Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಜ್ಞಾನೋಕ್ತಿಗಳು 19 - ಕನ್ನಡ ಸತ್ಯವೇದವು J.V. (BSI)

1 ಕಪಟವಾಗಿ ಮಾತಾಡುವ ಮೂಢನಿಗಿಂತಲೂ ನಿರ್ದೋಷವಾಗಿ ನಡೆಯುವ ದರಿದ್ರನೇ ಶ್ರೇಷ್ಠ.

2 ತಿಳುವಳಿಕೆಯಿಲ್ಲದೆ ಕೋರುವದು ಅಯುಕ್ತ; ದುಡುಕುವ ಕಾಲು ದಾರಿ ತಪ್ಪುವದು.

3 ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು ಯೆಹೋವನ ಮೇಲೆ ಕುದಿಯುವನು.

4 ಭಾಗ್ಯವಂತನಿಗೆ ಬಹುಮಂದಿ ಸ್ನೇಹಿತರು; ಬಡವನಿಗೆ ಇದ್ದ ಸ್ನೇಹಿತನೂ ಅಗಲುವನು.

5 ಕಳ್ಳಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ತಪ್ಪಿಸಿಕೊಳ್ಳನು.

6 ಉದಾರಿಯ ಕಟಾಕ್ಷವನ್ನು ಅನೇಕರು ಕೋರುವರು; ದಾನಶೂರನಿಗೆ ಪ್ರತಿಯೊಬ್ಬನೂ ಸ್ನೇಹಿತನಲ್ಲವೆ.

7 ಬಡವನನ್ನು ಬಂಧುಗಳೆಲ್ಲಾ ಹಗೆಮಾಡುವರು; ಹೌದು, ವಿುತ್ರರೂ ಅವನಿಗೆ ದೂರವಾಗುವರು. [ಅವರ] ಬರೀ ಮಾತುಗಳನ್ನು [ನಂಬಿ] ಹಿಂಬಾಲಿಸಿದರೆ ಏನೂ ಸಿಕ್ಕದು.

8 ಬುದ್ಧಿಯನ್ನು ಸಂಪಾದಿಸುವವನು ತನಗೆ ತಾನೇ ವಿುತ್ರನು; ವಿವೇಕವನ್ನು ಕಾಪಾಡುವವನು ಮೇಲನ್ನು ಪಡೆಯುವನು.

9 ಕಳ್ಳಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ಹಾಳಾಗುವನು.

10 ಮೂಢನಿಗೆ ಮೃದುಜೀವನವು ಅಯುಕ್ತ; ದಾಸನಿಗೆ ದೊರೆಗಳ ಮೇಲಣ ದೊರೆತನ ಇನ್ನೂ ಅಯುಕ್ತ.

11 ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.

12 ರಾಜನ ರೋಷವು ಸಿಂಹದ ಗರ್ಜನೆ; ಅವನ ದಯೆಯು ಪೈರಿನ ಇಬ್ಬನಿ.

13 ಜ್ಞಾನಹೀನನಾದ ಮಗನು ತಂದೆಗೆ ಹಾನಿ, ಹೆಂಡತಿಯ ತಂಟೆಯು ತಟತಟನೆ ತೊಟ್ಟಿಕ್ಕುವ ಹನಿ.

14 ಮನೆಮಾರೂ ಆಸ್ತಿಪಾಸ್ತಿಯೂ ಪಿತೃಗಳಿಂದ ದೊರಕುವವು; ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.

15 ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುವದು; ಸೋಮಾರಿಯು ಹಸಿವೆಗೊಳ್ಳುವನು.

16 ಆಜ್ಞೆಯನ್ನು ಪಾಲಿಸುವವನು ಆತ್ಮವನ್ನು ಪಾಲಿಸುವನು, ನಡತೆಯನ್ನು ಲಕ್ಷಿಸದವನು ಸಾಯುವನು.

17 ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

18 ಬುದ್ಧಿ ಬರುವದೆಂದು ಮಗನನ್ನು ಶಿಕ್ಷಿಸು; ಹಾಳುಮಾಡಲು ಮನಸ್ಸುಮಾಡಬೇಡ.

19 ಕೋಪಿಷ್ಠನು ತನಗಾಗುವ ದಂಡನೆಯನ್ನು ಅನುಭವಿಸಲಿ; ಬಿಡಿಸಿದರೆ ಬಾರಿಬಾರಿಗೆ ಬಿಡಿಸಬೇಕಾಗುವದು.

20 ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.

21 ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ; ಯೆಹೋವನ ಸಂಕಲ್ಪವೇ ಈಡೇರುವದು.

22 ಇಷ್ಟವು ಔದಾರ್ಯದ ಪ್ರಮಾಣ; [ಇದ್ದರೂ ಇಲ್ಲವೆಂದು] ಸುಳ್ಳಾಡುವವನಿಗಿಂತಲೂ ಏನೂ ಇಲ್ಲದವನೇ ಲೇಸು.

23 ಯೆಹೋವನ ಭಯವು ಜೀವದಾಯಕವು; [ಭಯಭಕ್ತಿಯುಳ್ಳವನು] ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸದು.

24 ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ ತಿರಿಗಿ ಬಾಯ ಹತ್ತಿರಕ್ಕೆ ತರಲಾರನು.

25 ಧರ್ಮನಿಂದಕನಿಗೆ ಪೆಟ್ಟುಹೊಡೆ, [ನೋಡಿದ] ಮಂದಮತಿಯು ಜಾಣನಾಗುವನು; ವಿವೇಕಿಯನ್ನು ಗದರಿಸು, ತಾನೇ ತಿಳುವಳಿಕೆಯನ್ನು ಗ್ರಹಿಸುವನು.

26 ತಂದೆಯನ್ನು ಹೊಡೆದು ತಾಯಿಯನ್ನು ಓಡಿಸುವ ಮಗನು ನಾಚಿಕೆಯನ್ನೂ ಅವಮಾನವನ್ನೂ ಉಂಟುಮಾಡುವನು.

27 ಮಗನೇ, ಬುದ್ಧಿವಾದಗಳನ್ನು ಅನುಸರಿಸಲಿಕ್ಕೆ ಮನಸ್ಸಿಲ್ಲದಿದ್ದರೆ ಉಪದೇಶ ಕೇಳುವದನ್ನೇ ಬಿಟ್ಟುಬಿಡು.

28 ನೀಚ ಸಾಕ್ಷಿಯು ನ್ಯಾಯವನ್ನು ಗೇಲಿಮಾಡುವನು; ದುಷ್ಟರ ಬಾಯಿ ದ್ರೋಹವನ್ನು ಆತುರದಿಂದ ನುಂಗುವದು.

29 ಧರ್ಮನಿಂದಕರಿಗೆ [ದಂಡನೆಯ] ತೀರ್ಪು ಸಿದ್ಧ, ಮೂಢರ ಬೆನ್ನಿಗೆ ಪೆಟ್ಟು ಖಂಡಿತ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು