ಜ್ಞಾನೋಕ್ತಿಗಳು 25 - ಕನ್ನಡ ಸತ್ಯವೇದವು J.V. (BSI)1 ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು; ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಇವುಗಳನ್ನು ಸಂಗ್ರಹಿಸಿ ಬರೆದರು. 2 ವಿಷಯವನ್ನು ರಹಸ್ಯಮಾಡುವದು ದೇವರ ಪ್ರಭಾವ; ವಿಷಯವನ್ನು ವಿಮರ್ಶೆಮಾಡುವದು ರಾಜರ ಪ್ರಭಾವ. 3 ಆಕಾಶವು ಉನ್ನತ, ಭೂವಿುಯು ಅಗಾಧ, ರಾಜರ ಹೃದಯವು ಅಗೋಚರ. 4 ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯಾಗುವದು; 5 ರಾಜನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ಸಿಂಹಾಸನವು ಧರ್ಮದಿಂದ ಸ್ಥಿರವಾಗುವದು. 6 ರಾಜನ ಸನ್ನಿಧಾನದಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಶ್ರೀಮಂತರಿಗೆ ಏರ್ಪಡಿಸಿರುವ ಸ್ಥಾನದಲ್ಲಿ ನಿಂತುಕೊಳ್ಳದಿರು. 7 ನೀನು ಪ್ರಭುವನ್ನು ದರ್ಶನಮಾಡುತ್ತಿರಲು ಅವನ ಸಮಕ್ಷಮ ಕೆಳಗಣಸ್ಥಾನಕ್ಕೆ ನೂಕಿಸಿಕೊಳ್ಳುವದಕ್ಕಿಂತಲೂ ಇನ್ನೂ ಮೇಲಕ್ಕೆ ಬಾ ಎಂದು ಕರೆಯಿಸಿಕೊಳ್ಳುವದು ಲೇಸು. 8 ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಹೋಗಬೇಡ; ಅವನು ನಿನ್ನ ಮಾನ ಕಳೆದ ಮೇಲೆ ಕಡೆಯಲ್ಲಿ ಏನು ಮಾಡಬಲ್ಲೆ, ನೋಡಿಕೋ! 9 ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು; ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ. 10 ಅದನ್ನು ಕೇಳುವವನು ನಿನ್ನನ್ನು ದೂಷಿಸಾನು; ನಿನಗೆ ಬಂದ ಅಪಕೀರ್ತಿಯು ಹೋಗದು. 11 ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ. 12 ಕೇಳುವ ಕಿವಿಗೆ ಮುಟ್ಟುವ ಬುದ್ಧಿವಾದವು ಹೊನ್ನಿನ ಮುರುವಿಗೂ ಅಪರಂಜಿಯ ಆಭರಣಕ್ಕೂ ಸಮಾನ. 13 ಸುಗ್ಗೀಕಾಲದಲ್ಲಿ ಹಿಮದ ಶೈತ್ಯವು ಹೇಗೋ ಕಳುಹಿಸಿದ ಒಡೆಯರಿಗೆ ಆಪ್ತದೂತನು ಹಾಗೆಯೇ ಹಿತ. 14 ಬರೀ ಗಾಳಿ ಮೋಡಗಳು ಹೇಗೋ ದಾನಕೊಡುತ್ತೇನೆಂದು ಸುಳ್ಳಾಡಿ ಜಂಬಮಾಡುವವನೂ ಹಾಗೆಯೇ. 15 ದೀರ್ಘಶಾಂತಿಯಿಂದ ಪ್ರಭುವನ್ನೂ ಸಮ್ಮತಿಪಡಿಸಬಹುದು; ಮೃದುವಚನವು ಎಲುಬನ್ನು ಮುರಿಯುವದು. 16 ಜೇನು ಸಿಕ್ಕಿತೋ? ವಿುತವಾಗಿ ತಿನ್ನು, ಹೊಟ್ಟೆತುಂಬ ತಿಂದರೆ ಕಾರಿಬಿಟ್ಟೀಯೆ. 17 ನೆರೆಯವನು ಬೇಸರಗೊಂಡು ಹಗೆ ಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು. 18 ನೆರೆಯವನ ಮೇಲೆ ಸುಳ್ಳುಸಾಕ್ಷಿ ಹೇಳುವವನು ಚಮಟಿಕೆ, ಕತ್ತಿ, ಚೂಪಾದ ಬಾಣ ಇವುಗಳೇ. 19 ಕಷ್ಟಕಾಲದಲ್ಲಿ ದ್ರೋಹಿಯಲ್ಲಿಡುವ ನಂಬಿಕೆಯು ಮುರುಕಹಲ್ಲು, ಜಾರುವ ಕಾಲು. 20 ಮನಗುಂದಿದವನಿಗೆ ಸಂಗೀತಹಾಡುವದು ಚಳಿದಿನದಲ್ಲಿ ಬಟ್ಟೆ ತೆಗೆದ ಹಾಗೂ ಸೋಡ ಉಪ್ಪಿಗೆ ಹುಳಿಹೊಯ್ದ ಹಾಗೂ. 21 ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು; 22 ಹೀಗೆ ಅವನ ತಲೆಯ ಮೇಲೆ ಕೆಂಡಸುರಿದಂತಾಗುವದು; ಯೆಹೋವನೇ ನಿನಗೆ ಪ್ರತಿಫಲಕೊಡುವನು. 23 ಬಡಗಣಗಾಳಿ ಮಳೆ ಬರಮಾಡುವದು; ಚಾಡಿಯ ನಾಲಿಗೆ ಕೋಪದ ಮುಖ ಮಾಡುವದು. 24 ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವದಕ್ಕಿಂತಲೂ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದೇ ಲೇಸು. 25 ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ. 26 ದುಷ್ಟರಿಂದ ಸೋತ ಶಿಷ್ಟನು ಹಾಳು ಬಾವಿ, ತುಳಿದಾಡಿದ ಒರತೆ. 27 ಜೇನನ್ನು ಹೆಚ್ಚಾಗಿ ತಿನ್ನುವದು ಹಿತವಲ್ಲ; ಸ್ವಂತಮಾನವನ್ನು ಹೆಚ್ಚಾಗಿ ಯೋಚಿಸುವದು ಮಾನವಲ್ಲ. 28 ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India