ದಾನಿಯೇಲ 4 - ಕನ್ನಡ ಸತ್ಯವೇದವು J.V. (BSI)ಕಡಿದ ಮರದ ಕನಸು 1 ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗಕುಲಭಾಷೆಗಳವರಿಗೆ ರಾಜನಾದ ನೆಬೂಕದ್ನೆಚ್ಚರನ ಪ್ರಕಟನೆ - 2 ನಿಮಗೆ ಸುಖವು ಹೆಚ್ಚೆಚ್ಚಾಗಲಿ! ಪರಾತ್ಪರದೇವರು ನನ್ನ ವಿಷಯದಲ್ಲಿ ನಡಿಸಿರುವ ಮಹತ್ತುಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿಬಂದಿದೆ. 3 ಆತನ ಮಹತ್ತುಗಳು ಎಷ್ಟೋ ಅತಿಶಯ! ಆತನ ಅದ್ಭುತಗಳು ಎಷ್ಟೋ ವಿಶೇಷ! ಆತನ ರಾಜ್ಯವು ಶಾಶ್ವತರಾಜ್ಯ, ಆತನ ಆಳಿಕೆಯು ತಲತಲಾಂತರಕ್ಕೂ ನಿಲ್ಲುವದು. 4 ನೆಬೂಕದ್ನೆಚ್ಚರನಾದ ನಾನು ನನ್ನ ಆಲಯದಲ್ಲಿ ಹಾಯಾಗಿದ್ದೆನು, ಹೌದು ನನ್ನ ಅರಮನೆಯಲ್ಲಿ ಸೊಂಪಾಗಿದ್ದೆನು. 5 ಹೀಗಿರಲು ನನ್ನನ್ನು ಹೆದರಿಸುವ ಒಂದು ಕನಸನ್ನು ಕಂಡೆನು; ಹಾಸಿಗೆಯಲ್ಲಿ ನನಗುಂಟಾದ ಯೋಚನೆಗಳೂ ನನ್ನ ಮನಸ್ಸಿಗೆ ಬಿದ್ದ ಸ್ವಪ್ನಗಳೂ ನನ್ನನ್ನು ಕಳವಳಗೊಳಿಸಿದವು. 6 ಆದದರಿಂದ ಕನಸಿನ ಅರ್ಥವನ್ನು ನನಗೆ ತಿಳಿಸಲಿಕ್ಕೆ ಬಾಬೆಲಿನ ವಿದ್ವಾಂಸರೆಲ್ಲರನ್ನೂ ಕರತರುವ ಹಾಗೆ ಆಜ್ಞಾಪಿಸಿದೆನು. 7 ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು, ಇವರು ಸಮ್ಮುಖಕ್ಕೆ ಬಂದಾಗ ನಾನು ಆ ಕನಸನ್ನು ತಿಳಿಸಲು ಅವರು ಅದರ ಅಭಿಪ್ರಾಯವನ್ನು ವಿವರಿಸಲಾರದೆ ಹೋದರು. 8 ನನ್ನ ದೇವರ ಹೆಸರು ಸೇರಿರುವ ಬೇಲ್ತೆಶಚ್ಚರನೆಂಬ ಅಡ್ಡಹೆಸರನ್ನು ಹೊಂದಿದವನೂ ಪರಿಶುದ್ಧದೇವರುಗಳ ಆತ್ಮವುಳ್ಳವನೂ ಆದ ದಾನಿಯೇಲನು ಕಟ್ಟಕಡೆಯಲ್ಲಿ ನನ್ನ ಸನ್ನಿಧಿಗೆ ಬರಲು ನಾನು ಆ ಕನಸನ್ನು ಅವನಿಗೆ ಹೀಗೆ ತಿಳಿಸಿದೆನು - 9 ಬೇಲ್ತೆಶಚ್ಚರನೇ, ಜೋಯಿಸರಲ್ಲಿ ಪ್ರಧಾನನೇ, ಪರಿಶುದ್ಧದೇವರುಗಳ ಆತ್ಮವು ನಿನ್ನಲ್ಲಿ ನೆಲೆಯಾಗಿದೆ ಎಂದು ತಿಳಿದಿದ್ದೇನೆ, ಯಾವ ರಹಸ್ಯವೂ ನಿನಗೆ ಅಶೋಧ್ಯವಲ್ಲವೆಂಬದು ನನಗೆ ಗೊತ್ತು. ಆದದರಿಂದ ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ನನಗೆ ತಿಳಿಸು. 10 ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸುಗಳು ಇವೇ - ಇಗೋ, ಲೋಕದ ನಡುವೆ ಬಹು ಎತ್ತರವಾದ ಒಂದು ವೃಕ್ಷವನ್ನು ಕಂಡೆನು. 11 ಆ ವೃಕ್ಷವು ಬೆಳೆದು ಬಲಗೊಂಡಿತ್ತು. ಅದರ ತುದಿಯು ಆಕಾಶವನ್ನು ಮುಟ್ಟಿತ್ತು. ಅದು ಭೂಲೋಕದ ಕಟ್ಟಕಡೆಗೂ ಕಾಣಿಸುತ್ತಿತ್ತು. 12 ಅದರ ಎಲೆಗಳು ಅಂದ, ಹಣ್ಣುಗಳು ಬಹಳ, ಅದರಿಂದ ಎಲ್ಲಕ್ಕೂ ಆಹಾರ, ನೆರಳು ಭೂಜಂತುಗಳಿಗೆ ಆಶ್ರಯ, ಕೊಂಬೆಗಳು ಆಕಾಶಪಕ್ಷಿಗಳಿಗೆ ನೆಲೆ, ಅದು ಸಕಲ ಜೀವಿಗಳಿಗೂ ಜೀವನ. 13 ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸಿನಲ್ಲಿ ಅನಿವಿುಷನಾದ ದೇವದೂತನು ಆಕಾಶದಿಂದಿಳಿದು ಗಟ್ಟಿಯಾಗಿ ಕೂಗಿ - 14 ವೃಕ್ಷವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿರಿ, ಎಲೆಗಳನ್ನು ಉದುರಿಸಿರಿ, ಹಣ್ಣುಗಳನ್ನು ಚೆಲ್ಲಿರಿ; ಮೃಗಗಳು ನೆರಳನ್ನು ಬಿಟ್ಟುಬಿಡಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ! 15 ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣತಾಮ್ರಗಳ ಪಟ್ಟೆಯನ್ನು ಅದಕ್ಕೆ ಬಿಗಿಯಿರಿ; ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಭೂವಿುಯ ಹುಲ್ಲು ಮೃಗಗಳಿಗೆ ಗತಿಯಾದಂತೆ ಅದಕ್ಕೆ ಗತಿಯಾಗಲಿ; 16 ಅದಕ್ಕೆ ಮಾನುಷಹೃದಯವು ಹೋಗಿ ಮೃಗದ ಹೃದಯವು ಬರಲಿ; ಹೀಗೆ ಅದಕ್ಕೆ ಏಳು ವರುಷ ಕಳೆಯಲಿ. 17 ಇದು ಅನಿವಿುಷರ ತೀರ್ಮಾನ, ದೇವರ ತೀರ್ಪು; ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಆಳಿಕೆಯನ್ನು ತನಗೆ ಬೇಕಾದವರಿಗೆ ಒಪ್ಪಿಸಿ ಕನಿಷ್ಠರನ್ನೂ ಅದರ ಮೇಲೆ ನೇವಿುಸುತ್ತಾನೆಂಬದು ಜೀವಂತರಿಗೆ ತಿಳಿದುಬರಬೇಕೆಂದೇ ಈ ತೀರ್ಮಾನವಾಯಿತು ಎಂದು ಸಾರಿದನು. 18 ರಾಜನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು; ಬೇಲ್ತೆಶಚ್ಚರನೇ, ನನ್ನ ರಾಜ್ಯದ ಸಕಲ ವಿದ್ವಾಂಸರಲ್ಲಿ ಯಾರೂ ಅದರ ಅರ್ಥವನ್ನು ತಿಳಿಸಲಾರರು; ನೀನು ಅದನ್ನು ತಿಳಿಸು; ಪರಿಶುದ್ಧದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವದರಿಂದ ನೀನು ಶಕ್ತನೇ ಸರಿ. 19 ಆಗ ಬೇಲ್ತೆಶಚ್ಚರನೆಂಬ ಅಡ್ಡಹೆಸರಿನ ದಾನಿಯೇಲನು ತನ್ನ ಬುದ್ಧಿಗೆ ತೋರಿದ್ದಕ್ಕೆ ದಿಗಿಲುಪಟ್ಟು ತುಸುಹೊತ್ತು ಸ್ತಬ್ಧನಾದನು. ರಾಜನು ಇದನ್ನು ನೋಡಿ - ಬೇಲ್ತೆಶಚ್ಚರನೇ, ನನ್ನ ಕನಸಾಗಲಿ ಅದರ ಅರ್ಥವಾಗಲಿ ನಿನ್ನನ್ನು ಹೆದರಿಸದಿರಲಿ ಎಂದು ಹೇಳಲು ಬೇಲ್ತೆಶಚ್ಚರನು - ಎನ್ನೊಡೆಯನೇ, ಆ ಕನಸು ನಿನ್ನ ಹಗೆಗಳಿಗೆ ಫಲಿಸಲಿ, ಅದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ! 20 ಯಾವ ವೃಕ್ಷವು ಬೆಳೆದು ಬಲಗೊಂಡು ಆಕಾಶಕ್ಕೆ ತುದಿಯನ್ನು ಮುಟ್ಟಿಸುತ್ತಾ ಲೋಕದವರೆಲ್ಲರಿಗೂ ಕಾಣಿಸುತ್ತಾ 21 ಅಂದವಾದ ಎಲೆಗಳನ್ನೂ ಬಹಳ ಹಣ್ಣುಗಳನ್ನೂ ಬಿಡುತ್ತಾ ಎಲ್ಲಕ್ಕೂ ಆಹಾರವನ್ನು ಒದಗಿಸುತ್ತಾ ತನ್ನ ನೆರಳನ್ನು ಭೂಜಂತುಗಳಿಗೆ ಆಶ್ರಯವಾಗಿಯೂ ತನ್ನ ಕೊಂಬೆಗಳನ್ನು ಆಕಾಶಪಕ್ಷಿಗಳಿಗೆ ನೆಲೆಯಾಗಿಯೂ ಮಾಡುತ್ತಾ ಕನಸಿನಲ್ಲಿ ನಿನಗೆ ತೋರಿತೋ ಆ ವೃಕ್ಷವು ನೀನೇ; 22 ರಾಜಾ, ನೀನು ಬೆಳೆದು ಬಲಗೊಂಡಿದ್ದೀ, ನಿನ್ನ ಮಹಿಮೆಯು ವೃದ್ಧಿಯಾಗಿ ಆಕಾಶಕ್ಕೆ ಮುಟ್ಟಿದೆ, ನಿನ್ನ ಆಳಿಕೆಯು ಲೋಕದ ಕಟ್ಟಕಡೆಗೂ ವ್ಯಾಪಿಸಿದೆ. 23 ಅನಿವಿುಷನಾದ ದೇವದೂತನು ಆಕಾಶದಿಂದಿಳಿದು - ವೃಕ್ಷವನ್ನು ಕಡಿದು ಹಾಳುಮಾಡಿರಿ; ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣ ತಾಮ್ರಗಳ ಪಟ್ಟೆಯನ್ನು ಅದಕ್ಕೆ ಬಿಗಿಯಿರಿ, ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಅದಕ್ಕೆ ಏಳು ವರುಷ ಕಳೆಯುವ ತನಕ ಕಾಡುಮೃಗಗಳ ಸಹವಾಸದ ಗತಿಯು ಬರಲಿ ಎಂದು ಸಾರುವದನ್ನು ರಾಜನಾದ ನೀನು ನೋಡಿದಿಯಲ್ಲಾ; 24 ರಾಜನೇ, ಇದರ ತಾತ್ಪರ್ಯವೇನಂದರೆ, ಎನ್ನೊಡೆಯನಾದ ಅರಸನಿಗೆ ಉಂಟಾಗಿರುವ ಪರಾತ್ಪರನ ತೀರ್ಪು ಹೀಗಿದೆ - 25 ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡುಮೃಗಗಳೊಂದಿಗೆ ವಾಸಿಸುವಿ, ದನಗಳಂತೆ ಹುಲ್ಲು ಮೇಯುವದೇ ನಿನಗೆ ಗತಿಯಾಗುವದು, ಆಕಾಶದ ಇಬ್ಬನಿಯು ನಿನ್ನನ್ನು ತೋಯಿಸುವದು; ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬದು ನಿನಗೆ ತಿಳಿದುಬರುವದರೊಳಗೆ ಏಳು ವರುಷ ನಿನಗೆ ಹೀಗೆ ಕಳೆಯುವದು. 26 ವೃಕ್ಷದ ಬುಡದ ಮೋಟನ್ನು ಉಳಿಸಿರಿ ಎಂದು ಅಪ್ಪಣೆಯಾಯಿತಲ್ಲಾ; ಇದರ ತಾತ್ಪರ್ಯವೇನಂದರೆ ಪರಲೋಕಕ್ಕೆ ಸರ್ವಾಧಿಕಾರವುಂಟೆಂಬದನ್ನು ನೀನು ತಿಳಿದುಕೊಂಡ ನಂತರ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವದು ಎಂಬದೇ. 27 ಆದಕಾರಣ, ಅರಸೇ, ಈ ನನ್ನ ಬುದ್ಧಿವಾದವು ನಿನಗೆ ಒಪ್ಪಿಗೆಯಾಗಲಿ - ನೀನು ಧರ್ಮವನ್ನು ಆಚರಿಸಿ ನಿನ್ನ ಪಾಪಗಳನ್ನು ನಾಶಗೊಳಿಸು, ಬಡವರಿಗೆ ಕರುಣೆಯನ್ನು ತೋರಿಸಿ ನಿನ್ನ ಅಪರಾಧಗಳನ್ನು ಧ್ವಂಸಮಾಡು; ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾದೀತು ಎಂದರಿಕೆ ಮಾಡಿದನು. 28 ಇದೆಲ್ಲಾ ರಾಜನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು. 29 ಹನ್ನೆರಡು ತಿಂಗಳು ಕಳೆದನಂತರ ಅವನು ಬಾಬೆಲಿನ ಅರಮನೆಯ ಮೇಲೆ ತಿರುಗಾಡುತ್ತಾ - 30 ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್ ಎಂದು ಕೊಚ್ಚಿಕೊಂಡನು. 31 ಈ ಮಾತು ರಾಜನ ಬಾಯಿಂದ ಹೊರಡುತ್ತಿರುವಾಗ - ಅರಸನಾದ ನೆಬೂಕದ್ನೆಚ್ಚರನೇ, ನಿನಗಾದ ದೈವೋಕ್ತಿಯನ್ನು ಕೇಳು; 32 ರಾಜ್ಯವು ನಿನ್ನಿಂದ ತೊಲಗಿದೆ, ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡುಮೃಗಗಳೊಂದಿಗೆ ವಾಸಿಸುವಿ, ದನಗಳಂತೆ ಹುಲ್ಲುಮೇಯುವದೇ ನಿನಗೆ ಗತಿಯಾಗುವದು; ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬದು ನಿನ್ನ ತಿಳುವಳಿಕೆಗೆ ಬರುವದರೊಳಗೆ ಏಳು ವರುಷ ನಿನಗೆ ಹೀಗೆ ಕಳೆಯುವದು ಎಂದು ಆಕಾಶವಾಣಿಯಾಯಿತು. 33 ಈ ನುಡಿಯು ನೆಬೂಕದ್ನೆಚ್ಚರನಲ್ಲಿ ತಕ್ಷಣವೇ ನೆರವೇರಿತು; ಅವನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ದನಗಳಂತೆ ಹುಲ್ಲು ಮೇಯುತ್ತಾ ಆಕಾಶದ ಇಬ್ಬನಿಯಿಂದ ನೆನೆಯುತ್ತಾ ಇದ್ದನು; ಅವನ ಕೂದಲು ಹದ್ದುಗಳ ಗರಿಯಂತೆಯೂ ಅವನ ಉಗುರು ಹಕ್ಕಿಗಳ ಉಗುರಿನ ಹಾಗೂ ಬೆಳೆದವು. 34 ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. ಆಗ ನಾನು ಪರಾತ್ಪರನನ್ನು ಕೊಂಡಾಡಿ ಸದಾ ಜೀವಿಸುವಾತನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ನಿಲ್ಲುವದು; 35 ಭೂನಿವಾಸಿಗಳೆಲ್ಲರೂ [ಆತನ ದೃಷ್ಟಿಯಲ್ಲಿ] ಏನೂ ಅಲ್ಲದಂತಿದ್ದಾರೆ, ಪರಲೋಕಸೈನ್ಯದವರಲ್ಲಿಯೂ ಭೂಲೋಕದವರಲ್ಲಿಯೂ ತನ್ನ ಇಚ್ಫಾನುಸಾರ ನಡೆಯುತ್ತಾನೆ; ಯಾರೂ ಆತನ ಕೈಯನ್ನು ಹಿಂದಕ್ಕೆ ತಳ್ಳಲಾರರು, ನೀನು ಏನು ಮಾಡುತ್ತೀ ಎಂದು ಯಾರೂ ಕೇಳಲಾರರು. 36 ಅದೇ ಸಮಯದಲ್ಲಿ ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು; ನನ್ನ ಪ್ರಭಾವ ವೈಭವಗಳು ನನಗೆ ಮತ್ತೆ ಲಭಿಸಿ ನನ್ನ ರಾಜ್ಯದ ಕೀರ್ತಿಯು ಪ್ರಕಾಶಿಸಿತು; ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಓಲೈಸಿದರು; ನನ್ನ ರಾಜ್ಯದಲ್ಲಿ ರಾಜನಾಗಿ ನೆಲೆಗೊಂಡೆನು; ನನ್ನ ಮಹಿಮೆಯು ಅತ್ಯಧಿಕವಾಯಿತು. 37 ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕರಾಜನನ್ನು ಹೊಗಳಿ ಕೊಂಡಾಡಿ ಕೀರ್ತಿಸುತ್ತೇನೆ; ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India