ಧರ್ಮೋಪದೇಶಕಾಂಡ 27 - ಕನ್ನಡ ಸತ್ಯವೇದವು J.V. (BSI)ದೇಶದ ಮಧ್ಯದಲ್ಲಿ ಕಲ್ಲಿನ ಕಂಬಗಳನ್ನು ನಿಲ್ಲಿಸಿ ಅವುಗಳ ಮೇಲೆ ಈ ಧರ್ಮಶಾಸ್ತ್ರ ವಾಕ್ಯಗಳನ್ನು ಕೆತ್ತಿಸಿ ಆಶೀರ್ವಾದಗಳನ್ನೂ ಶಾಪೋಕ್ತಿಗಳನ್ನೂ ಉಚ್ಚರಿಸಬೇಕೆಂಬ ವಿಧಿ 1 ಮೋಶೆಯು ಇಸ್ರಾಯೇಲ್ಯರ ಹಿರಿಯರ ಸಹಿತ ಜನರಿಗೆ - ನಾನು ಈಗ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. 2-3 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಪ್ರವೇಶಿಸುವದಕ್ಕೆ ನೀವು ಯೊರ್ದನ್ ಹೊಳೆಯನ್ನು ದಾಟುವಾಗ ಅಂದರೆ ನಿಮ್ಮ ಪಿತೃಗಳ ದೇವರಾದ ಯೆಹೋವನು ತಾನು ವಾಗ್ದಾನ ಮಾಡಿದಂತೆ ನಿಮಗೆ ಕೊಡುವ ಹಾಲೂ ಜೇನೂ ಹರಿಯುವ ದೇಶವನ್ನು ಪ್ರವೇಶಿಸುವದಕ್ಕೆ ನೀವು ಯೊರ್ದನ್ ಹೊಳೆಯನ್ನು ದಾಟುವಾಗ ನೀವು ದೊಡ್ಡ ಕಲ್ಲುಗಳನ್ನು ನಿಲ್ಲಿಸಿ ಅವುಗಳಿಗೆ ಗಿಲಾವುಮಾಡಿಸಿ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಅವುಗಳ ಮೇಲೆ ಬರಿಸಬೇಕು. 4 ನೀವು ಯೊರ್ದನ್ ಹೊಳೆಯನ್ನು ದಾಟಿದ ನಂತರ ನಾನು ಈಗ ಆಜ್ಞಾಪಿಸಿದ ಕಲ್ಲುಗಳನ್ನು ಏಬಾಲ್ಬೆಟ್ಟದ ಮೇಲೆ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು. 5 ಅಲ್ಲಿ ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಲ್ಲುಗಳಿಂದ ಯಜ್ಞವೇದಿಯನ್ನು ಕಟ್ಟಿಸಬೇಕು. 6 ಉಳಿ ಮುಂತಾದದ್ದನ್ನು ಉಪಯೋಗಿಸದೆ ಹುಟ್ಟುಕಲ್ಲುಗಳಿಂದಲೇ ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯನ್ನು ಕಟ್ಟಿಸಬೇಕು. 7 ಅಲ್ಲಿ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿ ಸಹಭೋಜನಮಾಡಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂಭ್ರಮದಿಂದಿರಬೇಕು. 8 ನೀವು ಆ ಕಲ್ಲುಗಳ ಮೇಲೆ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ವಿರಲವಾಗಿಯೂ ಸ್ಪಷ್ಟವಾಗಿಯೂ ಬರಿಸಬೇಕೆಂದು ಆಜ್ಞಾಪಿಸಿದನು. 9 ಯಾಜಕರಾದ ಲೇವಿಯರೊಡನೆ ಮೋಶೆಯು ಇಸ್ರಾಯೇಲ್ಯರೆಲ್ಲರಿಗೆ - ಇಸ್ರಾಯೇಲ್ಯರೇ, ನಿಶಬ್ದವಾಗಿದ್ದು ಕೇಳಿರಿ. ನೀವು ಈಗ ನಿಮ್ಮ ದೇವರಾದ ಯೆಹೋವನ ಜನರಾದಿರಷ್ಟೆ. 10 ಆದದರಿಂದ ನೀವು ಈಗ ನಾನು ನಿಮಗೆ ಹೇಳುವ ಆತನ ಮಾತುಗಳಿಗೆ ಕಿವಿಗೊಟ್ಟು ಆತನ ಆಜ್ಞಾವಿಧಿಗಳನ್ನು ಅನುಸರಿಸಬೇಕು ಎಂದು ಹೇಳಿದನು. 11 ಮೋಶೆ ಆ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನಂದರೆ - 12 ನೀವು ಯೊರ್ದನ್ ಹೊಳೆಯನ್ನು ದಾಟಿದಾಗ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್, ಬೆನ್ಯಾಮೀನ್ ಎಂಬೀ ಕುಲಗಳವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತುಕೊಂಡು ಆಶೀರ್ವಾದಗಳನ್ನು ಉಚ್ಚರಿಸಬೇಕು. 13 ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್, ನಫ್ತಾಲಿ ಎಂಬೀ ಕುಲಗಳವರು ಏಬಾಲ್ ಬೆಟ್ಟದ ಮೇಲೆ ನಿಂತುಕೊಂಡು ಶಾಪೋಕ್ತಿಗಳನ್ನು ಉಚ್ಚರಿಸಬೇಕು. 14 ಲೇವಿಯರು ಗಟ್ಟಿಯಾದ ಸ್ವರದಿಂದ ಇಸ್ರಾಯೇಲ್ಯರೆಲ್ಲರಿಗೂ - 15 ಶಿಲ್ಪಿಯ ಕೆಲಸವಾಗಿರುವ ಮರದ ವಿಗ್ರಹವೂ ಲೋಹ ವಿಗ್ರಹವೂ ಯೆಹೋವನಿಗೆ ಹೇಯವಾದದ್ದರಿಂದ ಅವನ್ನು ಮಾಡಿಸಿ ಗೋಪ್ಯವಾಗಿ ನಿಲ್ಲಿಸಿಕೊಂಡವನಾದರೂ ಶಾಪಗ್ರಸ್ತ ಅನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 16 ಲೇವಿಯರು - ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 17 ಅವರು - ಮತ್ತೊಬ್ಬನ ಮೇರೆಯನ್ನು ಸರಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 18 ಅವರು - ಕುರುಡರಿಗೆ ದಾರಿತಪ್ಪಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 19 ಅವರು - ಪರದೇಶಿ, ತಾಯಿತಂದೆಯಿಲ್ಲದವ, ಇವರ ವ್ಯಾಜ್ಯದಲ್ಲಿ ನ್ಯಾಯ ಬಿಟ್ಟು ತೀರ್ಪುಹೇಳಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 20 ಅವರು - ಮಲತಾಯಿಯನ್ನು ಸಂಗವಿುಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 21 ಅವರು - ಪಶುಸಂಗಮಮಾಡಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 22 ಅವರು - ತಂದೆಯ ಮಗಳನ್ನಾಗಲಿ ತಾಯಿಯ ಮಗಳನ್ನಾಗಲಿ ಸಂಗವಿುಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 23 ಅವರು - ಅತ್ತೆಯನ್ನು ಸಂಗವಿುಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 24 ಅವರು - ರಹಸ್ಯವಾಗಿ ನರಹತ್ಯ ಮಾಡಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 25 ಅವರು - ಹಣತೆಗೆದುಕೊಂಡು ನಿರಪರಾಧಿಯನ್ನು ಕೊಂದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. 26 ಅವರು - ಈ ಧರ್ಮಶಾಸ್ತ್ರವಾಕ್ಯಗಳಿಗೆ ಒಡಂಬಟ್ಟು ಕೈಕೊಳ್ಳದೆ ಇರುವವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India