ಧರ್ಮೋಪದೇಶಕಾಂಡ 23 - ಕನ್ನಡ ಸತ್ಯವೇದವು J.V. (BSI)ಸಭೆಗೆ ಸೇರಬಾರದವರ ವಿಷಯ 1 ಬೀಜಹೊಡಿಸಿಕೊಂಡಾಗಲಿ ರಹಸ್ಯಾಂಗ ಛೇದಿಸಿಕೊಂಡಾಗಲಿ ನಪುಂಸಕರಾದವರು ಯೆಹೋವನ ಸಭೆಯಲ್ಲಿ ಸೇರಬಾರದು. 2 ಅಗಮ್ಯಾಗಮನದಿಂದುಂಟಾದ ಸಂತತಿಯವರು ಹತ್ತನೆಯ ತಲೆಯವರಾದರೂ ಯೆಹೋವನ ಸಭೆಗೆ ಸೇರಬಾರದು. 3 ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಯೆಹೋವನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಯೆಹೋವನ ಸಭೆಗೆ ಸೇರಬಾರದು. 4 ಯಾಕಂದರೆ ನೀವು ಐಗುಪ್ತದೇಶದಿಂದ ಬಂದಾಗ [ಅಮ್ಮೋನಿಯರು] ಅನ್ನ ಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; [ಮೋವಾಬ್ಯರು] ನಿಮ್ಮನ್ನು ಶಪಿಸುವದಕ್ಕಾಗಿ ಬೆಯೋರನ ಮಗನಾದ ಬಿಳಾಮನಿಗೆ ಹಣ ಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾವಿುನ ಪೆತೋರೂರಿನಿಂದ ಅವನನ್ನು ಕರಿಸಿದರು. 5 (ಆದರೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ ಅವನಿಂದ ಶಾಪವನ್ನು ನುಡಿಸದೆ ಆಶೀರ್ವಾದವನ್ನೇ ಹೇಳಿಸಿದನು.) 6 ನಿಮ್ಮ ಜೀವಮಾನಕಾಲವೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇ ಬಾರದು. 7 ಎದೋಮ್ಯರನ್ನು ಸಂಪೂರ್ಣವಾಗಿ ನಿಷೇಧಿಸಬಾರದು; ಅವರು ಬಂಧುಜನಗಳು. ಐಗುಪ್ತ್ಯರನ್ನೂ ಸಂಪೂರ್ಣವಾಗಿ ನಿಷೇಧಿಸಬಾರದು; ಅವರ ದೇಶದಲ್ಲಿ ನೀವು ಪ್ರವಾಸಿಗಳಾಗಿದ್ದಿರಲ್ಲಾ. 8 ಅವರ ಸಂತತಿಯವರಲ್ಲಿ ಮೂರನೆಯ ತಲೆಯವರು ಯೆಹೋವನ ಸಭೆಗೆ ಸೇರಬಹುದು. ಯುದ್ಧಕಾಲದಲ್ಲಿ ಪಾಳೆಯವು ನಿರ್ಮಲವಾಗಿರಬೇಕೆಂಬ ವಿಧಿ 9 ನೀವು ಶತ್ರುಗಳೊಡನೆ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುಚಿಯೂ ಆಗದಂತೆ ಎಚ್ಚರದಿಂದಿರಬೇಕು. 10 ರಾತ್ರಿಕಾಲದಲ್ಲಿ ವೀರ್ಯಸ್ಖಲನದಿಂದ ಯಾವನಾದರೂ ಅಶುದ್ಧನಾದರೆ ಅವನು ಪಾಳೆಯದೊಳಗೆ ಇರದೆ ಹೊರಗೆ ಇರಬೇಕು. 11 ಅವನು ಸಂಜೇವೇಳೆಯಲ್ಲಿ ಸ್ನಾನಮಾಡಿ ಸೂರ್ಯನು ಮುಣುಗಿದ ಮೇಲೆ ಪಾಳೆಯದೊಳಗೆ ಬರಬಹುದು. 12 ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು. 13 ಯುದ್ಧದ ಸಾಮಾನುಗಳಲ್ಲದೆ ಸಲಿಕೆ ನಿಮ್ಮ ಬಳಿಯಲ್ಲಿ ಇರಬೇಕು; ನೀವು ಬಹಿರ್ಭೂವಿುಗೆ ಹೋದಾಗ ಆ ಸಲಿಕೆಯಿಂದ ಅಗೆದು ಕಲ್ಮಷವನ್ನು ಮುಚ್ಚಿಬಿಡಬೇಕು. 14 ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಕಾಪಾಡುವದಕ್ಕೂ ಶತ್ರುಗಳನ್ನು ನಿಮ್ಮ ಕೈವಶಮಾಡುವದಕ್ಕೂ ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾನಲ್ಲಾ; ಆದದರಿಂದ ಪಾಳೆಯವು ನಿರ್ಮಲವಾಗಿರಬೇಕು; ನಿಮ್ಮಲ್ಲಿ ಅಶುಚಿಯೇನಾದರೂ ಕಂಡುಬಂದರೆ ಆತನು ನಿಮ್ಮನ್ನು ಬಿಟ್ಟುಹೋದಾನು. ತಪ್ಪಿಸಿಕೊಂಡ ದಾಸರನ್ನು ಹಿಡಿದು ದಣಿಯ ವಶಪಡಿಸಬಾರದೆಂಬ ವಿಧಿ 15 ತಪ್ಪಿಸಿಕೊಂಡ ದಾಸನು ನಿಮ್ಮಲ್ಲಿರುವದಕ್ಕೆ ಬಂದರೆ ಅವನನ್ನು ಅವನ ದಣಿಗೆ ತಿರಿಗಿ ವಶಪಡಿಸಬಾರದು. 16 ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಇಷ್ಟವಾಗಿದೆಯೋ ಅಲ್ಲೇ ಅವನು ವಾಸವಾಗಿರಬಹುದು; ನಿರ್ಬಂಧಪಡಿಸಬಾರದು. ಸೂಳೆಗಾರಿಕೆ ನಿಷಿದ್ಧವಾದದ್ದು ಎಂಬ ವಿಷಯ 17 ಇಸ್ರಾಯೇಲ್ಯರಲ್ಲಿ ಯಾವ ಸ್ತ್ರೀಯೂ ದೇವದಾಸಿಯಾಗಬಾರದು; ಯಾವ ಪುರುಷನೂ ಗುದಮೈಥುನಿಯಾಗಬಾರದು. 18 ಸೂಳೆತನದಿಂದಾಗಲಿ ಗುದಮೈಥುನದಿಂದಾಗಲಿ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಮಂದಿರದೊಳಗೆ ತರಲೇಬಾರದು; ಈ ಎರಡೂ ಆತನಿಗೆ ಅಸಹ್ಯ. ಸ್ವದೇಶದವನಿಂದ ಬಡ್ಡಿ ತೆಗೆದುಕೊಳ್ಳಬಾರದೆಂಬ ವಿಧಿ 19 ಹಣವನ್ನಾಗಲಿ ಆಹಾರಪದಾರ್ಥಗಳನ್ನಾಗಲಿ ಬೇರೆ ಯಾವದನ್ನಾಗಲಿ 20 ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು. ಹೀಗೆ ನಡೆದರೆ ನೀವು ಸ್ವದೇಶವಾಗಿ ಹೊಂದುವದಕ್ಕೆ ಹೋಗುವ ದೇಶದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು. ಹರಕೆಯನ್ನು ನೆರವೇರಿಸಬೇಕೆಂಬ ವಿಧಿ 21 ನಿಮ್ಮ ದೇವರಾದ ಯೆಹೋವನಿಗೆ ಹರಕೆಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಆತನು ತಪ್ಪದೆ ಅದನ್ನು ವಿಚಾರಿಸುವನು; ತೀರಿಸದೆ ಹೋಗುವದು ಪಾಪ. 22 ನೀವು ಹರಕೆಮಾಡದಿದ್ದರೆ ದೋಷವೇನೂ ಇರಲಿಲ್ಲ; 23 ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಯೆಹೋವನಿಗೆ ಬಾಯಿಂದ ಹರಕೆಮಾಡಿಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು. ಮತ್ತೊಬ್ಬನ ಬೆಳೆಯ ವಿಷಯದಲ್ಲಿ ನಡೆದುಕೊಳ್ಳತಕ್ಕ ಕ್ರಮ 24 ಮತ್ತೊಬ್ಬನ ದ್ರಾಕ್ಷೇತೋಟದಲ್ಲಿ ನೀವು ಹೋಗುತ್ತಿರುವಾಗ ಇಷ್ಟಾನುಸಾರ ಹಣ್ಣುಗಳನ್ನು ತಿನ್ನಬಹುದೇ ಹೊರತು ಪಾತ್ರೆಯಲ್ಲಿ ತೆಗೆದುಕೊಂಡು ಹೋಗಬಾರದು. 25 ಮತ್ತೊಬ್ಬನ ಪೈರಿನಲ್ಲಿ ಹೋಗುತ್ತಿರುವಾಗ ತೆನೆಗಳನ್ನು ಕೈಯಿಂದ ಮುರುಕೊಳ್ಳಬಹುದೇ ಹೊರತು ಆ ಪೈರಿಗೆ ಕುಡುಗೋಲು ಹಾಕಬಾರದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India