ದಾನಿಯೇಲ 2 - ಕನ್ನಡ ಸತ್ಯವೇದವು J.V. (BSI)ಅದ್ಭುತಪ್ರತಿಮೆಯ ಕನಸು 1 ನೆಬೂಕದ್ನೆಚ್ಚರನು ತನ್ನ ಆಳಿಕೆಯ ಎರಡನೆಯ ವರುಷದಲ್ಲಿ ಕನಸುಕಂಡು ತತ್ತರಗೊಂಡನು, 2 ಅವನಿಗೆ ನಿದ್ರೆ ತಪ್ಪಿತು. ಆಗ ರಾಜನು ತನ್ನ ಕನಸುಗಳ ಅಭಿಪ್ರಾಯವನ್ನು ತಿಳಿಸಲೆಂದು ಜೋಯಿಸರನ್ನೂ ಮಂತ್ರವಾದಿಗಳನ್ನೂ ಮಾಟಗಾರರನ್ನೂ ಪಂಡಿತರನ್ನೂ ಕರೆಯಿಸಲು ಅವರು ಸನ್ನಿಧಿಗೆ ಬಂದು ರಾಜನ ಮುಂದೆ ನಿಂತುಕೊಂಡರು. 3 ರಾಜನು ಅವರಿಗೆ - ನಾನು ಕನಸುಕಂಡೆನು, ಅದರ ಅರ್ಥವೇನೋ ಎಂದು ನನ್ನ ಮನಸ್ಸು ತತ್ತರಗೊಂಡಿದೆ ಎಂಬದಾಗಿ ಹೇಳಲು 4 ಆ ಪಂಡಿತರು ಅರಮಾಯ ಭಾಷೆಯಲ್ಲಿ ರಾಜನಿಗೆ - ಅರಸನೇ, ಚಿರಂಜೀವಿಯಾಗಿರು; ಆ ಕನಸನ್ನು ನಿನ್ನ ದಾಸರಿಗೆ ಹೇಳು; ಅದರ ತಾತ್ಪರ್ಯವನ್ನು ತಿಳಿಸುವೆವು ಎಂದು ಅರಿಕೆಮಾಡಿದರು. 5 ಆಗ ರಾಜನು ಪಂಡಿತರಿಗೆ ಪ್ರತ್ಯುತ್ತರವಾಗಿ - ನನ್ನ ಮಾತು ಖಂಡಿತ; ನೀವೇ ಆ ಕನಸನ್ನೂ ಅದರ ಅಭಿಪ್ರಾಯವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ಚೂರುಚೂರಾಗಿ ಕಡಿಸುವೆನು, ನಿಮ್ಮ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಿಸಿಬಿಡುವೆನು; 6 ನೀವು ಆ ಕನಸನ್ನೂ ಅದರ ಅಭಿಪ್ರಾಯವನ್ನೂ ತಿಳಿಸಿದರೆ ನನ್ನಿಂದ ನಿಮಗೆ ದಾನಬಹುಮಾನಗಳೂ ವಿಶೇಷಸನ್ಮಾನಗಳೂ ಲಭಿಸುವವು; ಆದಕಾರಣ ಆ ಕನಸನ್ನೂ ಅದರ ಅಭಿಪ್ರಾಯವನ್ನೂ ನನಗೆ ತಿಳಿಸಿರಿ ಎಂದು ಹೇಳಲು ಪಂಡಿತರು - 7 ರಾಜನು ತನ್ನ ದಾಸರಿಗೆ ಕನಸನ್ನು ತಿಳಿಸೋಣವಾಗಲಿ, ನಾವು ಅದರ ತಾತ್ಪರ್ಯವನ್ನು ವಿವರಿಸುವೆವು ಎಂಬ ಉತ್ತರವನ್ನೇ ಪುನಃ ಕೊಟ್ಟರು. 8 ಅದಕ್ಕೆ ರಾಜನು - ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ [ಮರಣದಂಡನೆಯ] ನಿಯಮವೇ ನಿಮಗೆ ಗತಿಯಾಗುವದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡಿತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು; 9 ಕಾಲಾಂತರವನ್ನು ನಿರೀಕ್ಷಿಸಿಕೊಂಡೇ ನನ್ನ ಮುಂದೆ ಕೆಟ್ಟ ಸುಳ್ಳುಗಳನ್ನು ಆಡುತ್ತಿರಬೇಕೆಂದು ಕಟ್ಟುಮಾಡಿಕೊಂಡಿದ್ದೀರಿ; ಅಂತು ಆ ಕನಸನ್ನು ತಿಳಿಸಬೇಕು; ಅದರಿಂದ ನೀವು ಅದರ ಅಭಿಪ್ರಾಯವನ್ನೂ ವಿವರಿಸಬಲ್ಲಿರೆಂದು ತಿಳಿದುಕೊಳ್ಳುವೆನು ಎಂದು ಹೇಳಿದನು. 10 ಆಗ ಆ ಪಂಡಿತರು ಸನ್ನಿಧಿಯ ಮುಂದೆ - ರಾಜನು ಕೇಳಿದ ಸಂಗತಿಯನ್ನು ತಿಳಿಸಬಲ್ಲವನು ಲೋಕದಲ್ಲಿ ಯಾವನೂ ಇಲ್ಲ; ಎಷ್ಟೇ ಬಲಿಷ್ಠನು, ಎಷ್ಟೇ ಪ್ರಬಲನು ಆದ ಯಾವ ಅರಸನೂ ಜೋಯಿಸನನ್ನಾಗಲಿ ಮಾಟಗಾರನನ್ನಾಗಲಿ ಪಂಡಿತನನ್ನಾಗಲಿ ಇಂಥ ಸಂಗತಿಯನ್ನು ಎಂದೂ ಕೇಳಿದ್ದಿಲ್ಲ; 11 ರಾಜನು ಕೇಳುವ ಸಂಗತಿಯು ಅತಿಕಷ್ಟವಾದದು; ನರಜನ್ಮದವರ ಮಧ್ಯೆ ವಾಸಿಸದ ದೇವರುಗಳೇ ಹೊರತು ಇನ್ನಾರೂ ರಾಜನ ಸಮ್ಮುಖದಲ್ಲಿ ತಿಳಿಸಲಾರರು ಎಂದು ಉತ್ತರಕೊಟ್ಟರು. 12 ಇದನ್ನು ಕೇಳಿ ರಾಜನು ಉಗ್ರರೋಷವುಳ್ಳವನಾಗಿ ಬಾಬೆಲಿನ ಸಕಲವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು. 13 ಕೂಡಲೆ ಆ ಆಜ್ಞೆಯು ಹೊರಪಟ್ಟಿತು; ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು; ದಾನಿಯೇಲನನ್ನೂ ಅವನ ಸ್ನೇಹಿತರನ್ನೂ ಕೊಲ್ಲಲಿಕ್ಕೆ ಹುಡುಕಿದರು. 14 ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತಾಡಿ - 15 ಈ ರಾಜಾಜ್ಞೆಯು ಏಕೆ ಇಷ್ಟು ತೀಕ್ಷ್ಣ ಎಂದು ಕೇಳಲು ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು. 16 ಆಮೇಲೆ ದಾನಿಯೇಲನು ಅರಮನೆಗೆ ಸೇರಿ - ನನಗೆ ಸಮಯವನ್ನು ಕೊಟ್ಟರೆ ನಾನು ಆ ಕನಸಿನ ಅರ್ಥವನ್ನು ರಾಜನಿಗೆ ವಿವರಿಸುವೆನು ಎಂದು ಅರಿಕೆಮಾಡಿದನು. 17 ಬಳಿಕ ದಾನಿಯೇಲನು ತನ್ನ ಮನೆಗೆ ಹೋಗಿ ಹನನ್ಯ, ಮೀಶಾಯೇಲ, ಅಜರ್ಯ ಎಂಬ ತನ್ನ ಸ್ನೇಹಿತರಿಗೆ ಆ ಸಮಾಚಾರವನ್ನು ತಿಳಿಸಿ 18 ನಾವು ಬಾಬೆಲಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರಿಸಲು ಆತನನ್ನು ಬೇಡಿಕೊಳ್ಳೋಣ ಎಂದನು. 19 ಆಗ ಆ ರಹಸ್ಯವು ರಾತ್ರಿಯ ಸ್ವಪ್ನದಲ್ಲಿ ದಾನಿಯೇಲನಿಗೆ ವ್ಯಕ್ತವಾಯಿತು. ಕೂಡಲೆ ದಾನಿಯೇಲನು ಪರಲೋಕ ದೇವರನ್ನು ಹೀಗೆ ಸ್ತುತಿಸಿದನು - 20 ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಕೊಂಡಾಟವಾಗಲಿ! ಜ್ಞಾನತ್ರಾಣಗಳು ಆತನವುಗಳೇ. 21 ಕಾಲಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ತಳ್ಳುತ್ತಾನೆ, ನಿಲ್ಲಿಸುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ; 22 ಆತನು ಅಗಾಧವಿಷಯಗಳನ್ನೂ ಗೂಡಾರ್ಥಗಳನ್ನೂ ಬೈಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವದೂ ಆತನಿಗೆ ಗೋಚರ; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ. 23 ನನ್ನ ಪಿತೃಗಳ ದೇವರೇ, ನಿನ್ನನ್ನು ಸ್ತುತಿಸುತ್ತೇನೆ, ಕೊಂಡಾಡುತ್ತೇನೆ, ನೀನು ನನಗೆ ಜ್ಞಾನತ್ರಾಣಗಳನ್ನು ದಯಪಾಲಿಸಿ ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದಿಯಲ್ಲಾ; ಹೌದು, ರಾಜನ ರಹಸ್ಯವನ್ನು ನಮಗೆ ವ್ಯಕ್ತಗೊಳಿಸಿದಿ. 24 ಆಗ ದಾನಿಯೇಲನು ಬಾಬೆಲಿನ ವಿದ್ವಾಂಸರನ್ನು ಕೊಲ್ಲುವದಕ್ಕೆ ರಾಜನು ನೇವಿುಸಿದ ಅರ್ಯೋಕನ ಬಳಿಗೆ ಹೋಗಿ ಅವನಿಗೆ - ಬಾಬೆಲಿನ ವಿದ್ವಾಂಸರನ್ನು ಕೊಲ್ಲಬೇಡ; ನನ್ನನ್ನು ರಾಜನ ಸನ್ನಿಧಿಗೆ ಬಿಡು; ನಾನು ಕನಸಿನ ಅಭಿಪ್ರಾಯವನ್ನು ರಾಜನಿಗೆ ತಿಳಿಸುವೆನು ಎಂದು ಹೇಳಿದನು. 25 ಕೂಡಲೆ ಅರ್ಯೋಕನು ದಾನಿಯೇಲನನ್ನು ಸನ್ನಿಧಿಗೆ ತ್ವರೆಯಾಗಿ ಕರೆದುಕೊಂಡು ಹೋಗಿ - ರಾಜನೇ, ಕನಸಿನ ಅಭಿಪ್ರಾಯವನ್ನು ನಿನಗೆ ತಿಳಿಸಬಲ್ಲವನೊಬ್ಬನು ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ನನಗೆ ಸಿಕ್ಕಿದ್ದಾನೆ ಎಂದು ಅರಿಕೆಮಾಡಲು 26 ರಾಜನು ಬೇಲ್ತೆಶಚ್ಚರನೆಂಬ ಅಡ್ಡ ಹೆಸರಿನ ದಾನಿಯೇಲನನ್ನು - ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ನನಗೆ ತಿಳಿಸಬಲ್ಲೆಯಾ ಎಂದು ಕೇಳಿದನು. 27 ಅದಕ್ಕೆ ದಾನಿಯೇಲನು ಸನ್ನಿಧಿಯಲ್ಲಿ - ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು; 28 ಆದರೆ ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ; ಉತ್ತರಕಾಲದಲ್ಲಿ ನಡೆಯತಕ್ಕದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ. ನಿನ್ನ ಕನಸು, ಹಾಸಿಗೆಯ ಮೇಲೆ ನಿನ್ನ ಮನಸ್ಸಿನಲ್ಲಿ ಬಿದ್ದ ಸ್ವಪ್ನಗಳು ಇವೇ - 29 ರಾಜನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನಾಗುವದೋ ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ; ರಹಸ್ಯಗಳನ್ನು ವ್ಯಕ್ತಗೊಳಿಸುವಾತನು ಮುಂದಾಗುವದನ್ನು ನಿನಗೆ ಗೋಚರಮಾಡಿದ್ದಾನೆ. 30 ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ಧಿಯುಳ್ಳವನೆಂತಲ್ಲ, ಕನಸಿನ ಅಭಿಪ್ರಾಯವು ರಾಜನಿಗೆ ಗೋಚರವಾಗಿ ನಿನ್ನ ಮನಸ್ಸಿನ ಯೋಚನೆಯ ವಿಷಯವು ನಿನಗೆ ತಿಳಿದುಬರಲಿ ಎಂದು ಈ ರಹಸ್ಯವು ನನಗೆ ವ್ಯಕ್ತವಾಗಿದೆ. 31 ರಾಜನೇ, ನೀನು ಕಂಡದು ಆಹಾ, ಅದ್ಭುತ ಪ್ರತಿಮೆ; ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆಯು ನಿನ್ನೆದುರಿಗೆ ನಿಂತಿತ್ತು; ಭಯಂಕರವಾಗಿ ಕಾಣಿಸಿತು; 32 ಆ ಪ್ರತಿಮೆಯ ತಲೆಯು ಅಪರಂಜಿ, ಎದೆತೋಳುಗಳು ಬೆಳ್ಳಿ, ಹೊಟ್ಟೆಸೊಂಟಗಳು ತಾಮ್ರ, 33 ಕಾಲುಗಳು ಕಬ್ಬಿಣ, ಹೆಜ್ಜೆಗಳು ಕಬ್ಬಿಣ ಮತ್ತು ಮಣ್ಣು. 34 ನೀನು ನೋಡುತ್ತಿರಲಾಗಿ [ಬೆಟ್ಟದೊಳಗಿಂದ] ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು [ಸಿಡಿದು ಬಂದು] ಆ ಪ್ರತಿಮೆಯ ಕಬ್ಬಿಣಮಣ್ಣಿನ ಹೆಜ್ಜೆಗಳಿಗೆ ಬಡಿದು ಚೂರುಚೂರು ಮಾಡಿತು. 35 ಆಗ ಕಬ್ಬಿಣಮಣ್ಣು ತಾಮ್ರಬೆಳ್ಳಿಬಂಗಾರಗಳೆಲ್ಲವೂ ಪುಡಿಪುಡಿಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು; ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು; ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು. 36 ಕನಸು ಇದೇ; ಇದರ ಅರ್ಥವನ್ನೂ ಸನ್ನಿಧಿಯಲ್ಲಿ ಅರಿಕೆಮಾಡುವೆವು. 37 ಅರಸೇ, ನೀನು ರಾಜಾಧಿರಾಜ, ಪರಲೋಕದೇವರು ನಿನಗೆ ರಾಜ್ಯಬಲಪರಾಕ್ರಮ ವೈಭವಗಳನ್ನು ದಯಪಾಲಿಸಿದ್ದಾನೆ; 38 ನರಜಾತಿಯವರು ವಾಸಿಸುವ ಸಕಲ ಪ್ರಾಂತಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ. 39 ನೀನೇ ಆ ಬಂಗಾರದ ತಲೆ. ನಿನ್ನ ಕಾಲವಾದ ಮೇಲೆ ನಿನಗಿಂತ ಕನಿಷ್ಠವಾದ ಮತ್ತೊಂದು ರಾಜ್ಯವುಂಟಾಗುವದು; ಅನಂತರ ಬೇರೊಂದು ಮೂರನೆಯ ರಾಜ್ಯವು ತಾಮ್ರದ್ದಾಗಿ ತಲೆದೋರಿ ಭೂಮಂಡಲವನ್ನೆಲ್ಲಾ ಆಳುವದು. 40 ನಾಲ್ಕನೆಯ ರಾಜ್ಯವು ಕಬ್ಬಿಣದಷ್ಟು ಗಟ್ಟಿ; ಕಬ್ಬಿಣವು ಎಲ್ಲಾ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದಷ್ಟೆ; ಸಕಲವನ್ನೂ ದ್ವಂಸಮಾಡುವ ಕಬ್ಬಿಣದಂತೆಯೇ ಅದು ಚೂರುಚೂರಾಗಿ ದ್ವಂಸಮಾಡುವದು. 41 ಹೆಜ್ಜೆಗಳಲ್ಲಿ ಮತ್ತು ಬೆರಳುಗಳಲ್ಲಿ ಒಂದಂಶವು ಕುಂಬಾರನ ಮಣ್ಣೂ ಒಂದಂಶವು ಕಬ್ಬಿಣವೂ ಆಗಿದ್ದದ್ದನ್ನು ನೀನು ನೋಡಿದ ಪ್ರಕಾರ ಆ ರಾಜ್ಯವು ಭಿನ್ನಭಿನ್ನವಾಗಿರುವದು; ಜೇಡಿಮಣ್ಣಿನೊಂದಿಗೆ ಕಬ್ಬಿಣವು ವಿುಶ್ರವಾಗಿದ್ದದ್ದನ್ನು ನೀನು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲವು ಸೇರಿರುವದು. 42 ಕಾಲ್ಬೆರಳುಗಳ ಒಂದಂಶವು ಕಬ್ಬಿಣ ಒಂದಂಶವು ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶವು ಗಟ್ಟಿ ಒಂದಂಶವು ಬೆಂಡು. 43 ಕಬ್ಬಿಣವು ಜೇಡಿಮಣ್ಣಿನೊಂದಿಗೆ ಬೆರೆತಿರುವದನ್ನು ನೀನು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಸಂತತಿ ಸಂಬಂಧದಿಂದ ಬೆರೆತುಕೊಳ್ಳುವವು; ಆದರೆ ಕಬ್ಬಿಣವು ಮಣ್ಣಿನೊಂದಿಗೆ ಹೇಗೆ ಕಲೆಯುವದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವದಿಲ್ಲ. 44 ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವದು. 45 [ಬೆಟ್ಟದೊಳಗಿಂದ] ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು ಕಬ್ಬಿಣ ತಾಮ್ರ ಮಣ್ಣು ಬೆಳ್ಳಿ ಬಂಗಾರಗಳನ್ನು ಚೂರುಚೂರುಮಾಡಿದ್ದು ನಿನ್ನ ಕಣ್ಣಿಗೆ ಬಿತ್ತಲ್ಲಾ; ಇದರಿಂದ ಪರಲೋಕದೇವರು ಮುಂದೆ ನಡೆಯುವ ವಿಷಯಗಳನ್ನು ರಾಜನಿಗೆ ತಿಳಿಯಪಡಿಸಿದ್ದಾನೆ; ಕನಸು ನಿಜ, ಅದರ ಅರ್ಥವು ನಂಬತಕ್ಕದು ಎಂದು ಹೇಳಿದನು. 46 ಆಗ ರಾಜನಾದ ನೆಬೂಕದ್ನೆಚ್ಚರನು ಅಡ್ಡಬಿದ್ದು ದಾನಿಯೇಲನನ್ನು ಪೂಜಿಸಿ ಅವನಿಗೆ ನೈವೇದ್ಯ ಮಾಡಿ ಧೂಪಹಾಕಬೇಕೆಂದು ಆಜ್ಞಾಪಿಸಿ 47 ಅವನ ಮಾತಿಗೆ ಪ್ರತ್ಯುತ್ತರವಾಗಿ - ನೀನು ಈ ರಹಸ್ಯವನ್ನು ಬೈಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ ರಾಜರ ಒಡೆಯನೂ ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆಂಬುದು ನಿಶ್ಚಯ ಎಂದು ಹೇಳಿದನು. 48 ಬಳಿಕ ರಾಜನು ದಾನಿಯೇಲನನ್ನು ದೊಡ್ಡಸ್ತಿಕೆಗೆ ತಂದು ಅವನಿಗೆ ಅಮೂಲ್ಯವಾದ ಬಹುಮಾನಗಳನ್ನು ಕೊಟ್ಟು ಬಾಬೆಲ್ ಸಂಸ್ಥಾನವನ್ನೆಲ್ಲಾ ಅಧೀನಪಡಿಸಿ ಬಾಬೆಲಿನ ವಿದ್ವಾಂಸರ ಸಕಲ ಮುಖ್ಯಸ್ಥರಿಗೂ ಅವನನ್ನು ಮುಖ್ಯಸ್ಥನನ್ನಾಗಿ ನೇವಿುಸಿದನು. 49 ದಾನಿಯೇಲನು ಬಿನ್ನಹ ಮಾಡಲು ರಾಜನು ಶದ್ರಕ್ ಮೇಶಕ್ ಅಬೇದ್ನೆಗೋ ಎಂಬವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು; ದಾನಿಯೇಲನೋ ಅರಮನೆಯಲ್ಲಿ ನಿಂತನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India