ಧರ್ಮೋಪದೇಶಕಾಂಡ 19 - ಕನ್ನಡ ಸತ್ಯವೇದವು J.V. (BSI)ಕೈತಪ್ಪಿ ನರಹತ್ಯಮಾಡಿದವರಿಗೋಸ್ಕರ ಆಶ್ರಯನಗರಗಳನ್ನು ಗೊತ್ತುಮಾಡಬೇಕೆಂಬ ವಿಧಿ 1 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿರುವ ಜನಾಂಗಗಳನ್ನು ಆತನು ತೆಗೆದುಹಾಕಿಬಿಟ್ಟ ತರುವಾಯ ನೀವು ಆ ದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅವರ ಗ್ರಾಮಗಳಲ್ಲಿಯೂ ಮನೆಗಳಲ್ಲಿಯೂ ವಾಸವಾಗಿರುವಾಗ 2 ಆ ನಿಮ್ಮ ದೇಶದ ಮಧ್ಯದಲ್ಲಿ ನೀವು ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಬೇಕು. 3 ನರಹತ್ಯಮಾಡಿದವರು ಆ ಪಟ್ಟಣಗಳಿಗೆ ಓಡಿಹೋಗುವದಕ್ಕೆ ಅನುಕೂಲವಾಗುವಂತೆ ನೀವು ಅವುಗಳ ದಾರಿಗಳನ್ನು ಸರಿಪಡಿಸಬೇಕು. ಮತ್ತು ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ಆ ದೇಶವನ್ನು ಮೂರು ಭಾಗ ಮಾಡಬೇಕು. 4 ಆ ಪಟ್ಟಣಗಳ ಸಂಗತಿ ಹೇಗಂದರೆ - ಯಾವನಾದರೂ ದ್ವೇಷವಿಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದರೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. 5 ದೃಷ್ಟಾಂತ - ಒಬ್ಬ ಮನುಷ್ಯನು ಕಟ್ಟಿಗೆಯನ್ನು ಕಡಿಯಬೇಕೆಂದು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋಗಿ ಅಲ್ಲಿ ಒಂದು ಮರವನ್ನು ಕಡಿಯಬೇಕೆಂದು ಕೊಡಲಿಯಿಂದ ಹೊಡೆಯುತ್ತಿರುವಾಗ ಕೊಡಲಿಯು ಕಾವಿನಿಂದ ಜಾರಿ ಆ ಮತ್ತೊಬ್ಬನಿಗೆ ತಗಲಿದ್ದರಿಂದ ಅವನು ಸತ್ತರೆ ಹೊಡೆದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. 6 ಸತ್ತವನಲ್ಲಿ ಅವನಿಗೆ ಮೊದಲು ದ್ವೇಷವಿಲ್ಲದ್ದರಿಂದ ಅವನು ಮರಣಶಿಕ್ಷೆಗೆ ಪಾತ್ರನಲ್ಲವಲ್ಲಾ. ಆದರೂ ಹತ್ಯಮಾಡಿದವನಿಗೆ ಮುಯ್ಯಿತೀರಿಸುವ ಹಂಗುಳ್ಳ ಸಮೀಪಬಂಧುವು ಇನ್ನು ಕೋಪದಿಂದ ಉರಿಯುತ್ತಿರುವಾಗಲೇ ಅವನನ್ನು ಹಿಂದಟ್ಟಾನು; ಮತ್ತು ಮಾರ್ಗ ದೂರವಾಗಿರುವ ಪಕ್ಷಕ್ಕೆ ಅವನನ್ನು ಹಿಡಿದು ಕೊಂದುಹಾಕಿಬಿಟ್ಟಾನು. 7 ಈ ಕಾರಣದಿಂದ ನೀವು ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಬೇಕೆಂದು ಆಜ್ಞಾಪಿಸಿದ್ದೇನೆ. 8-9 ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸುವವರಾಗಿ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನು ಹೇಳುವ ಮಾರ್ಗದಲ್ಲೇ ಯಾವಾಗಲೂ ನಡೆದರೆ ಆತನು ನಿಮ್ಮ ಪಿತೃಗಳಿಗೆ ವಾಗ್ದಾನಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿ ತಾನು ನಿಮ್ಮ ಪಿತೃಗಳಿಗೆ ಸೂಚಿಸಿದ ಪ್ರದೇಶವನ್ನೆಲ್ಲಾ ಕೊಡುವನು. ಆಗ ಈ ಮೂರು ಪಟ್ಟಣಗಳನ್ನಲ್ಲದೆ ಇನ್ನು ಮೂರು ಪಟ್ಟಣಗಳನ್ನು ಗೊತ್ತುಮಾಡಬೇಕು. 10 ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗಬಾರದು; ಅಂಥವನಿಗೆ ಮರಣಶಿಕ್ಷೆಯಾದರೆ ಆ ದೋಷವು ನಿಮ್ಮದಾಗಿಯೇ ಇರುವದು. 11 ಆದರೆ ಯಾವನಾದರೂ ಒಬ್ಬನಲ್ಲಿ ದ್ವೇಷವನ್ನೇ ಇಟ್ಟು ಸಮಯನೋಡಿಕೊಂಡು ಅವನ ಮೇಲೆ ಬಿದ್ದು ಅವನನ್ನು ಹೊಡೆದು ಕೊಂದ ತರುವಾಯ ಈ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋದರೆ 12 ಅವನ ಊರಿನ ಹಿರಿಯರು ಅವನನ್ನು ಅಲ್ಲಿಂದ ಹಿಡತರಿಸಿ ಅವನಿಗೆ ಮರಣಶಿಕ್ಷೆಯಾಗುವಂತೆ ಮುಯ್ಯಿತೀರಿಸುವ ಹಂಗುಳ್ಳವನ ಕೈಗೆ ಕೊಡಬೇಕು. 13 ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಾಯೇಲ್ಯರಲ್ಲಿ ಉಳಿಯದಂತೆ ಮಾಡಬೇಕು. ಮೇರೆಯನ್ನು ಸರಿಸಕೂಡದೆಂಬ ವಿಧಿ 14 ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶದಲ್ಲಿ ನಿಮ್ಮ ಪಾಲಿಗೆ ಬಂದ ಸ್ವಾಸ್ತ್ಯದಲ್ಲಿ ನೆರೆಯವನ ಭೂವಿುಯ ಪೂರ್ವಕಾಲದ ಮೇರೆಯನ್ನು ಒತ್ತಬಾರದು. ಅಪರಾಧವನ್ನು ಸ್ಥಾಪಿಸುವದಕ್ಕೆ ಒಂದೇ ಸಾಕ್ಷಿ ಮಾತ್ರ ಸಾಲದೆಂಬ ವಿಧಿ 15 ಯಾವ ದೋಷದ ಅಥವಾ ಅಪರಾಧದ ವಿಷಯದಲ್ಲೂ ಒಬ್ಬನೇ ಒಬ್ಬನ ಸಾಕ್ಷಿಯನ್ನು ನೀವು ಅಂಗೀಕರಿಸಬಾರದು. ನಡೆದ ಸಂಗತಿ ಸ್ಥಾಪನೆಯಾಗುವದಕ್ಕೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳು ಬೇಕು. ಸುಳ್ಳು ಸಾಕ್ಷಿಯನ್ನು ಹೇಳಿದವನಿಗೆ ವಿಧಿಸಬೇಕಾದ ಶಿಕ್ಷೆ 16 ಯಾವನಾದರೂ ನ್ಯಾಯವಿರುದ್ಧವಾಗಿ ಬಂದು ಮತ್ತೊಬ್ಬನನ್ನು ಅಪರಾಧಿ ಎಂದು ಸಾಕ್ಷಿಹೇಳಿದರೆ 17 ವ್ಯಾಜ್ಯವಾಡುವ ಆ ಇಬ್ಬರೂ ಯೆಹೋವನ ಸನ್ನಿಧಿಯಲ್ಲಿ ಯಾಜಕರ ಮುಂದೆಯೂ ಆಗ ಇರುವ ನ್ಯಾಯಾಧಿಪತಿಗಳ ಮುಂದೆಯೂ ನಿಲ್ಲಬೇಕು. 18 ನ್ಯಾಯಾಧಿಪತಿಗಳು ಚೆನ್ನಾಗಿ ವಿಚಾರಣೆಮಾಡಿದ ಮೇಲೆ ಆ ಮನುಷ್ಯನ ಸಾಕ್ಷಿ ಸುಳ್ಳೆಂದು ತೋರಿಬಂದರೆ ಅವನು ಆ ಮತ್ತೊಬ್ಬನಿಗೆ ಮಾಡಿಸಬೇಕೆಂದಿದ್ದ ಶಿಕ್ಷೆಯನ್ನು ಅವನಿಗೇ ವಿಧಿಸಬೇಕು. 19 ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಬೇಕು. 20 ಉಳಿದವರು ಆ ಸಂಗತಿಯನ್ನು ಕೇಳಿ ಭಯಪಟ್ಟು ಇನ್ನು ಮುಂದೆ ಇಂಥ ದುಷ್ಟತ್ವವನ್ನು ನಡಿಸದಿರುವರು. 21 ನೀವು ಅಂಥವರನ್ನು ಕನಿಕರಿಸಬಾರದು; ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನೂ ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ಕೈಗೆ ಪ್ರತಿಯಾಗಿ ಕೈಯನ್ನೂ ಕಾಲಿಗೆ ಪ್ರತಿಯಾಗಿ ಕಾಲನ್ನೂ ಅವನಿಗೆ ನಷ್ಟಪಡಿಸಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India