ದಾನಿಯೇಲ 12 - ಕನ್ನಡ ಸತ್ಯವೇದವು J.V. (BSI)ಯುಗಸಮಾಪ್ತಿ 1 ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ಮೀಕಾಯೇಲನು ಆ ಕಾಲದಲ್ಲಿ ಏಳುವನು; ಮೊಟ್ಟ ಮೊದಲು ಜನಾಂಗವು ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದಂಥ ಸಂಕಟವು ಸಂಭವಿಸುವದು; ಆಗ ನಿನ್ನ ಜನರೊಳಗೆ ಯಾರ ಹೆಸರುಗಳು [ಜೀವಬಾಧ್ಯರ] ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು. 2 ಧೂಳಿನ ನೆಲದೊಳಗೆ ದೀರ್ಘನಿದ್ರೆಮಾಡುವವರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನು, ಕೆಲವರು ನಿಂದನ ನಿತ್ಯತಿರಸ್ಕಾರಗಳನ್ನು ಅನುಭವಿಸುವರು. 3 ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು; ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು. 4 ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು, ಅಂತ್ಯಕಾಲದವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು. 5 ಕೂಡಲೆ ದಾನಿಯೇಲನಾದ ನಾನು ಮತ್ತಿಬ್ಬರನ್ನು ಕಂಡೆನು; ಅವರೊಳಗೆ ಒಬ್ಬನು ನದಿಯ ಈ ದಡದಲ್ಲಿ, ಇನ್ನೊಬ್ಬನು ಆ ದಡದಲ್ಲಿ ನಿಂತಿದ್ದರು. 6 ಇವರಲ್ಲಿ ಒಬ್ಬನು - ಈ ಅಪೂರ್ವಕಾರ್ಯಗಳು ಕೊನೆಗಾಣುವದಕ್ಕೆ ಎಷ್ಟು ಕಾಲ ಹಿಡಿಯುವದು ಎಂದು ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದು ನಿಂತಿದ್ದ ಪುರುಷನನ್ನು ಕೇಳಲು ಆ ಪುರುಷನು ಎಡಬಲಕೈಗಳನ್ನು 7 ಆಕಾಶದ ಕಡೆಗೆ ಎತ್ತಿಕೊಂಡು - ಶಾಶ್ವತ ಜೀವಸ್ವರೂಪನಾಣೆ, ಒಂದುಕಾಲ ಎರಡುಕಾಲ ಅರ್ಧಕಾಲ ಕಳೆಯಬೇಕು; ದೇವರ ಜನರ ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು ಎಂಬದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು. 8 ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ; ಆಗ ನಾನು - ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು ಎಂದು ಪ್ರಶ್ನೆಮಾಡಲು ಅವನು - 9 ದಾನಿಯೇಲನೇ, ಈ ಮಾತುಗಳು ಅಂತ್ಯಕಾಲದವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು. 10 ಅನೇಕರು ತಮ್ಮನ್ನು ಶುದ್ಧೀಕರಿಸಿ ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವದು. 11 ನಿತ್ಯಹೋಮವು ನೀಗಿಸಲ್ಪಟ್ಟು ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಸಾವಿರದ ಇನ್ನೂರತೊಂಭತ್ತು ದಿನಗಳು ಕಳೆಯಬೇಕು. 12 ಕಾದುಕೊಂಡು ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯ ಮಟ್ಟಿಗೆ ತಾಳಿರುವವನು ಧನ್ಯನು. 13 ನೀನು ಹೋಗಿ ಅಂತ್ಯದವರೆಗೆ ಇರು; ನೀನು ದೀರ್ಘ ನಿದ್ರೆಯನ್ನು ಹೊಂದಿ ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ ಎಂದು ಹೇಳಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India