ಜ್ಞಾನೋಕ್ತಿಗಳು 24 - ಕನ್ನಡ ಸತ್ಯವೇದವು J.V. (BSI)1 ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ, ಅವರ ಸಹವಾಸವನ್ನು ಬಯಸದಿರು. 2 ಅವರ ಮನಸ್ಸು ಹಿಂಸೆಯನ್ನು ಯೋಚಿಸುತ್ತಿರುವದು, ಅವರ ತುಟಿಯು ಹಾನಿಯನ್ನು ಪ್ರಸ್ತಾಪಿಸುತ್ತಿರುವದು. 3 ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ ಆಧಾರ; 4 ಅದರ ಕೋಣೆಗಳನ್ನು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬಿಸುವದಕ್ಕೆ ತಿಳುವಳಿಕೆಯೇ ಉಪಕರಣ. 5 ಜ್ಞಾನಿಗೆ ತ್ರಾಣ, ಬಲ್ಲವನಿಗೆ ಬಹು ಬಲ. 6 ಮಂತ್ರಾಲೋಚನೆಯಿಂದ ಯುದ್ಧವನ್ನು ನಡಿಸು; ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆಯಿರುವದು. 7 ಜ್ಞಾನವು ಮೂರ್ಖನಿಗೆ ದುರ್ಲಭ; ಅವನು ನ್ಯಾಯಸ್ಥಾನದಲ್ಲಿ ಬಾಯಿಬಿಡಲಾರನು. 8 ಕೇಡನ್ನು ಕಲ್ಪಿಸುವವನು ಕುಯುಕ್ತಿಕನು ಎನಿಸಿಕೊಳ್ಳುವನು. 9 ಮುರ್ಖನ ಸಂಕಲ್ಪವು ಪಾಪವೇ; ಧರ್ಮನಿಂದಕನು ಮನುಷ್ಯರಿಗೆ ಅಸಹ್ಯ. 10 ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ. 11 ಕೊಲೆಗೆ ಸೆಳೆಯಲ್ಪಟ್ಟವರನ್ನು ರಕ್ಷಿಸು! ಸಂಹಾರಕ್ಕೆ ಗುರಿಯಾದವರನ್ನು ತಪ್ಪಿಸುವದಿಲ್ಲವೇ. 12 ಇದು ನನಗೆ ಗೊತ್ತಿರಲಿಲ್ಲ ಎಂದು ನೀನು ನೆವ ಹೇಳಿದರೆ ಹೃದಯಶೋಧಕನು ಗ್ರಹಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆಬಿಟ್ಟಾನೇ? 13 ಕಂದಾ, ಜೇನು ಚೆನ್ನಾಗಿದೆಯಲ್ಲವೆ, ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಷ್ಟೆ. ಅದನ್ನು ತಿನ್ನು. 14 ಜ್ಞಾನವು ನಿನ್ನ ಆತ್ಮಕ್ಕೆ ಹೀಗೆಯೇ ಇರುವದೆಂದು ತಿಳಿದುಕೋ; ಅದನ್ನು ಪಡೆದುಕೊಂಡರೆ ಮುಂದೆ ಫಲಕಾಲ ಬರುವದು, ನಿನ್ನ ನಿರೀಕ್ಷೆಯು ನಿರರ್ಥಕವಾಗದು. 15 ದುಷ್ಟನೇ, ಶಿಷ್ಟನ ಮನೆಗೆ ಹೊಂಚುಹಾಕಬೇಡ; ಅವನ ನಿವಾಸವನ್ನು ಸೂರೆಮಾಡಬೇಡ. 16 ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು. 17 ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ, ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ! 18 ಯೆಹೋವನು ನಿನ್ನ ಹರ್ಷವನ್ನು ಕಂಡು ಬೇಸರಗೊಂಡು ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಾನು. 19 ಕೆಡುಕರ ಮೇಲೆ ಉರಿಗೊಳ್ಳದಿರು; ದುಷ್ಟರನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡ. 20 ಕೆಟ್ಟವನಿಗೆ ಶುಭಕಾಲವು ಬಾರದು, ದುಷ್ಟರ ದೀಪವು ಆರಿಯೇ ಹೋಗುವದು. 21 ಮಗನೇ, ಯೆಹೋವನಿಗೂ ರಾಜನಿಗೂ ಭಯಪಡು; ತಿರುಗಿಬೀಳುವವರ ಗೊಡವೆಗೆ ಹೋಗಬೇಡ. 22 ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವದು; ಅವರಿಂದಾಗುವ ನಾಶವು ಯಾರಿಗೆ ತಿಳಿದೀತು? 23 ಇವು ಕೂಡ ಜ್ಞಾನಿಗಳ ಉಕ್ತಿಗಳೇ: - ನ್ಯಾಯವಿಚಾರಣೆಯಲ್ಲಿ ಪಕ್ಷಪಾತವು ಧರ್ಮವಲ್ಲ. 24 ಯಾವನು ಅಧರ್ಮಿಗೆ - ನೀನು ಧರ್ಮಾತ್ಮ ಎಂದು ಹೇಳುತ್ತಾನೋ ಅವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು. 25 ದುಷ್ಟನನ್ನು ಗದರಿಸುವವರಿಗಾದರೋ ಶುಭವಾಗುವದು, ಸುಖಕರವಾದ ಆಶೀರ್ವಾದವೂ ಲಭಿಸುವದು. 26 ಯಥಾರ್ಥವಾದ ಉತ್ತರವು ತುಟಿಗೆ ಮುದ್ದು. 27 ನಿನ್ನ ಕೆಲಸದ ಸಾಮಾನುಗಳನ್ನು ಸುತ್ತಲು ಅಣಿಮಾಡು, ನಿವೇಶನದಲ್ಲಿ ಸಿದ್ಧಪಡಿಸು, ಆಮೇಲೆ ನಿನ್ನ ಮನೆಯನ್ನು ಕಟ್ಟು. 28 ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ಮಾತಿನಿಂದ ಮೋಸಮಾಡುವಿಯಾ? 29 ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಅಂದುಕೊಳ್ಳಬೇಡ. 30 ಸೋಮಾರಿಯ ಹೊಲದ ಮೇಲೆಯೂ ಬುದ್ಧಿಹೀನನ ತೋಟದ ಮೇಲೆಯೂ ಹಾದು ಹೋದೆನು. 31 ಆಹಾ, ಮುಳ್ಳುಗಿಡಗಳು ಅದರಲ್ಲಿ ಹರಡಿಕೊಂಡಿದ್ದವು; ಕಳೆಗಳು ಅದನ್ನು ಮುಚ್ಚಿದ್ದವು, ಅದರ ಕಲ್ಲಿನ ಗೋಡೆಯು ಹಾಳಾಗಿತ್ತು. 32 ಆಗ ನಾನು ನೋಡಿ ಮನಸ್ಸಿಟ್ಟೆನು; ದೃಷ್ಟಿಸಿ ಶಿಕ್ಷಿತನಾದೆನು. 33 ಇನ್ನು ಸ್ವಲ್ಪ ನಿದ್ರೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? 34 ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India