ಜ್ಞಾನೋಕ್ತಿಗಳು 22 - ಕನ್ನಡ ಸತ್ಯವೇದವು J.V. (BSI)1 ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ; ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ. 2 ಬಡವರು ಬಲ್ಲಿದರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು. 3 ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು. 4 ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ. 5 ವಕ್ರಬುದ್ಧಿಯುಳ್ಳವನ ಮಾರ್ಗದಲ್ಲಿ ಮುಳ್ಳುಗಳೂ ಉರುಲುಗಳೂ ತುಂಬಿವೆ; ತನ್ನನ್ನು ರಕ್ಷಿಸಿಕೊಳ್ಳುವವನು ಅವುಗಳಿಗೆ ದೂರವಾಗಿರುವನು. 6 ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು. 7 ಬಲ್ಲಿದನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ. 8 ಕೆಟ್ಟತನವನ್ನು ಬಿತ್ತುವವನು ಕೇಡನ್ನೇ ಕೊಯ್ಯುವನು; ಹೆಮ್ಮೆಯಿಂದ ಹಿಡಿದ ದಂಡವು ಅವನ ಕೈಯಿಂದ ಬಿದ್ದುಹೋಗುವದು. 9 ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು; ತನ್ನ ಅನ್ನವನ್ನು ಬಡವರಿಗೆ ಕೊಡುತ್ತಾನಲ್ಲವೆ. 10 ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವದು; ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವದು. 11 ಹೃದಯಶುದ್ಧಿಯನ್ನಪೇಕ್ಷಿಸುವ ಸವಿಮಾತಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವದು. 12 ಯೆಹೋವನ ಕಣ್ಣು ತಿಳುವಳಿಕೆಗೆ ಕಾವಲು; ಆತನು ವಂಚಕನ ಮಾತುಗಳನ್ನು ಕೆಡವಿಬಿಡುವನು. 13 ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದೀತು ಎಂಬದು ಸೋಮಾರಿಯ ನೆವ. 14 ಜಾರಸ್ತ್ರೀಯ ಬಾಯಿ ಆಳವಾದ ಹಳ್ಳ; ಯೆಹೋವನಿಗೆ ಸಿಟ್ಟನ್ನೆಬ್ಬಿಸಿದವನು ಅದರಲ್ಲಿ ಬೀಳುವನು. 15 ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವದು. 16 ಸ್ವಂತ ಲಾಭಕ್ಕಾಗಿ ಬಡವರನ್ನು ಹಿಂಸಿಸುವವನಿಗೂ ಬಲ್ಲಿದರಿಗೆ ಲಂಚಕೊಡುವವನಿಗೂ ಕೊರತೆಯೇ ಗತಿ. 17 ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು; ನನ್ನ ಜ್ಞಾನಬೋಧೆಗೆ ಮನಸ್ಸಿಡು. 18 ನೀನು ಆ ಮಾತುಗಳನ್ನು ಅಂತರಂಗದಲ್ಲಿ ಕಾಪಾಡುತ್ತಾ ತುಟಿಗಳಲ್ಲಿ ಸಿದ್ಧಪಡಿಸಿಕೊಂಡಿದ್ದರೆ ಎಷ್ಟೋ ರಮ್ಯ. 19 ನೀನು ಯೆಹೋವನಲ್ಲಿ ಭರವಸವಿಡಬೇಕೆಂದು ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ. 20 ಸತ್ಯವಚನಗಳು ಎಷ್ಟೋ ಯಥಾರ್ಥವೆಂದು ನೀನು ತಿಳಿದುಕೊಂಡು ನಿನ್ನನ್ನು ಕಳುಹಿಸಿದವರಿಗೆ ಸತ್ಯವಚನಗಳನ್ನೇ ಅರಿಕೆ ಮಾಡುವಂತೆ 21 ಉಚಿತಾಲೋಚನೆ, ತಿಳುವಳಿಕೆ ಇವುಗಳ ವಿಷಯವಾಗಿ ಇದಕ್ಕೆ ಮುಂಚೆಯೇ ನಿನಗೋಸ್ಕರ ಬರೆದಿದ್ದೇನಲ್ಲವೆ. 22 ಬಡವರಿಗೆ ದಿಕ್ಕಿಲ್ಲವೆಂದು ತಿಳಿದು ಅವರನ್ನು ಸೂರೆ ಮಾಡಬೇಡ; ನ್ಯಾಯಸ್ಥಾನದಲ್ಲಿ ದರಿದ್ರರನ್ನು ತುಳಿಯದಿರು. 23 ಯೆಹೋವನೇ ಅವರ ವ್ಯಾಜ್ಯವನ್ನು ನಡಿಸಿ ಸೂರೆಮಾಡಿದವರ ಜೀವವನ್ನು ಸೂರೆ ಮಾಡುವನು. 24 ಕೋಪಿಷ್ಠನ ಸಂಗಡ ಸ್ನೇಹ ಬೆಳಸಬೇಡ; ಸಿಟ್ಟುಗಾರನ ಸಹವಾಸ ಮಾಡಬೇಡ. 25 ಮಾಡಿದರೆ ಅವನ ದುರ್ನಡತೆಯನ್ನನುಸರಿಸಿ ನಿನ್ನ ಆತ್ಮವನ್ನು ಉರುಲಿಗೆ ಸಿಕ್ಕಿಸಿಕೊಳ್ಳುವಿ ನೋಡಿಕೋ. 26 ಕೈಮೇಲೆ ಕೈ ಹಾಕಿ ಸಾಲಕ್ಕೆ ಹೊಣೆಯಾಗುವವರಲ್ಲಿ ನೀನೂ ಒಬ್ಬನಾಗಬೇಡ. 27 ಆ ಸಾಲವನ್ನು ತೀರಿಸುವದಕ್ಕೆ ನಿನ್ನಿಂದಾಗದಿರಲು ಸಾಲಕೊಟ್ಟವನು ನಿನ್ನ ಕೆಳಗಿನ ಹಾಸಿಗೆಯನ್ನು ಕಿತ್ತುಹಾಕುವನಲ್ಲವೆ, ಇದೇಕೆ? 28 ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ಒತ್ತಬೇಡ. 29 ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India