ಜ್ಞಾನೋಕ್ತಿಗಳು 20 - ಕನ್ನಡ ಸತ್ಯವೇದವು J.V. (BSI)1 ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ; ಇವುಗಳಿಂದ ಓಲಾಡುವವನು ಜ್ಞಾನಿಯಲ್ಲ. 2 ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು, ಅವನನ್ನು ಕೆಣಕುವವನು ತನಗೇ ಕೆಡುಕುಮಾಡಿಕೊಳ್ಳುವನು. 3 ವ್ಯಾಜ್ಯಕ್ಕೆ ದೂರನು ಮಾನಕ್ಕೆ ಯೋಗ್ಯನು; ಜಗಳವು ಪ್ರತಿಯೊಬ್ಬ ಮೂರ್ಖನಿಗೂ ಸಹಜ. 4 ಮೈಗಳ್ಳನು ಮಳೆಗಾಲದಲ್ಲಿ ಹೊಲಗೇಯನು; ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು? 5 ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು. 6 ಸ್ನೇಹಿತರೆಂದು ಹೇಳಿಕೊಳ್ಳುವವರು ಬಹುಮಂದಿ; ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು? 7 ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು; ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು. 8 ರಾಜನು ನ್ಯಾಯಾಸನಾರೂಢನಾಗಿ ತನ್ನ ದೃಷ್ಟಿಯಿಂದ ಸಕಲ ಕೆಟ್ಟತನವನ್ನು ತೂರುವನು. 9 ನನ್ನ ಹೃದಯವನ್ನು ಶುದ್ಧಮಾಡಿಕೊಂಡಿದ್ದೇನೆ; ನನ್ನ ಪಾಪವನ್ನು ಕಳೆದುಕೊಂಡು ನಿರ್ಮಲನಾಗಿದ್ದೇನೆ ಎಂದು ಯಾರು ಹೇಳಬಲ್ಲರು? 10 ತೂಕದ ಕಲ್ಲನ್ನೂ ಅಳತೆಯ ಪಾತ್ರೆಯನ್ನೂ ಹೆಚ್ಚಿಸುವದು, ತಗ್ಗಿಸುವದು ಇವೆರಡೂ ಯೆಹೋವನಿಗೆ ಅಸಹ್ಯ. 11 ಒಬ್ಬ ಹುಡುಗನಾದರೂ ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು. 12 ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ. 13 ನಿದ್ರಾನಿರತನಾಗಿರಬೇಡ! ಬಡವನಾದೀಯೆ; ಕಣ್ಣು ತೆರೆ! ಆಹಾರದಿಂದ ತೃಪ್ತಿಗೊಳ್ಳುವಿ. 14 ಕೊಳ್ಳುವವನು - ಚೆನ್ನಾಗಿಲ್ಲ, ಚೆನ್ನಾಗಿಲ್ಲ ಎಂದು ಹೇಳುತ್ತಾನೆ. ಕೊಂಡುಕೊಂಡು ಹೋಗಿ ಹೆಚ್ಚಳ ಪಡುತ್ತಾನೆ. 15 ಹೊನ್ನು ಉಂಟು, ಹವಳದ ರಾಶಿ ಉಂಟು, ಆದರೆ ಜ್ಞಾನದ ತುಟಿಗಳೇ ಅಮೂಲ್ಯಾಭರಣ. 16 ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ; ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆಮಾಡಿಕೋ. 17 ಮೋಸದಿಂದ ಸಿಕ್ಕಿದ ಆಹಾರವು ಮನುಷ್ಯನಿಗೆ ರುಚಿ, ಆಮೇಲೆ ಅವನ ಬಾಯಿ ಮರಳಿನಿಂದ ತುಂಬುವದು. 18 ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು; ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು. 19 ಚಾಡಿಕೋರನು ಗುಟ್ಟು ರಟ್ಟುಮಾಡುವನು; ಆದದರಿಂದ ತುಟಿಬಿಗಿಹಿಡಿಯದವನ ಗೊಡವೆಗೆ ಹೋಗಬೇಡ. 20 ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನ ದೀಪವು ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವದು. 21 ಮೊದಲು ಬೇಗನೆ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಶುಭವನ್ನು ಹೊಂದದು. 22 ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಯೆಹೋವನನ್ನು ನಿರೀಕ್ಷಿಸಿಕೊಂಡಿರು, ಆತನೇ ನಿನ್ನನ್ನುದ್ಧರಿಸುವನು. 23 ತೂಕದ ಕಲ್ಲನ್ನು ಹೆಚ್ಚಿಸುವದು ತಗ್ಗಿಸುವದು ಯೆಹೋವನಿಗೆ ಅಸಹ್ಯ; ಮೋಸದ ತ್ರಾಸು ಒಳ್ಳೇದಲ್ಲ. 24 ಮನುಷ್ಯನಿಗೆ ಗತಿಯನ್ನು ಏರ್ಪಡಿಸುವವನು ಯೆಹೋವನೇ ಆಗಿರುವಲ್ಲಿ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳಿದುಕೊಂಡಾನು? 25 ದುಡುಕಿ ಮುಡುಪುಕಟ್ಟುವದು ಮನುಷ್ಯನಿಗೆ ಉರುಲು; ಹರಕೆಹೊತ್ತ ಮೇಲೆ ವಿಚಾರಪಡಬೇಕಾಗುತ್ತದೆ. 26 ಜ್ಞಾನಿಯಾದ ಅರಸನು ದುಷ್ಟರ ಮೇಲೆ ಕಣದ ಗುಂಡನ್ನು ಉರುಳಿಸಿ ಅವರನ್ನು ತೂರಿಬಿಡುವನು. 27 ಮನುಷ್ಯನ ಆತ್ಮವು ಯೆಹೋವನ ದೀಪವಾಗಿದೆ; ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ. 28 ರಾಜನ ಕೃಪಾಸತ್ಯತೆಗಳು ಅವನನ್ನು ಕಾಯುವವು; ಅವನ ಕರುಣೆಯೇ ಅವನ ಸಿಂಹಾಸನಕ್ಕೆ ಆಧಾರ. 29 ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ. 30 ಗಾಯಮಾಡುವ ಪೆಟ್ಟುಗಳು ಕೆಟ್ಟದ್ದನ್ನು ತೊಳೆದುಬಿಡುವವು; ಏಟುಗಳು ಅಂತರಂಗಕ್ಕೂ ತಗಲುವವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India