹೀಗಿರುವಲ್ಲಿ, ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ತಿರುಗಾಡುತ್ತಿರುವಾಗ ಅಣ್ಣತಮ್ಮಂದಿರಿಬ್ಬರು ಬಲೆಬೀಸುವದನ್ನು ಕಂಡನು; ಅವರು ಪೇತ್ರನೆನಿಸಿಕೊಳ್ಳುವ ಸೀಮೋನ ಮತ್ತು ಅವನ ತಮ್ಮನಾದ ಅಂದ್ರೆಯ. ಅವರು ಬೆಸ್ತರು, ಸಮುದ್ರದಲ್ಲಿ ಬಲೆಬೀಸುತ್ತಿದ್ದರು. 19 ಅವರಿಗೆ ಆತನು - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು ಎಂದು ಹೇಳುತ್ತಲೇ 20 ಅವರು ತಮ್ಮ ಬಲೆಗಳನ್ನು ಬಿಟ್ಟು ಆತನ ಹಿಂದೆ ಹೋದರು. 21 ಯೇಸು ಅಲ್ಲಿಂದ ಮುಂದೆ ಹೋಗಿ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಕೂಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಇವರನ್ನೂ ಕರೆದನು. 22 ಕೂಡಲೆ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು. ಯೇಸು ಸುವಾರ್ತೆಯನ್ನು ಸಾರಿ ರೋಗಗಳನ್ನು ಪರಿಹರಿಸಿ ಹೆಸರುಗೊಂಡದ್ದು ( ಮಾರ್ಕ. 1.39 ; ಲೂಕ. 4.15-44 , 6.17-19 ) 23 ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ತಿರುಗಾಡಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ, ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. 24 ಆತನ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹಬ್ಬಿದ್ದರಿಂದ ಮೈಯಲ್ಲಿ ನೆಟ್ಟಗಿಲ್ಲದವರನ್ನು, ಅಂದರೆ ತರತರದ ರೋಗಬಾಧೆಗಳಿಂದ ಕಷ್ಟಪಡುವವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು. 25 ಮತ್ತು ಗಲಿಲಾಯ ದೆಕಪೊಲಿ ಯೆರೂಸಲೇಮ್ ಯೂದಾಯ ಎಂಬೀ ಸ್ಥಳಗಳಿಂದಲೂ ಯೊರ್ದನ್ ಹೊಳೆಯ ಆಚೇಕಡೆಯಿಂದಲೂ ಜನರು ಗುಂಪುಗುಂಪಾಗಿ ಆತನ ಹಿಂದೆ ಹೋದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India