ಧರ್ಮೋಪದೇಶಕಾಂಡ 14 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರು ದೇವಜನರಾದದರಿಂದ ದುರಾಚಾರಗಳನ್ನು ನಡಿಸಬಾರದು, ಅಶುದ್ಧವಾದದ್ದನ್ನು ತಿನ್ನಬಾರದು ಎಂಬ ವಿಧಿ 1 ನೀವು ನಿಮ್ಮ ದೇವರಾಗಿರುವ ಯೆಹೋವನ ಮಕ್ಕಳಾಗಿರುವದರಿಂದ ಸತ್ತವರಿಗೋಸ್ಕರ ದೇಹವನ್ನು ಗಾಯಮಾಡಿಕೊಳ್ಳಬಾರದು; ಮುಂದಲೆಯನ್ನು ಬೋಳಿಸಿಕೊಳ್ಳಲೂಬಾರದು. 2 ಯಾಕಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಜನರೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನರಾಗುವದಕ್ಕೆ ಆದುಕೊಂಡಿದ್ದಾನಲ್ಲಾ. 3 ನಿಷಿದ್ಧವಾಗಿರುವ ಯಾವದನ್ನೂ ನೀವು ತಿನ್ನಕೂಡದು. 4 ನೀವು ತಿನ್ನಬಹುದಾದ ಪಶುಜಾತಿಗಳು ಯಾವವಂದರೆ - 5 ದನ, ಕುರಿ, ಆಡು, ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ ಎಂಬಿವುಗಳೇ. 6 ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲಕುಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು. 7 ಆದರೆ ಯಾವ ಪ್ರಾಣಿಯು ಮೆಲಕುಹಾಕಿದರೂ ಗೊರಸು ಸೀಳಿರುವದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕುಹಾಕುವದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ದೃಷ್ಟಾಂತ - ಒಂಟೆ, ಮೊಲ, ಬೆಟ್ಟದ ಮೊಲ ಇವುಗಳು ಮೆಲಕುಹಾಕುವಂಥವುಗಳಾದರೂ ಸೀಳುಗೊರಸು ಇಲ್ಲವಾದ ಕಾರಣ ಅವು ನಿಮಗೆ ಅಶುದ್ಧ. 8 ಹಂದಿಯ ಗೊರಸು ಸೀಳಿದ್ದರೂ ಅದು ಮೆಲಕುಹಾಕುವದಿಲ್ಲವಾದದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಕೂಡದು; ಇವುಗಳ ಹೆಣವನ್ನು ಮುಟ್ಟಕೂಡದು. 9 ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವವಂದರೆ - ಯಾವ ಜಾತಿಯ ಪ್ರಾಣಿಗೆ ರೆಕ್ಕೆ ಇದ್ದು ಮೈಯೆಲ್ಲಾ ಪರೆಪರೆಯಾಗಿರುವದೋ ಅದರ ಮಾಂಸವನ್ನು ತಿನ್ನಬಹುದು. 10 ಯಾವ ಜಾತಿಗೆ ರೆಕ್ಕೆಯೂ ಪರೆಪರೆಯಾದ ಮೈಯೂ ಇರುವದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಕೂಡದು; ಅದು ನಿಮಗೆ ಅಶುದ್ಧ. 11 ಎಲ್ಲಾ ಶುದ್ಧಪಕ್ಷಿಗಳ ಮಾಂಸವನ್ನು ತಿನ್ನಬಹುದು. 12 ತಿನ್ನಕೂಡದವುಗಳು ಯಾವವಂದರೆ - 13 ಗರುಡ, ಬೆಟ್ಟದ ಹದ್ದು, ಕ್ರೌಂಚ, ಗಿಡುಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು, 14-15 ಸಕಲವಿಧವಾದ ಕಾಗೆ, ಉಷ್ಟ್ರಪಕ್ಷಿ, ಉಲೂಕ, ಕಡಲ್ಹಕ್ಕಿ, ಸಕಲವಿಧವಾದ ಡೇಗೆ, 16-17 ಗೂಬೆ, ಹೆಗ್ಗೂಬೆ, ಕರೇಟು, ಚೀಲಮೂಗಿ, ರಣಹದ್ದು, ನೀರುಕಾಗೆ, ಕೊಕ್ಕರೆ, 18 ಸಕಲವಿಧವಾದ ಬಕ, ಹೆಡೆಹಕ್ಕಿ, ಕಣ್ಣಕಪಡಿ. 19 ರೆಕ್ಕೆಯುಳ್ಳ ಕ್ರಿವಿುಕೀಟಗಳೆಲ್ಲವೂ ನಿಮಗೆ ಅಶುದ್ಧ; ಅವುಗಳನ್ನು ತಿನ್ನಕೂಡದು. 20 ರೆಕ್ಕೆಯುಳ್ಳವುಗಳಲ್ಲಿ ಶುದ್ಧಜಾತಿಯವುಗಳನ್ನು ಮಾತ್ರ ತಿನ್ನಬಹುದು. 21 ಸತ್ತುಬಿದ್ದದ್ದನ್ನು ನೀವು ತಿನ್ನಕೂಡದು; ನಿಮ್ಮ ಊರಲ್ಲಿರುವ ಪರದೇಶೀಯರಿಗೆ ಅದನ್ನು ತಿನ್ನುವದಕ್ಕೆ ಕೊಡಬಹುದು, ಅನ್ಯರಿಗೆ ಮಾರಬಹುದು; ನೀವಾದರೋ ನಿಮ್ಮ ದೇವರಾದ ಯೆಹೋವನಿಗೆ ಪ್ರತಿಷ್ಠಿತರಾದವರು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಕೂಡದು. ಎರಡು ವರುಷಗಳಲ್ಲಿ ಬೆಳೆಯ ದಶಮಾಂಶವನ್ನು ಯೆಹೋವನ ಸನ್ನಿಧಿಯಲ್ಲಿ ಊಟಮಾಡಿ ಮೂರನೆಯ ವರುಷದ ಬೆಳೆಯ ದಶಮಾಂಶವನ್ನು ಊರಿನ ಬಡವರಿಗೆ ಕೊಟ್ಟುಬಿಡಬೇಕೆಂಬ ವಿಧಿ 22 ಪ್ರತಿವರುಷದ ನಿಮ್ಮ ಹೊಲದ ಬೆಳೆಯಲ್ಲಿ ದಶಮಭಾಗವನ್ನು ಪ್ರತ್ಯೇಕಿಸಬೇಕು. 23 ಧಾನ್ಯ, ದ್ರಾಕ್ಷೆ, ಎಣ್ಣೆ ಇವುಗಳಲ್ಲಿ ದಶಮಭಾಗವನ್ನೂ ದನಕುರಿಗಳ ಚೊಚ್ಚಲುಮರಿಗಳನ್ನೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ತನ್ನ ಹೆಸರನ್ನು ಸ್ಥಾಪಿಸಿಕೊಳ್ಳುವದಕ್ಕೆ ಆದುಕೊಳ್ಳುವ ಸ್ಥಳದಲ್ಲೇ ನೀವು ತಿನ್ನಬೇಕು. ಹೀಗೆ ನಿಮ್ಮ ದೇವರಾದ ಯೆಹೋವನಲ್ಲೇ ಯಾವಾಗಲೂ ಭಯಭಕ್ತಿಯುಳ್ಳವರಾಗಿರುವದನ್ನು ಅಭ್ಯಾಸಮಾಡಿಕೊಳ್ಳುವಿರಿ. 24 ನಿಮ್ಮ ದೇವರಾದ ಯೇಹೋವನು ಆದುಕೊಳ್ಳುವ ಸ್ಥಳವು ನಿಮಗೆ ದೂರವಾಗಿದ್ದು ಆ ಕಾಣಿಕೆಗಳನ್ನು ಅಷ್ಟು ದೂರ ಹೊತ್ತುಕೊಂಡು ಹೋಗುವದು ಅಸಾಧ್ಯವಾದರೆ ನಿಮ್ಮ ದೇವರಾದ ಯೆಹೋವನು ನಿಮಗೆ ಅಭಿವೃದ್ಧಿಯನ್ನುಂಟುಮಾಡಿದ ಕಾಲದಲ್ಲಿ 25 ಅವುಗಳನ್ನು ಮಾರಿಬಿಟ್ಟು ಆ ಹಣದ ಗಂಟನ್ನು ಆತನು ಆದುಕೊಂಡ ಸ್ಥಳಕ್ಕೆ ತೆಗೆದುಕೊಂಡು ಹೋಗಿ 26 ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ ಮೊದಲಾದವುಗಳನ್ನು ಕೊಂಡುಕೊಂಡು ನೀವೂ ನಿಮ್ಮ ಮನೆಯವರೂ ನಿಮ್ಮ ಊರಿನ ಲೇವಿಯರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಊಟಮಾಡಿ ಸಂತೋಷವಾಗಿರಬೇಕು. 27 ಲೇವಿಯರಿಗೆ ನಿಮ್ಮೊಡನೆ ಯಾವ ಸ್ವಾಸ್ತ್ಯವೂ ಇಲ್ಲವಾದದರಿಂದ ನೀವು ಅವರನ್ನು ಕೈಬಿಡಬಾರದು. 28 ಪ್ರತಿ ಮೂರನೆಯ ವರುಷದ ಬೆಳೆಯ ದಶಮಭಾಗವನ್ನು ತಂದು ತಂದು ನೀವು ಇರುವ ಊರಲ್ಲಿಯೇ ಕೂಡಿಸಬೇಕು. 29 ಆಗ ಊರಲ್ಲಿರುವ ಅನ್ಯದೇಶದವರೂ ತಾಯಿತಂದೆಯಿಲ್ಲದವರೂ ವಿಧವೆಯರೂ ನಿಮ್ಮೊಡನೆ ಸ್ವಾಸ್ತ್ಯವನ್ನು ಹೊಂದದೆಹೋದ ಲೇವಿಯರೂ ಉಂಡು ಸಂತೋಷವಾಗಿರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಮಾಡುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India