ಪ್ರಸಂಗಿ 2 - ಕನ್ನಡ ಸತ್ಯವೇದವು J.V. (BSI)1 ನಾನು ಮನಸ್ಸಿನಲ್ಲಿ, - ಬಾ, ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಸುಖದ ರುಚಿ ನೋಡು ಅಂದುಕೊಂಡೆನು. ಆಹಾ, ಇದೂ ವ್ಯರ್ಥವೇ. 2 ನಗೆಯು ಹುಚ್ಚುತನ, ಸಂತೋಷದಿಂದೇನು ಅಂದುಕೊಂಡೆನು. 3 ಆಕಾಶದ ಕೆಳಗೆ ನರಜನ್ಮದವರು ಅಲ್ಪಾಯುಷ್ಯದಲ್ಲಿ ಏನು ಮಾಡುವದು ಯುಕ್ತವೆಂದು ನಾನು ತಿಳಿದುಕೊಳ್ಳುವದಕ್ಕೋಸ್ಕರ ನನ್ನ ಮನಸ್ಸು ಜ್ಞಾನದಿಂದಿರುವಾಗಲೇ ದೇಹವನ್ನು ದ್ರಾಕ್ಷಾರಸದಿಂದ ಉತ್ತೇಜನಮಾಡುವದಕ್ಕೂ ಬುದ್ಧಿಹೀನತೆಯನ್ನು ಅವಲಂಬಿಸುವದಕ್ಕೂ ಮನಸ್ಸಿನಲ್ಲಿ ವಿಚಾರಮಾಡಿಕೊಂಡೆನು. 4 ಮತ್ತು ವಿಶೇಷ ಕಾರ್ಯಗಳನ್ನು ನಡಿಸಿದೆನು; ಮನೆಗಳನ್ನು ಕಟ್ಟಿಸಿಕೊಂಡೆನು, 5 ತೋಟಗಳನ್ನೂ ಉದ್ಯಾನವನಗಳನ್ನೂ ಮಾಡಿಸಿ ಅವುಗಳಲ್ಲಿ ಸಕಲವಿಧವಾದ ಫಲವೃಕ್ಷಗಳನ್ನು ನಾಟಿಸಿಕೊಂಡೆನು. 6 ಬೆಳೆಯುವ ಗಿಡಗಳ ತೋಪುಗಳಿಗೆ ನೀರು ಹಾಯಿಸುವದಕ್ಕೆ ಕುಂಟೆಗಳನ್ನು ತೆಗೆಯಿಸಿಕೊಂಡೆನು. 7 ಗಂಡು ಹೆಣ್ಣಾಳುಗಳನ್ನು ಕೊಂಡುಕೊಂಡೆನು; [ಇವರಿಂದ] ಹುಟ್ಟು ಗುಲಾಮರು ಉಂಟಾದರು; ಇದಲ್ಲದೆ ಯೆರೂಸಲೇವಿುನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ನಾನು ಬಲು ದನಕುರಿಗಳ ಧನವುಳ್ಳವನಾದೆನು; 8 ಮತ್ತು ಬೆಳ್ಳಿ ಬಂಗಾರಗಳನ್ನೂ ಅರಸರ ನಜರನ್ನೂ ದಿಗ್ದೇಶಗಳಿಂದ ಕಪ್ಪವನ್ನೂ ಸಂಗ್ರಹಿಸಿಕೊಂಡೆನು; ಗಾಯಕಗಾಯಕಿಯರನ್ನೂ ಮನುಷ್ಯರಿಗೆ ಭೋಗ್ಯರಾದ ಅನೇಕ ಉಪಪತ್ನಿಯರನ್ನೂ ಸಂಪಾದಿಸಿಕೊಂಡೆನು. 9 ಹೀಗೆ ಯೆರೂಸಲೇವಿುನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ಹೆಚ್ಚು ಅಭಿವೃದ್ಧಿಹೊಂದಿ ದೊಡ್ಡವನಾದೆನು; ಇದಲ್ಲದೆ ನನ್ನ ಜ್ಞಾನವು ನನ್ನಲ್ಲಿ ನೆಲೆಯಾಗಿತ್ತು, 10 ನನ್ನ ಕಣ್ಣು ಬಯಸಿದ್ದೆಲ್ಲವನ್ನೂ ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ; ಯಾವ ಸಂತೋಷವನ್ನನುಭವಿಸುವದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ; ಏಕಂದರೆ ನನ್ನ ಹೃದಯವು ನನ್ನ ಕಾರ್ಯಗಳಲ್ಲೆಲ್ಲಾ ಹರ್ಷಿಸುತ್ತಿತ್ತು; ನನ್ನ ಪ್ರಯಾಸದಿಂದೆಲ್ಲಾ ನನಗಾದ ಲಾಭವು ಇದೇ. 11 ಆಗ ನನ್ನ ಕೈಯಿಂದ ನಡಿಸಿದ ಎಲ್ಲಾ ಕೆಲಸಗಳಲ್ಲಿಯೂ ನಾನು ಪಟ್ಟ ಪ್ರಯಾಸದಲ್ಲಿಯೂ ದೃಷ್ಟಿಯಿಟ್ಟೆನು; ಆಹಾ, ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು, ಲೋಕದಲ್ಲಿ ಯಾವ ಲಾಭವೂ ಕಾಣಲಿಲ್ಲ. 12 ರಾಜನ ಪ್ರಯತ್ನವಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುವದು ಎಂದುಕೊಂಡು ಜ್ಞಾನವನ್ನೂ ಮರುಳುತನವನ್ನೂ ಬುದ್ಧಿಹೀನತೆಯನ್ನೂ ನೋಡುವದಕ್ಕೆ ತಿರುಗಿಕೊಂಡೆನು. 13 ಆಗ ಬೆಳಕು ಕತ್ತಲಿಗಿಂತ ಶ್ರೇಷ್ಠವಾಗಿರುವಂತೆ ಜ್ಞಾನವೂ ಮೂಢತ್ವಕ್ಕಿಂತ ಶ್ರೇಷ್ಠವೆಂದು ಗೋಚರವಾಯಿತು. 14 ಜ್ಞಾನಿಯ ಕಣ್ಣು ಅವನ ತಲೆಯಲ್ಲಿರುವದು, ಮೂಢನು ಕತ್ತಲಲ್ಲಿ ನಡೆಯುವನು; ಇವರಿಬ್ಬರಿಗೂ ಒಂದೇ ಗತಿಯೆಂದು ನನಗೆ ಕಂಡುಬಂತು. 15 ಆಗ ನಾನು - ಮೂಢನಿಗೆ ಸಂಭವಿಸುವ ಗತಿಯೂ ನನಗೂ ಸಂಭವಿಸುವದು; ನನ್ನ ಹೆಚ್ಚು ಜ್ಞಾನದಿಂದೇನು? ಇದೂ ವ್ಯರ್ಥವಲ್ಲವೆ ಅಂದುಕೊಂಡೆನು. 16 ಏಕಂದರೆ ಮೂಢನು ಹೇಗೋ ಹಾಗೆಯೇ ಜ್ಞಾನಿಯೂ ನಿರಂತರವಾಗಿ ಮರೆತುಹೋಗುವನು. ಈಗಿನವರೆಲ್ಲಾ ಮುಂದಿನ ಕಾಲದೊಳಗಾಗಿಯೇ ಮರೆತುಹೋಗುವರಷ್ಟೆ. ಆಹಾ, ಮೂಢನಂತೆ ಜ್ಞಾನಿಯೂ ಸಾಯುವನು! 17 ಲೋಕವ್ಯವಹಾರವು ಕೆಟ್ಟದ್ದೆಂದು ನನಗೆ ಕಂಡುಬಂದದರಿಂದ ಜೀವವೇ ಅಸಹ್ಯವಾಗಿ ತೋರಿತು; ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ. 18 ನನ್ನ ಪ್ರಯಾಸದ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕೆಂದು ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆಲ್ಲಾ ಬೇಸರಗೊಂಡೆನು. 19 ಅವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಎಂಥವನಾದರೂ ನಾನು ಲೋಕದೊಳಗೆ ಯಾವದರಲ್ಲಿ ಜ್ಞಾನವನ್ನೂ ಪ್ರಯಾಸವನ್ನೂ ವ್ರಯಮಾಡಿದ್ದೇನೋ ಅದರ ಮೇಲೆ ದೊರೆತನ ಮಾಡುವನು. ಇದೂ ವ್ಯರ್ಥ. 20 ಹೀಗಿರಲು ನಾನು ಲೋಕದಲ್ಲಿ ಪ್ರಯಾಸಪಟ್ಟ ಕೆಲಸದ ವಿಷಯವಾಗಿ ನಿರಾಶೆಗೊಳಗಾದೆನು. 21 ಒಬ್ಬನು ಜ್ಞಾನದಿಂದಲೂ ತಿಳುವಳಿಕೆಯಿಂದಲೂ ತನ್ನ ಕೆಲಸವನ್ನು ನಡಿಸಿ ಸಾಫಲ್ಯಕ್ಕೆ ತಂದ ಮೇಲೆ ಆ ಕೆಲಸದಲ್ಲಿ ಪ್ರಯಾಸಪಡದವನಿಗೆ ಅದರ ಫಲವನ್ನು ಬಾಧ್ಯತೆಯಾಗಿ ಬಿಡಬೇಕಾಗುವದು. ಇದು ಸಹ ವ್ಯರ್ಥವೂ ಕೇವಲ ಅನ್ಯಾಯವೂ ಆಗಿದೆ. 22 ಲೋಕದಲ್ಲಿ ಮನುಷ್ಯನು ಹೃದಯಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಲಾಭವೇನು? 23 ಅವನ ದಿನಗಳೆಲ್ಲಾ ವ್ಯಸನಮಯವೇ, ಅವನ ಕೆಲಸವು ತೊಂದರೆಯೇ; ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ನಿಲುಗಡೆಯಿಲ್ಲ. ಇದೂ ವ್ಯರ್ಥ. 24 ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ. ಇದು ದೇವರಿಂದಾಯಿತೆಂಬದನ್ನೂ ಕಂಡುಕೊಂಡೆನು. 25 ಆತನಿಲ್ಲದೆ ಯಾರು ಭೋಜನಮಾಡಿ ಸುಖವನ್ನನುಭವಿಸಾರು? 26 ದೇವರು ತಾನು ಮೆಚ್ಚಿದವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಸಂತೋಷವನ್ನೂ ದಯಪಾಲಿಸುತ್ತಾನಲ್ಲವೆ; ಪಾಪಿಗಾದರೋ ತನ್ನ ಮೆಚ್ಚಿಕೆಯಾದವನಿಗೆ ಒದಗತಕ್ಕವುಗಳನ್ನು ಕೂಡಿಸಿಡುವ ಪ್ರಯಾಸವನ್ನೇ ನೇವಿುಸುತ್ತಾನೆ. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India