ನ್ಯಾಯಸ್ಥಾಪಕರು 18 - ಕನ್ನಡ ಸತ್ಯವೇದವು J.V. (BSI)ದಾನ್ಯರು ಮೀಕನ ವಿಗ್ರಹವನ್ನು ಲಯಿಷಿಗೆ ಒಯ್ದದ್ದು 1 ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ದಾನ್ಕುಲದವರಿಗೆ ಆವರೆಗೂ ಇಸ್ರಾಯೇಲ್ಯರಲ್ಲಿ ಸ್ವಾಸ್ತ್ಯವು ಸಿಕ್ಕದ್ದರಿಂದ ಅವರು ತಮಗೋಸ್ಕರ ವಾಸಸ್ಥಳವನ್ನು ಹುಡುಕುತ್ತಿದ್ದರು. 2 ಮತ್ತು ಅವರು ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಿಂದ ತಮ್ಮ ಕುಲದಲ್ಲಿ ಐದು ಮಂದಿ ಪರಾಕ್ರಮ ಶಾಲಿಗಳಾದ ಗೂಢಚಾರರನ್ನು ಆರಿಸಿ ಅವರಿಗೆ - ನೀವು ಹೋಗಿ [ಲಯಿಷ್] ದೇಶವನ್ನು ಸಂಚರಿಸಿ ನೋಡಿರಿ ಎಂದು ಆಜ್ಞಾಪಿಸಿ ಕಳುಹಿಸಿದರು. ಇವರು ಪ್ರಯಾಣಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದು ಇಳುಕೊಂಡರು. 3 ಇವರು ಮೀಕನ ಮನೆಯ ಹತ್ತಿರದಲ್ಲಿ ಆ ಯೌವನಸ್ಥನಾದ ಲೇವಿಯನು ಮಾತಾಡುವದನ್ನು ಕೇಳಿ ಗುರುತುಹಿಡಿದು ಅವನ ಬಳಿಗೆ ಹೋಗಿ - ನಿನ್ನನ್ನು ಇಲ್ಲಿಗೆ ಕರತಂದವರಾರು? ಇಲ್ಲಿ ಏನು ಕೆಲಸ ಮಾಡುತ್ತೀ? ಏನು ಸಿಕ್ಕುತ್ತದೆ ಎಂದು ಅವನನ್ನು ಕೇಳಲು ಅವನು, 4 ಮೀಕನು ತನಗೆ ಇಂಥಿಂಥವುಗಳನ್ನು ಸಂಬಳವಾಗಿ ಕೊಡುತ್ತಾನೆಂದೂ ತಾನು ಅವನ ಯಾಜಕನಾಗಿದ್ದೇನೆಂದೂ ಹೇಳಿದನು. 5 ಆಗ ಅವರು ಅವನಿಗೆ - ದಯವಿಟ್ಟು ನಮ್ಮ ಪ್ರಯಾಣವು ಸಫಲವಾಗುವದೋ ಇಲ್ಲವೋ ಎಂಬದನ್ನು ದೇವರ ಸನ್ನಿಧಿಯಲ್ಲಿ ವಿಚಾರಿಸು ಎಂದು ಬೇಡಿಕೊಳ್ಳಲು 6 ಅವನು - ಸಮಾಧಾನದಿಂದ ಹೋಗಿರಿ; ಯೆಹೋವನು ನಿಮ್ಮ ಪ್ರಯಾಣವನ್ನು ಕಟಾಕ್ಷಿಸುವನು ಅಂದನು. 7 ಆ ಐದು ಮಂದಿ ಹೊರಟು ಲಯಿಷಿಗೆ ಬಂದು - ಅಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖ ಸಮಾಧಾನಗಳಿಂದ ಜೀವಿಸುತ್ತಾರೆ; ಅವರನ್ನು ತಗ್ಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಬಳಕೆಯಿಲ್ಲದವರು ಎಂಬದನ್ನು ತಿಳಿದುಕೊಂಡು 8 ಹಿಂದಿರುಗಿ ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಲ್ಲಿರುವ ತಮ್ಮ ಬಂಧುಗಳ ಬಳಿಗೆ ಬಂದರು. ಅವರ ಬಂಧುಗಳು - ನೀವು ಯಾವ ವರ್ತಮಾನ ತಂದಿದ್ದೀರಿ ಎಂದು ಅವರನ್ನು ಕೇಳಲು 9 ಅವರು - ಏಳಿರಿ, ಅವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ. ನಾವು ಆ ದೇಶವನ್ನು ನೋಡಿದೆವು; ಅದು ಬಹು ಉತ್ತಮದೇಶ. ನೀವು ಸುಮ್ಮನೆ ಕೂತುಕೊಳ್ಳುವದೇಕೆ? ತಡಮಾಡದೆ ಹೊರಡಿರಿ; ಆ ದೇಶವನ್ನು ಸ್ವತಂತ್ರಿಸಿಕೊಳ್ಳೋಣ. 10 ನೀವು ಅಲ್ಲಿಗೆ ಹೋಗುವದಾದರೆ ಅಲ್ಲಿನ ಜನರು ನಿರ್ಭಯದಿಂದ ಜೀವಿಸುವವರೆಂದೂ ಅವರ ದೇಶವು ಬಹು ವಿಸ್ತಾರವಾಗಿದೆಯೆಂದೂ ತಿಳಿದುಕೊಳ್ಳುವಿರಿ. ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ; ಅದರಲ್ಲಿ ದೊರಕದಿರುವ ಪದಾರ್ಥಗಳು ಲೋಕದಲ್ಲೇ ಇಲ್ಲ ಅಂದರು. 11 ಆಗ ಚೊರ್ಗಾ ಎಷ್ಟಾವೋಲ್ ಊರುಗಳಿಂದ ಆರುನೂರು ಮಂದಿ ದಾನ್ಕುಲದವರು ಯುದ್ಧ ಸನ್ನದ್ಧರಾಗಿ ಹೊರಟು 12 ಗಟ್ಟಾಹತ್ತಿ ಯೆಹೂದದ ಕಿರ್ಯತ್ಯಾರೀವಿುನ ಬಳಿಯಲ್ಲಿ ಇಳುಕೊಂಡರು. ಆದದರಿಂದ ಆ ಸ್ಥಳಕ್ಕೆ ಇಂದಿನವರೆಗೂ ದಾನ್ಯರ ಪಾಳೆಯವೆಂಬ ಹೆಸರಿದೆ; ಅದು ಕಿರ್ಯತ್ಯಾರೀವಿುನ ಪಶ್ಚಿಮದಲ್ಲಿರುತ್ತದೆ. 13 ಅವರು ಅಲ್ಲಿಂದ ಮುಂದೆ ಪ್ರಯಾಣಮಾಡಿ ಎಫ್ರಾಯೀಮ್ ಪರ್ವತಪ್ರದೇಶದಲ್ಲಿದ್ದ ಮೀಕನ ಮನೆಯ ಹತ್ತಿರ ಬಂದರು. 14 ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡುವದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ - ಈ ಗ್ರಾಮದಲ್ಲಿ ಒಂದು ಏಫೋದೂ ದೇವತಾಪ್ರತಿಮೆಗಳೂ ಕೆತ್ತನೆಯ ಮತ್ತು ಎರಕದ ವಿಗ್ರಹಗಳೂ ಇರುತ್ತವೆಂಬದು ನಿಮಗೆ ಗೊತ್ತುಂಟೋ? 15 ಈ ವಿಷಯದಲ್ಲಿ ಏನು ಮಾಡಬೇಕೆಂಬದನ್ನು ಆಲೋಚಿಸಿರಿ ಎಂದು ಹೇಳಿ ತಾವು ಅಲ್ಲಿಂದ ಮೀಕನ ಮನೆಯಲ್ಲಿದ್ದ ಆ ಯೌವನಸ್ಥನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸಹತ್ತಿದರು. 16 ಇಷ್ಟರಲ್ಲಿ ಯುದ್ಧಸನ್ನದ್ಧರಾದ ಆರುನೂರು ಮಂದಿ ದಾನ್ಯರು ಬಂದು ಬಾಗಲಲ್ಲಿ ನಿಂತರು. 17 ಯಾಜಕನೂ ಬಂದು ಇವರೊಡನೆ ಬಾಗಲಲ್ಲಿ ನಿಂತಿದ್ದಾಗ ಆ ಐದು ಮಂದಿ ಮನೆಯನ್ನು ಹೊಕ್ಕು ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನೂ ಏಫೋದನ್ನೂ ದೇವತಾ ಪ್ರತಿಮೆಗಳನ್ನೂ ತೆಗೆದುಕೊಂಡರು. 18 ಅವರು ಮೀಕನ ಮನೆಯನ್ನು ಹೊಕ್ಕು ಅವುಗಳನ್ನು ತೆಗೆದುಕೊಂಡು ಬರುವಾಗ ಯಾಜಕನು ಕಂಡು ಅವರಿಗೆ - ನೀವು ಮಾಡಿದ್ದೇನು ಅಂದನು. 19 ಅವರು ಅವನಿಗೆ - ಸುಮ್ಮನಿರು; ಬಾಯಿ ಮುಚ್ಚು; ನಮ್ಮ ಜೊತೆಯಲ್ಲಿ ಬಂದು ನಮಗೆ ತಂದೆಯೂ ಯಾಜಕನೂ ಆಗಿರು. ಒಂದು ಮನೆಗೆ ಯಾಜಕನಾಗಿರುವದು ಉತ್ತಮವೋ ಅಥವಾ ಇಸ್ರಾಯೇಲ್ಯರ ಒಂದು ಕುಲಕ್ಕೂ ಗೋತ್ರಕ್ಕೂ ಯಾಜಕನಾಗಿರುವದು ಉತ್ತಮವೋ ಅಂದರು. 20 ಯಾಜಕನು ಈ ಮಾತನ್ನು ಕೇಳಿ ಸಂತೋಷಪಟ್ಟು ಏಫೋದನ್ನೂ ದೇವತಾಪ್ರತಿಮೆಗಳನ್ನೂ ಕೆತ್ತನೆಯ ವಿಗ್ರಹವನ್ನೂ ತೆಗೆದುಕೊಂಡು ಅವರ ಬಳಿಗೆ ಬಂದನು. 21 ತರುವಾಯ ಅವರು ತಮ್ಮ ಹೆಂಡರು ಮಕ್ಕಳನ್ನೂ ಕುರಿದನ ಮೊದಲಾದ ಸೊತ್ತನ್ನೂ ಮುಂದಾಗಿ ಕಳುಹಿಸಿ ತಾವು ಹಿಂದಿನಿಂದ ಹೊರಟರು. 22 ಅವರು ಮೀಕನ ಮನೆಗೆ ದೂರವಾದ ಮೇಲೆ ಮೀಕನೂ ಅವನ ನೆರೆಹೊರೆಯವರೆಲ್ಲರೂ ದಾನ್ಯರನ್ನು ಹಿಂದಟ್ಟಿ 23 ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ - ನಿನಗೇನಾಯಿತು? ಗುಂಪನ್ನು ಕೂಡಿಸಿಕೊಂಡು ಬಂದದ್ದೇಕೆ ಎಂದು ಕೇಳಲು 24 ಅವನು - ನೀವು ಯಾಜಕನನ್ನೂ ನಾನು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವು ನನ್ನನ್ನು ಕೇಳುವದು ಹೇಗೆ ಅಂದನು. 25 ದಾನ್ಯರು ಅವನಿಗೆ - ನಮ್ಮಲ್ಲಿ ಕೆಲವರು ಸಿಟ್ಟಿನವರಿದ್ದಾರೆ; ಅವರು ನಿಮ್ಮ ಮೇಲೆ ಬಿದ್ದರೆ ನೀನೂ ನಿನ್ನ ಮನೆಯವರೂ ಪ್ರಾಣನಷ್ಟಪಟ್ಟೀರಿ; ಆದದರಿಂದ ಬಾಯಿಮುಚ್ಚಿಕೊಂಡು ಹೋಗು ಎಂದು ಹೇಳಿ ಮುಂದೆ ನಡೆದರು. 26 ಅವರು ತನಗಿಂತ ಬಲಿಷ್ಠರೆಂದು ಮೀಕನು ತಿಳಿದು ಹಿಂದಿರುಗಿ ಮನೆಗೆ ಹೋದನು. 27 ದಾನ್ಯರು ಮೀಕನು ಮಾಡಿಸಿದ್ದ ವಿಗ್ರಹಗಳನ್ನೂ ಅವನ ಯಾಜಕನನ್ನೂ ಅಪಹರಿಸಿಕೊಂಡು ಲಯಿಷಿಗೆ ಹೋಗಿ ಸುಖದಿಂದಲೂ ನಿರ್ಭಯದಿಂದಲೂ ವಾಸವಾಗಿದ್ದ ಅಲ್ಲಿನ ಜನರ ಮೇಲೆ ಬಿದ್ದು ಅವರನ್ನು ಕತ್ತಿಯಿಂದ ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟರು. 28 ಆ ಪಟ್ಟಣವು ಚೀದೋನಿಗೆ ದೂರವಾಗಿದ್ದದ್ದರಿಂದಲೂ ಸಮೀಪದಲ್ಲಿ ಪರಿಚಯಸ್ಥರಾರೂ ಇಲ್ಲದ್ದರಿಂದಲೂ ಅವರಿಗೆ ಸಹಾಯದೊರಕಲಿಲ್ಲ. ಬೇತ್ರೆಹೋಬಿನ ತಗ್ಗಿನಲ್ಲಿದ್ದ ಈ ಪಟ್ಟಣವನ್ನು ದಾನ್ಯರು ತಿರಿಗಿ ಕಟ್ಟಿಸಿ ಅದರಲ್ಲಿ ವಾಸಿಸಿದರು. 29 ಮುಂಚೆ ಲಯಿಷ್ ಎಂಬ ಹೆಸರಿದ್ದ ಆ ಪಟ್ಟಣಕ್ಕೆ ಈಗ ದಾನ್ ಎಂದು ಹೆಸರಿಟ್ಟರು. ದಾನ್ ಎಂಬದು ಇವರ ಮೂಲಪುರುಷನೂ ಇಸ್ರಾಯೇಲನ ಮಗನೂ ಆದವನ ಹೆಸರು. 30 ಇದಲ್ಲದೆ ದಾನ್ಯರು ಆ ವಿಗ್ರಹವನ್ನು ತಮ್ಮ ಪಟ್ಟಣದಲ್ಲಿಟ್ಟರು. ಇಸ್ರಾಯೇಲ್ಯರು ಸೆರೆಗೆ ಹೋಗುವವರೆಗೆ ಮೋಶೆಯ ಮೊಮ್ಮಗನೂ ಗೇರ್ಷೋಮನ ಮಗನೂ ಆದ ಯೆಹೋನಾತಾನನೂ ಅವನ ವಂಶದವರೂ ದಾನ್ಯರಿಗೆ ಯಾಜಕರಾಗಿದ್ದರು. 31 ಶೀಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ದಾನ್ಯರಲ್ಲಿ ಮೀಕನು ಮಾಡಿಸಿದ ವಿಗ್ರಹವಿತ್ತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India