ಜ್ಞಾನೋಕ್ತಿಗಳು 6 - ಕನ್ನಡ ಸತ್ಯವೇದವು J.V. (BSI)1 ಮಗನೇ, ನೀನು ನೆರೆಯವನಿಗೆ ಹೊಣೆಯಾಗಿದ್ದರೆ, ಪರನಿಗಾಗಿ ಕೈ ಮೇಲೆ ಕೈ ಹಾಕಿದ್ದರೆ 2 ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ. 3 ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು; ನಡೆ, ತ್ವರೆಪಡು, ಆ ನೆರೆಯವನನ್ನು ಕಾಡು; 4 ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ರೆಪ್ಪೆಗಳನ್ನು ಮುಚ್ಚದಿರು; 5 ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ ಪಕ್ಷಿಯು ಹಾರಿಹೋಗುವ ಹಾಗೂ ತಪ್ಪಿಸಿಕೋ. 6 ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ. 7 ಅದಕ್ಕೆ ನಾಯಕ ಅಧಿಕಾರಿ ಪ್ರಭುಗಳಿಲ್ಲದಿದ್ದರೂ 8 ಸುಗ್ಗಿಯಲ್ಲಿ ತನ್ನ ತೀನಿಯನ್ನು ಕೂಡಿಸಿಡುವದು, ಕೊಯ್ಲಿನ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವದು. 9 ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ? 10 ಇನ್ನು ಸ್ವಲ್ಪ ನಿದ್ದೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? 11 ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು. 12 ನೀಚನೂ ದುಷ್ಟನೂ ಆಗಿರುವ ಅವನ ನಡತೆಯನ್ನು ನೋಡು; ಸೊಟ್ಟು ಬಾಯಿಯವನಾಗಿದ್ದಾನೆ, 13 ಕಣ್ಣನ್ನು ವಿುಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ, ಬೆರಳ ಸನ್ನೆಮಾಡುತ್ತಾನೆ. 14 ಅವನ ಮನಸ್ಸಿನಲ್ಲಿರುವದು ದ್ರೋಹವೇ; ಕೇಡನ್ನು ನಿರಂತರ ಕಲ್ಪಿಸುತ್ತಾನೆ. ಜಗಳದ ಬೀಜವನ್ನು ಬಿತ್ತುತ್ತಾನೆ. 15 ಆದಕಾರಣ ಅವನಿಗೆ ತಟ್ಟನೆ ವಿಪತ್ತು ಸಂಭವಿಸುವದು, ಏಳದ ಹಾಗೆ ಫಕ್ಕನೆ ಮುರಿಯಲ್ಪಡುವನು. 16 ಯೆಹೋವನು ಹಗೆಮಾಡುವ ವಸ್ತುಗಳು ಆರು ಇವೆ. ಹೌದು, ಏಳು ಆತನಿಗೆ ಅಸಹ್ಯಗಳಾಗಿ ತೋರುತ್ತವೆ. 17 ಯಾವವಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷರಕ್ತವನ್ನು ಸುರಿಸುವ ಕೈ, 18 ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು, 19 ಅಸತ್ಯವಾಡುವ ಸುಳ್ಳುಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು, ಈ ಏಳೇ. 20 ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ, 21 ಅವುಗಳನ್ನು ನಿನ್ನ ಹೃದಯಕ್ಕೆ ನಿರಂತರವಾಗಿ ಬಂಧಿಸು, ನಿನ್ನ ಕಂಠಕ್ಕೆ ಧರಿಸಿಕೋ. 22 ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ನಡಿಸುವದು, ಮಲಗಿಕೊಂಡಾಗ ಕಾಯುವದು, ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು. 23 ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ. 24 ಅದು ಕೆಟ್ಟ ಹೆಂಗಸಿನಿಂದಲೂ ಪರಸ್ತ್ರೀಯ ನಾಲಿಗೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ. 25 ನಿನ್ನ ಹೃದಯವು ಅವಳ ಬೆಡಗನ್ನು ಮೋಹಿಸದಿರಲಿ, ಅವಳು ತನ್ನ ಕಣ್ಣು ರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ. 26 ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವದು, ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು. 27 ಮಡಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವದಿಲ್ಲವೇ? 28 ಧಗಧಗಿಸುವ ಕೆಂಡದ ಮೇಲೆ ನಡೆದರೆ ಕಾಲು ಬೇಯುವದಿಲ್ಲವೋ? 29 ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವದು, ಯಾವನು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು. 30 ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ ಜನರು ಅಷ್ಟೇನೂ ಹೀಯಾಳಿಸರು. 31 ಅವನ ತಪ್ಪು ಬೈಲಾದರೆ ಅವನು ಏಳರಷ್ಟು ಕೊಡಬೇಕಾಗುವದು, ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ತೆತ್ತೇ ತೀರಬೇಕು. 32 ವ್ಯಭಿಚಾರಿಯೋ ಕೇವಲ ಬುದ್ಧಿಶೂನ್ಯನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು. 33 ಅವನಿಗೆ ಗಾಯವೂ ಅವಮಾನವೂ ಆಗುವವು. ಅವನ ಕೆಟ್ಟ ಹೆಸರು ಎಂದಿಗೂ ಅಳಿಸಲ್ಪಡದು. 34 ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ, ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು. 35 ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India