ಧರ್ಮೋಪದೇಶಕಾಂಡ 6 - ಕನ್ನಡ ಸತ್ಯವೇದವು J.V. (BSI)ಯೆಹೋವನೊಬ್ಬನೇ ದೇವರೆಂಬ ಧರ್ಮೋಪದೇಶದ ಮೂಲಸೂತ್ರ ವಿಷಯ 1 ನೀವು ಹೊಳೆ ದಾಟಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಅನುಸರಿಸುವದಕ್ಕಾಗಿ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದ ಧರ್ಮೋಪದೇಶವೂ ವಿಧಿನಿರ್ಣಯಗಳೂ ಇವೇ. 2 ನೀವೂ ನಿಮ್ಮ ಪುತ್ರಪೌತ್ರಾದಿಸಂತತಿಯವರೂ ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು ನಾನು ಈಗ ಬೋಧಿಸುವ ಆತನ ವಿಧಿನಿರ್ಣಯಗಳನ್ನೆಲ್ಲಾ ಅನುಸರಿಸಬೇಕೆಂದೂ ನೀವು ಬಹುಕಾಲ ಬಾಳಬೇಕೆಂದೂ ಇವುಗಳನ್ನು ಆಜ್ಞಾಪಿಸಿದ್ದಾನೆ. 3 ಆದದರಿಂದ ಇಸ್ರಾಯೇಲ್ಯರೇ, ನಿಮ್ಮ ಪಿತೃಗಳ ದೇವರಾದ ಯೆಹೋವನು ವಾಗ್ದಾನಮಾಡಿದ ಪ್ರಕಾರ ಹಾಲೂ ಜೇನೂ ಹರಿಯುವ ಆ ದೇಶದಲ್ಲಿ ನಿಮಗೆ ಶುಭವುಂಟಾಗುವದಕ್ಕೂ ನೀವು ಬಹಳವಾಗಿ ಹೆಚ್ಚುವದಕ್ಕೂ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಲೇಬೇಕು. 4 ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; 5 ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. 6 ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. 7 ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು. 8 ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು; ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು. 9 ನಿಮ್ಮ ಮನೆ ಬಾಗಲಿನ ನಿಲುವುಪಟ್ಟಿಗಳಲ್ಲಿಯೂ ತಲೆಬಾಗಲುಗಳ ಮೇಲೆಯೂ ಇವುಗಳನ್ನು ಬರೆಯಬೇಕು. 10 ನಿಮ್ಮ ದೇವರಾದ ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣ ಮಾಡಿಕೊಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದಾಗ ನೀವು ಕಟ್ಟದ ಒಳ್ಳೆಯ ದೊಡ್ಡ ಪಟ್ಟಣಗಳನ್ನೂ 11 ನೀವು ಕೂಡಿಸದ ಉತ್ತಮವಸ್ತುಗಳಿಂದ ತುಂಬಿದ ಮನೆಗಳನ್ನೂ ನೀವು ಅಗೆಯದ ನೀರಗುಂಡಿಗಳನ್ನೂ ನೀವು ಬೆಳಸದ ದ್ರಾಕ್ಷೇತೋಟಗಳನ್ನೂ ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ 12 ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನನ್ನು ಮರೆಯಬಾರದು, ನೋಡಿರಿ. 13 ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು; ಆತನನ್ನೇ ಸೇವಿಸಬೇಕು; ಆತನ ಹೆಸರು ಹೇಳಿ ಪ್ರಮಾಣಮಾಡಬೇಕು. 14 ಸುತ್ತಲಿರುವ ಜನಾಂಗಗಳು ಸೇವಿಸುವ ದೇವರುಗಳನ್ನು ನೀವು ಆರಾಧಿಸಬಾರದು. 15 ನಿಮ್ಮ ಮಧ್ಯದಲ್ಲಿರುವ ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಿಸದ ದೇವರು; ಆತನು ನಿಮ್ಮ ಮೇಲೆ ಕೋಪಗೊಂಡರೆ ನಿಮ್ಮನ್ನು ಭೂವಿುಯ ಮೇಲೆ ಉಳಿಯದಂತೆ ನಾಶಮಾಡಾನು. 16 ನೀವು ಮಸ್ಸದಲ್ಲಿ ನಿಮ್ಮ ದೇವರಾದ ಯೆಹೋವನನ್ನು ಪರೀಕ್ಷಿಸಿದಂತೆ ಇನ್ನು ಮುಂದೆ ಮಾಡಬೇಡಿರಿ. 17 ನಿಮ್ಮ ದೇವರಾದ ಯೆಹೋವನು ನಿಮಗೆ ನೇವಿುಸಿದ ಆಜ್ಞಾವಿಧಿನಿರ್ಣಯಗಳನ್ನು ಅನುಸರಿಸಲೇಬೇಕು. 18 ಯೆಹೋವನ ದೃಷ್ಟಿಗೆ ಯಾವದು ನ್ಯಾಯವೂ ಯೋಗ್ಯವೂ ಆಗಿದೆಯೋ ಅದನ್ನೇ ಮಾಡಬೇಕು. ಹೀಗೆ ನಡೆದರೆ ನಿಮಗೆ ಶುಭವುಂಟಾಗುವದು, ಮತ್ತು ಯೆಹೋವನು ನಿಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ಉತ್ತಮದೇಶವನ್ನು ನೀವು ಸೇರಿ ಸ್ವಾಧೀನಮಾಡಿಕೊಳ್ಳುವಿರಿ. 19 ಆತನು ತಾನೇ ನಿಮ್ಮ ಶತ್ರುಗಳನ್ನು ನಿಮ್ಮ ಎದುರಿನಿಂದ ಹೊರಡಿಸುವೆನೆಂದು ಮಾತು ಕೊಟ್ಟನಲ್ಲವೇ. 20 ಇನ್ನು ಮುಂದೆ ನಿಮ್ಮ ಮಕ್ಕಳು - ಈ ಆಜ್ಞಾವಿಧಿ ನಿರ್ಣಯಗಳನ್ನು ನಮ್ಮ ದೇವರಾದ ಯೆಹೋವನು ಯಾತಕ್ಕೆ ನೇವಿುಸಿದನು ಎಂದು ವಿಚಾರಿಸುವಾಗ 21 ನೀವು ಅವರಿಗೆ - ನಾವು ಐಗುಪ್ತದೇಶದಲ್ಲಿ ಫರೋಹನಿಗೆ ದಾಸರಾಗಿದ್ದಾಗ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡುಗಡೆ ಮಾಡಿದನು; 22 ಆತನು ಐಗುಪ್ತ್ಯರನ್ನೂ ಫರೋಹನನ್ನೂ ಅವನ ಮನೆಯವರನ್ನೂ ಬಾಧಕವಾದ ದೊಡ್ಡ ಮಹತ್ಕಾರ್ಯಗಳಿಂದಲೂ ಉತ್ಪಾತಗಳಿಂದಲೂ ನಮ್ಮ ಕಣ್ಣೆದುರಿನಲ್ಲಿ ಶಿಕ್ಷಿಸಿ 23 ತಾನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಮ್ಮನ್ನು ಸೇರಿಸುವದಕ್ಕಾಗಿ ಐಗುಪ್ತದೇಶದೊಳಗಿಂದ ಬರಮಾಡಿದನು; 24 ಆ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ ಆತನು ಇಂದಿನಂತೆ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯ ಭಕ್ತಿಯುಳ್ಳವರಾಗಿರಬೇಕು. 25 ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಎಣಿಸಲ್ಪಡುವೆವೆಂಬದಾಗಿ ನೀವು ಉತ್ತರಕೊಡಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India